Advertisement

Aviation: ನಾಗರಿಕ ವಿಮಾನಯಾನ: ಮಾರ್ಗಸೂಚಿ ಪಾಲನೆಯಾಗಲಿ

12:47 AM Jan 17, 2024 | Team Udayavani |

ಕಳೆದ ಐದಾರು ವರ್ಷಗಳಿಂದ ವಿಮಾನಯಾನ ಸೇವೆಯಲ್ಲಿ ದೇಶ ಮುಂಚೂಣಿ   ಯಲ್ಲಿದ್ದು ಯಾನಿಗಳಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುವ ಜತೆಯಲ್ಲಿ ದೇಶದ ಎರಡು ಮತ್ತು ಮೂರನೇ ಸ್ತರದ ನಗರಗಳಿಗೂ ವಿಮಾನ ಸೇವೆ ತಲುಪಿದೆ. ಈ ಎಲ್ಲ ಧನಾತ್ಮಕ ಅಂಶಗಳ ನಡುವೆ ಈಗ ಪದೇಪದೆ ಪ್ರಯಾಣಿಕರಿಂದ ವಿಮಾನಯಾನದ ಸಂದರ್ಭದಲ್ಲಿ ತಮಗಾಗುತ್ತಿರುವ ಅಡಚಣೆ, ಸೃಷ್ಟಿಯಾಗುತ್ತಿರುವ ಸಮಸ್ಯೆಗಳು, ವಿಮಾನ ಸಿಬಂದಿಯ ದುರ್ವರ್ತನೆಗಳ ಕುರಿತಂತೆ ಆರೋಪ, ದೂರುಗಳು ಕೇಳಿ ಬರುತ್ತಲೇ ಇವೆ.

Advertisement

ದೇಶದಲ್ಲಿ ವಿಮಾನಯಾನ ಸೇವೆ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಕಪ್ಪುಚುಕ್ಕೆಯಾಗಿ ಪರಿಣಮಿಸಲಿದೆಯಲ್ಲದೆ ವಿಮಾನಯಾನ ಕಂಪೆನಿಗಳು ಕೂಡ ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಳ್ಳಲಿವೆ. ಇದ ರಿಂದ ಇಡೀ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿದೆ.

ಕ್ಷಿಪ್ರ ಪ್ರಯಾಣಕ್ಕೆ ವಿಮಾನಯಾನ ಅನುಕೂಲಕರವಾಗಿರುವುದರಿಂದ ಮತ್ತು ಇತ್ತೀಚಿನ ವರ್ಷಗಳಲ್ಲಿ ಸರಕಾರದ ಉತ್ತೇಜನಾದಾಯಕ ಕ್ರಮಗಳಿಂದಾಗಿ ದೇಶದ ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಲಭಿಸಿರುವುದರಿಂದ ಈಗ ಮಧ್ಯಮ ವರ್ಗದ ಜನರು ಕೂಡ ವಿಮಾನಯಾನದತ್ತ ಮುಖ ಮಾಡತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾನಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡುವ ಜತೆಯಲ್ಲಿ ಸೌಜನ್ಯಯುತ ಮತ್ತು ಪ್ರಾಮಾಣಿಕ ಸೇವೆಯನ್ನು ಖಾತರಿಪಡಿಸುವುದು ವಿಮಾನಯಾನ ಕಂಪೆನಿಗಳ ಹೊಣೆಗಾರಿಕೆಯಾಗಿದೆ.

ವಿಮಾನಯಾನಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅಗತ್ಯ ಮಾರ್ಗಸೂಚಿಯನ್ನು ರೂಪಿಸಿವೆ. ಯಾವುದೇ ಸಂದರ್ಭದಲ್ಲಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುತ್ತ ಬರಲಾಗಿದೆ. ಇವೆಲ್ಲದರ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಕೇಳಿಬರುತ್ತಿರುವುದನ್ನು ಕಂಡಾಗ ಮಾರ್ಗ ಸೂಚಿಯ ಪಾಲನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದು ಸ್ಪಷ್ಟ. ವಿಮಾನ ವಿಳಂಬ, ಬೋರ್ಡಿಂಗ್‌ಗೆ ನಕಾರ, ದಿಢೀರ್‌ ವಿಮಾನ ಸಂಚಾರ ರದ್ದು ಮತ್ತಿತರ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ವಿಮಾನಯಾನ ಕಂಪೆನಿಗಳು ಒದಗಿಸದಿರುವ ಬಗೆಗೆ ಸಾಕಷ್ಟು ದೂರಗಳು ದಾಖಲಾಗುತ್ತಿವೆ. ಸಹಜವಾಗಿಯೇ ಇಂತಹ ಸಮಸ್ಯೆಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತವೆಯಲ್ಲದೆ ವಿಮಾನದ ಸಿಬಂದಿ ಮತ್ತು ಯಾನಿಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿವೆ. ಇಂತಹ ಕಾರಣಗಳಿಂದಾಗಿಯೇ ಯಾನಿ ಗಳು ಕೂಡ ತೀರಾ ಅತಿರೇಕವಾಗಿ ವರ್ತಿಸುವ ಪ್ರಸಂಗಗಳೂ ಹೆಚ್ಚುತ್ತಿವೆ.

ಇವೆಲ್ಲವನ್ನೂ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನ ಯಾನ ಮಹಾನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದ್ದು ಸೋಮ ವಾರದಂದು ಹೊಸದಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿ, ಪ್ರಯಾ ಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದೆ. ಅಷ್ಟು ಮಾತ್ರ ವಲ್ಲದೆ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಲು 6 ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ವಾರ್‌ ರೂಂ ರಚನೆಗೆ ನಿರ್ದೇಶನ ನೀಡಿದೆ.

Advertisement

ಇಂತಹ ಆದೇಶ, ಮಾರ್ಗಸೂಚಿ ಹೊಸದಲ್ಲವೇನಾದರೂ ಕೇಂದ್ರ ಸರಕಾರದ ಈ ತುರ್ತು ಸ್ಪಂದನೆ ಸ್ವಾಗತಾರ್ಹವೇ. ಆದರೆ ಇಲ್ಲಿಗೆ ತನ್ನ ಹೊಣೆಗಾರಿಕೆಯನ್ನು ಕೇಂದ್ರ ಸರಕಾರ ಸೀಮಿತಗೊಳಿಸದೆ, ಹಾಲಿ ಜಾರಿಗೊಳಿಸಲಾಗಿರುವ ಆದೇಶ ಗಳೆಲ್ಲವೂ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next