Advertisement

ಧ್ವನಿ ವರ್ಧಕ ಬಳಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಎಂದು ನ್ಯಾಯಾಂಗ ನಿರ್ಧರಿಸಬೇಕಿದೆ

10:05 AM Jan 12, 2020 | Team Udayavani |

ಬೆಂಗಳೂರು: ಇಂಟರ್‌ನೆಟ್‌, ಧ್ವನಿವರ್ಧಕಗಳ ಬಳಕೆಯಂತಹ ಹೊಸ ವ್ಯಾಖ್ಯೆಗಳನ್ನು ಸಂವಿಧಾನ ಕೊಡಮಾಡಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ’ದ ಭಾಗವಾಗಿ ಪರಿಗಣಿಸಬಹುದೆ ಎಂಬುದನ್ನು ನಿರ್ಧರಿಸಬೇಕಾದ ಹೊಸ ಸವಾಲುಗಳು ನ್ಯಾಯಾಂಗದ ಮುಂದಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಬೋಬ್ಡೆ  ಅಭಿಪ್ರಾಯಪಟ್ಟಿದ್ದಾರೆ.

Advertisement

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು ಜಿಕೆವಿಕೆಯ ಡಾ. ಬಾಬುರಾಜೇಂದ್ರ ಪ್ರಸಾದ್‌ ಅಂತರರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ 19ನೇ ದೈವಾರ್ಷಿಕ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

“ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸಂಪರ್ಕಕ್ಕೆ ನಿರ್ಬಂಧ ಹೇರಿದ್ದರ ವಿಚಾರವಾಗಿ ನಾವು (ಸುಪ್ರೀಂಕೋರ್ಟ್‌) ಇಂಟರ್‌ನೆಟ್‌ ಬಳಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಹೇಳಿದ್ದೇವೆ. ಇಂತಹ ಅನೇಕ ಪ್ರಶ್ನೆಗಳು ಉದ^ಭವಿಸುತ್ತವೆ. ಉದಾಹರಣೆಗೆ ಧ್ವನಿ ವರ್ಧಕಗಳನ್ನು ಬಳಸಿ ಮದುವೆ ಮಂಟಪಗಳಲ್ಲಿ ಜೋರು ಧ್ವನಿಯಲ್ಲಿ ಮ್ಯೂಸಿಕ್‌ ಕೇಳುವುದು, ಮಂದಿರ, ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ಬಳಸಲಾಗುತ್ತದೆ. ಹಾಗಾಗಿ, ಧ್ವನಿ ವರ್ಧಕಗಳ ಬಳಕೆಯನ್ನು ಸಂವಿಧಾನ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸಬಹುದೇ ಎಂಬ ಬಗ್ಗೆ ನಿರ್ಧರಿಸಬೇಕಾಗಿದೆ. ಇದು ಸಾಂವಿಧಾನಿಕ ಕಾನೂನಿನ ಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನವನ್ನು ಒಳಗೊಂಡಿದೆ ಎಂದರು.

ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಇಲ್ಲದ ವಿಶೇಷತೆ ನ್ಯಾಯಾಂಗ ಮತ್ತು ನ್ಯಾಯಾಧೀಶರಿಗಿದೆ. ಶಾಸಕಾಂಗ ಕಾನೂನು ರಚಿಸಿದೆರೆ, ಕಾರ್ಯಾಂಗ ನಿಯಮಗಳನ್ನು ರೂಪಿಸುತ್ತದೆ. ಆದರೆ, ನ್ಯಾಯಾಧೀಶರು ಸಂದರ್ಭ-ಸನ್ನಿವೇಶಗಳಿಗೆ ಅನುಗುಣವಾಗಿ ಕಾನೂನಿನಡಿ ತೀರ್ಪು ನೀಡಿ ನ್ಯಾಯ ಒದಗಿಸುತ್ತಾರೆ. ಅಕ್ಷರ ರೂಪದಲ್ಲಿರುವ ಸಂವಿಧಾನದ ತತ್ವಗಳನ್ನು ವಾಸ್ತವ ರೂಪಕ್ಕೆ ತರುವ ಜವಾಬ್ದಾರಿಯನ್ನು ನ್ಯಾಯಾಧೀಶರು ನಿರ್ವಹಿಸುತ್ತಾರೆ. ತಮ್ಮ ಈ ವೈಶಿಷ್ಟéತೆಯನ್ನು ನ್ಯಾಯಾಧೀಶರ ಮನಗಾಣಬೇಕು. ಸಮರ್ಪಕ ಜ್ಞಾನ, ಕೌಶಲ್ಯ ಹಾಗೂ ಅನುಭವದ ಕೊರತೆಯೂ ನ್ಯಾಯದಾನದ ವಿಳಂಬಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದು ನ್ಯಾ. ಬೋಬ್ಡೆ ಕಿವಿಮಾತು ಹೇಳಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಮಾತನಾಡಿ, ರಾಜ್ಯದ ನ್ಯಾಯಾಂಗ ಅಧಿಕಾರಿಗಳು ಉದಾತ್ತ ಸೇವೆ ಸಲ್ಲಿಸಿದ್ದಾರೆ. ಸಾಧಿಸಬೇಕಾದ್ದದ್ದು ಇನ್ನೂ ಇದೆ. ಅನುದಾನದ ಮೂಲಕ ಸಾರ್ವಜನಿಕರ ತೆರಿಗೆ ಹಣ ಪಡೆಯುತ್ತಿರುವ ನಾವುಗಳು (ಜಡ್ಜ್) ಜನರ ಮುಂದೆ ಉತ್ತರದಾಯಿಗಳು ಎಂದನ್ನು ಮರೆಯಬಾರದು. ಇನ್ನೂ ಮುಂದೆ ಅಧೀನ ನ್ಯಾಯಾಲಯ, ಕೆಳಹಂತದ ನ್ಯಾಯಾಲಯಗಳ ಬದಲು ವಿಚಾರಣಾ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಎಂದು ಸಂಬೋಧಿಸುವಂತೆ ಸೂಚನೆ ಜಾರಿಗೊಳಿಸಲಾಗಿದೆ ಎಂದರು.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ನ್ಯಾಯಾಂಗದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಾಗುವುದು. ನ್ಯಾಯಾಂಗ ಅಧಿಕಾರಿಗಳ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸಲಾಗುವುದು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ನೆರವು ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳು ನೀಡಿದ ನೆರವನ್ನು ಸರ್ಕಾರ ಮರೆಯುವಂತಿಲ್ಲ ಎಂದರು.

