Advertisement

ರೈತರಿಂದ ಕಿಸಾನ್‌ ಸಮ್ಮಾನ್‌ಗೆ ನಿರಾಸಕ್ತಿ

11:50 AM Jun 22, 2019 | Naveen |

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ಕೇಂದ್ರ ಸರ್ಕಾರ ದೇಶದ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ(ಪಿಎಂ ಕಿಸಾನ್‌) ಘೋಷಿಸಿದ್ದು ವಾರ್ಷಿಕವಾಗಿ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂ.ಗಳಂತೆ ವಾರ್ಷಿಕ ಆರು ಸಾವಿರ ರೂ. ಪಡೆಯುವ ಯೋಜನೆಗೆ ಜಿಲ್ಲೆಯಲ್ಲಿ ರೈತ ಕುಟುಂಬಗಳಿಂದ ನಿರಾಸಕ್ತಿ ವ್ಯಕ್ತವಾಗಿದೆ.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ವಾರ್ಷಿಕ 6,000 ರೂ. ಸಹಾಯ ಧನ ನೀಡುವುದಾಗಿ ಘೋಷಿಸಿ ನಾಲ್ಕು ತಿಂಗಳು ಕಳೆದರೂ ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈ ಯೋಜನೆ ಅಡಿ ರೈತರು ಆರು ಸಾವಿರ ರೂ.ಗಳ ಸಹಾಯ ಧನ ಪಡೆಯಬೇಕಾದರೆ ಆಧಾರ್‌ ಸಂಖ್ಯೆ, ಬ್ಯಾಂಕ್‌ ಪಾಸ್‌ಬುಕ್‌, ಬ್ಯಾಂಕ್‌ ಐಎಫ್‌ಎಸ್‌ ಸಿ ಕೋಡ್‌ ಸಂಖ್ಯೆ, ಪಹಣಿ, ಎಸ್ಸಿ, ಎಸ್ಟಿ ಪಂಗಡಕ್ಕೆ ಸೇರಿದವರಾಗಿದ್ದಾರೆ ಜಾತಿ ಸೂಚಿಸಬೇಕಾಗುತ್ತದೆ.

ದಾಖಲಾತಿ ಸಲ್ಲಿಸುವಿಕೆ ಕಡ್ಡಾಯ: ಆಧಾರ್‌, ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಫಲಾನುಭವಿಗಳ ಮೊಬೈಲ್ ಸಂಖ್ಯೆ ಇತರೆ ದಾಖಲಾತಿಗಳನ್ನು ನೀಡಬೇಕು. ರೈತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತ್‌, ನಾಡ ಕಚೇರಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಬೇಕಾಗಿದೆ.

ಜೂನ್‌ನೊಳಗೆ ನೋಂದಣಿ ಮಾಡಿಸಿ: ನೋಂದಣಿ ಮಾಡಿಸಿದ ರೈತ ಕುಟುಂಬಗಳಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ 2000 ರೂ.ಗಳಂತೆ ಸಹಾಯಧನ ನೀಡಲಾಗುತ್ತದೆ. ಜೂನ್‌ ತಿಂಗಳಾಂತ್ಯಕ್ಕೆ ಒಂದು ಕಂತಿನ ಎರಡು ಸಾವಿರ ರೂ. ರೈತರ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ನೇರವಾಗಿ ಜಮಾ ಮಾಡುವುದರಿಂದ ರೈತರು ಜೂನ್‌ ಅಂತ್ಯದೊಳಗೆ ಗುರುತಿನ ದಾಖಲಾತಿಗಳನ್ನು ನೀಡಿ ಪಿಎಂ ಕಿಸಾನ್‌ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ತಿಂಗಳೊಳಗೆ ನೋಂದಣಿ ಮಾಡಿಸಿಕೊಳ್ಳದಿದ್ದ ರೈತರಿಗೆ ಒಂದು ಕಂತಿನ ಬಾಬ್ತು ಎರಡು ಸಾವಿರ ರೂ. ದೊರೆಯುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬಂದಿದೆ.

Advertisement

ಚಿತ್ರದುರ್ಗ ಜಿಲ್ಲಾದ್ಯಂತ ಇರುವ 2,90,577 ರೈತರ ಪೈಕಿ ಕೇವಲ 34,623 ರೈತರು ಸಹಾಯ ಧನ ಪಡೆಯಲು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ಸೇರಿದಂತೆ ಮತ್ತಿತರ ದಾಖಲಾತಿಗಳನ್ನು ನೀಡಿ ನೋಂದಾಯಿಸಿಕೊಂಡಿದ್ದಾರೆ.

