Advertisement

ಫೇಸ್‌ ರೀಡಿಂಗ್‌ ಹಾಜರಾತಿ ವ್ಯವಸ್ಥೆಗೆ ಚಿಂತನೆ

01:08 PM Jan 06, 2020 | Team Udayavani |

ಚಿತ್ರದುರ್ಗ: ಅಂಗನವಾಡಿಗಳಲ್ಲಿ ಮಕ್ಕಳ ನಿಖರ ಹಾಜರಾತಿಗಾಗಿ ಫೇಸ್‌ ರೀಡಿಂಗ್‌ ಅಟೆಂಡೆನ್ಸ್‌ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಂಗನವಾಡಿಗೆ ಬರುವ ಮಕ್ಕಳಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲು ಅವರ ಬೆರಳಿನ ಗುರುತು ರೀಡ್‌ ಆಗುವುದಿಲ್ಲ ಎನ್ನುವ ಕಾರಣಕ್ಕೆ ಫೇಸ್‌ ರೀಡಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಜತೆಗೆ ಕೇಂದ್ರ ಸರ್ಕಾರ 2 ವರ್ಷದ
ಹಿಂದೆ ಜಾರಿಗೆ ತಂದಿರುವ ಪೋಷಣ್‌ ಅಭಿಯಾನವನ್ನು ಈಗ ಜಾರಿ ಮಾಡುತ್ತಿದ್ದು, ಯೋಜನೆಯಡಿ ಜನವರಿ 20ರ ವೇಳೆಗೆ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ
ಸ್ಮಾರ್ಟ್‌ಫೋನ್‌ ನೀಡಲಾಗುವುದು. ಇದರಲ್ಲಿ ಮಕ್ಕಳ ಶಾರೀರಿಕ, ಬೌದ್ಧಿಕ ಬೆಳವಣಿಗೆ ಗುರುತಿಸುವ ಸಾಫ್ಟ್‌ವೇರ್‌ ಇದ್ದು, ಯಾರು ಎಲ್ಲಿಂದ ಬೇಕಾದರೂ ಪರಿಶೀಲನೆ ನಡೆಸಬಹುದು ಎಂದರು.

ಅಂಗನವಾಡಿಗೆ ಬರುವ ಮಕ್ಕಳು ಮೂರು ವರ್ಷ ಎಳೆಯರು. ಅವರ
ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವಿದೆ. ಇಲಾಖೆ ಕರ್ತವ್ಯ ಹೊರತು ಪಡಿಸಿ ಬೇರೆ ಬೇರೆ ಇಲಾಖೆಗಳ ಒತ್ತಡವಿದ್ದು, ಅಂತಹ ಒತ್ತಡವನ್ನು ಕಡಿಮೆ ಮಾಡುವ ಚಿಂತನೆ ಇದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುದಾನ ಪಡೆದ
ಅನೇಕ ಸ್ವಯಂಸೇವಾ ಸಂಸ್ಥೆಗಳು ಅಂಧಮಕ್ಕಳು, ಬುದ್ಧಿಮಾಂಧ್ಯ ಮಕ್ಕಳ ಶಾಲೆಗಳು, ಬಾಲಕ ಮತ್ತು ಬಾಲಕಿಯರ ಮಂದಿರಗಳು, ನಿರ್ಗತಿಕರ ಕುಟೀರಗಳನ್ನು ನಡೆಸುತ್ತಿವೆ.
ಸರ್ಕಾರದ ನಿಯಾಮವಳಿ ಪ್ರಕಾರ ಆ ಸಂಸ್ಥೆಗಳು ಬಯೋಮೆಟ್ರಿಕ್‌ ಮೂಲಕ ಹಾಜರಾತಿ ಕಳಿಸಬೇಕು. ಆದರೆ ಬಹಳಷ್ಟು ಸಂಸ್ಥೆಗಳು ಇದನ್ನು ಪಾಲಿಸುತ್ತಿಲ್ಲ. ಹಾಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವ ಸಂಸ್ಥೆಗಳನ್ನು ಗುರುತಿಸಿ, ಇಲಾಖೆಯಿಂದ ಅನುದಾನ ಪಡೆದು ತಪ್ಪು ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಬೇಕು. ತಪ್ಪಿತಸ್ಥ ಸಂಸ್ಥೆಗಳು ಕಂಡು
ಬಂದರೆ 15 ದಿನಗಳೊಗೆ ವರದಿ ಸಲ್ಲಿಸಬೇಕು. ಲಾಭ ಮಾಡಿಕೊಳ್ಳುವ ಸಂಸ್ಥೆಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಆಹಾರ ಇಲಾಖೆಗೆ ಸಂಬಂಸಿದಂತೆ ಜಿಲ್ಲೆಯಲ್ಲಿ ಅನೇಕ ರೀತಿಯ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಗ್ರಾಹಕರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಹಣ
ಕೊಟ್ಟು ಪಡಿತರ ಪಡೆಯುತ್ತಿರುವ ದೂರುಗಳಿವೆ. ತಪ್ಪು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಶ್ರೀಮಂತರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಈ ತಿಂಗಳ ಅಂತ್ಯದೊಳಗೆ ವಾಪಸ್‌ ಮಾಡದಿದ್ದರೆ ಪತ್ತೆ ಹಚ್ಚಿ ಇದುವರೆಗೆ ಪಡೆದಿರುವ ಪಡಿತರದ ಅಷ್ಟೂ ಹಣವನ್ನು ದಂಡದ
ರೂಪದಲ್ಲಿ ಕಟ್ಟಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಸಭೆಗೆ ಗೈರುಹಾಜರಾಗಿ ಸಹಾಯಕ ಅ ಧಿಕಾರಿಯನ್ನು ಕಳಿಸಿದ್ದ ನಿರ್ಮಿತಿ
ಕೇಂದ್ರದ ಜಿಲ್ಲಾ ಮಟ್ಟದ ಅಧಿಕಾರಿ ಮೂಡಲಗಿರಿಯಪ್ಪ ಅವರಿಗೆ ನೋಟಿಸ್‌ ನೀಡುವಂತೆ ಜಿಪಂ ಸಿಇಒ ಸತ್ಯಭಾಮ ಅವರಿಗೆ ಸೂಚಿಸಿದರು. ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್‌, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ಎಂಎಲ್ಸಿ
ಜಯಮ್ಮ ಬಾಲರಾಜ್‌, ಡಿಸಿ ವಿನೋತ್‌ ಪ್ರಿಯಾ, ಜಿಪಂ ಸಿಇಒ ಸಿ. ಸತ್ಯಭಾಮ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next