Advertisement

ಸುಬ್ರಹ್ಮಣ್ಯದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಸಮಸ್ಯೆ: ಬೃಹತ್‌ ಪ್ರತಿಭಟನೆ

04:55 AM Aug 04, 2017 | Team Udayavani |

ಸಂಘ – ಸಂಸ್ಥೆಗಳಿಂದ ಪ್ರತಿಭಟನೆ, ಸರಕಾರಕ್ಕೆ ಮನವಿ

Advertisement

ಸುಬ್ರಹ್ಮಣ್ಯ: ರಾಜ್ಯದ ನಂ.1 ಆದಾಯವುಳ್ಳ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಆಗ್ರಹಿಸುವಂತೆ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಗುರುವಾರ ಸುಬ್ರಹ್ಮಣ್ಯದಲ್ಲಿ ಬೃಹತ್‌ ಪ್ರತಿಭಟನೆ ಜರಗಿತು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕ,ಉದ್ಯಮಿ ಯಜ್ಞೆಶ್‌ ಆಚಾರ್‌, ಸುಬ್ರಹ್ಮಣ್ಯ ಕ್ಷೇತ್ರ ಶೀಘ್ರಗತಿಯಲ್ಲಿ ಪ್ರಗತಿಹೊಂದುತ್ತಿದೆ. ದೇಶವಿದೇಶಗಳಿಂದ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಆದರೆ ಸುಬ್ರಹ್ಮಣ್ಯದ ಆರೋಗ್ಯ ಕೇಂದ್ರದ ಅಗತ್ಯ ಮೂಲ ಸೌಕರ್ಯ, ವೈದ್ಯರ ಕೊರತೆ ಅಲ್ಲದೆ 108 ಆರೋಗ್ಯ ಕವಚದ ಅವ್ಯವಸ್ಥೆಯಿದೆ ಎಂದು ದೂರಿದರು.

ಆರೋಗ್ಯ ಸಮಸ್ಯೆ ಎದುರಾದರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸಮರ್ಪಕ ಆರೋಗ್ಯ ಸೇವೆ ಲಭ್ಯವಿಲ್ಲ. ಅದಕ್ಕಾಗಿ ಪೇಟೆಯಿಂದ 2ಕಿ.ಮೀ ದೂರದ ಪರ್ವತಮುಖೀ ಎಂಬಲ್ಲಿರುವ ಸರಕಾರಿ ಆಸ್ಪತ್ರೆಗೆ ತೆರಳಬೇಕು. ಅಲ್ಲಿಯೂ ಕೂಡಾ ಮೂಲ ಸೌಕರ್ಯ, ಖಾಯಂ ವೈದ್ಯರಿಲ್ಲದಂತಾಗಿದೆ. ತುರ್ತು ಚಿಕಿತ್ಸಾ ವಾಹನವೂ ಇದ್ದರೂ ಇಲ್ಲದಂತಾಗಿದೆ. ಸರಕಾರ ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸೌಲಭ್ಯಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ದೇವಳದ ರಥಬೀದಿಯಿಂದ ಗ್ರಾಮ ಪಂಚಾಯತ್‌ವರೆಗೆ ಹಮ್ಮಿಕೊಂಡ ಪ್ರತಿಭಟನ ಮೆರವಣಿಗೆಯಲ್ಲಿ ಸುಬ್ರಹ್ಮಣ್ಯದ ವರ್ತಕರ ಸಂಘ, ಕುಕ್ಕೆ ಶ್ರೀ ಅಟೋ ಚಾಲಕ – ಮಾಲಕರ, ಬಿ.ಎಮ್‌.ಎಸ್‌ ಅಟೋ ಚಾಲಕ-ಮಾಲಕರ ಸಂಘ, ರೋಟರಿ ಕ್ಲಬ್‌, ಕುಕ್ಕೆ ಶ್ರೀ ಜೆಸಿಐ, ಭಾಗ್ಯ ಶ್ರೀ ಸ್ತ್ರೀ ಸಂಘ, ವಾಣಿ ವನಿತಾ ಸಮಾಜ, ಜ್ಯೋತಿ ಶ್ರೀ ಸ್ತ್ರೀ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸುಬ್ರಹ್ಮಣ್ಯ ಘಟಕ ಹಾಗೂ ಇನ್ನಿತರ ಸಂಘಸಂಸ್ಥೆಗಳು ಹಾಗೂ ಗ್ರಾಮಸ್ಥರು ಘೋಷಣೆಗಳೊಂದಿಗೆ ಭಾಗವಹಿಸಿದರು. ಗ್ರಾ.ಪಂ. ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ತಾ.ಪಂ. ಸದಸ್ಯ ಅಶೋಕ್‌ ನೆಕ್ರಾಜೆಯವರಿಗೆ ಮನವಿ ಸಲ್ಲಿಸಲಾಯಿತು. ಶೀಘ್ರವಾಗಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುತ್ತೇವೆ ಅವರು ಭರವಸೆ ನೀಡಿದರು.

