Advertisement

ಮನೆ ಸಮೀಕ್ಷೆ ಆರಂಭ; ಮಾಹಿತಿ ನೀಡಲು ಮನಪಾ ಮನವಿ

11:21 PM Jan 24, 2020 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ವ್ಯಾಪ್ತಿಯಲ್ಲಿ 24 ಗಂಟೆ ನೀರು ಸರಬರಾಜು ಯೋಜನೆ ಹಾಗೂ ಮನೆ ಮನೆಗೆ ಗ್ಯಾಸ್‌ ಸಂಪರ್ಕ ಕಲ್ಪಿಸುವ ಸಲುವಾಗಿ ಅಧಿಕೃತ ಏಜೆನ್ಸಿ ಸಂಸ್ಥೆಗಳ ಮೂಲಕ ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ಮನೆ ಮನೆಗೆ ಸಮೀಕ್ಷೆಗೆ ಬಂದಾಗ ಮಂಗಳೂರಿನ ಜನರು ಪೂರ್ಣ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Advertisement

ಪಾಲಿಕೆಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 30 ವರ್ಷಗಳ ಅಗತ್ಯವನ್ನು ಪರಿಗಣಿಸಿ ಎಡಿಬಿ ನೆರವಿನ ಕ್ವಿಮಿಪ್‌ “ಜಲಸಿರಿ’ ಯೋಜನೆಯಲ್ಲಿ ನಗರಕ್ಕೆ 24 ಗಂಟೆಗಳ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಕಾಮಗಾರಿಯನ್ನು ಸುಯೇಜ್‌ ಕಂಪೆನಿ ಗುತ್ತಿಗೆ ಪಡೆದುಕೊಂಡಿದ್ದು, 140 ತಿಂಗಳು ಗುತ್ತಿಗೆ ಅವಧಿ ಇರುತ್ತದೆ. 792.42 ಕೋಟಿ ರೂ. ವೆಚ್ಚದಲ್ಲಿ 8 ವರ್ಷಗಳ ಅವಧಿಗೆ ಈ ಕಂಪೆನಿ ಕಾಮಗಾರಿ ನಡೆಸಿ ನಿರ್ವಹಣೆ ಮಾಡಲಿದೆ. ಒಟ್ಟು 4 ಹಂತಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಸರ್ವೆ ನಡೆಯುತ್ತಿದೆ ಎಂದರು.

ನಗರದ ಎಲ್ಲ ಮನೆಗಳ ಸಮೀಕ್ಷೆ
ಶುಕ್ರವಾರದಿಂದಲೇ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ. ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಇರುವ 1.15 ಲಕ್ಷಕ್ಕೂ ಅಧಿಕ ಕುಟುಂಬಗಳನ್ನು ಭೇಟಿ ಮಾಡಿ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ 10 ತಂಡಗಳನ್ನು ರಚಿಸಿದ್ದು, ತಂಡದಲ್ಲಿ ತಲಾ ಇಬ್ಬರು ಇರುತ್ತಾರೆ. ಇವರ ಜತೆ ಪಾಲಿಕೆಯ ನಿಯೋಜಿತ ಸದಸ್ಯರೂ ಭೇಟಿ ನೀಡಲಿದ್ದಾರೆ. ಈ ವೇಳೆ ಕೆಯುಐಡಿಎಫ್‌ಸಿ ಕಚೇರಿಯ ಗುರುತಿನ ಚೀಟಿ ಹೊಂದಿರುವ ಸುಯೇಜ್‌ ಕಂಪೆನಿಯ ನೌಕರರು ಭೇಟಿ ನೀಡಲಿದ್ದಾರೆ. ಅವರು ಕೇಳಿದ ಎಲ್ಲ ಮಾಹಿತಿಗಳನ್ನು ನೀಡುವ ಮೂಲಕ ಸಮೀಕ್ಷೆಗೆ ಸಹಕಾರ ನೀಡಬೇಕು ಎಂದರು.

