Advertisement

ಪೊಲೀಸ್‌ ತರಬೇತಿ ಶಾಲೆ ಕಾರ್ಯ ಅನನ್ಯ

01:16 PM Mar 04, 2020 | Naveen |

ಚಿತ್ರದುರ್ಗ: ಕಾಡುತ್ತಿರುವ ಉದ್ಯೋಗದ ಅಭದ್ರತೆ, ಓದಿಗೆ ತಕ್ಕ ಉದ್ಯೋಗದ ಕೊರತೆ ಹಾಗೂ ಸರ್ಕಾರಿ ಕೆಲಸದ ಮೇಲಿರುವ ನಂಬಿಕೆ ಇಂದು ಅತ್ಯಂತ ಉನ್ನತ ಶಿಕ್ಷಣ ಪಡೆದವರನ್ನೂ ಸರ್ಕಾರದ ಸಾಮಾನ್ಯ ಕೆಲಸಗಳೂ ಆಕರ್ಷಿಸುವಂತೆ ಮಾಡಿದೆ.

Advertisement

ಜಿಲ್ಲೆಯ ಐಮಂಗಲ ಪೊಲೀಸ್‌ ತರಬೇತಿ ಶಾಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ನಗರ ಸಶಸ್ತ್ರ ಮೀಸಲು ಪಡೆ ಹಾಗೂ ಕೈಗಾರಿಕಾ ಭದ್ರತಾ ಪಡೆಗಳ ತರಬೇತಿಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಇದಕ್ಕೊಂದು ಉತ್ತಮ ನಿದರ್ಶನ ಎನ್ನಬಹುದು.

ಐಮಂಗಲ ಪೊಲೀಸ್‌ ತರಬೇತಿ ಶಾಲೆಯಲ್ಲಿ ಎಂಟು ತಿಂಗಳಿನಿಂದ 363 ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದು, ಇದರಲ್ಲಿ ಬಿಇ (ಇ ಅಂಡ್‌ ಸಿ) ಓದಿರುವ ಒಬ್ಬರು, ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಎಂಸಿಎ, ಎಂಎಸ್‌ಡಬ್ಲ್ಯೂ ಓದಿರುವ 42 ಜನರಿದ್ದಾರೆ. ಉಳಿದಂತೆ ಪದವಿ ಓದಿರುವ 205, ಬಿಬಿಎಂ, ಬಿಸಿಎ, ಬಿಬಿಎ ಓದಿರುವ 8, ಬಿ.ಇಡಿ, ಡಿ.ಇಡಿ, ಬಿಪಿಎಡ್‌ ಓದಿರುವ 30, ಐಟಿಐ, ಡಿಪ್ಲೋಮಾ ಓದಿರುವ 18, ಪಿಯುಸಿ 51 ಹಾಗೂ ಎಸ್ಸೆಸೆಲ್ಸಿಯ 8 ಅಭ್ಯರ್ಥಿಗಳಿದ್ದಾರೆ.

ಓದಿದ್ದು ಇಂಜಿನಿಯರಿಂಗ್‌-ಪಿಎಸ್‌ಐ ಕನಸು: ಕುಂದಾಪುರದ ಮೂಡಲಕಟ್ಟೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ 2006 ರಲ್ಲಿ ಬಿಇ ಶಿಕ್ಷಣ ಮುಗಿಸಿ ಒಂದು ವರ್ಷ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡಿರುವ ಅಂಕೋಲಾದ ಗೌರೀಶ್‌ ನಾಯ್ಕ
ಪಿಎಸ್‌ಐ ಕನಸು ಕಂಡವರು. ಇದಕ್ಕಾಗಿ ಅಧ್ಯಯನ ಮಾಡುತ್ತಿದ್ದಾಗ ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆ ಪಾಸಾಗಿದ್ದಾರೆ. ಈಗ ತರಬೇತಿ ಪಡೆಯುತ್ತಿದ್ದು, ಮುಂದೆ ಪಿಎಸ್‌ಐ ಆಗುವ ಆಸೆ ಹೊಂದಿದ್ದಾರೆ. ಬಿಇ ಓದು ಮುಗಿದಾಗಲೇ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಕಾರಣಕ್ಕೆ ಪೊಲೀಸ್‌ ಇಲಾಖೆಗೆ ಕಾಲಿಟ್ಟಿದ್ದಾರೆ.

