Advertisement

ಕಾಲಕ್ರಮದಲ್ಲಿ ಮಾಸಿದ “ಚಿತ್ರಪಟ’,ರಾಮ ರಾಮ ಎನಿಸಿದ್ದು ದಿಟ

03:40 PM Mar 24, 2018 | |

ವಾಸ್ತವವೇನೆಂದರೆ ಕೆಲವು ನಾಟಕಗಳಿಗೆ ವಯಸ್ಸಾಗುವುದಿಲ್ಲ. ನಿತ್ಯ ಹೊಸತಿನಿಂತೆ ಅವು ಆಯಾ ಕಾಲದ ಸಂಗತಿಗಳಿಗೆ ಪೂರಕವಾಗಿ ತಮ್ಮನ್ನು ಒಗ್ಗಿಸಿಕೊಳ್ಳುತ್ತಿರುತ್ತವೆ. ಆದರೆ ನಟರಿಗೆ ವಯಸ್ಸಾಗೇ ಆಗುತ್ತದಲ್ಲ. ಹರೆಯ ಗಟ್ಟಿಯಿದ್ದಾಗ ಅವರು ನಾಟಕ ಕಟ್ಟಿ ನಿಲ್ಲಿಸುವ ರೀತಿಗೂ ವಯೋಮಾನ ಕುಸಿಯುತ್ತಿದ್ದಂತೆ ಅದೇ ನಾಟಕವನ್ನು ಅವರು ಕಳೆಗುಂದಿಸುವ ರೀತಿಗೂ ವ್ಯತ್ಯಾಸವಿರುತ್ತದೆ.
ಈಚೆಗೆ “ಸ್ಪಂದನ’ ತಂಡ ಎಡಿಎ ರಂಗಮಂದಿರದಲ್ಲಿ ಪ್ರದರ್ಶಿಸಿದ “ಚಿತ್ರಪಟ’ ನಾಟಕದಲ್ಲಿ ಈ ಅಂಶ ಸ್ಪಷ್ಟವಾಯಿತು. ಪ್ರದರ್ಶನವೊಂದನ್ನು ತೌಲನಿಕವಾಗಿ ಕಾಲಘಟ್ಟಗಳ ನೆಲೆಯ ಹಿನ್ನೆಲೆಯಲ್ಲಿ ತೂಗಿನೋಡುವುದು ಸಮಂಜಸವಲ್ಲದಿದ್ದರೂ ಅದು ಅನಿವಾರ್ಯ. “ಚಿತ್ರಪಟ’ ಸರಿಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ನಾಟಕ; ಆಗಲೂ ಇದೇ ಸ್ಪಂದನ ತಂಡದಿಂದ ಪ್ರಯೋಗಕ್ಕೆ ಒಳಪಟ್ಟಿತ್ತು.

Advertisement

ಬಿ. ಜಯಶ್ರೀ ಅವರೇ ಈ ನಾಟಕದ ಸೂತ್ರ ಹಿಡಿದು ನಿರ್ದೇಶಿಸಿದ್ದರು. ಮಣಿಪುರದ ರಂಗಕರ್ಮಿಯೊಬ್ಬರು ಆ ನೆಲದ ಸಂಸ್ಕೃತಿಗೆ ಅನುಗುಣವಾಗಿ ಈ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದರು. ಅಂದಿಗೆ ಎಲ್ಲ ನಿತ್ಯ ಹೊಸತು. ಇಡೀ ನಾಟಕ ರಂಗದ ಮೇಲೆ ಅನಾವರಣಗೊಂಡ ರೀತಿಯಲ್ಲಿಯೇ ಉತ್ಸಾಹವಿತ್ತು. ಸಂಗೀತ ಅತ್ಯಂತ ಚೇತೋಹಾರಿ ಅನಿಸಿತ್ತು. ನಟರಲ್ಲಿ ಜೀವಂತಿಕೆ ತುಂಬಿ ತುಳುಕುತ್ತಿತ್ತು. ಮಣಿಪುರದಾದ್ದರಿಂದ ಹೊಸ ಲಯ ಕೇಳಿಸಿದಂತೆ ಭಾಸವಾಗಿತ್ತು. ಅಂದಿಗೆ ಅತ್ಯಂತ ಯಶಸ್ವಿಯೂ ಆಗಿತ್ತು.