ಹೊಳಲ್ಕೆರೆ ರೈತರು ಪ್ರಥಮ: ಹೊಳಲ್ಕೆರೆ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ ಹಿರಿಯೂರು ತಾಲೂಕಿನ ರೈತರು ಅತಿ ಕಡಿಮೆ ನೋಂದಣಿ ಮಾಡಿಸುವ ಮೂಲಕ ಕೊನೆ ಸ್ಥಾನದಲ್ಲಿದ್ದಾರೆ. ರೈತರಿಗೆ ಸರಿಯಾದ ಅರಿವು, ಜಾಗೃತಿಯನ್ನು ಸಂಬಂಧಿಸಿದ ಇಲಾಖೆಗಳು ನೀಡಿಲ್ಲವಾದ್ದರಿಂದ ರೈತರು ನೋಂದಣಿ ಮಾಡಿಸುವಲ್ಲಿ ನಕರಾತ್ಮಕ ಧೋರಣೆ ಅನುಸರಿಸುತ್ತಿದ್ದಾರೆ.

ನಿಬಂಧನೆ ಸಡಿಲಿಕೆ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿರುವಂತೆ ರಾಷ್ಟ್ರದಲ್ಲಿನ ಸಣ್ಣ ಹಿಡುವಳಿದಾರರು 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕ 6,000 ಸಹಾಯ ಧನ ನೀಡಲಾಗುವುದು. ಅಂದರೆ ರೈತ ಕುಟುಂಬಕ್ಕೆ ಪ್ರತಿ ತಿಂಗಳು 500 ಲಭ್ಯವಾಗುವಂತೆ ಘೋಷಿಸಲಾಗಿತ್ತು. ಇತ್ತೀಚೆಗೆ ದೇಶದ ಸಣ್ಣ, ಅತಿ ಸಣ್ಣ, ದೊಡ್ಡ ಹಿಡುವಳಿದಾರ ರೈತರಿಗೂ ಯೋಜನೆ ಲಭ್ಯವಾಗುವಂತೆ ಸಡಿಲಿಕೆ ಮಾಡಿದ್ದರಿಂದ ಭೂಮಿ ಹೊಂದಿರುವ ಎಲ್ಲ ರೈತರೂ ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಅವಿಭಕ್ತ ಕುಟುಂಬವಾಗಿದ್ದ ಸಂದರ್ಭದಲ್ಲಿ ಅಥವಾ ಪಹಣಿಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಹೆಸರುಗಳಿದ್ದರೂ ಆ ಕುಟುಂಬ ಸದಸ್ಯರಿಗೆ ಪ್ರತ್ಯೇಕವಾಗಿ ತಲಾ ಆರು ಸಾವಿರ ರೂ.ಬರುತ್ತದೆ. ಒಂದು ವೇಳೆ ಕುಟುಂಬದಲ್ಲಿ ಪತಿ, ಪತ್ನಿ ಇಬ್ಬರ ಹೆಸರಿನಲ್ಲಿ ಭೂಮಿ ಹೊಂದಿದ್ದಲ್ಲಿ ಆಗ ಒಬ್ಬರಿಗೆ ವಾರ್ಷಿಕ ಆರು ಸಾವಿರ ರೂ.ದೊರೆಯಲಿದೆ. ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗದಲ್ಲಿರುವ ರೈತ ಕುಟುಂಬಗಳಿಗೆ, ಆದಾಯ ತೆರಿಗೆ ಪಾವತಿ ಮಾಡುವಂತ ರೈತ ಕುಟುಂಬಗಳಿಗೆ ಆರು ಸಾವಿರ ರೂ. ಸಹಾಯಧನ ದೊರೆಯುವುದಿಲ್ಲ.

ಯಾವುದೇ ರೈತರು ಎಷ್ಟೇ ಹೆಕ್ಟೇರ್‌ ಭೂ ಹಿಡುವಳಿದಾರರಾಗಿದ್ದರೂ ಪಿ.ಎಂ. ಕಿಸಾನ್‌ ಯೋಜನೆ ಯಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಪ್ರತಿ ಕುಟುಂಬಕ್ಕೆ ವಾರ್ಷಿಕ ಆರು ಸಾವಿರ ರೂ.ಗಳ ಸಹಾಯಧನ ದೊರೆಯಲಿದೆ. ರೈತರು ಸಕಲ ದಾಖಲಾತಿ ನೀಡಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕು. ದಾಖಲಾತಿ ಸರಿ ಇಲ್ಲದಿದ್ದರೆ ಕಿಸಾನ್‌ ಯೋಜನೆಯಿಂದ ವಂಚಿತರಾಗುವ ಸಾಧತೆಯಿದೆ.
ಲಕ್ಷ್ಮಣ್‌ ಕಳ್ಳೆನವರ,
ಜಂಟಿ ನಿರ್ದೇಶಕ, ಕೃಷಿ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next