ಖಾಸಗಿ ಕೆಲಸ ಅಭದ್ರ-ಸರ್ಕಾರಿ ಕೆಲಸವೇ ಬೆಸ್ಟ್‌:ರಾಮನಗರದ ಜಿ.ಆರ್‌. ಮಹೇಂದ್ರ ಓದಿದ್ದು ಎಂಬಿಎ. ಬೆಂಗಳೂರಿನ ಪ್ರತಿಷ್ಠಿತ ಆರ್‌ಸಿ ಕಾಲೇಜು ವಿದ್ಯಾರ್ಥಿ. ಕಳೆದ ಕೆಲ ವರ್ಷ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಕೆಲಸ ಮಾಡಿ ಹೈರಾಣಾಗಿದ್ದಾರೆ. ಗ್ರಾಹಕರ ಜತೆ ಹೊಡೆದಾಡಿ ಸಾಕಾಯ್ತು ಸರ್‌, ಅದಕ್ಕಾಗಿ ಸರ್ಕಾರಿ ಕೆಲಸ ಹುಡುಕಿಕೊಂಡು ಬಂದೆ ಎನ್ನುತ್ತಾರೆ. ಕೈಗಾರಿಕಾ ವಲಯ ಆತಂಕದಲ್ಲಿದೆ. ಯಾವ ಕಂಪನಿಯವರು ಯಾವ ಕ್ಷಣದಲ್ಲಿ ಹೊರಗೆ ಕಳಿಸುತ್ತಾರೆಯೋ ಗೊತ್ತಿಲ್ಲ. ಕೆಲಸ ಸಿಗುತ್ತೆ ಸಂಬಳದ ಗ್ಯಾರಂಟಿಯೂ ಇಲ್ಲ. ಆದರೆ ಅದೇ ಶ್ರದ್ಧೆಯನ್ನು ಸರ್ಕಾರಿ ಕೆಲಸದಲ್ಲಿ ತೋರಿಸಿದರೆ ಒಳ್ಳೆಯ ಸಂಬಳ, ಜೀವನ ಭದ್ರತೆ ಸಿಗುತ್ತೆ ಅನ್ನೋದು ಮಹೇಂದ್ರ ನಂಬಿಕೆ.

Advertisement

ಪೊಲೀಸ್‌ ಇಲಾಖೆಯ ಕೆಲಸ ಸ್ವಲ್ಪ ಕಷ್ಟವಾದರೂ ಇಲ್ಲಿ ನಮಗೆ ಮಾರ್ಗದರ್ಶನ ಮಾಡುವವರಿರುತ್ತಾರೆ. ಸಹೋದ್ಯೋಗಿಗಳಿರುತ್ತಾರೆ. ಹೀಗಾಗಿ ಅಭದ್ರತೆಗಿಂತ ಭದ್ರತೆ ಮುಖ್ಯವೆಂದು ಸರ್ಕಾರಿ ಕೆಲಸಕ್ಕೆ ಬಂದೆ ಎನ್ನುತ್ತಾರೆ. ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಕಥೆಗಳಿವೆ. ಕೆಲವರಿಗೆ ಈ ತರಬೇತಿ ಮೊದಲ ಮೆಟ್ಟಿಲಾದರೆ, ಇನ್ನೂ ಕೆಲವರಿಗೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾ ಸಿದ ಸಂತೃಪ್ತ ಭಾವ ಇದೆ.