ಸರಿದ ಕಾಲದ ಅಂತರದಲ್ಲಿ “ಚಿತ್ರಪಟ’ದ ಬೆರಗು ಹಾಗೇ ಇರುತ್ತದೆ ಎಂದುಕೊಳ್ಳಲು ಕಾರಣಗಳೂ ಇದ್ದವು. ಬಿ. ಜಯಶ್ರೀ ಅವರೇ ಹಿನ್ನೆಲೆಗಿದ್ದರು. ಸೂತ್ರವನ್ನು ಅವರೇ ಹಿಡಿದಿದ್ದದ್ದು ತಿಳಿದಿತ್ತು. ಈ ಕಾರಣ “ಚಿತ್ರಪಟ’ವನ್ನು ಮತ್ತೆ ನೋಡಲು ಒತ್ತಾಯಿಸಿತ್ತು. ಆದರೆ ಆದದ್ದು ಮಾತ್ರ ನಿರಾಶೆ. ಕಾಲಕ್ರಮದಲ್ಲಿ “ಚಿತ್ರಪಟ’ ಮಾಸಿತ್ತು.

ನಾಟಕ ಎಂದಮೇಲೆ ನಟವರ್ಗ ಬದಲಾಗುವುದು ಹೊಸದೇನಲ್ಲ. ಈ ತಂಡದಲ್ಲೂ ಆ ಕೆಲಸ ಆಗಿದೆ. ಹಾಗೆಂದು ಜಯಶ್ರೀ ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಬದಲಾಗಿರಲಿಲ್ಲ. ಕೆಲವು ಹಳಬರೂ ಇದ್ದರು. ಹೊಸಬರೂ ಜೊತೆಗೂಡಿದ್ದರು. ಹಳತು ಹೊಸತರ ಸಮ್ಮಿಶ್ರಣವಿದ್ದರೂ ನಾಟಕದಲ್ಲಿ ಸಮತೋಲನವಿರಲಿಲ್ಲ. ಮುಂಚಿನ ಬೆರಗು ಕಡೆಯವರೆಗೂ ಮರುಕಳಿಸಲೇ ಇಲ್ಲ. ಜಯಶ್ರೀ ಅವರು ಇದ್ದರೂ ತುಂಬ ದೊಡ್ಡ ಕೊರತೆ ಅನಿಸಿದ್ದು ಸಂಗೀತದಲ್ಲಿ. ಇದು ಅನಿವಾರ್ಯವಾಗಿ ತುಂಬ ಹಿಂದಿನ ಪ್ರಯೋಗವೊಂದರ ಜೊತೆ ತಾಳೆ ಹಾಕಿಕೊಳ್ಳಲಿಕ್ಕೆ ಒತ್ತಾಯಿಸುತ್ತಿತ್ತು. ಮಿಗಿಲಾಗಿ ಅವತ್ತು ಕಂಡಿದ್ದ ಬಿಗಿ ಬಂಧ ತೀರಾ ಸಡಿಲವಾಗಿತ್ತು. 

 ರಂಗದ ಮೇಲೆ ಅದೇ ನಾಟಕದ ಅವೇ ಪಾತ್ರಗಳು ಕದಲುತ್ತಿದ್ದವು ಎನ್ನುವುದು ಬಿಟ್ಟರೆ ಉಳಿದಂತೆ ಅದು ಅಸ್ತಿಪಂಜರದಂತೆ ಕಾಣುತ್ತಿತ್ತು. ಜಯಶ್ರೀ ಅವರು ಆಗಾಗ ಚೂರು ಲವಲವಿಕೆ ತರಲು ಯತ್ನಿಸಿದರಾದರೂ ಅವರಿಂದ ದಣಿವು ಈಚೆಗೆ ಇಣುಕಿ ನೋಡುತ್ತಿದ್ದಂತೆ ಇತ್ತು. ಅದಕ್ಕೆ ಅವರು ಅನಿವಾರ್ಯವಾಗಿ ಶರಣಾಗತರಾದಂತೆಯೂ ಕಾಣುತ್ತಿತ್ತು. 

Advertisement

ನಾಟಕದಲ್ಲಿನ ಒಟ್ಟು ನಟರೇ ಇಲ್ಲಿ ಸಂಗೀತದ ಮೇಳವಾಗಿಯೂ ಕದಲುತ್ತಾರಾದ್ದರಿಂದ ಇಲ್ಲಿ ಯಾರೊಬ್ಬರ ದನಿಯಲ್ಲೂ ಒಮ್ಮತವಿದ್ದಂತೆ ಅನಿಸಲಿಲ್ಲ. ಹಳಬರು ಮಾತ್ರ ಹಿಂದಿನ ಜಾಡಿನಂತೆ ತಮ್ಮ ಅನುಭವದ ಆಧಾರದಲ್ಲಿ ಶೃತಿಗೂಡಿಸಿದರೂ ಒಟ್ಟಂದದಲ್ಲಿ ಅದು ಕ್ರಮಬದ್ಧವಾಗಿ ಕೇಳಿಸಲೇ ಇಲ್ಲ. ತಾಲೀಮುಗಳ ಕೊರತೆ ಎದ್ದು ಕಾಣುತ್ತಿತ್ತು. ವಿನ್ಯಾಸವೂ ತುಂಬ ಸಡಿಲವಾದಂತೆ ಕಂಡಿತು.

