Advertisement

ಬಿಪಿಎಲ್‌ಗೆ ಸ್ವಯಂಘೋಷಣೆ ಸಾಕು: ಖಾದರ್‌

01:07 PM Apr 11, 2017 | Team Udayavani |

ಮಂಗಳೂರು: ಬಿಪಿಎಲ್‌ ಪಡಿತರ ಚೀಟಿಗೆ ನಿಗದಿಪಡಿಸಿರುವ 4 ಮಾನದಂಡಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ದೃಢಪತ್ರಗಳನ್ನು ನೀಡುವ ಬದಲು ಅರ್ಜಿದಾರರೇ ಸ್ವಯಂಘೋಷಣೆ ಮಾಡಿದರೆ ಸಾಕು ಎಂಬುದಾಗಿ ಸರಕಾರ ರೂಪಿಸಿರುವ ನಿಯಮ ಎ. 1ರಿಂದಲೇ ಜಾರಿಗೆ ಬಂದಿದ್ದು ಇತರ ದೃಢಪತ್ರಗಳನ್ನು ಪಡೆಯುವ ಅಗತ್ಯವಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಗ್ರಾ.ಪಂ.ಗಳು, ನಗರಾಡಳಿತ ಸಂಸ್ಥೆಗಳಲ್ಲಿ ಅರ್ಜಿದಾರರಿಂದ ದೃಢಪತ್ರಗಳನ್ನು ಕೇಳುತ್ತಿರುವುದಾಗಿ ದೂರುಗಳು ಬಂದಿವೆ. ಅಧಿಕಾರಿಗಳು ಸ್ವಯಂಘೋಷಣೆ ಅಧಾರದಲ್ಲೇ ಅವರಿಗೆ ಬಿಪಿಎಲ್‌ ಪಡಿತರ ಚೀಟಿಗಳನ್ನು ನೀಡಬೇಕು ಎಂದು ಸಚಿವರು ತಿಳಿಸಿದರು.

ಅರ್ಜಿದಾರರು ಸರಕಾರ ನಿಗದಿಪಡಿಸಿರುವ ಮಾನದಂಡಗಳಂತೆ ಸ್ವಯಂಘೋಷಣೆ ಮಾಡಿರುತ್ತಾರೆ. ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ. ಒಳಗಡೆ ಇರುವ ಕುರಿತು ಕಂದಾಯ ಇಲಾಖೆ ನೀಡುತ್ತಿರುವ ಆದಾಯ ದೃಢೀಕರಣ ಪತ್ರದ ಆಧಾರದಲ್ಲಿ ನಿರ್ಧರಿಸಲಾಗುವುದು. ಅರ್ಜಿದಾರರು ಆಹಾರ ಇಲಾಖೆಗೆ ಸಲ್ಲಿಸಿರುವ ಮಾಹಿತಿಯ ಆಧಾರದ ಮೇಲೆ ಆದಾಯ ಪ್ರಮಾಣಪತ್ರವನ್ನು ತಂತ್ರಾಂಶದ ಮೂಲಕ ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲಾಗುವುದು. ಅದಕ್ಕಾಗಿ ಅರ್ಜಿದಾರರು ಪ್ರತ್ಯೇಕ ವಿವರ ಸಲ್ಲಿಸುವ ಅಗತ್ಯವೂ ಇರುವುಲ್ಲ. ಕಂದಾಯ ಇಲಾಖೆಯಿಂದ ಆದಾಯ ಪ್ರಮಾಣಪತ್ರ ನೀಡುವಾಗ ಅರ್ಜಿದಾರರ ಕುಟುಂಬದ ವಿಳಾಸ ಹಾಗೂ ಕುಟುಂಬದ ಮುಖ್ಯಸ್ಥರೊಂದಿಗೆ ಕುಟುಂಬದ ಇತರ ಸದಸ್ಯರ ಸಂಬಂಧವೂ ಕೂಡ ದೃಢೀಕರಣಗೊಳ್ಳುವುದು.

ಸ್ಥಳ ತನಿಖೆ ಅನಗತ್ಯ
ಆಹಾರ ನಿರೀಕ್ಷಕರು ತಂತ್ರಾಂಶದಲ್ಲಿ ಸ್ವೀಕರಿಸಿದ ಆದಾಯ ದೃಢೀಕರಣ ಪತ್ರದ ಮಾಹಿತಿಯಂತೆ ಕುಟುಂಬದ ವಾರ್ಷಿಕ ಆದಾಯವೂ 1.20 ಲಕ್ಷ ರೂ. ಒಳಗಿದ್ದರೆ ಅರ್ಜಿಯನ್ನು ತಂತ್ರಾಂಶದಲ್ಲೇ ಅನುಮೋದಿಸುವುದು. ಆದುದರಿಂದ ಆಹಾರ ನಿರೀಕ್ಷಕರು ಪಡಿತರ ಚೀಟಿ ಮಂಜೂರು ಮಾಡಲು ಸ್ಥಳ ತನಿಖೆ ಮಾಡುವ ಆವಶ್ಯಕತೆ ಇರುವುದಿಲ್ಲ ಎಂದು ಸಚಿವ ಖಾದರ್‌ ತಿಳಿಸಿದರು.

