Advertisement

ಸ್ವಚ್ಛತೆ ನಮ್ಮೆಲ್ಲರ ಉಸಿರಾಗಬೇಕು: ರಾಜಶೇಖರ್‌ ಪುರಾಣಿಕ್‌

01:36 AM Jul 01, 2019 | sudhir |

ಮಹಾನಗರ: ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಜರಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 30ನೇ ರವಿವಾರದ ಶ್ರಮದಾನವನ್ನು ಹಂಪನಕಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು.

Advertisement

ಹಳೆಯ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ 7.30ಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ರಾಜ ಶೇಖರ್‌ ಪುರಾಣಿಕ್‌, ಜಯಪ್ರಕಾಶ ನಾಯಕ್‌ ಶ್ರಮದಾನಕ್ಕೆ ಚಾಲನೆ ನೀಡಿದರು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಹರೀಶ್‌ ಆಚಾರ್‌, ಮೋಹನ್‌ ಕೊಟ್ಟಾರಿ, ಶ್ರೀಕಾಂತ್‌ ರಾವ್‌, ಅನಿರುದ್ಧ ನಾಯಕ್‌, ರಾಜೇಶ್ವರಿ, ಯಶೋಧರ ಚೌಟ್, ಶ್ರೀಕರ ಕಲ್ಲೂರಾಯ ಉಪಸ್ಥಿತರಿದ್ದರು.

ರಾಜಶೇಖರ್‌ ಪುರಾಣಿಕ್‌ ಮಾತನಾಡಿ, ಸ್ವಚ್ಛತೆ ನಮ್ಮ ಉಸಿರಾಗಬೇಕು. ಸ್ವಚ್ಛ ಪರಿಸರ ಸ್ವಚ್ಛ ಗಾಳಿ ಮನುಷ್ಯನಿಗೆ ಅತ್ಯವಶ್ಯ. ಇಂದಿನ ದಿನಗಳಲ್ಲಿ ಎಲ್ಲವೂ ಕಲುಷಿತಗೊಂಡು ಮಾನವನ ಬದುಕು ದುಸ್ತರವಾಗುತ್ತಿದೆ. ಇದೇ ರೀತಿ ಮುಂದು ವರೆದರೆ ಭವಿಷ್ಯದಲ್ಲಿ ಆಮ್ಲಜನಕ ನಳಿಕೆಗಳನ್ನು ಬಳಸುವ ಪ್ರಮೇಯ ಬಂದೊದಗಬಹುದು. ಆದ್ದರಿಂದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿವಹಿ ಸಬೇಕಾದ ಅಗತ್ಯವಿದೆ. ಸರಕಾರದ ಅನೇಕ ಯೋಜನೆಗಳು ಯಶಸ್ವಿಯಾಗಬೇಕಿದ್ದರೆ ಜನರು ಸ್ಪಂದಿಸಬೇಕು. ರಾಮಕೃಷ್ಣ ಮಿಷನ್‌ ಸ್ವಚ್ಛತಾ ಕಾರ್ಯ ಅತ್ಯಂತ ಯಶಸ್ವಿಯಾಗಿ ಐದನೇ ವರ್ಷವೂ ಮುಂದು ವರಿಯು ತ್ತಿರುವುದು ಜನಸ್ಪಂದನಕ್ಕೆ ಸಾಕ್ಷಿ. ಸ್ವಚ್ಛತೆಯ ಜತೆಗೆ ಗಿಡಮರಗಳನ್ನೂ ಉಳಿಸಿ-ಬೆಳೆಸುವ ಕಾರ್ಯವೂ ಈ ದಿನದ ತುರ್ತುಗಳಲ್ಲೊಂದು. ಜನಸಂಖ್ಯೆ ಬೆಳೆದಂತೆ ನಗರವೃದ್ಧಿಯಾಗುತ್ತಿದೆ. ಅದಕ್ಕೆ ಸರಿಸಮನಾಗಿ ಮರಗಿಡಗಳು ನಗರದಲ್ಲಿರಬೇಕು. ಅದಕ್ಕೆ ಇಂತಹ ಅಭಿಯಾನಗಳನ್ನು ಹಮ್ಮಿಕೊಳ್ಳೊಣ’ ಎಂದರು.

