Advertisement

ಸಂಶೋಧನಾ ಕ್ಷೇತ್ರಕ್ಕೆ ದುರ್ಗದ ಕೊಡುಗೆ ಅಪಾರ

11:58 AM Aug 05, 2019 | Naveen |

ಚಿತ್ರದುರ್ಗ: ಐತಿಹಾಸಿಕ ನಗರಿ ಚಿತ್ರದುರ್ಗಕ್ಕೆ ದೊಡ್ಡ ಇತಿಹಾಸವಿದ್ದು, ಸಂಶೋಧನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಡಾ| ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ| ಡಿ.ವಿ. ಪರಮಶಿವಮೂರ್ತಿ ಹೇಳಿದರು.

Advertisement

ನಗರದ ಒನಕೆ ಓಬವ್ವ ಕ್ರೀಡಾ ಭವನದಲ್ಲಿ ಭಾನುವಾರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಲೇಖಕ ಸಿ.ಎಂ. ತಿಪ್ಪೇಸ್ವಾಮಿ ಅವರ ‘ಉಚ್ಚಂಗಿ ಪಾಂಡ್ಯರು’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಸಂಶೋಧನಾ ಕ್ಷೇತ್ರಕ್ಕೆ ಸುದಿಧೀರ್ಘ‌ ಇತಿಹಾಸವಿದೆ. ಬೇರೆ ಬೇರೆ ಭಾಗದವರು ಚಿತ್ರದುರ್ಗದ ಸಂಶೋಧರನ್ನು ಕಂಡು ಆಯಾ ಭಾಗದ ಸ್ಥಳೀಯ ವಿಚಾರಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕು ಎಂದು ಬಯಸುತ್ತಿದ್ದಾರೆ. ಸ್ಥಳೀಯ ಚರಿತ್ರೆ ಅಧ್ಯಯನ ಮಾಡಿದಂತೆಲ್ಲ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತವೆ. ಪ್ರಧಾನ ಇತಿಹಾಸದ ಅನೇಕ ಸಂಶೋಧನೆಗಳನ್ನು ಸ್ಥಳೀಯ ಇತಿಹಾಸದ ಮೂಲಕ ತಿಳಿಯಬಹುದಾಗಿದೆ ಎಂದರು.

ಶಾಸನಗಳ ಬಗ್ಗೆ ಮಾತನಾಡುವವರೇ ಅಪರೂಪವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಶಾಸನಗಳನ್ನು ಕೇಂದ್ರೀಕರಿಸಿ ಮುಖ್ಯ ಆಕರಗಳನ್ನು ಬಳಸಿ ತಿಪ್ಪೇಸ್ವಾಮಿ ಅಧ್ಯಯನ ಮಾಡಿದ್ದಾರೆ. ಹೆಚ್ಚಿನ ಅಧ್ಯಯನವೇ ಆಗದ ಉಚ್ಚಂಗಿ ಪಾಂಡ್ಯರ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡಿನ ಚರಿತ್ರಯಲ್ಲಿ ಇನ್ನೂ ಬೆಳಕಿಗೆ ಬರಬೇಕಾದ ಅನೇಕ ಸ್ಥಳೀಯ ಅರಸರ ಚರಿತ್ರೆಗಳಿವೆ. ಸ್ಥಳೀಯ ಅರಸರು ಮುಖ್ಯ ಅರಸರಿಗೆ ಹೆಗಲು ಕೊಟ್ಟಿದ್ದಾರೆ. ಕಲ್ಯಾಣ ಚಾಲುಕ್ಯರ ದೊಡ್ಡ ಸಾಧನೆಗೆ ಸಹಕಾರ ಕೊಟ್ಟವರು ಉಚ್ಚಂಗಿ ಪಾಂಡ್ಯರು. ಹತ್ತಾರು ಸ್ಥಳೀಯ ಅರಸರ ಸಾಧನೆಗಳೇ ಚಕ್ರವರ್ತಿಗಳ ಸಾಧನೆ ಎನ್ನುವ ಭಾವನೆ ಇದೆ ಎಂದರು.

Advertisement

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಐತಿಹಾಸಿಕ ವಿಷಯಗಳನ್ನು ವರ್ತಮಾನಕ್ಕೆ ತಕ್ಕಂತೆ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ. ಉಚ್ಚಂಗಿ ಪಾಂಡ್ಯರ ಕುರಿತ ಕೃತಿ ಕೇವಲ ಇತಿಹಾಸಕ್ಕೆ ಸೀಮಿತವಾಗದೆ ಸಮಾಜಶಾಸ್ತ್ರೀಯ ಅಧ್ಯಯನದ ಮಹತ್ವ ಪಡೆದಿದೆ. ಶಾಸನಗಳಲ್ಲಿ ಸೂಕ್ಷ್ಮವಾಗಿ ಉಲ್ಲೇಖವಾಗಿರುವ ಸಮಾಜ, ಮಹಿಳೆ, ಧರ್ಮ, ವಾಣಿಜ್ಯ, ದಾನ, ಬಡ್ಡಿ, ವ್ಯವಹಾರ ಮೊದಲಾದ ಅಜ್ಞಾತ ವಿಷಯಗಳ ಕಡೆ ಗಮನ ಹರಿಸಿರುವುದು ವಿಶೇಷ ಎಂದು ತಿಳಿಸಿದರು.

ಇತಿಹಾಸ ಸಂಶೋಧಕ ಡಾ| ಬಿ.ರಾಜಶೇಖರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ರೇವಣಸಿದ್ದಪ್ಪ, ಡಾ| ಎಚ್. ಗುಡದೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ರಾಜಕೀಯ-ಇತಿಹಾಸಕ್ಕಷ್ಟೇ ಅಧ್ಯಯನ ಸೀಮಿತವಾಗದಿರಲಿ
ಜಾಗತೀಕರಣದ ಅಬ್ಬರದ ನಡುವೆ ದೇಸಿ ಚಿಂತನೆ ಹಾಗೂ ಸ್ಥಳೀಯ ಸಾಂಸ್ಕೃತಿಕ ಅಧ್ಯಯನಗಳ ಸಂಶೋಧಕರು ಹೆಚ್ಚೆಚ್ಚು ಆಸಕ್ತಿ ವಹಿಸಬೇಕಿದೆ. ಪ್ರಸ್ತುತ ದಿನಗಳಲ್ಲಿ ಸಂಶೋಧನೆಯ ಪರಿಕಲ್ಪನೆ ವ್ಯಾಪಕವಾಗಿ ಬೆಳೆಯುತ್ತಿದ್ದು, ಶಾಸನಗಳ ಅಧ್ಯಯನ ಕೇವಲ ರಾಜಕೀಯ ಮತ್ತು ಇತಿಹಾಸಕ್ಕೆ ಸೀಮಿತವಾಗಬಾರದು. ರಾಜಕೀಯೇತರ ಅಧ್ಯಯಯನವೂ ನಡೆಯಬೇಕು ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next