Advertisement

ಸಾಂಕ್ರಾಮಿಕ ರೋಗ ಹೆಚ್ಚಳಕ್ಕೆ ಡಿಸಿ ಕಳವಳ

07:55 PM Jan 23, 2020 | Naveen |

ಚಿತ್ರದುರ್ಗ: ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಮತ್ತಿತರೆ ಸಾಂಕ್ರಾಮಿಕ ರೋಗಗಳು ಉಲ್ಬಣವಾಗಿವೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕಳವಳ ವ್ಯಕ್ತಪಡಿಸಿದರು.

Advertisement

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಜಿಲ್ಲೆಯಲ್ಲಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಗಳು ಹೆಚ್ಚು ವರದಿಯಾಗಿವೆ. 2018 ರಲ್ಲಿಡೆಂಘೀ 108 ಪ್ರಕರಣ ದಾಖಲಾಗಿದ್ದರೆ, ಈ ವರ್ಷ 437 ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್‌ ತಿಂಗಳಲ್ಲೇ 92 ಪ್ರಕರಣಗಳು ವರದಿಯಾಗಿವೆ. ಚಿತ್ರದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು 271 ಪ್ರಕರಣಗಳು ಕಂಡುಬಂದಿವೆ. ಚಿಕೂನ್‌ಗುನ್ಯಾ ಕಳೆದ ವರ್ಷ 161 ಪ್ರಕರಣ ದಾಖಲಾಗಿದ್ದರೆ, ಈ ವರ್ಷ 196 ಪ್ರಕರಣ ವರದಿಯಾಗಿವೆ. ಈ ಪೈಕಿ ಚಿತ್ರದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು 114 ಪ್ರಕರಣ ವರದಿಯಾಗಿವೆ ಎಂದರು.

ಈ ಬಗ್ಗೆ ವಿವರಣೆ ನೀಡಿದ ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿ ಕಾರಿ ಡಾ| ಜಯಮ್ಮ,
ಸೊಳ್ಳೆಗಳ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಗ್ರಾಪಂಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಇಲಾಖೆಯಿಂದ ಲಾರ್ವಾ ಸಮೀಕ್ಷೆ ಕೈಗೊಂಡು, ಡೆಂಘೀ, ಚಿಕೂನ್‌ಗುನ್ಯಾಕ್ಕೆ ಕಾರಣವಾಗುವ ಸೊಳ್ಳೆಗಳ ಲಾರ್ವಾ ಹೆಚ್ಚು ಕಂಡು ಬಂದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್‌ ಕೈಗೊಳ್ಳುವಂತೆ ಕೋರಿದರೂ ಸ್ಥಳೀಯ ಸಂಸ್ಥೆಗಳು ಸಹಕರಿಸುತ್ತಿಲ್ಲ. ಹೈರಿಸ್ಕ್ ಪ್ರದೇಶದಲ್ಲಿ ಒಳಾಂಗಣ ಮತ್ತು ಹೊರಾಂಗಣ ಎರಡೂ ಕಡೆಗಳಲ್ಲಿ ಫಾಗಿಂಗ್‌ ಆಗಬೇಕು. ಇಲ್ಲದಿದ್ದರೆ ಪ್ರಯತ್ನ ವಿಫಲವಾಗುವ ಸಾಧ್ಯತೆ ಹೆಚ್ಚು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರದುರ್ಗ ನಗರಸಭೆ ಅಧಿಕಾರಿಗಳು, ಮೆಲಾಥಿಯಾನ್‌ ಪೌಡರ್‌ ಬಳಸಿ ಧೂಮೀಕರಣ ಮಾಡಲಾಗುತ್ತಿದೆ. ಹೊರಾಂಗಣದಲ್ಲಿ ಮಾತ್ರ ಇದನ್ನು ಮಾಡಲಾಗುತ್ತಿದ್ದು, ಒಳಾಂಗಣ ಧೂಮೀಕರಣಕ್ಕೆ ನಿವಾಸಿಗಳು ನಿರಾಕರಿಸುತ್ತಾರೆ ಎಂದರು.

Advertisement

ಮಧ್ಯಪ್ರವೇಶಿಸಿದ ಜಿಲ್ಲಾಧಿ ಕಾರಿಗಳು, ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ
ಸ್ಥಳೀಯ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ನಿಯಂತ್ರಣಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಕಾರ್ಯ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಈ ವರ್ಷ 22386 ಕರುಳುಬೇನೆ ಪ್ರಕರಣಗಳು, ಟೈಫಾಯ್ಡ-3149, ಎಚ್‌1ಎನ್‌
1-51 ವರದಿಯಾಗಿದ್ದು, ಎಚ್‌1ಎನ್‌1 ನಿಂದ 7 ಜನ ಮೃತಪಟ್ಟಿದ್ದಾರೆ. ಕಳೆದ ವರ್ಷ ಕರುಳುಬೇನೆ-12082, ಟೈಫಾಯ್ಡ-2749 ವರದಿಯಾಗಿತ್ತು. ಈ ಎರಡೂ ರೋಗ ಸಾಮಾನ್ಯವಾಗಿ ಕಲುಷಿತ ನೀರು ಮತ್ತು ಆಹಾರದಿಂದ ಬರುವ ರೋಗಗಳಾಗಿದ್ದು, ಕುಡಿಯುವ ನೀರು ಕಲುಷಿತಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೋಗ ಕಂಡುಬಂದ ಪ್ರಕರಣಗಳಲ್ಲಿ ಸಂಬಂಧಪಟ್ಟ ಗ್ರಾಪಂಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯಿಂದ ತಿಳಿಸಲಾಗುತ್ತದೆ. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ| ರೇಣುಪ್ರಸಾದ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ
ಕಾಯ್ದೆ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ತಿಂಗಳಿಗೆ ಬೆರಳೆಣಿಕೆಯಷ್ಟು ಆಹಾರ, ನೀರು ಮಾದರಿಯನ್ನು ಮಾತ್ರ ಅಂಗಡಿಗಳು, ಹೋಟೆಲ್‌, ಕ್ಯಾಂಟೀನ್‌ಗಳಿಂದ ಸಂಗ್ರಹಿಸಿ ಪರಿಕ್ಷೆಗೆ ಒಳಪಡಿಸುತ್ತಿದ್ದಾರೆ.ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಕಾಯ್ದೆ ಅನುಷ್ಠಾನ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next