Advertisement

ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ

04:40 PM Jun 01, 2020 | Naveen |

ಚಿತ್ರದುರ್ಗ: ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ ಜೂನ್‌ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಕುರಿತು ಜಿಪಂ ಸಭಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಬಿಇಒಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಹೈಕೋರ್ಟ್‌ ಕೂಡ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿದೆ. ಕೋವಿಡ್‌ ವಾಸಿಯಾಗದ ಕಾಯಿಲೆಯೇನಲ್ಲ. ಹೀಗಾಗಿ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅತ್ಯಗತ್ಯ. ಪರೀಕ್ಷೆ ನಡೆಯುವ ಎರಡು ದಿನ ಮೊದಲು ಕಡ್ಡಾಯವಾಗಿ ಎಲ್ಲ ಪರೀಕ್ಷಾ ಕೊಠಡಿಯನ್ನು ಸೋಂಕು ನಿವಾರಕದಿಂದ ಸ್ಯಾನಿಟೈಸ್‌ ಮಾಡಬೇಕು. ಪರೀಕ್ಷೆ ಬೆಳಿಗ್ಗೆ 10:30ಕ್ಕೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಬೆಳಿಗ್ಗೆ 9:30ಕ್ಕೆ ಹಾಜರಾಗಬೇಕು. ಪ್ರತಿ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಬೇಕು ಎಂದರು.

ಪ್ರತಿ ಕೊಠಡಿಯಲ್ಲಿ ಗರಿಷ್ಟ 18 ರಿಂದ 20 ವಿದ್ಯಾರ್ಥಿಗಳಿರಬೇಕು. ಪ್ರತಿ ಡೆಸ್ಕ್ಗೆ 3 ರಿಂದ 4 ಅಡಿ ಹಾಗೂ ಪ್ರತಿ ವಿದ್ಯಾರ್ಥಿಗೂ ಇಷ್ಟೇ ಅಂತರ ಇರಬೇಕು. ಯಾವುದೇ ಕಾರಣಕ್ಕೂ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯುಂಟಾಗದಂತೆ ಅ ಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಖಾಸಗಿ ಶಾಲೆಗಳ ಬಸ್‌ ಗಳನ್ನು ಬಳಸಿಕೊಳ್ಳಲು ಡಿಡಿಪಿಐಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ವಾಹನಗಳಿಗೆ ಇಂಧನ ವೆಚ್ಚವನ್ನು ಪರೀಕ್ಷಾ ಮಂಡಳಿಯಿಂದ ಪಾವತಿಸಲು ನಿರ್ಧರಿಸಲಾಗಿದೆ. ಹೀಗಾಗಿ ಸಾಕಷ್ಟು ಮುಂಚಿತವಾಗಿ ಈ ಬಗ್ಗೆ ಜಿಲ್ಲಾ ಧಿಕಾರಿಗಳು, ಆರ್‌ಟಿಒ, ಕೆಎಸ್‌ ಆರ್‌ಟಿಸಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಸಾರಿಗೆ ಸಂಪರ್ಕ ವ್ಯವಸ್ಥೆ ಕುರಿತು ಸಿದ್ಧತೆಗಳನ್ನು ಕೈಗೊಳ್ಳಬೇಕು. ಯಾವುದೇ ವಿದ್ಯಾರ್ಥಿ, ಸಾರಿಗೆ ಸಂಪರ್ಕದ ತೊಂದರೆಯಿಂದಾಗಿ ಪರೀಕ್ಷೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಸಾರಿಗೆ ಸಂಪರ್ಕ ಕುರಿತಂತೆ ಡಿಸಿ ಕಚೇರಿಯಲ್ಲಿ ಕಡ್ಡಾಯವಾಗಿ ಸಹಾಯವಾಣಿ ಪ್ರಾರಂಭಿಸಬೇಕು ಎಂದು ತಾಕೀತು ಮಾಡಿದರು.

ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತೆ ವಹಿಸಿರುವುದು ತೃಪ್ತಿ ತಂದಿದೆ. ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ಬಸ್‌ ಗಳನ್ನೇ ಅವಲಂಬಿಸುವುದು ಬೇಡ, ಕೆಎಸ್‌ಆರ್‌ ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ,ಯಾವುದೇ ವಿದ್ಯಾರ್ಥಿಗೂ ಬಸ್‌ ತೊಂದರೆಯಾಗದ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಗಡಿ ಭಾಗದಿಂದ ಬರುವ ಯಾವುದೇ ವಿದ್ಯಾರ್ಥಿಗೂ ಅನಾನುಕೂಲ ಆಗಬಾರದು. ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹೆಚ್ಚು ಸಿದ್ಧತೆ ಕೈಗೊಂಡಿರುವುದರಿಂದ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದರು.

