Advertisement

ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

02:52 PM Jul 13, 2019 | Team Udayavani |

ಚಿತ್ರದುರ್ಗ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಪಿಡಿಒ, ಇಒಗಳಿಗೆ ಸಾಕಷ್ಟು ಬಾರಿ ಕೋರಿಕೊಂಡರೂ ಹನಿ ನೀರನ್ನೂ ಪೂರೈಕೆ ಮಾಡುತ್ತಿಲ್ಲ, ಇದರಿಂದ ಬಚ್ಚಬೋರನಹಟ್ಟಿ, ಮುತ್ತಯ್ಯನಹಟ್ಟಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು ಕೂಡಲೇ ಕೊಳವೆಬಾವಿ ಕೊರೆಸು ನೀರು ನೀಡಬೇಕು ಎಂದು ತಾಪಂ ಸದಸ್ಯೆ ಚಂದ್ರಕಲಾ ಒತ್ತಾಯಿಸಿದರು.

Advertisement

ಇಲ್ಲಿನ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಡಿ.ಎಂ. ಲಿಂಗರಾಜು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 2019-20ನೇ ಸಾಲಿನ ಮೊದಲನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ಯಾವುದೇ ಭಾಗದಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ, ಮುಂಗಾರಿನಲ್ಲೂ ಬರ ಮುಂದುವರೆದಿದೆ. ಹಳೆ ಬಾಕಿ ಇರುವುದರಿಂದ ಟ್ಯಾಂಕರ್‌ ಮಾಲೀಕರು ನೀರು ಸರಬರಾಜು ಮಾಡಲು ಒಪ್ಪುತ್ತಿಲ್ಲ. ಹೀಗಾದರೆ ಜನ-ಜಾನುವಾರುಗಳಿಗೆ ಹೇಗೆ ಕುಡಿಯಲು ನೀರು ನೀಡಬೇಕು, ಇದಕ್ಕೆ ಪರಿಹಾರ ಹುಡುಕಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಹಿರೇಗುಂಟನೂರು ಸುರೇಶ್‌ ಮತ್ತಿತರರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಲಿಂಗರಾಜು, 1.08 ಕೋಟಿ ರೂ.ಗಳ ಹಳೆ ಬಿಲ್ ಪಾವತಿ ಮಾಡಲು ಜಿಲ್ಲಾಧಿಕಾರಿಗಳು ಈಗಾಗಲೇ 54 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಉಳಿದ 54 ಲಕ್ಷ ರೂ. ಗಳನ್ನು ತಹಶೀಲ್ದಾರರ ಪಿಡಿ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಶೀಘ್ರದಲ್ಲೇ ಎಲ್ಲ ಬಾಕಿ ಬಿಲ್ ಪಾವತಿ ಮಾಡಲಾಗುತ್ತದೆ. ಇದರ ಜೊತೆಗೆ 90 ಲಕ್ಷ ರೂ.ಗಳ ಕುಡಿಯುವ ನೀರಿನ ಬಾಕಿ ಬಿಲ್ ನೀಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಕುಡಿಯುವ ನೀರು ಪೂರೈಕೆ ಬಾಕಿ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಗ್ರಾಪಂಗೆ ಬೀಗ ಹಾಕುತ್ತಿದ್ದಾರೆ. ಇದರಿಂದ ಗ್ರಾಪಂ ಮಾನ ಹರಾಜಾಗುತ್ತಿದೆ. ಇದಕ್ಕೆ ಅವಕಾಶ ನೀಡದೆ ಹಳೆ ಬಾಕಿ ಪಾವತಿ ಮಾಡುವಂತೆ ಸದಸ್ಯರು ಒತ್ತಾಯಿಸಿದರು.