 ಹೆಳವನಕಟ್ಟೆ ಗಿರಿಯಮ್ಮನವರ ಕಥೆಯನ್ನು ಆಧರಿಸಿ ಎಚ್‌.ಎಸ್‌.ವಿ ಅವರು ಇದನ್ನು ರಂಗರೂಪಕ್ಕೆ ಅಳವಡಿಸಿ ಚೆಂದದ ಹಾಡುಗಳನ್ನು ಬರೆದಿದ್ದರು. ಒಂದು ಘಟ್ಟದಲ್ಲಿ ಹಾಡುಗಳನ್ನು ಮತ್ತೆ ಮತ್ತೆ ಗುನುಗುನಿಸುವಂತೆ ಮಾಡಿದ್ದ ಇದೇ ಪ್ರಯೋಗ ಈ ಬಾರಿ ಹಾಡುಗಳಲ್ಲಿ ಸ್ಪಷ್ಟತೆ ಕಳೆದುಕೊಂಡಿತ್ತು. ಚೂರು ಸಂಗೀತಜಾnನವಿದ್ದವರು ಪದ್ಯಗಳನ್ನು ಓದಿದಂತೆ ಕೇಳಿಸುತ್ತಿತ್ತು. ಅಚ್ಚರಿಯ ಸಂಗತಿಯೆಂದರೆ ಜಯಶ್ರೀ ಅವರ ಕಂಠವೂ ದಣಿದಂತೆ ಕಂಡದ್ದು. ಅವರೊಬ್ಬರೇ ರಂಗದ ಮೇಲೆ ಹಾಡುವಾಗ ಹಿಂದಿನ ಛಾಪು ಮರುಕಳಿಸಿದಂತೆ ಕಂಡರೂ ಅವರ ಹೆಜ್ಜೆಗಳಲ್ಲಿ ದಣಿವು ಇತ್ತು. ಹಾಗಾಗಿ ಹಿಂದಿನ ಲಾಲಿತ್ಯವಿರಲಿಲ್ಲ. ನೃತ್ಯದ ಝಲಕುಗಳಷ್ಟೇ ಕಂಡವು.

    ಜನಪದೀಯ ಹಿನ್ನೆಲೆಯಲ್ಲಿ ರಾಮಾಯಣವನ್ನು ದರ್ಶಿಸಿರುವ ಈ ನಾಟಕ ಕೆಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಸೀತೆ ಮಾಯಾ ಶೂರ್ಪನಖೀಯ ಒತ್ತಾಯಕ್ಕೆ ಮಣಿದು ರಾವಣನ ಚಿತ್ರ ಬರೆಯುವುದು, ಅದಕ್ಕೆ ಜೀವ ಬರುವುದು ಇತ್ಯಾದಿ. ಈ ಎಲ್ಲ ಅಂಶಗಳನ್ನು ಕಾಣಿಸಲಿಕ್ಕೆ ರಂಗದ ಮೇಲೆ ಜಯಶ್ರೀ ಅವರು ಅಳವಡಿಸಿದ್ದ ತಂತ್ರಗಳು ಚೆನ್ನಾಗಿದ್ದವು. ಅದೇ ಮಾದರಿ ಉಳಿದಿತ್ತಾದರೂ ನಾಟಕದ ಒಟ್ಟು ಲಯದಲ್ಲಿ ಹಿಂದಿನ ಲವಲವಿಕೆ ಮಾಯವಾಗಿತ್ತು. 

 ಸಡಿಲವಾಗಿದ್ದ ಬಂಧದಲ್ಲಿ ಜಯಶ್ರೀ ಅವರಿಂದ ನಿರೀಕ್ಷಿಸಬಹುದೇನೊ ಎನ್ನುವುದರಲ್ಲಿಯೇ ನಾಟಕ ಮುಕ್ತಾಯವಾಗಿತ್ತು.

ಎನ್‌.ಸಿ.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next