Advertisement

ಏಕನಾಥೇಶ್ವರಿದೇವಿ ಮೂರ್ತಿ ಮೆರವಣಿಗೆ

04:23 PM Apr 18, 2019 | Naveen |

ಚಿತ್ರದುರ್ಗ: ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿ ದೇವಿ
ಜಾತ್ರಾ ಮಹೋತ್ಸವದ ಅಂಗವಾಗಿ ಕೋಟೆ ಮೇಲ್ಭಾಗದಿಂದ ನಗರಕ್ಕೆ ದೇವತೆ ಮೂರ್ತಿಯನ್ನು ಭಕ್ತರು ಮೆರವಣಿಗೆಯಲ್ಲಿ ಕರೆತಂದರು.

Advertisement

ಮೇಲುದುರ್ಗದ ಮೇಲಿರುವ ದೇಗುಲದಲ್ಲಿ ಬುಧವಾರ ಬೆಳಗಿನ ಜಾವ ಪೂಜಾ ವಿಧಿ  ವಿಧಾನಗಳನ್ನು ದೇಗುಲದ ಪ್ರಧಾನ ಅರ್ಚಕರು ನೆರವೇರಿಸಿದರು. ದೇವಿಯ ದೊಡ್ಡ ಭಂಡಾರದ ಪೂಜೆ
ವಿಶೇಷವಾಗಿತ್ತು. ನಂತರ ಮೂಲ ಗರ್ಭಗುಡಿಯಿಂದ ದೇವಿಯ ಉತ್ಸವ ಮೂರ್ತಿಯನ್ನು ಮಡಿ ಹಾಸಿನ ಮೇಲೆ ಮಂಗಳ ವಾದ್ಯ ಘೋಷಗಳೊಂದಿಗೆ ಕರೆ ತಂದು ಅಶ್ವ ವಾಹನದ ಮೇಲಿನ ಉಚ್ಚಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ದೇಗುಲದ ಮುಂಭಾಗದಲ್ಲಿರುವ ಶಿವನ ವಿಗ್ರಹಕ್ಕೆ ಮೂರು ಬಾರಿ ಪ್ರದಕ್ಷಿಣೆ
ಹಾಕಿಸುವ ವೇಳೆ ಉಧೋ ಉಧೋ ಎಂಬ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಪುಷ್ಪಾಲಂಕೃತ ದೇವತಾ ಮೂರ್ತಿಯನ್ನು ಕೋಟೆಯಿಂದ
ಭಕ್ತರು ಕರೆತಂದು ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿದರು. ಚಂದ್ರಮಾಸ ಹೊಂಡದಲ್ಲಿ ದೇವತೆಗೆ ಗಂಗಾಪೂಜೆ,
ಕುಂಭಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ
ವೃತ್ತ, ಕೂಡಲಿ ಶೃಂಗೇರಿ ಮಠದ ರಸ್ತೆ, ಸುಣ್ಣದ ಗುಮ್ಮಿ, ಜೋಗಿಮಟ್ಟಿ ರಸ್ತೆ, ತಿಪ್ಪಿನಘಟ್ಟಮ್ಮ ಮೂಲ ದೇಗುಲದ
ಅಕ್ಕಪಕ್ಕ, ಜಟ್‌ಪಟ್‌ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆಗಳಲ್ಲಿ ಸಂಚರಿಸಿದ ದೇವತೆಗೆ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ, ಪುಳಿಯೊಗರೆ, ಮೊಸರನ್ನ ವಿತರಿಸಲಾಯಿತು.

ರಾತ್ರಿ ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳ ಅ ಧಿಕಾರಿಗಳು ಹಾಗೂ
ಗುಡಿಗೌಡರ ಮನೆಯಲ್ಲಿ ಪೂಜೆ ನಡೆಯಿತು. ನಂತರ ಕೆಳಗೋಟೆಯ ವಿವಿಧೆಡೆ ಸಂಚರಿಸಿ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ಪಾದಗುಡಿಗೆ ದೇವತೆಯನ್ನು ಕರೆತರಲಾಯಿತು.
ಕಹಳೆ, ಉರುಮೆ, ತಮಟೆ, ಡೊಳ್ಳು ಹಾಗೂ ನಗಾರಿ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಐತಿಹಾಸಿಕ ಚಂದ್ರವಳ್ಳಿಯಲ್ಲಿ ನಗರದೇವತೆ ಬರಗೇರಮ್ಮ ದೇವಿಯ ಗಂಗಾಪೂಜೆ, ಕುಂಭಾಭಿಷೇಕ ನೂರಾರು
ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಅಲ್ಲಿಂದ ದೇಗುಲದವರೆಗೂ ದೇವಿಯ ಉತ್ಸವ ಮೂರ್ತಿಯನ್ನು ಮಡಿ ಹಾಸಿನ ಮೇಲೆ ಕರೆ ತರಲಾಯಿತು. ಏ. 30 ರಂದು ಏಕನಾಥೇಶ್ವರಿ ದೇವತೆಯ ಭವ್ಯ ಮೆರವಣಿಗೆ, 31 ರಂದು ಕೋಟೆ
ರಸ್ತೆಯ ಪಾದದ ಗುಡಿ ಮುಂಭಾಗದಲ್ಲಿ ಸಿಡಿ ಮಹೋತ್ಸವ ಜರುಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next