ಮಧ್ಯಪ್ರವೇಶಿಸಿದ ಇಒ ಕೃಷ್ಣ ನಾಯ್ಕ, ಬಾಕಿ ಬಿಲ್ಗಾಗಿ ಮತ್ತೂಮ್ಮೆ ಅವರು ಗ್ರಾಪಂಗೆ ಬೀಗ ಹಾಕಿದರೆ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗುತ್ತದೆ. ನೀರು ಪೂರೈಕೆ ಮಾಡಿದವರು ಬಾಕಿ ಬಿಲ್ ನೀಡುವಂತೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಇಲ್ಲವೇ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು. ಅದನ್ನು ಬಿಟ್ಟು ಬೀಗ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಆಯಾ ತಾಪಂ ಕ್ಷೇತ್ರದಲ್ಲಿ ಕೊಳವೆಬಾವಿ ಕೊರೆಯುವಂತೆ ತಾಪಂ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರೆ ಒಂದೇ ಒಂದು ಕೊಳವೆಬಾವಿಯನ್ನೂ ಕೊರೆಯುವುದಿಲ್ಲ. ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು, ಸದಸ್ಯರು ಹೇಳಿದ ಕಡೆಗಳಲ್ಲಿ ಕೊಳವೆಬಾವಿ ಕೊರೆಯುತ್ತಾರೆ. ಹಾಗಾದರೆ ನಾವೇಕೆ ಸದಸ್ಯರಾಗಬೇಕಿತ್ತು, ನಾವು ಕೂಡ ಜನಪ್ರತಿನಿಧಿಗಳಲ್ಲವೇ, ಕೊಳವೆಬಾವಿ ಕೊರೆಸಲು ತಾಪಂ ಅನುದಾನ ಕೊಡಬೇಡಿ ಎಂದು ಬೋರಯ್ಯ ಸೇರಿದಂತೆ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ ಲಿಂಗರಾಜು ಸದಸ್ಯರನ್ನು ಸಮಾಧಾನಪಡಿಸಿದರು. ಇನ್ನು ಮುಂದೆ ಯಾವುದೇ ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ಅಧಿಕಾರಿಗಳು ತಾಪಂ ಸದಸ್ಯರ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ಕಳೆದ 8-10 ತಿಂಗಳು ಹಿಂದೆ ಭರಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ ಕೊರೆಸಲಾದ ಕೊಳವೆಬಾವಿಗಳಿಗೆ ಮೋಟಾರ್‌ ಪಂಪ್‌ ಅಳವಡಿಸಿಲ್ಲ. ಹಾಗಾದರೆ ಏಕೆ ಕೊಳವೆಬಾವಿ ಕೊರೆಸಬೇಕಿತ್ತು ಎಂದು ಆ ಭಾಗದ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು.

ಆರ್ಥಿಕ ತಜ್ಞ ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಚಿತ್ರದುರ್ಗ ತಾಲೂಕು ಹಿಂದುಳಿದ ತಾಲೂಕು ಪಟ್ಟಿಯಲ್ಲಿ ಇಲ್ಲದಿರುಬುದರಿಂದ ಅನುದಾನದ ಕೊರತೆ ಇದೆ. ಹಾಗಾಗಿ ಮೋಟಾರ್‌ ಪಂಪ್‌ಗೆ ಅನುದಾನ ಸಿಕ್ಕಿಲ್ಲ ಎಂದು ಗ್ರಾಮೀಣ ಕುಟುಂಬ ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ ಮಾತನಾಡಿ, ನಂಜುಂಡಪ್ಪ ವರದಿ ಪಟ್ಟಿಯಲ್ಲಿರುವ ತಾಲೂಕುಗಳಿಗೆ ಪ್ರತಿ ವರ್ಷ 3.50 ಕೋಟಿ ರೂ. ಸಿಗಲಿದೆ ಎಂದು ತಿಳಿಸಿದರು.

ಜೀವ ವೈವಿಧ್ಯ ನಿರ್ವಾಹಣ ಸಮಿತಿ ಅಧ್ಯಕ್ಷ ಸುರೇಶ್‌ ನಾಯ್ಕ ಮಾತನಾಡಿ, ಭೀಮಸಮುದ್ರ- ಚಿತ್ರದುರ್ಗ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರದಿಂದಾಗಿ ಸಾವು-ನೋವು ಹೆಚ್ಚುತ್ತಿದೆ. ಅದಿರು ಲಾರಿಗಳ ಓಡಾಟದಿಂದ ಧೂಳು ಉಂಟಾಗಿ ಬಾಧಿತರಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಅದಿರು ಲಾರಿಗಳು ಸಂಚರಿಸುವಂತಿಲ್ಲ ಎನ್ನುವ ಆದೇಶವಿದ್ದರೂ ಮತ್ತು ಸಾವುಗಳ ಸಂಖ್ಯೆ ಜಾಸ್ತಿಯಾಗಿದ್ದರಿಂದ ಜಿಲ್ಲಾಧಿಕಾರಿಗಳು ಅದಿರು ಲಾರಿಗಳ ಸಂಚಾರ ನಿಷೇಧಿಸಿದ್ದರು. ಅದಿರು ಕಂಪನಿಗಳು ತಡೆಯಾಜ್ಞೆ ತಂದು ನಿತ್ಯ ಸಾವಿರಾರು ಲಾರಿಗಳು ಸಂಚರಿಸುತ್ತಿವೆ. ಹಾಗಾದರೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲವೇ ಎಂದು ಪ್ರಶ್ನಿಸಿದರು. ಶಾಶ್ವತವಾಗಿ ಅದಿರು ಲಾರಿಗಳ ಸಂಚಾರ ರದ್ದು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ತಿಪ್ಪಮ್ಮ, ತಾಪಂ ಉಪಾಧ್ಯಕ್ಷೆ ಶಾಂತಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next