Advertisement

ಕುಂಚದಲ್ಲಿ ಮೂಡಿದವು ಹಳ್ಳಿಯ ನಿಸರ್ಗ ಚಿತ್ರಗಳು

11:44 AM Nov 19, 2018 | |

ಕನಕಮಜಲು : ತುಳುನಾಡಿನಲ್ಲಿ ಯುವಕರು ಯಕ್ಷಗಾನ, ತುಳು ನಾಟಕ, ಕ್ರಿಕೆಟ್‌-ಕಬ್ಬಡಿ ಪಂದ್ಯಾವಳಿ, ಆರೋಗ್ಯ ಕ್ಯಾಂಪ್‌ ಇತ್ಯಾದಿಗಳನ್ನು ಸಂಘಟಿಸುತ್ತಾರೆ. ಆದರೆ, ಸುಳ್ಯ ತಾಲೂಕಿನ ಕನಕಮಜಲು ಯುವಕ ಮಂಡಲ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿ ಎತ್ತಿದ ಕೈ. ಗ್ರಾಮೀಣ ಪ್ರದೇಶದಲ್ಲಿ ಚಿತ್ರಕಲೆಗೆ ಪ್ರೋತ್ಸಾಹ ನೀಡುವ ಮೂಲಕ ಜನರನ್ನು ಕಲೆಯತ್ತ ಸೆಳೆಯಲು ನಿಸರ್ಗ ಚಿತ್ರಕಲಾ ಶಿಬಿರ ಹಮ್ಮಿಕೊಂಡಿದೆ.

Advertisement

ಕನಕಮಜಲು ಯುವಕ ಮಂಡಲವು ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ಸಹಯೋಗದಲ್ಲಿ, ಕನಕಮಜಲು ಗ್ರಾ.ಪಂ. ಹಾಗೂ ಜಾಲ್ಸೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಭಾಗಿತ್ವದಲ್ಲಿ ನ. 11ರಿಂದ ಒಂದು ವಾರದ ಅವಧಿಯ ಸುಯೋಗ ನಿಸರ್ಗ ಚಿತ್ರಕಲಾ ಶಿಬಿರವನ್ನು ಆಯೋಜಿಸಿದೆ. ವಿದ್ಯಾರ್ಥಿಗಳು ಪ್ರಕೃತಿಯ ಮಡಿಲಿನಲ್ಲಿ ಕುಳಿತು ನಿಸರ್ಗದ ಚಿತ್ರಗಳನ್ನು ಆತ್ಯಾಕರ್ಷಕವಾಗಿ ಬಿಡಿಸಿದರು. ಕನಕಮಜಲು ಗ್ರಾಮದ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ ನಡೆದ ಶಿಬಿರದಲ್ಲಿ 33 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಬಿರದ ಕ್ರಿಯಾಶೀಲತೆಗೆ ಪ್ರೇರಣೆಯಾಗಿದ್ದು ಸೋಣಂಗೇರಿಯ ಬಯಲು ಚಿತ್ರಾಲಯ. 2009ರಲ್ಲಿ ಮೊದಲ ಬಾರಿಗೆ ಶಿಬಿರ ನಡೆಸಿದಾಗ 10 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 2015ರಲ್ಲಿ ಚಾಮರಾಜೇಂದ್ರ ಚಿತ್ರಕಲಾ ಸಂಸ್ಥೆಯಿಂದ 15 ವಿದ್ಯಾರ್ಥಿಗಳು ಗ್ರಾಮೀಣ ಚಿತ್ರ ಕಲೆಯಲ್ಲಿ ಭಾಗವಹಿಸಿದರು ಎಂದು ಕನಕಮಜಲು ಯುವಕ ಮಂಡಲದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹಾಗೂ ಅಧ್ಯಕ್ಷ ಹರಿಪ್ರಸಾದ್‌ ವಿವರಿಸಿದರು.

