Advertisement

ಚಿಂಚೋಳಿಯಲ್ಲಿ ಈಗ ಜಾತಿಯದ್ದೇ ಲೆಕ್ಕಾಚಾರ!

11:14 PM Apr 26, 2019 | Lakshmi GovindaRaju |

ಕಲಬುರಗಿ: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಭವಿಷ್ಯ ಎನ್ನುವಂತೆ ಪರಿಸ್ಥಿತಿ ಹಾಗೂ ವಾತಾವರಣ ನಿರ್ಮಾಣವಾಗಿದ್ದರಿಂದ ಚಿಂಚೋಳಿ ಕ್ಷೇತ್ರದ ಉಪಚುನಾವಣೆ ತೀವ್ರ ಮಹತ್ವ ಪಡೆದುಕೊಂಡಿದ್ದು, ಹಲವು ನಿಟ್ಟಿನಲ್ಲಿ ಚರ್ಚೆ, ತಂತ್ರ-ಪ್ರತಿತಂತ್ರಗಳು ಜೋರಾಗಿ ನಡೆದಿವೆ.

Advertisement

ಚಿಂಚೋಳಿ 2008ರಿಂದ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಯಾವ ವರ್ಗದವರು ಎಷ್ಟು ಮತದಾರರಿದ್ದಾರೆ ಎನ್ನುವ ಚರ್ಚೆಯೇ ಕ್ಷೇತ್ರದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಇಂತಹ ವರ್ಗದ ಬೆಂಬಲ ಇಂತಹದ್ದೇ ಪಕ್ಷಕ್ಕೆ ಎನ್ನುವ ಮಾತುಗಳೇ ಕೇಳಿ ಬರುತ್ತಿವೆ. ಮುಖ್ಯವಾಗಿ ಸಮುದಾಯಗಳ ಮನವೊಲಿಕೆ ಹೇಗೆ ಎನ್ನುವ ಕಾರ್ಯತಂತ್ರಕ್ಕೆ ಕಾರ್ಯಸೂಚಿಯನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ರೂಪಿಸುತ್ತಿವೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳೆರಡೂ ಒಂದೇ ಸಮುದಾಯಕ್ಕೆ ಟಿಕೆಟ್‌ ನೀಡಿಕೆಗೆ ಮಣೆ ಹಾಕಿದ್ದನ್ನು ಅವಲೋಕಿಸಿದರೆ ಕ್ಷೇತ್ರದಲ್ಲಿ ಜಾತಿ ಎಷ್ಟು ಪರಿಣಾಮ ಬೀರಿದೆ ಎನ್ನುವುದನ್ನು ನಿರೂಪಿಸುತ್ತದೆ. ಅಲ್ಲದೇ ಚಿಂಚೋಳಿ ಮುಖ್ಯಮಂತ್ರಿ ನೀಡಿದ ಕ್ಷೇತ್ರ.

ಕ್ಷೇತ್ರದಲ್ಲಿ 1.90 ಲಕ್ಷ ಮತದಾರರಿದ್ದು, ಇದರಲ್ಲಿ 37 ಸಾವಿರ ಲಂಬಾಣಿ, 35 ಸಾವಿರ ಪರಿಶಿಷ್ಟ ಜಾತಿ ಮತದಾರರಿದ್ದಾರೆ. ಉಳಿದಂತೆ ಲಿಂಗಾಯತರು, ಕಬ್ಬಲಿಗರು ತಲಾ 36 ಸಾವಿರ ಇದ್ದಾರೆ. ಕುರುಬರು 14 ಸಾವಿರ, ಮುಸ್ಲಿಂ 15 ಸಾವಿರ ಜತೆಗೆ ಮರಾಠರು, ರೆಡ್ಡಿ ಮತ್ತು ಪರಿಶಿಷ್ಟರು ತಲಾ ಐದು ಸಾವಿರ ಇದ್ದಾರೆಂದು ಅಂದಾಜಿಸಲಾಗಿದೆ.

ಲಂಬಾಣಿ, ಲಿಂಗಾಯತ ಹಾಗೂ ಕಬ್ಬಲಿಗ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಂಬಾಣಿ ಸಮುದಾಯದ ಮತ ಜಾಸ್ತಿ ಇರುವ ಪರಿಣಾಮವೇ ಕಾಂಗ್ರೆಸ್‌ ಲಂಬಾಣಿ ಸಮುದಾಯದ ಮುಖಂಡರನ್ನು ಪಕ್ಷದತ್ತ ಸೆಳೆದುಕೊಂಡು ಮಣೆ ಹಾಕಿದ್ದರೆ, ಬಿಜೆಪಿಯೂ ತಂತ್ರಗಾರಿಕೆ ರೂಪಿಸಿ ದೃಢ ಹೆಜ್ಜೆ ಇಡಲಾರಂಭಿಸಿದೆ.

Advertisement

ರವಿಕುಮಾರ್‌-ಸೋಮಣ್ಣ ಉಸ್ತುವಾರಿ: ಬಿಜೆಪಿ ಅಭ್ಯರ್ಥಿ ಲಂಬಾಣಿ ಸಮಾಜದವರಾಗಿದ್ದರಿಂದ ಇನ್ನುಳಿದಂತೆ ಹೆಚ್ಚಿನ ಮತದಾರರಿರುವ ಲಿಂಗಾಯತ ಹಾಗೂ ಕಬ್ಬಲಿಗ ಸಮಾಜದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಉಸ್ತುವಾರಿಗಳನ್ನು ನಿಯೋಜಿಸುವಲ್ಲೂ ಜಾತಿಯ ಜಾಣ್ಮೆ ಮೆರೆದಿದೆ.

ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದ ಕೋಲಿ ಸಮಾಜದ ಎನ್‌. ರವಿಕುಮಾರ್‌ ಹಾಗೂ ವೀರಶೈವ-ಲಿಂಗಾಯತ ಸಮುದಾಯದ ಮುಖಂಡ, ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಈ ಮೂಲಕ ಲಿಂಗಾಯತ ಮತ್ತು ಕಬ್ಬಲಿಗ ಸಮುದಾಯದ ಮತಗಳನ್ನು ಹಿಡಿದಿಡುವ ತಂತ್ರಗಾರಿಕೆ ರೂಪಿಸಿದೆ.

ವಲ್ಯಾಪುರೆ ಬೆಂಬಲಿಗರ ಪ್ರತಿಭಟನೆ: ಮಾಜಿ ಸಚಿವ ಸುನೀಲ ವಲ್ಯಾಪುರೆ ಅವರಿಗೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್‌ ಕೈ ತಪ್ಪಿದ್ದಕ್ಕೆ ಜಿಲ್ಲಾ ಭೋವಿ (ವಡ್ಡರ್‌) ಸಮಾಜದ ವತಿಯಿಂದ ಶುಕ್ರವಾರ ಸಂಜೆ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ವಲ್ಯಾಪುರೆ ಎರಡು ಸಲ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಲ್ಲದೇ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎರಡೂವರೆ ದಶಕಗಳಿಂದ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಈಗ ಅವರಿಗೆ ಟಿಕೆಟ್‌ ನೀಡದಿರುವುದು ಭೋವಿ ಸಮಾಜಕ್ಕೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next