Advertisement

ಉ.ಪ್ರ: ಸಾವಿರ ಮಂದಿ ಬಂಧನ ; ಅಸುನೀಗಿದವರ ಸಂಖ್ಯೆ 19ಕ್ಕೇರಿಕೆ

10:15 AM Dec 28, 2019 | Hari Prasad |

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶಾದ್ಯಂತ ನಡೆದ ಗಲಭೆ, ಹಿಂಸಾಚಾರಗಳಲ್ಲಿ 19 ಮಂದಿ ಅಸುನೀಗಿದ್ದಾರೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 1,113 ಮಂದಿಯನ್ನು ಬಂಧಿಸಲಾಗಿದೆ. 5,558 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಸರಕಾರದ ವಕ್ತಾರರು ಗುರುವಾರ ಮಾಹಿತಿ ನೀಡಿದ್ದಾರೆ.

Advertisement

ಫಿರೋಜಾಬಾದ್‌ನಲ್ಲಿ ಐವರು, ನಾಲ್ವರು ಮೀರತ್‌ನಲ್ಲಿ, ಕಾನ್ಪುರದಲ್ಲಿ ಇಬ್ಬರು, ಸಂಭಾಲ್‌, ರಾಮ್‌ಪುರ ಮತ್ತು ಲಕ್ನೋಗಳಲ್ಲಿ ತಲಾ ಇಬ್ಬರು ವ್ಯಕ್ತಿಗಳು ಅಸುನೀಗಿದ್ದಾರೆ ಎಂದರು. ಈ ಪಟ್ಟಿಯಲ್ಲಿ ಡಿ.20ರಂದು ವಾರಾಣಸಿಯಲ್ಲಿ ಅಸುನೀಗಿದ ಎಂಟು ವರ್ಷದ ಬಾಲಕನನ್ನು ಸೇರ್ಪಡೆ ಮಾಡಲಾಗಿಲ್ಲ. ಆತ ಪ್ರತಿಭಟನೆ ವೇಳೆ ಉಂಟಾಗಿರುವ ಕಾಲ್ತುಳಿತದಿಂದ ಅಸುನೀಗಿದ್ದಾನೆ ಎಂಬ ಸ್ಪಷ್ಟನೆ ನೀಡಲಾಗಿದೆ.

ಫಿರೋಜಾಬಾದ್‌ನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಸ್ಥಿತಿ ಗಂಭೀರವಾಗಿದೆ. ಇದೇ ವೇಳೆ ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 26 ಮಂದಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ ಪಡೆದುಕೊಂಡವರಿಗೆ 50 ಲಕ್ಷ ರೂ. ವರೆಗೆ ದಂಡ ಪಾವತಿಗೆ ಸೂಚಿಸಲಾಗಿದೆ.

ಕುಲಾಧಿಪತಿ ಹುದ್ದೆ ಬಿಡಿ: ಪಶ್ಚಿಮ ಬಂಗಾಲ ರಾಜ್ಯದ ರಾಜ್ಯಪಾಲ ಜಗದೀಪ್‌ ಧನ್ಕರ್‌ ವಿವಿಗಳ ಕುಲಾಧಿಪತಿ ಹುದ್ದೆ ತೊರೆಯಬೇಕು ಎಂದು ಜಾಧವಪುರ ವಿವಿಯ ಕಲಾನಿಕಾಯದ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ. ಈ ಬಗ್ಗೆ ವಿದ್ಯಾರ್ಥಿಗಳು ಡಿ.24ರಂದು ರಾಜಭವನಕ್ಕೆ ಇ-ಮೇಲ್‌ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೆ ಭಿನ್ನಾಭಿಪ್ರಾಯವನ್ನು ಅವರು ಹೊಂದಿದ್ದಾರೆ.

