Advertisement

ರೋಗಿಗಳಿಗೆ ನೀಡುವ ಹಾಲು ಮತ್ತು ಬ್ರೆಡ್ ಕದ್ದ ಗುತ್ತಿಗೆದಾರ!

04:03 PM Oct 15, 2021 | Team Udayavani |

ಚಿಂತಾಮಣಿ : ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಬೇಗ ಗುಣಮುಖರಾಗಲೆಂದು  ಆಹಾರ, ಹಾಲು, ಬ್ರೆಡ್ ಮತ್ತು ಮೊಟ್ಟೆ ನೀಡುತ್ತಿದ್ದರೆ ಗುತ್ತಿಗೆದಾರರು ಸರ್ಕಾರ ನಿಗಧಿ ಮಾಡಿರುವುದರಲ್ಲಿ ಕಡಿತಮಾಡಿ ರೋಗಿಗಳ ಊಟ ಕದಿಯುತ್ತಿರುವುದು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಹೌದು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದಲ್ಲಿ ಕಡಿತ ಮಾಡಿ ಗುತ್ತಿಗೆದಾರರು ಅನುದಾನವನ್ನು ನುಂಗ್ಗಿ ನೀರು ಕುಡಿಯುತ್ತಿರುವುದು ಬಯಲಾಗಿದೆ.

ಪ್ರತಿ ದಿನ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಬೆಳಿಗ್ಗೆ ಅರ್ಧ ಲೀಟರ್ ನಂದಿನಿ ಹಾಲು, 300 ಗ್ರಾಂ ಬ್ರೆಡ್ ಕೊಡಬೇಕು ಆದರೆ ರೋಗಿಗಳ ಕಣ್ಣು ತಪ್ಪಿಸಿದ ಗುತ್ತಿಗೆದಾರರು 100 ರಿಂದ 200 ಎಂ.ಎಲ್ ಆಹಾ ಹಾಲು, 150 ರಿಂದ 230 ಗ್ರಾಂ ಬ್ರೆಡ್ ಮಾತ್ರ ವಿತರಣೆ ಮಾಡುತ್ತಿರುವುದು ಬಯಲಾಗಿದೆ.

ಸರ್ಕಾರ ನಂದಿನಿ ಹಾಲು ನಿಗದಿ ಮಾಡಿದ್ದರೆ ಗುತ್ತಿಗೆದಾರ ಆಹಾ ಕ್ರೀಮ್ ಮಿಲ್ಕ್ ಎಂಬ ಹಾಲು ವಿತರಣೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ಮದ್ಯಾಹ್ನ ಮತ್ತು ರಾತ್ರಿ ನೀಡುವ ಅನ್ನ ಸಾಂಬಾರ್ ಕೂಡ ಗುಣಮಟ್ಟವಿಲ್ಲವೆಂದು ಮೊಟ್ಟೆಯಲ್ಲಿ ನೀರು ಸೋರುವುದು, ಬರಿ ಸೊಪ್ಪು ಸಾರು ಹಾಗೂ ಒಂದೆರಡು ತರಕಾರಿಗಳಿರುವ ಸಾಂಬರ್ ಮಾತ್ರ ನೀಡುತ್ತಿದ್ದಾರೆ, ಅಷ್ಟೆ ಅಲ್ಲದೆ ಕೊಳೆತ ಬದನೆಕಾಯಿ, ಸೋರೆಕಾಯಿಗಳನ್ನು ಹಾಕಿ ಸಾಂಬರ್ ಮಾಡುತ್ತಾರೆ, ಅರ್ದಂ ಬರ್ದ ಬೆಂದ ಅನ್ನ ನೀಡುತ್ತಾರೆಂದು ರೋಗಿಗಳು ಮತ್ತು ಸಂಬಂಧಿಕರು ವರದಿಕಾಗಾರರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ:ದಿನದಲ್ಲಿ ಎರಡು ಬಾರಿ ಮಾಯವಾಗುವ ಶಿವಾಲಯ! ಏನಿದರ ವಿಶೇಷತೆ?

ಇನ್ನು ಆಸ್ಪತ್ರೆಯಲ್ಲಿ ಇಷ್ಟೇಲ್ಲಾ ನಡೆಯುತ್ತಿದ್ದರೂ ಅದಕ್ಕೂ ನಮಗೂ ಏನು ಸಂಬಂಧವಿಲ್ಲವೆಂದು ಆಸ್ಪತ್ರೆಯ ಆಡಳಿತ ಆಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದರೆ ಅಧಿಕಾರಿಗಳು ಗುತ್ತಿಗೆದಾರ ಜೊತೆ ಸೇರಿ ರೋಗಿಗಳಿಗೆ ನೀಡುವ ಆಹಾರದಲ್ಲಿ ಲೂಟಿ ಮಾಡುತ್ತಿರುವುದು ಮೆಲ್ನೊಟಕ್ಕೆ ತಿಳಿಯುವಂತಾಗಿದೆ.