1680 ಅಭ್ಯರ್ಥಿಗಳಿಗೆ ತರಬೇತಿ: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತಿರುವ ಐಮಂಗಲದ ಪೊಲೀಸ್‌ ತರಬೇತಿ ಶಾಲೆ ಅತ್ಯಂತ ವ್ಯವಸ್ಥಿತವಾಗಿದೆ. 2015 ರಿಂದ ಉನ್ನತೀಕರಿಸಿದ ಶಾಲೆಯಾಗಿದ್ದು, 71 ಎಕರೆ ವಿಶಾಲ ಜಾಗದಲ್ಲಿದೆ. ಈ ಶಾಲೆಯಲ್ಲಿ ಈಗ ನಡೆಯುತ್ತಿರುವ ತರಬೇತಿಯೂ ಸೇರಿ 1680 ಜನರಿಗೆ ತರಬೇತಿ ನೀಡಲಾಗಿದೆ. ಇದುವರೆಗೆ ನಾಗರಿಕ ಪೊಲೀಸ್‌ ತರಬೇತಿ ಕಾನ್ಸ್‌ಟೇಬಲ್‌ಗ‌ಳಿಗೆ ತರಬೇತಿ ನೀಡಿದ್ದ ಪಿಟಿಎಸ್‌ ಈಗ ಎಪಿಸಿ ಮತ್ತು ಕೆಎಸ್‌ಐಎಸ್‌ಫ್‌ ಪಿಸಿಗಳಿಗೆ ಮೊದಲನೆ ಸಲ ತರಬೇತಿ ನೀಡಿ ಮಾ. 6 ರಂದು ನಿರ್ಗಮನ ಪಥಸಂಚಲನ ಹಮ್ಮಿಕೊಂಡಿದೆ.

ಸುಮಾರು 500 ಜನರಿಗೆ ತರಬೇತಿ ನೀಡುವಷ್ಟು ವಿಶಾಲವಾದ
ವ್ಯವಸ್ಥೆ ಇಲ್ಲದೆ. ಆದರೆ ಕವಾಯತಿಗಾಗಿ ಇನ್ನೂ ಒಂದಿಷ್ಟು ಜಾಗದ ಅವಶ್ಯಕತೆಯಿದೆ. ಸದ್ಯ ಫೈರಿಂಗ್‌ ಗಾಗಿ ಚಂದ್ರವಳ್ಳಿ ರೇಂಜ್‌ಗೆ ಕರೆದೊಯ್ಯುತ್ತಿದ್ದು, ಐಮಂಗಲದಲ್ಲೇ ಇನ್ನೂ 25 ಎಕರೆ ಜಾಗ ನೀಡಿದರೆ ಫೈರಿಂಗ್‌ ವಲಯ ಮಾಡಿಕೊಳ್ಳುವ ಉತ್ಸಾಹದಲ್ಲಿ ಶಾಲೆಯ ಪ್ರಾಚಾರ್ಯರಿದ್ದಾರೆ.

ಕಳೆದ 8 ತಿಂಗಳಿಂದ 98 ಕೈಗಾರಿಕಾ ಭದ್ರತಾ ಪಡೆ ಹಾಗೂ 268
ಪ್ರಶಿಕ್ಷಣಾರ್ಥಿಗಳಿಗೆ ಸಶಸ್ತ್ರ ಮೀಸಲು ಪಡೆ ತರಬೇತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಏರ್‌ಪೋರ್ಟ್‌ ಅಧಿಕಾರಿಗಳನ್ನು ಕರೆಸಿ ಅಲ್ಲಿನ ತಪಾಸಣೆ, ವಿದೇಶಿಯರನ್ನು ತಪಾಸಣೆ ಮಾಡುವ ರೀತಿ ನೀತಿಗಳನ್ನು ಹೇಳಿ ಕೊಡಲಾಗಿದೆ. ಬಂದೂಕು ತರಬೇತಿಯನ್ನೂ ನೀಡಿದ್ದೇವೆ.
ಪಿ. ಪಾಪಣ್ಣ, ಐಮಂಗಲ ಪೊಲೀಸ್‌ ತರಬೇತಿ
ಶಾಲೆ ಎಸ್ಪಿ ಹಾಗೂ ಪ್ರಾಚಾರ್ಯರು

„ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next