Advertisement

ರೈತ-ಕಾರ್ಮಿಕ ವಿರೋಧಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ

04:14 PM May 02, 2019 | Naveen |

ಚಿತ್ರದುರ್ಗ: ಕೋಮುವಾದಿ ಬಿಜೆಪಿ ದೇಶಕ್ಕೆ ಅನ್ನ ನೀಡುವ ರೈತ‌, ದುಡಿಯುವ ಕಾರ್ಮಿಕ ವರ್ಗಗಳ ವಿರೋಧಿಯಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್‌ ಆರೋಪಿಸಿದರು.

Advertisement

ಇಲ್ಲಿನ ದಾವಣಗೆರೆ ರಸ್ತೆಯ ಎಐಟಿಯುಸಿ ಕಚೇರಿ ಮುಂಭಾಗದಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಮೇ 1 ಹಾಗೂ ಹುತಾತ್ಮರ 42ನೇ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಮಹಿಳೆಯರನ್ನು ವಿರೋಧಿಸುತ್ತಾರೆ. ಇಂತಹ ಮಾನವ ವಿರೋಧಿ ಸರ್ಕಾರ ಅಧಿಕಾರದಲ್ಲಿರಲು ನಾವು ಬಿಡುವುದಿಲ್ಲ ಎಂದು ಗುಡುಗಿದರು.

ಉದಾರೀಕರಣ, ಜಾಗತೀಕರಣ, ಖಾಸಗೀಕರಣವನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ಪಕ್ಷ. ಹಾಗಾಗಿ ಯಾರೇ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದರೂ ಅವರನ್ನು ಅಧಿಕಾರದಲ್ಲಿ ಕೂರಲು ಬಿಡುವುದಿಲ್ಲ. ದೇಶದಲ್ಲಿ ಇದುವರೆಗೆ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1991 ರಿಂದ ಇಲ್ಲಿಯವರೆಗೆ ಇಪ್ಪತ್ತು ರಾಷ್ಟ್ರೀಯ ಮುಷ್ಕರಗಳನ್ನು ಮಾಡಿದ್ದೇವೆ. ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ದಬ್ಟಾಳಿಕೆ ಮಾಡಲು ಹೊರಟಿರುವ ಮೋದಿಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ರೈತ, ಕಾರ್ಮಿಕರ ಹಾಗೂ ಮಹಿಳೆಯರ ಪರವಾಗಿರುವ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಹೋರಾಟದ ಮೂಲ ಉದ್ದೇಶ ಎಂದರು.

ಕೋಮುವಾದಿ ಬಿಜೆಪಿ ಮುಸಲ್ಮಾನರು ಹಾಗೂ ಹಿಂದುಳಿದವರನ್ನು ದ್ವೇಷಿಸುವುದೇ ದೇಶಪ್ರೇಮ ಎಂದುಕೊಂಡಿದೆ. ಒಂದೂವರೆ ಸಾವಿರ ರೈತರ ಭೂಮಿಯನ್ನು ಕಿತ್ತುಕೊಂಡ ಮೋದಿ, ಅದನ್ನು ಅಂಬಾನಿಗೆ ನೀಡಿದ್ದಾರೆ. ಐದುನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ನಿಷೇಧಿಸಿದ್ದರಿಂದ ಉದ್ಯಮಿಗಳು, ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ದಂಧೆ ನಡೆಸುವವರು ಡಾಲರ್‌, ಕರೆನ್ಸಿ, ಚಿನ್ನದ ರೂಪದಲ್ಲಿ ಕಪ್ಪುಹಣವನ್ನು ಬಿಳಿ ಹಣವನ್ನಾಗಿಸಿಕೊಂಡಿರುವುದು ಬಿಟ್ಟರೆ ಬಡವರಿಗೆ ಇದರಿಂದ ಯಾವ ಲಾಭವೂ ಆಗಿಲ್ಲ ಎಂದು ಟೀಕಿಸಿದರು.

ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಬಡವರನ್ನು ನಂಬಿಸಿ ಮೋದಿ ಮೋಸ ಮಾಡಿದರು. ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ್ದರಿಂದ ಪೊಲೀಸ್‌ ಲಾಠಿಚಾರ್ಜ್‌ ಆಗುವಂತಾಯಿತು. ಬೆಳಗಿನಿಂದ ಸಂಜೆಯ ತನಕ ಬ್ಯಾಂಕ್‌ ಎದುರು ಕ್ಯೂನಲ್ಲಿ ನಿಂತು ಸತ್ತವರು ಬಡ, ಮಧ್ಯಮ ವರ್ಗದವರು ಮಾತ್ರ. ಶ್ರೀಮಂತರ್ಯಾರೂ ಬ್ಯಾಂಕಿನ ಮುಂದೆ ಹಣಕ್ಕಾಗಿ ಸಾಲಿನಲ್ಲಿ ನಿಲ್ಲಲಿಲ್ಲ. ಜಿಎಸ್‌ಟಿ ಜಾರಿಯಿಂದ ವಿವಿಧ ವಲಯಗಳಲ್ಲಿ ಹನ್ನೆರಡು ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಯಿತು. ಅಂಬಾನಿ, ಅದಾನಿ ಪರವಾಗಿರುವ ಮೋದಿಯವರ ಫಸಲ್ ಬಿಮಾ ಯೋಜನೆ ರಫೇಲ್ ವಿಮಾನ ಖರೀದಿ ಹಗರಣಕ್ಕಿಂತಲೂ ಮಿಗಿಲಾದುದು ಎಂದು ಕಿಡಿ ಕಾರಿದರು.

Advertisement

ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಿ. ಬಸವರಾಜ್‌ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರನ್ನು ಕಡೆಗಣಿಸುತ್ತಲೆ ಬರುತ್ತಿವೆ. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಪ್ರಧಾನಿ ಮೋದಿಗೆ ಚುನಾವಣೆಯಲ್ಲಿ ದೇಶದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ. ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ಎಐಕೆಎಸ್‌ ರಾಜ್ಯಾಧ್ಯಕ್ಷ ದೊಡ್ಡಉಳ್ಳಾರ್ತಿ ಕರಿಯಣ್ಣ, ಜಯರಾಮ ರೆಡ್ಡಿ, ಟಿ.ಆರ್‌. ಉಮಾಪತಿ, ಎಂ.ಟಿ. ಜಯದೇವಮೂರ್ತಿ, ಜಾಫರ್‌ ಷರೀಫ್‌, ಎಸ್‌.ಸಿ. ಕುಮಾರ್‌, ಕೆ.ಎನ್‌. ರಮೇಶ್‌, ಅಮೀನಾಬಿ, ಕೆಕೆಎನ್‌ಎಸ್‌ಎಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್‌, ಜಮುನಾಬಾಯಿ ಮತ್ತಿತರರು ಇದ್ದರು.

ಗುಲಾಮಗಿರಿ ಪದ್ಧತಿ ಸಹಿಸಲ್ಲ
ಕಾರ್ಮಿಕ, ರೈತ ವಿರೋಧಿ ಆಡಳಿತ ನಡೆಸಿದ ವಾಜಪೇಯಿ, ಮನಮೋಹನ್‌ ಸಿಂಗ್‌, ನರಸಿಂಹ ರಾವ್‌ರವರು ಕಾರ್ಮಿಕರ ಹೋರಾಟದ ಫಲವಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಬಿಜೆಪಿಗೆ ನೂರು ಸೀಟು ಕೂಡ ಬರಲ್ಲ ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಗುಲಾಮಗಿರಿ ಪದ್ಧತಿಯನ್ನು ದೇಶದ ಕಾರ್ಮಿಕರ ಮೇಲೆ ಹೇರಲು ನಾವು ಬಿಡುವುದಿಲ್ಲ ಎಂದು ವಿಜಯಭಾಸ್ಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next