Advertisement

ಶಿರ್ವದ ಗ್ಯಾಬ್ರಿಯಲ್‌ ಅವರಿಗೆ ಒಲಿದ ಸಿದ್ಧಿವಿನಾಯಕ

09:00 AM Apr 16, 2021 | Team Udayavani |

ಶಿರ್ವ: ಕ್ರೈಸ್ತ ಮತದ 77 ವರ್ಷದ ವ್ಯಕ್ತಿಯೊಬ್ಬರು ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು-ಅಟ್ಟಿಂಜ ಕ್ರಾಸ್‌ ಬಳಿ 2 ಕೋ.ರೂ. ವೆಚ್ಚದಲ್ಲಿ ಶ್ರೀ ಸಿದ್ಧಿವಿನಾಯಕ ದೇಗುಲ ನಿರ್ಮಿಸಿ ಹಿಂದೂಗಳಿಗೆ ಕೊಡುಗೆಯಾಗಿ ನೀಡುವ ಮೂಲಕ ಸೌಹಾರ್ದದ ಸಂದೇಶ ಸಾರುತ್ತಿದ್ದಾರೆ.

Advertisement

ಶಿರ್ವ ನ್ಯಾರ್ಮ ಬಳಿಯ ಹಳೆಹಿತ್ಲು ನಿವಾಸಿ ಗ್ಯಾಬ್ರಿಯಲ್‌ ಫೇಬಿಯನ್‌ ನಜರತ್‌ ಸಿದ್ಧಿ ವಿನಾಯಕನ ಪರಮ ಭಕ್ತ. 1959ರಲ್ಲಿ ಎಸೆಸೆಲ್ಸಿ ಶಿಕ್ಷಣ ಮುಗಿಸಿ 14ನೇ ವಯಸ್ಸಿನಲ್ಲಿ ಉದ್ಯೋಗ ಅರಸಿಕೊಂಡು ಮುಂಬಯಿ ಸೇರಿದ್ದರು. ಪ್ರಭಾದೇವಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ವಾಸ್ತವ್ಯವಿದ್ದ ಅವರು ದಿನನಿತ್ಯ ಶ್ರೀ ಸಿದ್ಧಿವಿನಾಯಕನನ್ನು ಸ್ಮರಿಸಿ ಕಷ್ಟಪಟ್ಟು ದುಡಿದಿದ್ದರು. ಸ್ವಪ್ರಯತ್ನದಿಂದ ದೇವಸ್ಥಾನದ ಬಳಿಯೇ ಪ್ಲಾಸ್ಟಿಕ್‌ ಮತ್ತು ಮೆಟಲ್‌ ಡೈ ಮೇಕಿಂಗ್‌ ವರ್ಕ್‌ಶಾಪ್‌ ಸ್ಥಾಪಿಸಿ ಯಶಸ್ಸು ಗಳಿಸಿ, 40 ವರ್ಷಗಳಲ್ಲಿ 3 ಕಡೆ ಉದ್ದಿಮೆಗಳನ್ನು ಸ್ಥಾಪಿಸಿದ್ದರು.

ಅವರು ತಮ್ಮ ಮತದ ಜತೆಗೆ ಹಿಂದೂ ಪರಂಪರೆಯ ಬಗೆಗೂ ಅಪಾರ ಪ್ರೀತಿ ಹೊಂದಿದ್ದಾರೆ. ಮುಂಬಯಿಯಲ್ಲಿದ್ದ ಉದ್ದಿಮೆಯನ್ನು ಮಾರಾಟ ಮಾಡಿ ಊರಿನಲ್ಲಿ ನೆಲೆಸಿದ 12 ವರ್ಷಗಳ ಬಳಿಕ ತನ್ನ ತಂದೆಯಿಂದ ಬಳುವಳಿಯಾಗಿ ಬಂದಿದ್ದ 15 ಸೆಂಟ್ಸ್‌ ಜಾಗದಲ್ಲಿ ಸ್ವಂತ ಖರ್ಚಿನಲ್ಲಿ ಈ ದೇಗುಲ ನಿರ್ಮಿಸುತ್ತಿದ್ದಾರೆ. ಇಷ್ಟೇ ಅಲ್ಲದೆ 8 ವರ್ಷದ ಹಿಂದೆ ಬಂಟಕಲ್ಲು ಹೇರೂರು ಕಲ್ಲುಗುಡ್ಡೆ ಬಳಿಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಿದ್ದರು.