ಸ್ವಚ್ಛತೆ

ಪ್ರಥಮದಲ್ಲಿ ನಾಲ್ಕು ತ್ಯಾಜ್ಯರಾಶಿ ತುಂಬಿದ್ದ ಸ್ಥಳಗಳನ್ನು ಗುರುತಿಸಲಾಯಿತು. ಅನಂತರ ಸ್ವಯಂ ಸೇವಕರು ನಾಲ್ಕು ತಂಡಗಳಾಗಿ ವಿಭಾಗಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಮೊದಲ ತಂಡದಲ್ಲಿ ಸೌರಜ್‌ ಮಂಗಳೂರು ನೇತೃತ್ವದಲ್ಲಿ ಬಸ್‌ ನಿಲ್ದಾಣದಲ್ಲಿದ್ದ ದೊಡ್ಡದಾದ ತ್ಯಾಜ್ಯ ರಾಶಿಯನ್ನು ಜೇಸಿಬಿ ಸಹಾಯದಿಂದ ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.

Advertisement

ಮೆಹಬೂಬ್‌ ಖಾನ್‌ ಮುಂದಾಳತ್ವದ ಎರಡನೇ ತಂಡ ಕೆ.ಎಸ್‌. ರಾವ್‌ ರಸ್ತೆಯ ಮೂಲೆಯಲ್ಲಿದ್ದ ತ್ಯಾಜ್ಯ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ತೆಗೆದು ಹಸನು ಮಾಡಿದರು. ಸಂದೀಪ್‌ ಕೋಡಿಕಲ್, ಸತೀಶ್‌ ಕೆಂಕನಾಜೆ ಹಾಗೂ ಇನ್ನಿತರ ಕಾರ್ಯಕರ್ತರು ಆರೋಗ್ಯ ಇಲಾಖೆಯ ಉಪಕಚೇರಿಯ ಮುಂಭಾಗದಲ್ಲಿದ್ದ ಗಲೀಜನ್ನು ತೆಗೆದು ಟಿಪ್ಪರಿಗೆ ತುಂಬಿಸಿದರು. ಸ್ವಚ್ಛ ಎಕ್ಕೂರು ತಂಡದ ಸದಸ್ಯರಾದ ಶುಭಕರ ಶೆಟ್ಟಿ, ಪ್ರಶಾಂತ ಎಕ್ಕೂರು, ಉಳಿದ ಸದಸ್ಯರು ಬಸ್‌ ನಿಲ್ದಾಣದ ಒಳಭಾಗದಲ್ಲಿ ಬಿದ್ದಿದ್ದ ಕಸಕಡ್ಡಿ ಪ್ಲಾಸ್ಟಿಕ್‌, ಬಾಟಲ್, ಗಾಜುಗಳನ್ನು ತೆಗೆದು ಶ್ರಮದಾನ ಮಾಡಿದರು.

