Advertisement

ಶೋಷಿತ ವರ್ಗದಲ್ಲಿ ಅಕ್ಷರ ಕ್ರಾಂತಿಯಾಗಲಿ

01:09 PM Jun 17, 2019 | Team Udayavani |

ಚಿತ್ರದುರ್ಗ: ಶೋಷಿತ ತಳ ಸಮುದಾಯಗಳು ಸೇರಿದಂತೆ ಮಧ್ಯಮ ವರ್ಗದ ಕುಟುಂಬಗಳಲ್ಲಿ ಅಕ್ಷರ ಕ್ರಾಂತಿಯಾದರೆ ಸ್ವಾಭಿಮಾನದ ಕ್ರಾಂತಿ ಉದಯವಾಗಲಿದೆ ಎಂದು ಡಾ| ಶಿವಮೂರ್ತಿ ಶರಣರು ಹೇಳಿದರು.

Advertisement

ನಗರದ ಅಮೋಘ ಇಂಟರ್‌ನ್ಯಾಷನಲ್ ಹೋಟೆಲ್ನಲ್ಲಿ ಕುಂಚಿಟಿಗ ವೀರಶೈವ ಲಿಂಗಾಯತ ಸಮಾಜದ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

ಸ್ವಾಭಿಮಾನದ ಸಮಾಜ ನಿರ್ಮಾಣವಾಗಬೇಕಾದರೆ ವಿದ್ಯಾದಾನದ ಜೊತೆಗೆ ಅನ್ನದಾನವೂ ಆಗಬೇಕು. ವಿದ್ಯಾ ಕ್ರಾಂತಿ, ದಾಸೋಹ ಕ್ರಾಂತಿ ಹೆಚ್ಚೆಚ್ಚು ನಡೆದರೆ ಅನೇಕ ಸಮುದಾಯಗಳು ಮುಖ್ಯವಾಹಿನಿಗೆ ಬರಲಿವೆ ಎಂದರು.

ಅವಕಾಶ ವಂಚಿತ ಕುಟುಂಬಗಳ ಮಕ್ಕಳಿಗೆ ಅನ್ನದಾನ ಮಾಡದೆ ಹೋದರೆ ವಿದ್ಯೆ ದಾನ ಮಾಡಲು ಆಗುವುದಿಲ್ಲ. ಇವೆರಡು ಪರಸ್ಪರ ಪೂರಕ ಎಂಬ ಪ್ರಜ್ಞೆ ಜಯದೇವ ಜಗದ್ಗುರುಗಳಲ್ಲಿ ಇತ್ತು. ಅಂದಿನಿಂದ ಇಂದಿನಿವರೆಗೂ ನಮ್ಮ ಮಠ ಅನ್ನದಾನ ಹಾಗೂ ಅಕ್ಷರ ದಾನ ಎರಡನ್ನು ಮಾಡಿಕೊಂಡು ಬರುತ್ತಿದೆ. ನಾಡಿನ ಬಹುತೇಕ ಮಠಗಳು ಇಂತಹ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದರಿಂದ ಮಠಗಳಿಗೆ ಸೈದ್ಧಾಂತಿಕ ಹಿನ್ನೆಲೆಯಿದೆ. ಸ್ವಾಭಿಮಾನವನ್ನು ಕಟ್ಟಿಕೊಡುವ ಕಾರ್ಯ ಮಾಡುತ್ತಿವೆ ಎಂದು ತಿಳಿಸಿದರು.

ಕುಂಚಿಟಿಗ ವೀರಶೈವ ಲಿಂಗಾಯತ ಸಮಾಜ ಅಕ್ಷರ ಸಂಸ್ಕೃತಿಗೆ ಒಳಗಾಗಬೇಕು. ಕುಂಚಿಟಿಗ ಸಮಾಜ ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದೆ. ಎಲ್ಲ ರೀತಿಯ ಮೌಡ್ಯಗಳನ್ನು ಬಿಟ್ಟು ಬಡತನಕ್ಕೆ ಅಂಜದೆ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಿ. ಕೆಲವು ಸಮಾಜಗಳಲ್ಲಿ ಅಕ್ಷರ ಸಂಸ್ಕೃತಿ ಇದೆ, ಆದರೆ ನಾಗರೀಕ ಸಂಸ್ಕೃತಿಯೇ ಇರುವುದಿಲ್ಲ ಎಂದು ವಿಷಾದಿಸಿದರು.

Advertisement

ವಿದ್ಯಾವಂತರಾದವರ ಬದುಕು ಪ್ರಕಾಶಮಾನವಾಗಿರುತ್ತದೆ. ಪ್ರತಿಭೆ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಕುಂಚಿಟಿಗ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆಂದರೆ ನಿಜಕ್ಕೂ ದೊಡ್ಡ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಕ್ಷರತೆ, ಸಂಸ್ಕಾರ ಎರಡೂ ಜೀವನಕ್ಕೆ ಅತ್ಯವಶ್ಯಕ. ಸಂಸ್ಕಾರದ ಜೊತೆ ಸಾಗಿದಾಗ ಮಾತ್ರ ಪ್ರಗತಿ ಪಥದತ್ತ ಸಾಗಲು ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಬೇಕಾಗಿರುವುದರಿಂದ ಒಂದೊಂದು ಅಂಕಕ್ಕೂ ಮೌಲ್ಯವಿದೆ. ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕುಂಚಿಟಿಗ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್.ಬಿ. ರಾಜಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕುಂಚಿಟಿಗ ಲಿಂಗಾಯತ ಸಮಾಜವನ್ನು ಸಂಘಟಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿ ವರ್ಷ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಾಜಕ್ಕೆ ಆರ್ಥಿಕ ನೆರವು ನೀಡಿದಾಗ ಮಾತ್ರ ಕುಂಚಿಟಿಗ ವೀರಶೈವ ಲಿಂಗಾಯತರು ಅಭಿವೃದ್ಧಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಕುಂಚಿಟಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ.ಬಿ. ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರುಗಳಾದ ಪರಮೇಶ್ವರಪ್ಪ, ನಿವೃತ್ತ ಉಪನ್ಯಾಸಕ ಕುಬೇರಪ್ಪ, ವಿಶ್ವನಾಥ್‌, ಶಿವಪ್ರಕಾಶ್‌, ಜಿ.ಎಸ್‌. ಉಜ್ಜಿನಪ್ಪ, ದಗ್ಗೆ ಶಿವಪ್ರಕಾಶ್‌ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ರಾಜಪ್ಪ ಹಾಗೂ ರಸಾಯನಶಾಸ್ತ್ರ ವಿಷಯದಲ್ಲಿ ಡಾಕ್ಟರೆಟ್ ಪಡೆದಿರುವ ಮಂಜಣ್ಣ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next