Advertisement

ಹಳೆ ಪ್ರಕರಣ ಇತ್ಯರ್ಥಕ್ಕೆ ಕ್ರಮ: ನ್ಯಾ|ಓಕಾ

01:04 PM Nov 17, 2019 | |

ಚಿತ್ರದುರ್ಗ: ಕಾಲಮಿತಿಯಲ್ಲಿ ಹಳೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆದ್ಯತೆ ನೀಡುತ್ತಿದ್ದು, ಇಡೀ ನ್ಯಾಯಾಂಗ ವ್ಯವಸ್ಥೆ ಇದಕ್ಕೆ ಸಹಕಾರ ನೀಡಬೇಕು ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹೇಳಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯಕ್ಕೆ ಶನಿವಾರ ಆಗಮಿಸಿದ್ದ ವೇಳೆ ವಕೀಲರ ಭವನದಲ್ಲಿ ಚಿತ್ರದುರ್ಗ ಬಾರ್‌ ಅಸೋಸಿಯೇಷನ್‌ನಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಹತ್ತು ವರ್ಷಗಳ ಹಿಂದಿನ ಪ್ರಕರಣಗಳನ್ನು ಡಿಸೆಂಬರ್‌ ಅಂತ್ಯಕ್ಕೆ ವಿಲೇವಾರಿ ಮಾಡಬೇಕು.

ಐದು ವರ್ಷಗಳ ಹಿಂದಿನ ಪ್ರಕರಣಗಳನ್ನು 2020ರ ವರ್ಷಾಂತ್ಯದ ಒಳಗೆ ಇತ್ಯರ್ಥಪಡಿಸಬೇಕು. ಇದಕ್ಕೆ ವಕೀಲರು ಕೂಡ ಸಹಕಾರ ನೀಡಬೇಕು ಎಂದರು. ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರು ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ನ್ಯಾಯಾಂಗ ಇಲಾಖೆಯನ್ನು ಸಬಲಗೊಳಿಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ನಾವು ಸಾಮಾನ್ಯ ಜನರಿಗೆ ಉತ್ತರದಾಯಿಗಳಾಗಿರಬೇಕು. ಅವರ ವಿಶ್ವಾಸವನ್ನು ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ಕರೆ ನೀಡಿದರು.

ನ. 26 ಸಂವಿಧಾನ ದಿನಾಚರಣೆ. ಈ ಮೂಲಕ ನಾವೆಲ್ಲಾ ಸಂವಿಧಾನದ ಮರು ಪ್ರವೇಶ ಮಾಡಬೇಕಿದೆ. ಸಮಾಜದ ಇತರೆ ವರ್ಗಗಳನ್ನು ಬದಿಗಿಟ್ಟು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ನಾವುಗಳು ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಂಗ ವಿಭಾಗಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದ್ದು, ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನ್ಯಾಯಾಂಗದ ಸೌಲಭ್ಯಗಳು ಚೆನ್ನಾಗಿವೆ ಎಂದು ಶ್ಲಾಘಿಸಿದರು. ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಬಹಳ ಸಣ್ಣದು. ಆದ್ದರಿಂದ ಹೊಸ ಕೋರ್ಟ್‌ ಕಾಂಪ್ಲೆಕ್ಸ್‌ ನಿರ್ಮಾಣವಾಗಬೇಕು. ಈಗಾಗಲೇ ಕೌಟುಂಬಿಕ ನ್ಯಾಯಾಲಯ ಮಂಜೂರಾಗಿದ್ದು, ಅದು ಕಾರ್ಯ ನಿರ್ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವ್ಯಾವಹಾರಿಕ ನ್ಯಾಯಾಲಯವೂ ಬೇಕು ಎಂದು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಪರವಾಗಿ ಪಿ.ಎಚ್‌.ಹನುಮಂತರಾಯ ಅವರು ಮನವಿ ಸಲ್ಲಿಸಿದರು.

Advertisement

ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳು ಜಿಲ್ಲಾ ಕೇಂದ್ರದಿಂದ ಸಾಕಷ್ಟು ದೂರದಲ್ಲಿವೆ. ಆದ್ದರಿಂದ ಹೊಳಲ್ಕೆರೆಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಹೊಳಲ್ಕೆರೆ ವಕೀಲರ ಸಂಘದ ಪದಾಧಿಕಾರಿಗಳು ಎಂದು ಮನವಿ ಮಾಡಿದರು. ಈ ಮನವಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು, ಹೊಸ ಕೋರ್ಟ್‌ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಜತೆ ಮಾತಕತೆ ನಡೆಸುತ್ತೇವೆ.

ಹೊಳಲ್ಕೆರೆಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರ್ಮಾಣ ಕುರಿತು ಕೋರ್ಟ್‌ ಕಮಿಟಿ ಪರಿಶೀಲಿಸಿ ವರದಿ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ಗಳಾದ ರಾಜೇಂದ್ರ ಎಂ. ಬಾದಾಮಿಕರ್‌, ವೆಂಕಟೇಶ್‌ ನಾಯ್ಕ, ಚಂದ್ರಶೇಖರ ರೆಡ್ಡಿ, ಜಿಲ್ಲಾ ನ್ಯಾಯಾ ಧೀಶ ಎಸ್‌.ವೈ. ವಟವಟಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್‌, ನ್ಯಾಯಾಧೀಶರಾದ ಹನುಮಂತಪ್ಪ ಆರ್‌ ಬನ್ನಿಕಟ್ಟೆ, ಶಂಕ್ರಪ್ಪ ಬಿ. ಮಾಲಾಶೆಟ್ಟಿ ಸೇರಿದಂತೆ ವಿವಿಧ ನ್ಯಾಯಾಧೀಶರು ನಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next