ನಿಸರ್ಗ ದೃಶ್ಯಗಳು
ಕಲಾತ್ಮಕ ಚಿಂತನೆಯುಳ್ಳ ವಿದ್ಯಾರ್ಥಿಗಳು ಹಳ್ಳಿಯ ಬದುಕು, ಸಂಪ್ರದಾಯಗಳು ಹಾಗೂ ನಿಸರ್ಗದ ಸೊಬಗನ್ನು ಕುಂಚದಲ್ಲಿ ಮೂಡಿಸಿದರು. ಕಾಡಿನಿಂದ ಕೂಡಿದ ರಸ್ತೆಗಳು, ಜನ ನಡೆದಾಡುವ ಹಾದಿಗಳು, ಹಳೆಯ ಹಂಚಿನ ಮನೆಗಳು, ಹಟ್ಟಿ – ಹೀಗೆ ಗ್ರಾಮ್ಯ ಸ್ವರೂಪವನ್ನೇ ನೋಡಿಕೊಂಡು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿ, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದರು. 

ಶಿಬಿರಾರ್ಥಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಆಯೋಜಕರೇ ಮಾಡಿದ್ದರು. ರಾಧಾಕೃಷ್ಣ ಅವರ ಮನೆಯನ್ನು ವಾಸ್ತವ್ಯಕ್ಕೆ ನೀಡಲಾಗಿತ್ತು. ಸ್ಥಳೀಯರೂ ತರಕಾರಿ, ದವಸ-ಧಾನ್ಯಗಳನ್ನು ತಂದು ಶಿಬಿರಕ್ಕೆ ಸಹಕರಿಸಿದರು. ಮುಂಜಾನೆ 6.30ರಿಂದ ಸಂಜೆಯ ವರೆಗೂ ಶಿಬಿರ
ನಡೆಯಿತು. ಬಳಿಕ ಮನೋರಂಜನ ಕಾರ್ಯಕ್ರಮಗಳಿದ್ದವು. 

Advertisement

ಸುಂದರ ಅನುಭವ
ಇದೊಂದು ವಿಭಿನ್ನ ಅವಕಾಶ, ನಗರ ಪ್ರದೇಶದಿಂದ ಬಂದು ಹಳ್ಳಿ ಜೀವನ ಶೈಲಿ, ಗ್ರಾಮ್ಯ ಸಂಸ್ಕೃತಿ ಅರಿತು ಇಲ್ಲಿನ ಜನರೊಂದಿಗೆ ಬೆರೆಯುವುದು ಒಂದು ಸುಂದರ ಅನುಭವ. ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಬಹಳ ಖುಷಿ ಕೊಟ್ಟಿದೆ. 
– ಅವನಿ ಶರ್ಮಾ
ವಿದ್ಯಾರ್ಥಿನಿ, ಮಹಾಲಸಾ ಚಿತ್ರಕಲಾ
ಶಾಲೆ, ಮಂಗಳೂರು

ಸ್ವಂತಿಕೆಯ ಉದ್ದೇಶ
ಚಿತ್ರಕಲಾ ವಿದ್ಯಾರ್ಥಿಗಳಲ್ಲಿ ಸ್ವಂತಿಕೆ ಬೆಳೆಸುವುದು ಶಿಬಿರ ಉದ್ದೇಶವಾಗಿದೆ. ವಿಭಿನ್ನ ಆಲೋಚನೆ, ಕ್ರಿಯಾಶೀಲತೆ ಇವೆಲ್ಲವೂ ನಿಸರ್ಗದೊಂದಿಗೆ ಬೆರೆತಾಗ ಮಾತ್ರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಯಶಸ್ವಿ ಕಾರ್ಯಕ್ರಮ.
ಸಯ್ಯದ್‌ ಆಸೀಫ್ ಅಲಿ
 ಉಪನ್ಯಾಸಕರು, ಮಹಾಲಸಾ
 ಚಿತ್ರಕಲಾ ಶಾಲೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next