Advertisement

ಚಿತ್ರದುರ್ಗ ಡಿಡಿಪಿಐ ರವಿಶಂಕರ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಒಟ್ಟು 22,615 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 87 ಮುಖ್ಯ ಪರೀಕ್ಷಾ ಕೇಂದ್ರಗಳು ಹಾಗೂ 12 ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 25 ಸಾವಿರ ಮಾಸ್ಕ್ ಹಾಗೂ ಸಾಕಷ್ಟು ಸ್ಯಾನಿಟೈಸರ್‌ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಒಟ್ಟು 174 ಸ್ವಯಂ ಸೇವಕರನ್ನು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ದಾವಣಗೆರೆ ಡಿಡಿಪಿಐ ಸಿ. ಪರಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 20927 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ 79 ಪರೀಕ್ಷಾ ಕೇಂದ್ರಗಳು ಹಾಗೂ ಹೆಚ್ಚುವರಿಯಾಗಿ 14 ಉಪಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 15 ಕಂಟೇನ್ಮೆಂಟ್‌ ಝೋನ್‌ಗಳಿದ್ದು, ಈ ಪೈಕಿ ಜಾಲಿನಗರದ ಕಂಟೇನ್ಮೆಂಟ್‌ ವಲಯದಲ್ಲಿ 1 ಪರೀಕ್ಷಾ ಕೇಂದ್ರವಿದೆ. ಈ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. 1142 ಪರೀಕ್ಷಾ ಕೊಠಡಿಗಳನ್ನು ಗುರುತಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಥರ್ಮಲ್ ಸ್ಕ್ಯಾನರ್‌, ಸ್ಯಾನಿಟೈಸರ್‌ ಹಾಗೂ ಜಿಲ್ಲೆಗಾಗಿ ಒಟ್ಟು 44 ಸಾವಿರ ಮಾಸ್ಕ್ ಪೂರೈಸಲಾಗುವುದು. ಒಟ್ಟು 186 ಸ್ವಯಂಸೇವಕರನ್ನು ಸೇವೆಗೆ ಬಳಸಿಕೊಳ್ಳಲಾಗುವುದು ಎಂದರು.

ದಾವಣಗೆರೆ ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಚಿತ್ರದುರ್ಗ ಸಿಟಿಇ ಪ್ರಾಂಶುಪಾಲ ರುದ್ರಪ್ಪ, ಡಯಟ್‌ ಪ್ರಾಚಾರ್ಯ ಎಸ್‌.ಕೆ.ಬಿ ಪ್ರಸಾದ್‌, ದಾವಣಗೆರೆ ಡಯಟ್‌ ಪ್ರಾಚಾರ್ಯ ಲಿಂಗರಾಜು ಸೇರಿದಂತೆ ಎರಡೂ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಗಡಿ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ನೆರವು
ಚಿತ್ರದುರ್ಗ, ತುಮಕೂರು, ರಾಯಚೂರು, ಬೆಳಗಾವಿ ಹೀಗೆ ರಾಜ್ಯದ ವಿವಿಧ ಜಿಲ್ಲೆಗಳು ಇತರೆ ರಾಜ್ಯಗಳ ಗಡಿಗೆ ಹತ್ತಿರವಿದ್ದು, ಆಂಧ್ರ, ಮಹಾರಾಷ್ಟ್ರ, ಕೇರಳ ಮುಂತಾದ ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆಂಧ್ರಪ್ರದೇಶದಿಂದ ಚಳ್ಳಕೆರೆ 6 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 25 ಸೇರಿ ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಸಂಬಂಧಪಟ್ಟ ರಾಜ್ಯದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪರೀಕ್ಷೆ ನಡೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಾಕಷ್ಟು ಮುಂಚಿತವಾಗಿ ವಿಷಯ ವನ್ನು ಗಮನಕ್ಕೆ ತಂದು ಪರೀಕ್ಷೆಗೆ ಹಾಜರಾಗಲು ಅನುಮತಿ ಪಡೆಯಬೇಕು. ಈ ಕುರಿತು ಇದೇ ಕ್ರಮವನ್ನು ಗಡಿ ಭಾಗದ ಜಿಲ್ಲೆಗಳ ಜಿಲ್ಲಾ ಧಿಕಾರಿಗಳು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಸುರೇಶ್‌ಕುಮಾರ್‌ ತಿಳಿಸಿದರು.

ಜೂ. 10 ರಿಂದ ಚಂದನವಾಹಿನಿಯಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ರಿವಿಷನ್‌ ಕ್ಲಾಸ್‌ಗಳು, ಪರೀಕ್ಷೆ ಎದುರಿಸುವ ಬಗೆ, ಪ್ರಶ್ನೆಗಳಿಗೆ ಉತ್ತರಿಸುವ ರೀತಿ, ಪ್ರಶ್ನೆಪತ್ರಿಕೆ ಮಾದರಿ ಕುರಿತಂತೆ ಸಾಕಷ್ಟು ವಿಷಯಗಳನ್ನು ತಿಳಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಕೋರಿಕೆಯಂತೆ ಇಂಗ್ಲಿಷ್‌, ವಿಜ್ಞಾನ, ಗಣಿತ ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಪರೀಕ್ಷಾ ದಿನಗಳ ನಡುವೆ ಬಿಡುವು ನೀಡಿ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಎಸ್‌. ಸುರೇಶ್‌ಕುಮಾರ್‌,
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next