ದಾಳಿ: ಅಕ್ರಮ ಚಟುವಟಿಕೆ ತಡೆ ಕಾಯ್ದೆ ಅನ್ವಯ ಬಂಧಿತರಾಗಿರುವ ಆರ್‌ಟಿಐ ಕಾರ್ಯಕರ್ತ ಅಖೀಲ್‌ ಗೊಗೋಯ್‌ ಅವರ ಗುವಾಹಟಿ ನಿವಾಸಕ್ಕೆ ಗುರುವಾರ ಎನ್‌ಐಎ ದಾಳಿ ನಡೆಸಿದೆ.

Advertisement

ಮಂಗಳೂರಿನ ಇಬ್ಬರಿಗೆ ದೀದಿ 5 ಲಕ್ಷ ರೂ. ಪರಿಹಾರ ಘೋಷಣೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಲ್ಲಿ ಅಸುನೀಗಿದ ಜಲೀಲ್‌ ಮತ್ತು ನೌಶೀನ್‌ ಎಂಬವರ ಕುಟುಂಬ ಸದಸ್ಯರಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಕೋಲ್ಕತಾದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು ಅಸುನೀಗಿದ ವ್ಯಕ್ತಿಗಳಿಗೆ ನೀಡಿದ್ದ ಪರಿಹಾರವನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ವಾಪಸ್‌ ಪಡೆದಿದ್ದಾರೆ.

ಹೀಗಾಗಿ, ಬಿಜೆಪಿ ನೀಡಿದ ವಾಗ್ಧಾನದಂತೆ ನಡೆಯುತ್ತಿಲ್ಲ ಎನ್ನುವುದು ಸಾಬೀತಾಗಿದೆ ಎಂದು ದೂರಿದರು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಹಿಂಪಡೆವ ವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಯಾರಿಗೂ ಹೆದರುವ ಅಗತ್ಯವಿಲ್ಲ. ಕೇಂದ್ರ ಸರಕಾರ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಸೇನೆಯ ಮೂಲಕ ಹತ್ತಿಕ್ಕುವ ಪ್ರಯತ್ನಗಳನ್ನು ‘ಬೆಂಕಿಯ ಜತೆಗಿನ ಆಟ’ ಎಂದು ಬಣ್ಣಿಸಿ, ಆ ಪ್ರಯತ್ನ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

ವಿರೋಧ ನಿರೀಕ್ಷೆ ಇರಲಿಲ್ಲ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಲ್ಲಿ ಭಾರಿ ಪ್ರತಿರೋಧ ನಿರೀಕ್ಷೆ ಮಾಡಿರಲಿಲ್ಲ ಎಂದು ಕೇಂದ್ರ ಸಚಿವ ಸಂಜೀವ್‌ ಬಾಲ್ಯಾನ್‌ ಒಪ್ಪಿಕೊಂಡಿದ್ದಾರೆ. ‘ರಾಯಿಟರ್ಸ್‌’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು ಮುಸ್ಲಿಂ ಸಮುದಾಯದಿಂದ ಕೊಂಚ ಪ್ರಮಾಣದ ಆಕ್ರೋಶವಷ್ಟೇ ನಿರೀಕ್ಷೆ ಇದ್ದದ್ದು ಎಂದು ಹೇಳಿದ್ದಾರೆ.

ಕಾಯ್ದೆ ಜಾರಿಯಿಂದ ಆಗಬಹುದಾದ ರಾಜಕೀಯ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡದ್ದು ಕಡಿಮೆಯಾಯಿತು ಎಂದು ಹೇಳಿದ್ದಾರೆ. ಮತ್ತೆ ಇಬ್ಬರು ಪ್ರಮುಖ ಸಚಿವರು ಹೇಳಿದ ಪ್ರಕಾರ ಸದ್ಯದ ಪರಿಸ್ಥಿತಿ ತಿಳಿಗೊಳಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಆರ್‌ಎಸ್‌ಎಸ್‌ ಕೂಡ ಕಾಯ್ದೆ ಪರ ಪ್ರಚಾರಕ್ಕೆ ಮುಂದಾಗಿದೆ.