ಸ್ವಚ್ಛತಾ ಯೋಧರ ಪಡೆ

ದಿಲ್ರಾಜ್‌ ಆಳ್ವ ಹಾಗೂ ಕಾರ್ಯಕರ್ತರು ಬಸ್‌ ನಿಲ್ದಾಣದಲ್ಲಿ ಅಡ್ಡಾದಿಡ್ದಿಯಾಗಿ ನಿಲ್ಲಿಸಿದ್ದ ಹಳೆಯ ವಾಹನ, ರಿಕ್ಷಾಗಳನ್ನು ತೆಗೆದು ಬದಿಗೆ ಹಾಕಿ ಹೆಚ್ಚಿನ ಪಾರ್ಕಿಂಗ್‌ ಅನುಕೂಲ ಮಾಡಿಕೊಟ್ಟರು. ಸ್ವಚ್ಛ ಮಾಡಿದ ಆಯ್ದ ಸ್ಥಳಗಳಲ್ಲಿ ಆಲಂಕಾರಿಕ ಹೂಗಿಡಗಳ ಕುಂಡಗಳನ್ನಿಡಲಾಗಿದೆ. ಅಲ್ಲಿ ಸ್ವಚ್ಛತಾ ಯೋಧರು ಹಗಲಿರುಳು ಕಾವಲು ಕಾಯ ಲಿದ್ದಾರೆ. ಕಸ ಹಾಕುವವರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಹಲವಾರು ವಾರಗಳಿಂದ ಈ ಸ್ವಚ್ಛತಾ ಯೋಧರ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ, ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್‌ ಕೋಟೆಕಾರ್‌ ಶ್ರಮದಾನದ ಉಸ್ತುವಾರಿ ನೋಡಿಕೊಂಡರು.

ಕರಪತ್ರ ಹಂಚಿಕೆ

ಶ್ರೀಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಹಂಪನಕಟ್ಟೆ ಕೆ.ಎಸ್‌.ಆರ್‌. ರಾವ್‌ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿ ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ಕೋರಿದರು. ಜತೆಗೆ ‘ಸ್ವಚ್ಛ ಮಂಗಳೂರು ಕನಸಲ್ಲ’ ಎಂಬ ಮಾಹಿತಿ ಪತ್ರವನ್ನು ಹಂಚಿಕೆ ಮಾಡಿದರು. ಪ್ರೊ| ಸತೀಶ್‌ ಭಟ್, ಕೋಡಂಗೆ ಬಾಲಕೃಷ್ಣ ನಾೖಕ್‌ ವಿದ್ಯಾರ್ಥಿನಿಯರನ್ನು ಮಾರ್ಗ ದರ್ಶಿಸಿದರು. ಪ್ರವೀಣ ಶೆಟ್ಟಿ, ಸ್ವಯಂ ಸೇವಕರು ಸಸಿಗಳನ್ನು ನೆಟ್ಟರು. ಕೆ.ಎಂ.ಎಫ್‌. ವತಿಂದ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆಯನ್ನು ವಿತರಿಸಲಾಯಿತು.

ಅಶೋಕ ನಗರದಲ್ಲಿರುವ ಸೇಂಟ್ ಡೊಮಿನಿಕ್‌ ಚರ್ಚ್‌ ನಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಕಾರ್ಯಾಗಾರ ಜರಗಿತು. ವಂ| ಅಕ್ವೀನ್‌ ನೊರೋನ್ಹ ಮುಖ್ಯ ಅತಿಥಿಯಾಗಿದ್ದರು. ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಚ್ಛತೆಯ ಮಹತ್ವದ ಕುರಿತು ಭಾಷಣ ಮಾಡಿದರು. ನಲ್ಲೂರು ಸಚಿನ್‌ ಶೆಟ್ಟಿ ಸಾವಯವ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಿ, ಮನೆ ಮಟ್ಟದಲ್ಲಿ ಹಸಿಕಸ ನಿರ್ವಹಿಸುವ ಕುರಿತು ಮಾತನಾಡಿದರು. ರಿಚರ್ಡ್‌ ಗೋನ್ಸಾಲ್ವಿಸ್‌, ಸುಧೀರ್‌ ನೊರೋನ್ಹ ಮತ್ತಿತರರಿದ್ದರು. ರಂಜನ್‌ ವಂದಿಸಿದರು. ಭಾರತೀಯ ಕೆಥೋಲಿಕ್‌ ಯುವ ಸಂಚಲನ ಅಶೋಕ ನಗರದ ಘಟಕ ಈ ಕಾರ್ಯಕ್ರಮವನ್ನು ಸಂಘಟನೆ ಮಾಡಿತ್ತು. ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್‌.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next