ಮಾನವಿಯತೆಯೇ ಇಲ್ಲವೆ : ಇನ್ನು ಸರ್ಕಾರಿ ಆಸ್ಪತ್ರೆಗೆ ಬರುವರೆಲ್ಲಾ ಬಹುತೇಕರು ಬಡವರು ಗ್ರಾಮೀಣ ಭಾಗದ ಜನರೇ ಆಗಿರುತ್ತಾರೆ ಅದರಲ್ಲೂ ಅಪೌಷ್ಟಿಕತೆಯಿಂದ ಕೂಡಿದವರೆ ಆಗಿರುತ್ತಾರೆ ಇಂತಹ ರೋಗಿಗಳಿಗೆ ಮತ್ತು ಬಾಣಂತಿಯರಿಗೆ ಗುಣಮಟ್ಟದ ಆಹಾರ ನೀಡಿ ರೋಗಿಗಳಿಗೆ ಪೌಷ್ಠಿಕಾಂಶಗಳನ್ನು ವೃದ್ದಿಸಬೇಕಾದ ವೈದ್ಯರು ಮತ್ತು ಗುತ್ತಿಗೆದಾರರು ಮಾನವಿಯತೆ ಇಲ್ಲದೆ ಬಡ ರೋಗಿಗಳಿಗೆ ನೀಡುವ ಆಹಾರದಲ್ಲಿ ಲೂಟಿಮಾಡುತ್ತಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವರ ಕ್ಷೇತ್ರದಲ್ಲೆ ಲೂಟಿ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಚಿವರಾದ ಡಾ” ಕೆ.ಸುಧಾಕರ ತವರಿನ ಚಿಂತಾಮಣಿ ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ರೀತಿ ರೋಗಿಗಳ ಆಹಾರ ಕಿತ್ತು ತಿನ್ನುತಿರುವುದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ದೋರಣೆಗೆ ಸಾಕ್ಷಿಯಾಗಿದೆ.

ಅದು ಅಲ್ಲದೆ ಪ್ರತಿದಿನ ಚಿಂತಾಮಣಿ ಯ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 40 ರಿಂದ 50 ಜನ ನೊಂದಣಿಯಾಗಿರುತ್ತಾರೆ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರು ಸುಮಾರು 25 ರಿಂದ 30 ಜನ ನೊಂದಣಿಯಾಗಿದ್ದರೆ ಜನರಲ್ ವಾರ್ಡನಲ್ಲಿ 10 ರಿಂದ 15 ಜನ  ನೊಂದಣಿ ಯಾಗಿರುತ್ತಾರೆ ಇಷ್ಟೇಲ್ಲಾ ರೋಗಿಗಳಿಗೆ ನೀಡಬೇಕಾದ ಆಹಾರದಲ್ಲಿ ಕಡಿತಮಾಡುವ ಗುತ್ತಿಗೆದಾರರು ಅಧಿಕಾರಿಗಳೊಂದಿಗೆ ಸೇರಿಕೊಂಡು ರೋಗಿಗಳ ಸಂಖ್ಯೆಯಲ್ಲಿ ಏರುಪೇರು ಮಾಡಿ ಅನುದಾನವನ್ನು ಲಪಟಾಯಿಸುತ್ತಿದ್ದಾರೆ.

ಇನ್ನು ಕ್ಯಾಂಟೀನ್ ಗುತ್ತಿಗೆದಾರರ ಸತ್ಯನಾರಾಯಣ ಚಾರಿ ಎಂಬುವರನ್ನು ಈ ಕುರಿತು ಕೇಳಿದಾಗ ಚಿಂತಾಮಣಿ ಆಸ್ಪತ್ರೆಯ ಕ್ಯಾಂಟಿನ್ ಜವಾಬ್ದಾರಿಯನ್ನು ವಿಜಯ್ ಕುಮಾರ್ ಎಂಬುವರಿಗೆ ವಹಿಸಿದ್ದೇನೆ ಅಲ್ಲಿನ ಅವ್ಯವಹಾರದ ಬಗ್ಗೆ ತಿಳಿದು ಬಂದಿಲ್ಲ ಕೂಡಲೇ ಬೇಟಿ ನೀಡಿ ಪರಿಶೀಲನೆಮಾಡುವುದಾಗಿ ತಿಳಿಸುತ್ತಾರೆ.

ರೋಗಿಗಳಿಗೆ ನೀಡುವ ಆಹಾರದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರು ಅಧಿಕಾರಿಗಳು ಕುರುಡ ಜಾಣರಂತೆ ವರ್ತಿಸುತ್ತಿರುವುದು ಖೇದಕರ ಸಂಗತಿಯಾಗಿದೆ.

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next