Advertisement

ಸ್ವಾರ್ಥ ಸಾಧನೆಗೆ ನಿಸರ್ಗದ ದುರ್ಬಳಕೆ ಸರಿಯಲ್ಲ: ಶಿಮುಶ

04:58 PM Apr 25, 2019 | Naveen |

ಚಿತ್ರದುರ್ಗ: ವೇದಾವತಿ ನದಿ ದಡ ಸೇರಿದಂತೆ ಇತರೆ ಜಲಮೂಲಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

Advertisement

ಇಲ್ಲಿನ ಮುರುಘಾಮಠದಲ್ಲಿ ವೇದಾವತಿ ನದಿ ಪಾತ್ರದ ಅಭಿವೃದ್ಧಿ ಕುರಿತು ರೂಪುರೇಷೆ ಸಿದ್ಧಪಡಿಸಲು ನಡೆದ ರೈತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಶರಣರು ಮಾತನಾಡಿದರು.

ನೈಸರ್ಗಿಕ ಸಂಪನ್ಮೂಲಗಳನ್ನು ಅದರಲ್ಲೂ ಜಲಸಂಪನ್ಮೂಲವನ್ನು ಯಥಾತ್ತಾಗಿ ಉಳಿಸಿಕೊಂಡಲ್ಲಿ ರೈತರೇ ಸರ್ಕಾರಕ್ಕೆ ಹಣ ನೀಡಬಹುದು. ಆದರೆ ಅಲ್ಲಿಯವರೆಗೂ ಸರ್ಕಾರವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದು ಅಪಹಾಸ್ಯವೂ ಹೌದು, ವಿಪರ್ಯಾಸವೂ ಹೌದು. ರೈತ ಸಮುದಾಯದಲ್ಲಿ ಇಂದು ಸ್ವಾಭಿಮಾನದ ಬದುಕು ಅತ್ಯಂತ ಕಷ್ಟಕರವಾಗಿದೆ. ಕಾರಣ ಕೆರೆಗಳು ಮಾಯವಾಗುತ್ತಿವೆ, ನದಿಗಳು ನಾಪತ್ತೆಯಾಗುತ್ತಿವೆ. ಮಳೆ ಮುಗಿಲು ಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಿಸರ್ಗ ಇದ್ದರೆ ಮಾತ್ರ ಮಾನವ. ಆದರೆ ಮಾನವ ತನ್ನಿಂದಾಗಿಯೇ ನಿಸರ್ಗವಿದೆ ಎಂದು ತಪ್ಪಾಗಿ ಭಾವಿಸಿದ್ದಾನೆ. ತನ್ನ ಸ್ವಂತ ಲಾಭಕ್ಕಾಗಿ, ಸ್ವಾರ್ಥಕ್ಕಾಗಿ ನಿಸರ್ಗವನ್ನು ದುರ್ಬಳಕೆ ಮಾಡುತ್ತಿದ್ದಾನೆ. ಜಲಕ್ಷಾಮದ ಇಂದಿನ ದಿನಗಳಲ್ಲಿ ಜಲ ಮೂಲಗಳನ್ನು ರಕ್ಷಿಸಬೇಕಿದೆ. ಅದಕ್ಕಾಗಿ ವೇದಾವತಿ ನದಿಯನ್ನು ಸಂರಕ್ಷಿಸಬೇಕಾಗಿದೆ. ಯಥಾವತ್ತಾಗಿ ಹರಿಯುವಂತೆ ಮಾಡಬೇಕಾಗಿದೆ. ವಿವಿ ಸಾಗರದವರೆಗೂ ತುಂಬಿ ಹರಿಯುವಂತೆ ಮಾಡಬೇಕಾದ ಸವಾಲಿದೆ. ವೇದಾವತಿ ನದಿ ಪಾತ್ರದ ಸಂರಕ್ಷಣೆಗಾಗಿ ಬೇಕಾದ ಕ್ರಮಗಳ ಜಾರಿಗಾಗಿ ಪರಿಸರವಾದಿಗಳು ಮತ್ತು ರೈತರೊಂದಿಗೆ ಕೈಜೋಡಿಸಲು ಶ್ರೀಮಠ ಸದಾ ಸಿದ್ಧವಾಗಿದೆ. ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ರೈತರ ಬದುಕಿಗೆ ಹಾಗೂ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಲೇಬೇಕಾಗಿದೆ ಎಂದು ಪ್ರತಿಪಾದಿಸಿದರು.

