Advertisement

ಬಿಜೆಪಿ ಕ್ಷಮೆಯಾಚನೆ ಯಾತ್ರೆ ಮಾಡಲಿ

06:44 PM Sep 02, 2021 | Team Udayavani |

ಹಿರಿಯೂರು: ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಬಹಳ ದಿನ ಉಳಿಯುವುದಿಲ್ಲ ಎಂದು ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ ಅಹಮದ್‌ ಹೇಳಿದರು.

Advertisement

ಹಿರಿಯೂರಿನ ಗುರುಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಚಿತ್ರದುರ್ಗ ಜಿಲ್ಲೆಯ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದೇ ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್‌ ಡೀಸಲ್‌ ಬೆಲೆ ಹೆಚ್ಚಿಸಿ ಜನಗಳಿಗೆ ಮೋಸ ಮಾಡಿದೆ. ಬಡವರು, ಕೂಲಿಕಾರ್ಮಿಕರ ಜೀವನ ಸಂಕಷ್ಟದಲ್ಲಿ ಸಿಲುಕಿರುವಾಗ ಜನಾಶೀರ್ವಾದ ಯಾತ್ರೆ ಮಾಡುತ್ತಿದೆ. ಇದರ ಬದಲು ಕ್ಷಮಾಯಾಚನೆ ಯಾತ್ರೆ ಮಾಡಲಿ.

ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾದರೂ ಮಂತ್ರಿಗಳು ಅವರೇ ಇದ್ದಾರೆ. ಭ್ರಷ್ಟಾಚಾರವೆಸಗಿದ ಒಬ್ಬ ಮಹಿಳಾ ಮಂತ್ರಿಗೆ ಜಿರೋ ಟ್ರಾಪಿಕ್‌ ವ್ಯವಸ್ಥೆ ಮಾಡುತ್ತಾರೆ ಎಂದು ಆರೋಪಿಸಿದ ಅವರು, ಜನತೆಗೆ ಮೋಸ ಮಾಡಿದ ಬಿಜೆಪಿ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಿಲ್ಲ. ಆಪರೇಷನ್‌ ಕಮಲದ ಮೂಲಕ ಬಿಜೆಪಿ ಆಡಳಿತಕ್ಕೆ ಬಂದಿದೆ ಎಂದು ದೂರಿದರು. ಜನತೆ ರಾಜ್ಯದ ಎಲ್ಲ ವಿದ್ಯಾಮಾನಗಳನ್ನು ಗಮನಿಸುತ್ತಿದ್ದಾರೆ.

ಮುಂದಿನ ದಿನದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ ಆಡಳಿತವನ್ನು ತೂಲಗಿಸಲು ಜನ ತೀರ್ಮಾನಿಸಿದ್ದಾರೆ. ಕಾರ್ಯಕರ್ತರು ಸರ್ಕಾರದ ವೈಪಲ್ಯಗಳನ್ನು ಜನತೆಯ ಮುಂದೆ ಇಡುವಂತ ಕೆಲಸ ಮಾಡಬೇಕು. ಭ್ರಷ್ಟಾಚಾರದ ವಿರುದ್ಧ ತಾಲೂಕು, ಹೋಬಳಿ, ಹಳ್ಳಿ ಮಟ್ಟದಿಂದ ಪ್ರತಿಭಟನೆ ನಡೆಸಲು ಸಜ್ಜಾಗಬೇಕು. ಕಾಂಗ್ರೆಸ್‌ ಪಕ್ಷದ ಇತಿಹಾಸ ಮರುಕಳಿಸುವಂತೆ ಮುಖಂಡರು, ಕಾರ್ಯಕರ್ತರು ಸಂಘಟನೆ ಮೂಲಕ ಮಾಡಬೇಕು. ಮುಂಬರುವ ಸಿಂದಗಿ ಮತ್ತು ಹಾನಗಲ್‌ ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಡಿ. ಸುಧಾಕರ್‌, ಎಚ್‌. ಆಂಜನೇಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತಾಜ್‌ಪೀರ್‌, ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಉಮಾಪತಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಪಿ. ಸಂಪತ್‌ ಕುಮಾರ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾನಂದಿನಿಗೌಡ, ಕೆಪಿಸಿಸಿ ಸದಸ್ಯರಾದ ಅಮೃತೇಶ್ವರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಖಾದಿ, ಕಲ್ಲಟ್ಟಿ ತಿಪ್ಪೇಸ್ವಾಮಿ, ಜಿಪಂ ಮಾಜಿ ಅಧ್ಯಕ್ಷರಾದ ಶಶಿಕಲಾ ಸುರೇಶ್‌ ಬಾಬು, ಎಸ್ಸಿ ಘಟಕದ ಅಧ್ಯಕ್ಷರಾದ ಜಿ.ಎಲ್‌. ಮೂರ್ತಿ, ಪಾಪಣ್ಣ ಮಾತನಾಡಿದರು.

Advertisement

ಜಿಪಂ ಮಾಜಿ ಸದಸ್ಯರಾದ ಗೀತಾ ನಾಗಕುಮಾರ್‌, ಮಹಿಳಾ ತಾಲೂಕು ಅಧ್ಯಕ್ಷೆ ಸುರೇಖಾ ಮಣಿ, ಜಿಲ್ಲಾ ಅಲ್ಪಸಂಖ್ಯಾತರ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷರಾದ ರಜೀಯಾಸುಲ್ತಾನ್‌ , ತಾಪಂ ಮಾಜಿ ಸದಸ್ಯರಾದ ಓಂಕಾರಪ್ಪ, ನಗರಸಭಾ ಅಧ್ಯಕ್ಷರಾದ ಶಂಶುನ್ನೀಸಾ, ಉಪಾಧ್ಯಕ್ಷರಾದ ಬಿ.ಎನ್‌. ಪ್ರಕಾಶ್‌, ಗಿರೀಶ್‌, ಜ್ಞಾನೇಶ್‌, ಶಿವಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next