Advertisement

ಸಂಚಾರಿ ನಿಯಮ ಪಾಲನೆಯಿಂದ ಅಪಘಾತಕ್ಕೆ ತಡೆ

04:10 PM Jun 26, 2019 | Naveen |

ಚಿತ್ರದುರ್ಗ: ಅಪಘಾತಗಳು ನಿಯಂತ್ರಣಕ್ಕೆ ಬರಬೇಕಾದರೆ ಸಂಚಾರಿ ನಿಯಮಗಳ ಪಾಲನೆ ಮುಖ್ಯ. ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಿ ಅಮೂಲ್ಯ ಜೀವಗಳನ್ನು ಉಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಹೇಳಿದರು.

Advertisement

ನಗರದ ಜೆ.ಎಂ.ಐ.ಟಿ ವೃತ್ತದಲ್ಲಿ ಅಪಘಾತದಲ್ಲಿ ಬಲಿಯಾದ ವಿದ್ಯಾರ್ಥಿನಿ ಅಮೃತಾಳ ಆತ್ಮಕ್ಕೆ ಶಾಂತಿ ಕೋರಿ ರೋಟರಿ ಬಾಲಭವನದ ಮುಂಭಾಗದಲ್ಲಿ ವಿಜ್ಞಾನ ಕೇಂದ್ರ, ರೋಟರಿ ಕ್ಲಬ್‌, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ಅಪಘಾತಗಳ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಯಿಲೆ ಮತ್ತಿತರ ಅವಘಡಗಳಿಗಿಂತ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಾಲನೆಯಲ್ಲಿ ನಿರ್ಲಕ್ಷ್ಯ ಹಾಗೂ ಚಾಲಕರ ತಪ್ಪಿನಿಂದ ಅಪಘಾತಗಳಾಗುವುದುಂಟು. ಸಾರಿಗೆ ನಿಯಮ ಅತ್ಯದ್ಭುತವಾಗಿದ್ದರೂ ಯಾರೂ ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ವಾಹನಗಳನ್ನು ವೇಗವಾಗಿ ಚಾಲನೆ ಮಾಡುವುದು ತಾತ್ಕಾಲಿಕವಾಗಿ ಮನಸ್ಸಿಗೆ ಖುಷಿ ಕೊಡಬಹುದು, ಆದರೆ ಸಾವು-ನೋವು ಸಂಭವಿಸಿದಾಗ ಅವಲಂಬಿತರು ಜೀವನಪರ್ಯಂತ ದುಃಖ ಪಡಬೇಕಾಗುತ್ತದೆ. ಯಾವುದೇ ವಾಹನವನ್ನು ಚಾಲನೆ ಮಾಡುವಾಗ ಮೆದುಳು ಮತ್ತು ದೇಹಕ್ಕೆ ಏಕಾಗ್ರತೆ ಇರಬೇಕು. ಬೇರೆ ಕಡೆ ಗಮನಹರಿಸಬಾರದು. ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಇದ್ದಾಗ ಮಾತ್ರ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದರು.

ರೋಟರಿ ಕ್ಲಬ್‌ ಕಾರ್ಯದರ್ಶಿ ಶಿವರಾಂ ಮಾತನಾಡಿ, ಸಂಚಾರಿ ನಿಯಮಗಳನ್ನು ಚಾಲಕರು ಪಾಲಿಸದಿದ್ದಾಗ ಅಪಘಾತಗಳಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಿ ಜೀವ ಉಳಿಸಬೇಕಾಗಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

ಸಾಮಾಜಿಕ ಕಾರ್ಯಕರ್ತೆ ರೀನಾ ವೀರಭದ್ರಪ್ಪ ಮಾತನಾಡಿ, ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡಾ ದಿಡ್ಡಿಯಾಗಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುವುತ್ತವೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಕಾನೂನಿನ ಅಡಿ ಶಿಕ್ಷಿಸಬೇಕು. ಏಕೆಂದರೆ ಸಾಕಷ್ಟು ಅಪಘಾತಗಳಲ್ಲಿ ತಲೆಗೆ ಪೆಟ್ಟು ಬೀಳುತ್ತದೆ. ಇದರಿಂದ ಪ್ರಾಣಕ್ಕೆ ಕುತ್ತು ಬರುತ್ತದೆ. ಅತಿಯಾದ ವೇಗದ ಚಾಲನೆ ಮನಸ್ಸಿಗೆ ಮುದ ನೀಡಬಹುದು. ಆಕಸ್ಮಿಕವಾಗಿ ಅಪಘಾತವಾಗಿ ಕೈಕಾಲುಗಳನ್ನು ಕಳೆದುಕೊಂಡು ಬದುಕಿದರೆ ತಂದೆ-ತಾಯಿ ನೋವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪರಿಸರವಾದಿ ಡಾ| ಎಚ್.ಎಸ್‌.ಕೆ. ಸ್ವಾಮಿ ಮಾತನಾಡಿ, ಹೆದ್ದಾರಿಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದ ಪರಿಣಾಮ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿರುತ್ತವೆ. ಜೆ.ಎಂ.ಐ.ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ಹನ್ನೆರಡು ವರ್ಷದ ಬಾಲಕಿ ಅಮೃತಾ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಇನ್ನು ಮುಂದೆ ಅಂತಹ ಘಟನೆಗಳು ಮರಕಳಿಸಬಾರದೆಂದರೆ ಹೆದ್ದಾರಿಗಳಲ್ಲಿ ರೋಡ್‌ ಹಂಪ್ಸ್‌ಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ವೈ. ಚಂದ್ರಶೇಖರ್‌, ಬ್ರಹ್ಮಾನಂದ ಗುಪ್ತ, ಡಾ| ಹರಿಣಿ, ವಾಣಿ ಜಯದೇವ್‌, ಕವಿತಾ ಜೈನ್‌, ರೋಟರಿ ಶಾಲೆ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next