ಚಿಕ್ಕಮಗಳೂರಿನ ಪರಿಸರವಾದಿ ಗಿರೀಶ್‌ ಮಾತನಾಡಿ, ವೇದಾವತಿ ನದಿಯ ಪುನಶ್ಚೇತನ ಕಾರ್ಯವನ್ನು ಮುರುಘಾ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸಬೇಕು. ನದಿಯ ಪುನಶ್ಚೇತನ ಕಾರ್ಯಕ್ಕೆ ರೈತರು ಸಂಪೂರ್ಣ ಬೆಂಬಲ ನೀಡಬೇಕು. ವೇದಾವತಿ ನದಿಯ ನಾಲ್ಕು ಮೂಲಗಳನ್ನು ಸಂರಕ್ಷಿಸಿ ನದಿ ಮೊದಲಿನಂತೆ ಹರಿಯಬೇಕಿದೆ. ವೇದಾವತಿ ನದಿ ಪುನಶ್ಚೇತನದಿಂದ ಅಂತರ್ಜಲ ಮಟ್ಟದಲ್ಲೂ ವೃದ್ಧಿಯಾಗಲಿದೆ. ನದಿ ಸರಾಗವಾಗಿ ಏಕೆ ಹರಿಯುತ್ತಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಈ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದರು.

Advertisement

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಗಟ್ಟದ ಸಿದ್ಧವೀರಪ್ಪ ಮಾತನಾಡಿ, ಮರಳಿಗಾಗಿ ಹಾಗೂ ಮತ್ತಿತರ ಕಾರಣಗಳಿಗಾಗಿ ವೇದಾವತಿ ನದಿ ಇಂದು ಬಲಿಯಾಗುವಂತಾಗಿದೆ. ನದಿ ಪಾತ್ರದ ಜನರೆಲ್ಲರಲ್ಲಿಯೂ ಜಾಗೃತಿ ಮೂಡಿಸಿ ವೇದಾವತಿ ನದಿಯನ್ನು ಜೀವಂತವಾಗಿಡಲು ರೈತರೆಲ್ಲರೂ ಸದಾ ಸಿದ್ಧರಾಗಿದ್ದೇವೆ ಎಂದು ಘೋಷಿಸಿದರು.

ಸಭೆಯಲ್ಲಿ ಚಿಕ್ಕಮಗಳೂರಿನ ಭರತ್‌ ಮಣ್‌ಮಯಿ, ಆಕಾಶವಾಣಿಯ ಮಧುಸೂದನ್‌, ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕಾರ್ಯದರ್ಶಿ ಮಲ್ಲಿಕಾರ್ಜುನ್‌, ಕಾರ್ಯಾಧ್ಯಕ್ಷ ಜಯಪ್ಪ, ತಾಲೂಕು ಅಧ್ಯಕ್ಷ ರಾಜಶೇಖರಪ್ಪ, ಹೊಸದುರ್ಗ ತಾಲೂಕು ಅಧ್ಯಕ್ಷ ಕೊರಟಗೆರೆ ರಮೇಶ್‌, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಬಸವರಾಜಪ್ಪ, ಹಿರಿಯೂರು ತಾಲೂಕು ಕಾರ್ಯರದರ್ಶಿ ರಮೇಶ್‌ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವು ರೈತರು ಭಾಗವಹಿಸಿದ್ದರು.

ಕಾನೂನಿನ ಕಣ್ತಪ್ಪಿಸಿ ಕಾಡು ಕಡಿದು ವೇದಾವತಿ ನದಿ ಮೂಲಗಳನ್ನು ಕೆಲವರು ತಮ್ಮ ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೊರ ರಾಜ್ಯದಿಂದ ಬರುವ ಉದ್ಯಮಿಗಳು ವೇದಾವತಿ ನದಿ ನಶಿಸಿ ಹೋಗಲು ಕಾರಣರಾಗಿದ್ದಾರೆ. ಆದ್ದರಿಂದ ವೇದಾವತಿ ನದಿ ನೀರಿನ ದುರ್ಬಳಕೆಯನ್ನು ತಪ್ಪಿಸಬೇಕು.
• ಗಿರೀಶ್‌,
ಚಿಕ್ಕಮಗಳೂರಿನ ಪರಿಸರವಾದಿ.

Advertisement

Udayavani is now on Telegram. Click here to join our channel and stay updated with the latest news.

Next