ಆರಂಭಿಕ ಹಂತದಲ್ಲಿ ನೀರು ಪೂರೈಕೆಯ ಪ್ರಮಾಣವನ್ನು ತಿಳಿಯಲು ನಗರದ ಪ್ರತಿ ಮನೆ, ವಾಣಿಜ್ಯ, ಹೊಟೇಲ್‌, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌, ಚಿತ್ರಮಂದಿರ, ಆಸ್ಪತ್ರೆ, ಕೈಗಾರಿಕೆ, ಸರಕಾರಿ ಕಚೇರಿ, ಖಾಸಗಿ ಕಚೇರಿ, ಬ್ಯಾಂಕ್‌ ಮುಂತಾದ ಎಲ್ಲ ವಿಧದ ನೀರು ಬಳಕೆ ಮಾಡುವ ಕಟ್ಟಡಗಳ ಜನಸಂಖ್ಯೆ, ನೀರಿನ ಮೀಟರ್‌ ಸಂಖ್ಯೆ, ವಿದ್ಯುತ್ಛಕ್ತಿಯ ಆರ್‌ಆರ್‌ ಸಂಖ್ಯೆ, ಕಟ್ಟಡದ ಭಾವಚಿತ್ರ, ಇತರೆ ಮಾಹಿತಿಯನ್ನು ಡಿಜಿಟಲೀಕರಣ ವ್ಯವಸ್ಥೆ ಮೂಲಕ ಸಂಗ್ರಹಿಸಲಾಗುತ್ತದೆ. ಈ ಯೋಜನೆಗೆ ಅವಶ್ಯವಿರುವ ಜಿಐಎಸ್‌ ಸರ್ವೆ, ಅಸೆಟ್‌ ಸರ್ವೆ, ರಸ್ತೆ ಸರ್ವೆಗಳನ್ನು ಕೂಡ ನಡೆಸಲಾಗುತ್ತದೆ. ಮಂಗಳೂರಿನ ಜನತೆ ಇದಕ್ಕೆ ಸಹಕಾರ ನೀಡಬೇಕು ಎಂದರು.

ಕುಡ್ಸೆಂಪ್‌ ಅಧಿಕಾರಿ ವಲ್ಸನ್‌, ಮಂಜುನಾಥ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ರವಿಶಂಕರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಿಟಿ ಗ್ಯಾಸ್‌ ಸಮೀಕ್ಷೆಯೂ ಆರಂಭ
ಮನೆ ಮನೆಗೆ ಗ್ಯಾಸ್‌ ನೀಡುವ ಮಹತ್ವದ ಸಿಟಿ ಗ್ಯಾಸ್‌ ಯೋಜನೆಗೂ ಮಂಗಳೂರಿನಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಮೊದಲಿಗೆ ನಗರದ ದೇರೆಬೈಲು ಪಶ್ಚಿಮ, ಮಣ್ಣಗುಡ್ಡ, ಕದ್ರಿ ಕಂಬಳ, ಕೊಡಿಯಾಲಬೈಲ್‌, ಬಿಜೈ, ಕದ್ರಿ ದಕ್ಷಿಣ, ಬೆಂದೂರು, ಕೋರ್ಟ್‌ ಹಾಗೂ ಡೊಂಗರಕೇರಿ ಭಾಗದಲ್ಲಿ ಮನೆ ಮನೆಗೆ ಅನಿಲ ನೀಡುವ ಯೋಜನೆಗಾಗಿ ಸರ್ವೆ ನಡೆಸಲಾಗುತ್ತಿದೆ. ಈ ವರ್ಷದಲ್ಲಿ ಪಿಎನ್‌ಜಿ ಸಂಪರ್ಕಕ್ಕಾಗಿ 10 ಸಾವಿರ ಮನೆಗಳ ಗುರಿ ತಲುಪುವ ಉದ್ದೇಶವನ್ನು ಕಂಪೆನಿ ಹೊಂದಿದೆ. ಆದ್ದರಿಂದ ಮನೆಗಳಿಗೆ ಕಂಪೆನಿಯ ಪ್ರತಿನಿಧಿಗಳು ಭೇಟಿ ನೀಡುವಾಗ ಗ್ಯಾಸ್‌ ಸಂಪರ್ಕ ಸಹಿತ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ನಾಗರಿಕರು ಸಹಕಾರ ನೀಡಬೇಕು ಎಂದು ಆಯುಕ್ತರು ತಿಳಿಸಿದರು. ಸಿಟಿ ಗ್ಯಾಸ್‌ ಯೋಜನೆಯ ಅಧಿಕಾರಿ ವಿಲಿನ್‌ ಝಂಮೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next