ಸುಬ್ರಹ್ಮಣ್ಯ ವರ್ತಕರ ಸಂಘದ ಹರೀಶ್‌ ಕಾಮತ್‌, ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಅಶೋಕ್‌ ಎನೆಕೈ, ನವೀನ್‌ ಶೆಟ್ಟಿ ಮತ್ತು ಸದಸ್ಯರು, ಗ್ರಾಮ ಪಂಚಾಯತ್‌ನ ಸದಸ್ಯರಾದ ರಾಜೇಶ್‌ ಎನ್‌.ಎಸ್‌., ಮೋಹನ್‌ದಾಸ್‌ ರೈ, ನವೀನ್‌, ರವಿ ಕಕ್ಕೆಪದವು ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ಬೇಡಿಕೆಗಳು
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಳಿಸುವುದು. ವೈದ್ಯಾಧಿಕಾರಿಗಳು ಒಬ್ಬರೇ ಇರುವುದರಿಂದ ದಿನದ 24ಗಂಟೆ ಕಾರ್ಯ ನಿರ್ವಹಿಸಲು ಹೆಚ್ಚುವರಿ ವೈದ್ಯರ ನೇಮಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ತುರ್ತುಚಿಕಿತ್ಸಾ ಕೇಂದ್ರ ಪ್ರಾರಂಭಿಸುವುದು. ತುರ್ತು ಚಿಕಿತ್ಸಾ ವಾಹನದ ಸಮಸ್ಯೆ ನೀಗಿಸುವಂತೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು.

ನೂರೆಂಟು ಸಮಸ್ಯೆ
ತಾಲೂಕಿಗೆ 2 ತುರ್ತು ಚಿಕಿತ್ಸಾ ವಾಹನ 108ನ್ನು ಸರಕಾರ ಒದಗಿಸಿತ್ತು. ಒಂದು ಸುಳ್ಯ ಮತ್ತೂಂದು ಸುಬ್ರಹ್ಮಣ್ಯ ಕೇಂದ್ರವಾಗಿ ವಿಂಗಡಿಸಲಾಗಿದೆ. ಈ ಪೈಕಿ ಸುಬ್ರಹ್ಮಣ್ಯದ 108 ವಾಹನ ಕಳೆದ ಕೆಲವು ಸಮಯಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ತುರ್ತಾಗಿ ಸ್ಪಂದಿಸಲು ಸಂಚಾರಕ್ಕಾಗಿ ಚಕ್ರಗಳೇ ಸ್ಪಂದಿಸುತ್ತಿಲ್ಲವಂತೆ. ವಾಹನದಲ್ಲಿ ಸಿಬಂದಿ ಇದ್ದರೂ ಸರಕಾರದಿಂದ ಅವರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂಬ ಆರೋಪ ಇದೆ.

Advertisement

Udayavani is now on Telegram. Click here to join our channel and stay updated with the latest news.

Next