Advertisement

ಶಿರಾ ಘಟಕ ಚಿತ್ರದುರ್ಗದಲ್ಲೇ ಉಳಿಸಿ

11:49 AM Jun 12, 2019 | Team Udayavani |

ಚಿತ್ರದುರ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗದಲ್ಲೇ ಶಿರಾ ಘಟಕವನ್ನು ಉಳಿಸಬೇಕು ಹಾಗೂ ವಿಭಾಗದ ಆದಾಯ ಹೆಚ್ಚಳ ಮಾಡಲು ಗ್ರಾಮೀಣ, ನಗರ, ರಾಜ್ಯ, ಹೊರ ರಾಜ್ಯಗಳಿಗೆ ಹೊಸ ಮಾರ್ಗಗಳಲ್ಲಿ ಸಾರಿಗೆ ಬಸ್‌ ಓಡಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Advertisement

ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ವಿಭಾಗ ಕೈ ತಪ್ಪುವ ಸಾಧ್ಯತೆ ಇದೆ. ಮಧ್ಯ ಕರ್ನಾಟಕದ ಜನತೆಗೆ ಕನಿಷ್ಠ ಸಾರಿಗೆ ಸೌಲಭ್ಯಗಳು ಇಲ್ಲ ಎಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ವಿಭಾಗದ ಮೇಲಾಧಿಕಾರಿಗಳು ಹಾಗೂ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಿದ್ದರೆ ಆದಾಯ ವೃದ್ಧಿಯಾಗಿ ವಿಭಾಗ ಲಾಭದತ್ತ ಹೋಗುತ್ತಿತ್ತು. ಆದರೆ ನಿತ್ಯ ನಷ್ಟದಲ್ಲಿ ಬಸ್‌ ಓಡಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಆರಂಭಿಸಲು ನಗರದ ಹೃದಯ ಭಾಗದಲ್ಲಿ 12 ಎಕರೆ ಭೂಮಿ ಹಾಗೂ ಸಕಲ ಸೌಲಭ್ಯಗಳಿವೆ. ನಿಲ್ದಾಣದಲ್ಲಿ ಕಟ್ಟಡ, ಅಧಿಕಾರಿಗಳ ಕೊಠಡಿ, ತರಬೇತಿ ಕೇಂದ್ರ, ಸಭಾಂಗಣ, ವಿಶ್ರಾಂತಿ ಕೊಠಡಿ ಸೌಲಭ್ಯವಿದೆ. ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಸಾರಿಗೆ ಬಸ್‌ ಡಿಪೋಗಳ ಜೊತೆಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಘಟಕಗಳನ್ನು ಚಿತ್ರದುರ್ಗ ವಿಭಾಗಕ್ಕೆ ಸೇರಿಸಿ ವಿಭಾಗ ತೆರೆಯಲಾಗಿದೆ. ಆದರೆ ಅಲ್ಲಿನ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಬಿ. ಸತ್ಯನಾರಾಯಣ ಶಿರಾ ಘಟಕ ವಾಪಸ್‌ಗೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಈ ವಿಭಾಗದಿಂದ ಶಿರಾ ಘಟಕ ಹೋಗಲು ಬಿಡುವುದಿಲ್ಲ. ಈ ವಿಭಾಗ ಉಳಿಯಬೇಕಾದರೆ ಶಿರಾ ಘಟಕ ಇಲ್ಲಿಯೇ ಉಳಿಯಬೇಕು ಎಂದು ಒತ್ತಾಯಿಸಿದರು.

ವಿಭಾಗ ಲಾಭದತ್ತ ಹೋಗಬೇಕಾದರೆ ಗ್ರಾಮೀಣ ಮಾರ್ಗಗಳಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಪ್ರತಿದಿನ ಐದಾರು ಸುತ್ತು ಬಸ್‌ ಓಡಿಸಿದರೆ ಸಾಕಷ್ಟು ಆದಾಯ ಬರಲಿದೆ. ಅಲ್ಲದೆ ವೇಗದೂತ ಬಸ್‌ಗಳನ್ನು ಹೊರ ಜಿಲ್ಲೆ ಮಾರ್ಗಗಳಾದ ಚಿತ್ರದುರ್ಗದಿಂದ ಅಂಕೋಲಾ ವಯಾ ಶಿವಮೊಗ್ಗ, ಸಾಗರ, ಚಿತ್ರದುರ್ಗದಿಂದ ಹೊರನಾಡು ವಯಾ ಶಿವಮೊಗ್ಗ, ಶೃಂಗೇರಿ ಅಥವಾ ಚಿಕ್ಕಮಗಳೂರು, ಅಂತಾರಾಜ್ಯ ಮಾರ್ಗಗಳಾದ ಚಿತ್ರದುರ್ಗದಿಂದ ಶಿರಡಿ, ಮಂತ್ರಾಲಯ, ಕೊಯಮತ್ತೂರು, ಮಧುರೈ, ಶ್ರೀಶೈಲ, ಊಟಿ, ಹೊಗೆನಕಲ್, ಪಾಲಕ್ಕಾಡ್‌ ಮತ್ತಿತರ ಮಾರ್ಗಗಳಿಗೆ ಬಸ್‌ ಸಂಚಾರ ಆರಂಭಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಎಂ. ಶಂಕರಪ್ಪ, ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಬಸ್ತಿಹಳ್ಳಿ ಸುರೇಶ್‌ಬಾಬು, ಜಿ.ಎಸ್‌. ತಿಪ್ಪೇಸ್ವಾಮಿ ಇದ್ದರು.

Advertisement

ಘಟಕ ವಾಪಸ್‌ ಹೋದ್ರೆ ನಷ್ಟ ಭೀತಿ
ಶಿರಾ ಘಟಕದಿಂದ ಪ್ರತಿನಿತ್ಯ 9 ಲಕ್ಷ ರೂ.ಗಿಂತ ಅಧಿಕ ಆದಾಯ ಬರುತ್ತಿದೆ. ಇಡೀ ವಿಭಾಗದಲ್ಲಿ ಚಿತ್ರದುರ್ಗ ಮತ್ತು ಶಿರಾ ಘಟಕಗಳೇ ಹೆಚ್ಚು ಆದಾಯ ತರುವ ಘಟಕಗಳಾಗಿದ್ದು, ಶಿರಾ ಘಟಕ ವಾಪಸ್‌ ಪಡೆಯುವುದರಿಂದ ನಷ್ಟದ ಪ್ರಮಾಣ ಹೆಚ್ಚಾಗಿ ಕೊನೆಗೆ ವಿಭಾಗ ಮುಚ್ಚುವ ಸಾಧ್ಯತೆ ದಟ್ಟವಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next