ಭೇಟಿಗೆ ನಕಾರ; ವಿವಾದ
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪೌರತ್ವ ವಿರೋಧಿ ಕಿಚ್ಚಿನಲ್ಲಿ ಮೃತರಾದ ಇಬ್ಬರು ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಸಚಿವ ಕಪಿಲ್‌ ದೇವ್‌ ಅಗರ್ವಾಲ್‌ ನಿರಾಕರಿಸಿದ್ದು ವಿವಾದಕ್ಕೀಡಾಗಿದೆ. ‘ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸಗೊಳಿಸಿದವರನ್ನು ನಮ್ಮ ಸಮಾಜದ ಬಂಧುಗಳು ಎಂದು ಹೇಗೆ ಕರೆಯಲು ಸಾಧ್ಯ? ಅಂಥವರ ಮನೆಗೆ ನಾವೇಕೆ ಹೋಗಬೇಕು?’ ಎಂದು ಸಚಿವರು ಹೇಳಿದ್ದಾರೆ.

ಚಿದು-ಮಾಳವೀಯ ಟ್ವೀಟ್‌ವಾರ್‌
ಟ್ವೀಟರ್‌ನಲ್ಲಿ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ- ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ನಡುವೆ ಎನ್‌ಪಿಆರ್‌ ಕುರಿತಾಗಿ ವಾಗ್ವಾದ ನಡೆದಿದೆ. 2008ರ ಮುಂಬಯಿ ದಾಳಿ ಅನಂತರ ಕೇಂದ್ರ ಗೃಹ ಇಲಾಖೆಯ ಹೊಣೆ ಹೊತ್ತಿದ್ದ ಪಿ. ಚಿದಂಬರಂ, ಅಧಿಕಾರಿಗಳೊಂದಿಗೆ ನಡೆಸಿದ್ದ ಸಭೆಯಲ್ಲಿ ಎನ್‌ಪಿಆರ್‌ ಬಗ್ಗೆ ಪ್ರಸ್ತಾಪಿಸಿದ್ದರು.

ಅದರ ವೀಡಿಯೋ ತುಣುಕನ್ನು ಮಾಳವೀಯ ಅಪ್‌ಲೋಡ್‌ ಮಾಡಿ ಪ್ರತಿ ನಾಗರಿಕನಿಗೂ ಪೌರತ್ವ ಗುರುತಿನ ಚೀಟಿ ನೀಡುವ ಬಗ್ಗೆ ಚಿದು ಪ್ರಸ್ತಾವಿಸಿದ್ದರು ಎಂದಿದ್ದರು. ಇದಕ್ಕೆ ಚಿದಂಬರಂ, ‘ನಾನು ಎನ್‌ಪಿಆರ್‌ ಬಗ್ಗೆ ಮಾತನಾಡಿದ್ದೆ. ಅದನ್ನು ಎನ್‌ಆರ್‌ಸಿಗೆ ಜೋಡಿಸಲು ಪ್ರಸ್ತಾಪಿಸಿರಲಿಲ್ಲ’ ಎಂದಿದ್ದರು. ಇದಕ್ಕೆ ಉತ್ತರ ನೀಡಿದ ಮಾಳವೀಯ, ‘ನೀವು ಆ ಬಗ್ಗೆಯೂ ಮಾತಾಡಿದ್ದೀರಿ’ ಎಂದು ಮತ್ತೂಂದು ವೀಡಿಯೋ ಹಾಕಿದರು. ಅದಕ್ಕೆ ಚಿದಂಬರಂ, ‘ಎನ್‌ಆರ್‌ಸಿ, ಎನ್‌ಪಿಆರ್‌ ಬೇರೆಯಾಗಿ ಪರಿಗಣಿಸಲು ನಿರ್ಧರಿಸಲಾಗಿತ್ತು. ತಾಕತ್ತಿದ್ದರೆ ಅದನ್ನು ಹಾಗೆಯೇ ಜಾರಿಗೊಳಿಸಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next