Advertisement

ಶೃಂಗೇರಿಗೆ ಎಚ್‌ಡಿಕೆ ಭೇಟಿ, ವಿಶೇಷ ಪೂಜೆ

06:10 AM Dec 07, 2018 | |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಗುರುವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭೇಟಿ ನೀಡಿ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಜಗದ್ಗುರುಗಳ ಆಶೀರ್ವಾದ ಪಡೆದರು.

Advertisement

ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಕೊರಡಕಲ್ಲಿಗೆ ಬಂದಿಳಿದ ಸಿ.ಎಂ., ಇಲ್ಲಿಂದ ಶಾರದಾ ಪೀಠಕ್ಕೆ ತೆರಳಿದರು. ಮಠದ ಆವರಣದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಪೂಜೆಯಲ್ಲಿ ಪಾಲ್ಗೊಂಡರು. ನಂತರ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಜಗದ್ಗುರು ಭಾರತೀತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಇದಕ್ಕೂ ಮುನ್ನ ಕೊರಡಕಲ್ಲಿನ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಲು ಹಾಗೂ ತಾಯಿ ಶಾರದಾಂಬೆ, ಮತ್ತು ಜಗದ್ಗುರುಗಳ ಆಶೀರ್ವಾದ ಪಡೆಯಲು ಶೃಂಗೇರಿಗೆ ಬಂದಿರುವೆ. ಶೃಂಗೇರಿಗೆ ನಾನು ಆಗಾಗ ಬರುತ್ತಿದ್ದು, ಇಂದಿನ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಾನು ದೇವರನ್ನು ನಂಬಿರುವವ. ಎಲ್ಲರಿಗೂ ಒಳಿತಾಗಲಿ ಎಂದು ಇಲ್ಲಿ ಹೋಮ ನಡೆಸಲಾಗಿದೆ ಎಂದರು.

ಮಂತ್ರಿಮಂಡಲ ವಿಸ್ತರಣೆ ಆಗಲಿದೆ. ಇದಕ್ಕಾಗಿ ಸಮ್ಮಿಶ್ರ ಸರಕಾರದ ಒಂದು ಭಾಗವಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜಂಟಿಯಾಗಿ ಸಭೆ ನಡೆಸಿ, ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next