Advertisement

ಮೂರು ದಶಕದ ಕನಸು ನನಸು ದುರ್ಗೆಗೆ ಬಂದಳಾ ಭದ್ರೆ

12:51 PM Oct 04, 2019 | Naveen |

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಮೂರು ದಶಕಗಳ ಹೋರಾಟ, 11 ವರ್ಷಗಳ ಅವಿರತ ಪರಿಶ್ರಮಕ್ಕೆ ಗುರುವಾರ ಕೊನೆಗೂ ಫಲ ಸಿಕ್ಕಿದೆ. ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡು ಇಲ್ಲಿನ ರೈತರು ಅನುಭವಿಸಿದ ಕಷ್ಟ, ಪಟ್ಟ ಬವಣೆ ಕೊನೆಯಾಗುವ ಸಮಯ ಬಂದಿದೆ. ಇದರ ಜತೆಗೆ ಭದ್ರಾ ನೀರು ಯಾವಾಗ ಬರುತ್ತೆ, ವಿವಿ ಸಾಗರಕ್ಕೆ ಯಾವಾಗ ನೀರು ಹರಿಸ್ತಾರಂತೆ, ಪಂಪ್‌ ರನ್‌ ಆಯ್ತಾ ಎಂಬ ಹತ್ತು ಹಲವು ಪ್ರಶ್ನೆಗಳಿಗೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ.

Advertisement

ಗುರುವಾರ ಮಧ್ಯಾಹ್ನ 1:10ಕ್ಕೆ ಸರಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಬೆಟ್ಟದತಾವರೆಕೆರೆ ಬಳಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಒಂದು ಪಂಪ್‌ ರನ್‌ ಮಾಡಲಾಗಿದೆ. ಈ ಮೂಲಕ ಕಳೆದ ಹಲವು ದಿನಗಳಿಂದ ಇದ್ದ ಅನಿಶ್ಚಿತತೆಗೆ ಇತಿಶ್ರೀ ಹಾಡಲಾಗಿದೆ.

ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಅ. 3 ಸ್ಮರಣೀಯ ದಿನವಾದಂತಾಗಿದೆ. ಬರದ ನಾಡಿಗೆ ನೀರು ಹರಿಸಬೇಕು ಎನ್ನುವ ಕೂಗು ಮೂವತ್ತು ವರ್ಷಗಳ ಹಿಂದಿನದು. ಈಗ ಸಾಕಾರವಾಗುತ್ತಿದೆ. ಇದಕ್ಕಾಗಿ ಜಿಲ್ಲೆಯ ರೈತರು, ಮಠಾಧೀಶರು, ಪತ್ರಕರ್ತರು, ವರ್ತಕರು, ಆಟೋ ಚಾಲಕರು, ಖಾಸಗಿ ಬಸ್‌ ಮಾಲಿಕರು, ವಿದ್ಯಾರ್ಥಿಗಳು ಸೇರಿದಂತೆ ಇಡೀ ಜಿಲ್ಲೆ ಒಕ್ಕೊರಲಿನಿಂದ ಹೋರಾಡಿದೆ. ಇದರ ಪರಿಣಾಮ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ.

ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಸಂತಸ: ಭದ್ರೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುತ್ತಿರುವುದು ಈ ಜಿಲ್ಲೆಯ ಜನರಿಗೆ ಸಹಜವಾಗಿ ಅತ್ಯಂತ ಸಂತಸದ ಸಮಯ. ಅಷ್ಟೇ ಸಂಭ್ರಮ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಮೊಗದಲ್ಲೂ ಕಾಣಿಸುತ್ತಿದೆ.