ಗ್ಯಾಬ್ರಿಯಲ್ ಮತ್ತು ಅವರು ಪೂಜಿಸುತ್ತಿರುವ ಸಿದ್ದಿವಿನಾಯಕ ಮೂರ್ತಿ

ಕೊಡುಗೈ ದಾನಿ

Advertisement

ಅವಿವಾಹಿತರಾಗಿರುವ ಗ್ಯಾಬ್ರಿಯಲ್‌ ಅವರು ತನ್ನ ಕುಟುಂಬದ 21 ಸದಸ್ಯರ ಮದುವೆಯ ಖರ್ಚು ವೆಚ್ಚವನ್ನು ಭರಿಸಿದ್ದು, ಜಾತಿ ಮತ ಧರ್ಮದ ಭೇದವಿಲ್ಲದೆ 60 ಮಂದಿಯ ಮದುವೆಗೆ ಧನಸಹಾಯ ಮಾಡಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಸರ್ವಧರ್ಮದ ಬಡಜನರ ಸೇವೆಗಾಗಿ ನಿವೇಶನ ಕೊಡುಗೆ ಸೇರಿದಂತೆ, ಪ್ರತೀವರ್ಷ ಸುಮಾರು 5 ಲ.ರೂ. ವ್ಯಯಿಸುತ್ತಿದ್ದಾರೆ.

ಮೇ 4ರಂದು ಪ್ರತಿಷ್ಠೆ

ಪಲಿಮಾರು ಮಠಾಧೀಶರ ಮಾರ್ಗ ದರ್ಶನದಲ್ಲಿ ಮೇ 2ರಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಮೇ 4ರಂದು ಶ್ರೀ ಸಿದ್ಧಿವಿನಾಯಕನ ಪ್ರತಿಷ್ಠೆ, ಬ್ರಹ್ಮಕಲಶ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ದೇವಸ್ಥಾನದಲ್ಲಿ ತ್ರಿಕಾಲ ಪೂಜೆ, ಸಂಕಷ್ಠಿ, ಚೌತಿ ಪೂಜೆ ಮತ್ತು ಭಜನ ಕಾರ್ಯಕ್ರಮಗಳು ನಡೆಯಲಿವೆ.

ಎಲ್ಲವೂ ಸಿದ್ಧಿವಿನಾಯಕನ ಇಚ್ಛೆ

60 ವರ್ಷಗಳಿಂದ ಶ್ರೀ ಸಿದ್ಧಿ ವಿನಾಯಕನನ್ನು ಆರಾಧಿಸುತ್ತಿದ್ದೇನೆ. ನಾನೇ ತಯಾರಿಸಿ 50 ವರ್ಷಗಳಿಂದ ಪೂಜಿಸುತ್ತಿರುವ ಸಿದ್ಧಿವಿನಾಯಕನ ಮೂರ್ತಿ ನನ್ನ ಬಳಿ ಇದೆ. ಮುಂಬಯಿಯ ಉದ್ದಿಮೆಯನ್ನು ಮಾರಿದ ಹಣವನ್ನು ಅಲ್ಲಿನ ಸಿಬಂದಿ ವರ್ಗಕ್ಕೆ ದಾನವಾಗಿ ನೀಡಿ ಬಂದಿದ್ದು ಅವರೆಲ್ಲರ ಆಶೀರ್ವಾದದ ಬಲ ದೇಗುಲ ನಿರ್ಮಿಸಲು ಪ್ರೇರಣೆ ನೀಡಿದೆ. ಯಾರಿಂದಲೂ ವಂತಿಗೆ, ಕಾಣಿಕೆ ಪಡೆದಿಲ್ಲ. ನನ್ನ ಹೆತ್ತವರಾದ ಹಳೆಹಿತ್ಲು ದಿ| ಫೇಬಿಯನ್‌ ಸಬೆಸ್ಟಿಯನ್‌ ನಜರತ್‌ – ದಿ| ಸಬೀನಾ ನಜರತ್‌ ಅವರ ಸವಿನೆನಪಿನಲ್ಲಿ ದೇಗುಲ ನಿರ್ಮಿಸಿ ಕೊಡುಗೆಯಾಗಿ ನೀಡುತ್ತಿದ್ದೇನೆ. ಮುಂದಿನದು ಸಿದ್ಧಿವಿನಾಯಕನ ಇಚ್ಛೆ.

– ಗ್ಯಾಬ್ರಿಯಲ್‌ ಫೇಬಿಯನ್‌ ನಜರತ್‌ ಶಿರ್ವ, ದೇಗುಲ ನಿರ್ಮಾತೃ

Advertisement

Udayavani is now on Telegram. Click here to join our channel and stay updated with the latest news.

Next