ತೊಗರಿಬೇಳೆ ವಿತರಣೆ ಸ್ಥಗಿತ
ಗುತ್ತಿಗೆದಾರರು ಸಮರ್ಪಕವಾಗಿ ಪೂರೈಕೆ ಮಾಡದಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ತೊಗರಿ ಬೇಳೆ ವಿತರಿಸುವಲ್ಲಿ ಸಮಸ್ಯೆ ತಲೆದೋರಿದ್ದು ಪರಿಹರಿಸುವಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಸಚಿವ ಖಾದರ್‌ ಹೇಳಿದರು.

Advertisement

ಬಿಪಿಎಲ್‌ ಪಡಿತರ ಚೀಟಿದಾರರಿಗೆ 1 ಕಿಲೋ ತೊಗರಿಬೇಳೆಯನ್ನು ವಿತರಿಸಲಾಗುತ್ತಿದೆ. ಆದರೆ ಟೆಂಡರ್‌ ವಹಿಸಿಕೊಂಡವರು ಸರಬರಾಜು ಮಾಡದಿರುವ ಹಿನ್ನೆಲೆಯಲ್ಲಿ ಎಪ್ರಿಲ್‌ನಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗಿಲ್ಲ. ದರದಲ್ಲಿ ಏರಿಕೆಯಾಗಿರುವುದರಿಂದ ನಿಗದಿತ ದರದಲ್ಲಿ ಪೂರೈಕೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರು ಸಬೂಬು ನೀಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಗೆ ತೊಗರಿಬೇಳೆ ಸರಬರಾಜು ಮಾಡಲು 15 ಮಂದಿ ಗುತ್ತಿಗೆ ವಹಿಸಿಕೊಂಡಿದ್ದಾರೆ. ಇದರಲ್ಲಿ 10 ಮಂದಿ ಸರಬರಾಜು ಮಾಡಿಲ್ಲ. ದಕ್ಷಿಣ ಕನ್ನಡಕ್ಕೆ ಬೆಳಗಾವಿಯ ವ್ಯಕ್ತಿಯೋರ್ವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಕರಾರಿನಂತೆ ಅವರು ತಿಂಗಳ 25ನೇ ತಾರೀಕಿನೊಳಗೆ ಗೋದಾಮುಗಳಿಗೆ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡಬೇಕು. ಈ ಕುರಿತು ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಎ. 15ರ ವರೆಗೆ ಕಾಯಲಾಗುವುದು. ಬಳಿಕ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದವರು ವಿವರಿಸಿದರು.

ರೈತರಿಂದ ನೇರ ಖರೀದಿಸಿ ವಿತರಣೆಗೆ ಚಿಂತನೆ
ಗುತ್ತಿಗೆದಾರರು ವಿಫಲರಾದರೆ ಸರಕಾರವೇ ರೈತರಿಂದ ನೇರವಾಗಿ ಖರೀದಿಸಿ ವಿತರಿಸಲು ಚಿಂತನೆ ನಡೆಸಿದೆ. ಸರಕಾರ ಈಗಾಗಲೇ ರೈತರಿಗೆ ತೊಗರಿ ಬೇಳೆಗೆ 5,500 ರೂ. ಬೆಂಬಲ ಬೆಲೆ ನೀಡುತ್ತಾ ಇದೆ. ರೈತರಿಂದ ಖರೀದಿಸಿ ಅದನ್ನು ಕರ್ನಾಟಕ ಆಹಾರ ನಿಗಮದ ಮೂಲಕ ಪ್ಯಾಕ್‌ ಮಾಡಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುವುದು ಇದರಲ್ಲಿ ಒಳಗೊಂಡಿದೆ ಎಂದು ಸಚಿವ ಖಾದರ್‌ ತಿಳಿಸಿದರು.

ವಂಚಿಸಿದರೆ ಕ್ರಿಮಿನಲ್‌ ಮೊಕದ್ದಮೆ
ಮಾನದಂಡಗಳ ಕುರಿತಾಗಿ ಅರ್ಜಿದಾರರ ಸ್ವಯಂ ಘೋಷಣೆ ಮೇರೆಗೆ ವಿತರಿಸಿದ ಪಡಿತರ ಚೀಟಿಗಳನ್ನು  ಅನಂತರ 1 ವರ್ಷದೊಳಗಾಗಿ ಆಹಾರ ನಿರೀಕ್ಷಕರು ರ್‍ಯಾಂಡಮ್‌ ಚೆಕ್‌ ವಿಧದಂತೆ ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತಾರೆ. ತಪ್ಪು ಮಾಹಿತಿ ನೀಡಿ ಅನರ್ಹ ಕುಟುಂಬಗಳು ಪಡಿತರ ಚೀಟಿ ಪಡೆದಿರುವುದು ಕಂಡುಬಂದಲ್ಲಿ ಅವರ ಮೇಲೆ ಸೂಕ್ತ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು. ಈ ಕುರಿತು ತಂತ್ರಾಂಶದ ಮುಖಾಂತರ ಪಡಿತರ ಚೀಟಿಗಳನ್ನು ರ್‍ಯಾಂಡಮ್‌ ಚೆಕ್‌ ಮಾಡಲು ಸಂಬಂಧಪಟ್ಟಂತಹ ಆಹಾರ ನಿರೀಕ್ಷರ ಲಾಗಿನ್‌ನಲ್ಲಿ ಕಳುಹಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next