ನೀರಾವರಿ ಯೋಜನೆಗಾಗಿ 30 ವರ್ಷಗಳ ಕಾಲ ಜಿಲ್ಲೆಯ ಜನತೆ ಹೋರಾಟ ಮಾಡಿದಂತೆ ಯೋಜನೆಯನ್ನು ಕಾರ್ಯಗತಗೊಳಿಸಲು 2008 ರಿಂದ ಈವರೆಗೆ ಸತತ 11 ವರ್ಷಗಳ ಕಾಲ ಯೋಜನೆಯ ಅ ಧಿಕಾರಿಗಳು, ಸಿಬ್ಬಂದಿ ಕೂಡಾ ಸತತ ಶ್ರಮ ಹಾಕಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡು ಜಿಲ್ಲೆಗೆ ನೀರು ಹರಿಯಲು ಇನ್ನೂ ನಾಲ್ಕೈದು ವರ್ಷ ಬೇಕಾಗಬಹುದು.

Advertisement

ಆದರೆ ವಿವಿ ಸಾಗರಕ್ಕೆ ನೀರು ಹರಿಯುವುದರಿಂದ ಜಿಲ್ಲೆಯ ರೈತರಲ್ಲಿ ಸಣ್ಣ ಭರವಸೆ ಮೂಡಲಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಹಾಗೂ ಅಧಿಕಾರಿಗಳಿಗೆ ಇದೊಂದು ಮೈಲುಗಲ್ಲು ಎಂದು ವಿಶ್ವೇಶ್ವರಯ್ಯ ಜಲನಿಗಮದ ಮುಖ್ಯ ಇಂಜಿನಿಯರ್‌ ಶಿವಕುಮಾರ್‌ ‘ಉದಯವಾಣಿ’ ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

6 ತಿಂಗಳು ನಿರಂತರ ಹರಿಯಲಿದ್ದಾಳೆ ಭದ್ರೆ: ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಗುರುವಾರದಿಂದ ನೀರು ಹರಿಯಲು ಆರಂಭಿಸಿದೆ. ನೀರು ಹರಿಯುವ ಮಾರ್ಗದ ಅಂತರ 85 ಕಿಮೀ ಇರುವುದರಿಂದ ವಾಣಿವಿಲಾಸ ಸಾಗರ ತಲುಪಲು ನಾಲ್ಕು ದಿನ ಬೇಕಾಗುತ್ತದೆ. ಈಗ ಚಾಲೂ ಆಗಿರುವ ಪಂಪ್‌ ಇನ್ನು ಆರು ತಿಂಗಳು ಆಫ್‌ ಆಗುವುದಿಲ್ಲ.

ದಿನದ 24 ಗಂಟೆಯೂ ನೀರು ಪಂಪ್‌ ಮಾಡಲಿದೆ. 2020ರ ಮಾರ್ಚ್‌ ಅಂತ್ಯದವರೆಗೆ 5 ರಿಂದ 6 ಟಿಎಂಸಿ ನೀರು ಹರಿಸುವ ಉದ್ದೇಶವಿದೆ. ಶಾಂತಿಪುರ ಹಾಗೂ ಬೆಟ್ಟದತಾವರೆಕೆರೆ ಬಳಿ ತಲಾ ಐದರಂತೆ ಹತ್ತು ಪಂಪ್‌ ಗಳನ್ನು ಅಳವಡಿಸಿದ್ದು, ಇದರಲ್ಲಿ 8 ಮಾತ್ರ ಕಾರ್ಯನಿರ್ವಹಿಸಲಿವೆ.

ಎರಡೂ ಕಡೆ ತಲಾ ಒಂದೊಂದು ಹೆಚ್ಚುವರಿಯಾಗಿರಲಿವೆ. ಈ ಎಲ್ಲಾ ಪಂಪ್‌ಗ್ಳಿಂದ 2800 ಕ್ಯೂಸೆಕ್‌ ನೀರು ಹರಿಸುವ ಸಾಮರ್ಥ್ಯವಿದೆ. ಸದ್ಯ ವಿವಿ ಸಾಗರಕ್ಕೆ ಒಂದು ಪಂಪ್‌ನಿಂದ 450
ಕ್ಯೂಸೆಕ್‌ ನೀರು ಹರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next