Advertisement

ದೇಹದೊಳಗೊಂದು ಗಡಿಯಾರವಿದೆ!

03:45 AM Apr 20, 2017 | Harsha Rao |

ನಮ್ಮ ದೈನಂದಿನ ಜೀವನ ಒಂದು ಬಗೆಯ ಕ್ರಮಬದ್ಧತೆಗೆ ಒಗ್ಗಿ ಹೋಗಿರುತ್ತದೆ. ರಾತ್ರಿಯಲ್ಲಿ ನಿದ್ದೆ, ಹಗಲಿನಲ್ಲಿ ಕೆಲಸ, ಅವುಗಳ ಮಧ್ಯೆ ಶೌಚ, ಸ್ನಾನ, ತಿಂಡಿ, ಊಟ, ಉಪಾಹಾರ, ಮನರಂಜನೆ ಮುಂತಾದ ಚಟುವಟಿಕೆಗಳು ಅಭ್ಯಾಸದಂತೆ ನಡೆದುಹೋಗುತ್ತವೆ. ಆದರೆ ಇವುಗಳ ಕ್ರಮದಲ್ಲಿ ಅಥವಾ ಸಮಯದಲ್ಲಿ ವ್ಯತ್ಯಾಸವಾದರೆ ಮಾತ್ರ ಇನ್ನಿಲ್ಲದ ಕಿರಿಕಿರಿ ಉಂಟಾಗುತ್ತದೆ. ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರವೇ(ಬಯೋಲಾಜಿಕಲ್‌ ಕ್ಲಾಕ್‌) ಇದಕ್ಕೆ ಕಾರಣ.

Advertisement

ಸಾಮಾನ್ಯವಾಗಿ ರಸ್ತೆ, ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭಸುವುದು ತಡರಾತ್ರಿಯಲ್ಲಿ ಅಥವಾ ಬೆಳಗಿನ ಜಾವದಲ್ಲಿ. ದೇಹ ನಿದ್ದೆ ಅಥವಾ ವಿಶ್ರಾಂತಿ ಬಯಸುತ್ತಿದ್ದರೂ ವಾಹನಚಾಲನೆಯಂಥ ಅತ್ಯಂತ ಜಾಗರೂಕತೆಯ ಕೆಲಸಕ್ಕೆ ಅದನ್ನು ಒತ್ತಾಯಪೂರ್ವಕವಾಗಿ ತೊಡಗಿಸುವುದೇ ಇದಕ್ಕೆ ಕಾರಣ. ಇದೇ ರೀತಿ ಹಗಲಿನ ಲವಲವಿಕೆಯ ಸಮಯದಲ್ಲಿ ಬಲವಂತವಾಗಿ ವಿಶ್ರಮಿಸುವ ಅಥವಾ ನಿದ್ರಿಸುವ ಪ್ರಯತ್ನವೂ ಸಫ‌ಲವಾಗುವುದಿಲ್ಲ. ಇವೆಲ್ಲ ನಿಸರ್ಗದ ಜಾಯಮಾನಕ್ಕೆ ಒಗ್ಗದ ಕ್ರಿಯೆಗಳಾಗಿರುವುದೇ ಕಾರಣ.

ಎಲ್ಲ ಜೀವಿಗಳಂತೆ ನಮ್ಮ ದೇಹವೂ ನಿಸರ್ಗದ ಒಂದು ಕೂಸು. ಸ್ವಾಭಾವಿಕವಾಗಿಯೇ ಅದು ನೈಸರ್ಗಿಕ ಪರಿಸರದ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ವಿಶೇಷವಾಗಿ ಹಗಲು- ರಾತ್ರಿಗಳು ಜೀವಿಗಳ ವರ್ತನೆಯ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತವೆ. ಜೀವಿಗಳ ದೇಹದಲ್ಲಿನ ಜೈವಿಕ ಗಡಿಯಾರ ಈ ನೈಸರ್ಗಿಕ ಕ್ರಿಯೆಗೆ ಒಳಪಟ್ಟು ಸ್ಪಂದಿಸುವುದೇ ಇದಕ್ಕೆ ಕಾರಣ.

ದೇಹದ ಸಮಸ್ತ ಚಟುವಟಿಕೆಗಳೂ ನೇರವಾಗಿ ಅಥವಾ ಪರ್ಯಾಯವಾಗಿ ಮೆದುಳಿನ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಉಸಿರಾಟ, ಜೀರ್ಣಕ್ರಿಯೆ, ಚಯಾಪಚಯ (ಮೆಟಬಾಲಿಸಮ್‌)ಗಳಂತಹ ಅನಿಯಂತ್ರಿತ ಕ್ರಿಯೆಗಳಾಗಲೀ ಅಥವಾ ಅಗತ್ಯಕ್ಕೆ ತಕ್ಕಂತೆ ವರ್ತಿಸುವ ಕಣ್ಣು, ಕೈಕಾಲುಗಳ ಚಲನೆಯಂತಹ ನಿಯಂತ್ರಿತ ಕಾರ್ಯಗಳಾಗಲಿ, ಮೆದುಳಿನ ಅರಿವಿಗೆ ಬಾರದೆ ನಡೆಯುವುದಿಲ್ಲ. ಇವು ಸುಸಂಬದ್ಧವಾಗಿ ನಡೆಯುವುದಕ್ಕೆ ದೇಹದಲ್ಲಿ ವ್ಯವಸ್ಥಿತ, ಕಾಲಬದ್ಧ ಕಾರ್ಯನಿರ್ವಹಣಾ ವ್ಯವಸ್ಥೆ ಬೇಕೇ ಬೇಕು. ಇಂತಹ ವ್ಯವಸ್ಥೆಯೇ ಜೈವಿಕ ಗಡಿಯಾರ.