“ಭೂದೇವಿಯ ಮುಕುಟದ ನವಮಣಿ’: ಸಿಜೆಐ
ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ “ಭೂದೇವಿಯ ಮುಕುಟದ ನವಮಣಿಯೆ’ ಸಾಲನ್ನು ಕನ್ನಡದಲ್ಲಿ ಓದಿದ ಸಿಜೆಐ ನ್ಯಾ. ಬೋಬ್ಡೆ , “ಬೆಂಗಳೂರನ್ನು ನಾನು “ಸಿಲಿಕಾನ್‌ ವ್ಯಾಲಿ ಆಫ್ ಇಂಡಿಯಾ’ ಎಂದಷ್ಟೇ ಕರೆಯಲು ಬಯಸುವುದಿಲ್ಲ. ಏಕೆಂದರೆ, ಈ ನಾಡು ಬಹಳ ಪುರಾತನ ನಾಗರಿಕತೆಯನ್ನು ಹೊಂದಿದ್ದು, ಇದು ಭಾರತೀಯ ಸಂಸ್ಕೃತಿಯ ಪ್ರಧಾನ ಕೇಂದ್ರವಾಗಿದೆ. ಕರ್ನಾಟಕ ಅನೇಕ ಖ್ಯಾತನಾಮ ಹಾಗೂ ಪ್ರತಿಭಾವಂತ ನ್ಯಾಯಾಧೀಶರನ್ನು ದೇಶಕ್ಕೆ ನೀಡಿದೆ. ಕಾನೂನು ಪಂಡಿತರನ್ನು ಕೊಟ್ಟಿದೆ. ಸಿವಿಲ್‌ ನ್ಯಾಯದ ಹಲವು ಮಹತ್ವದ ತೀರ್ಪುಗಳು ಕರ್ನಾಕಟದಿಂದ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿಯೇ ಅವರು ಭಾಷಣ ಮಾಡಿದ್ದು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ್‌, ಅಬ್ದುಲ್‌ ನಜೀರ್‌, ಎ.ಎಸ್‌. ಬೋಪಣ್ಣ ಮಾತನಾಡಿದರು. ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪ್ರಧಾನ ಕಾರ್ಯದರ್ಶಿ ಎ. ಸೋಮಶೇಖರ್‌ ಮತ್ತಿತರರು ವೇದಿಕೆಯಲ್ಲಿದ್ದರು.

“ವ್ಯಾಜ್ಯಗಳನ್ನು ಮಧ್ಯಸ್ಥಿಕೆ, ರಾಜಿ-ಸಂಧಾನಗಳ ಮೂಲಕ ಇತ್ಯರ್ಥಪಡಿಸುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕೆಲವೊಮ್ಮೆ ಬಳಸಿಕೊಂಡರೂ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಆಯೋಧ್ಯೆ ವಿವಾದದಲ್ಲಿ ಅದರ ಅನುಭವ ಕಂಡಿದ್ದೇವೆ. ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಯಬುದು ಎಂದು ಭಾವಿಸಲಾಗಿತ್ತು. ಆದರೆ, ಅದು ಆಗಲಿಲ್ಲ. ಮಧ್ಯಸ್ಥಿಕೆ, ರಾಜಿ-ಸಂಧಾನ ಕಾಲದ ಬೇಡಿಕೆಯಾಗಿದೆ’
-ನ್ಯಾ. ಎ.ಎಸ್‌. ಬೋಬ್ಡೆ , ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ.

Advertisement

Udayavani is now on Telegram. Click here to join our channel and stay updated with the latest news.

Next