ದೇಹದ ವಿವಿಧ ಭಾಗಗಳಲ್ಲಿನ ಈ ವ್ಯವಸ್ಥೆಯನ್ನು ಮೆದುಳಿನಲ್ಲಿರುವ ಪ್ರಮುಖ ಕೇಂದ್ರೀಕೃತ ಜೈವಿಕ ಗಡಿಯಾರ ಸಮಗ್ರ ರೀತಿಯಲ್ಲಿ ನಿಯಂತ್ರಿಸುತ್ತದೆ. ದೇಹದ ಆಂತರಿಕ ಮತ್ತು ಬಾಹ್ಯವರ್ತನೆ ಸಮಯಾನುಸಾರವಾಗಿರುವುದಕ್ಕೆ ಇದೇ ಕಾರಣ. 

Advertisement

ಮಾನವನಂತೆಯೇ ಇತರ ಪ್ರಾಣಿಪಕ್ಷಿಗಳ ವರ್ತನೆಗಳೂ ಹೀಗೇ ಇರುವುದನ್ನು ನಾವು ಕಾಣಬಹುದು. ಬೆಳಗಾಗುತ್ತಿದ್ದಂತೆ ಕೋಳಿ ಕೂಗತೊಡಗುತ್ತದೆ. ಹಕ್ಕಿಗಳ ಚಿಲಿಪಿಲಿ ಪ್ರಾರಂಭವಾಗುತ್ತದೆ. ಕಾಗೆಗಳು ಕಾ…ಕಾ.. ಎಂದು ಕೂಗುತ್ತಾ ಹಾರಾಡತೊಡಗುತ್ತವೆ. ಕೊಟ್ಟಿಗೆಯಲ್ಲಿ ಹಸು ಕರುಗಳು ಅಂಬಾ ಎಂದು ಕರೆಯಲಾರಂಭಿಸುತ್ತವೆ. ಮೂಕಪ್ರಾಣಿಗಳ ಈ ಎಲ್ಲ ವರ್ತನೆಗೂ ಜೈವಿಕ ಗಡಿಯಾರವೇ ಪ್ರೇರಣೆ. 

ಸಸ್ಯ ಸಂಕುಲವೂ ಇದಕ್ಕೆ ಹೊರತಾಗಿಲ್ಲ. ಬೆಳಗಾಗುತ್ತಿದ್ದಂತೆ ಮಲ್ಲಿಗೆ, ಪಾರಿಜಾತ, ಗುಲಾಬಿಯಂಥ ಹೂವುಗಳು ಗಿಡದಲ್ಲಿ ಅರಳಿ ಘಮಘಮಿಸತೊಡಗುತ್ತವೆ. ಕೇವಲ ರಾತ್ರಿಯಲ್ಲೇ ಅರಳುವ ಬ್ರಹ್ಮಕಮಲದಂತಹ ಹೂವುಗಳೂ ಉಂಟು. ಋತುಮಾನಕ್ಕೆ ಅನುಗುಣವಾಗಿ ಚಿಗುರುವ, ಹೂ ಬಿಡುವ, ಕಾಯಿ ಬಿಟ್ಟು ಹಣ್ಣಾಗಿಸುವ ಗಿಡಮರಗಳ ವರ್ತನೆ ಅವುಗಳಲ್ಲಿನ ಜೈವಿಕ ಗಡಿಯಾರದ ಪ್ರಭಾವಕ್ಕೆ ಇನ್ನೊಂದು ನಿದರ್ಶನ ಎನ್ನಬಹುದು.ಇಷ್ಟೇ ಅಲ್ಲ, ಬಾಲ್ಯ, ಯೌವನ, ವೃದ್ಧಾಪ್ಯಗಳಂತಹ ದೈಹಿಕ ಬೆಳವಣಿಗೆಗಳ ಬದಲಾವಣೆಗಳಿಗೂ ಜೈವಿಕ ಗಡಿಯಾರವೇ ಕಾರಣ ಎಂದು ಸಹ ವಿಜಾnನಿಗಳು ಹೇಳುತ್ತಾರೆ.

ಇಂದಿನ ನಾಗರಿಕತೆಯ ನಾಗಾಲೋಟದಲ್ಲಿ ನಿಸರ್ಗ ನಿಯಮಗಳಿಗೆ ವಿರುದ್ಧವಾಗಿ ಅನೇಕ ಬಗೆಯ ಅಭಿವೃದ್ಧಿ ಪರ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಯುತ್ತಿರುವುದು ಜೈವಿಕ ಗಡಿಯಾರದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಏರುಪೇರುಗಳಿಂದ ನೈಸರ್ಗಿಕ ಸಮತೋಲನ ತಪ್ಪುತ್ತಿದ್ದು ಭೂಕಂಪ, ಚಂಡಮಾರುತ, ಸುನಾಮಿ, ಭೀಕರ ಪ್ರವಾಹಗಳಂಥ ನೈಸರ್ಗಿಕ ವಿಕೋಪಗಳೂ ಸೇರಿದಂತೆ ಅನೇಕ ಬಗೆಯ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ, ಇದರ ಪ್ರಭಾವ ಜೈವಿಕ ಗಡಿಯಾರದ ಮೇಲೂ ಕಂಡುಬರಬಹುದಾಗಿದೆ ಎಂದೂ ತಜ್ಞರು ಎಚ್ಚರಿಸುತ್ತಿದ್ದಾರೆ. 

-ಡಿ. ವಿ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next