Advertisement

ಲಾಕ್‌ಡೌನ್‌ನಲ್ಲೇ 37 ಬಾಲ್ಯವಿವಾಹಕ್ಕೆ ತಯಾರಿ ! ಸಂಬಂಧಿಕರಲ್ಲಿಯೇ ಹೆಚ್ಚು ನಡೆಯುತ್ತಿವೆ

02:56 PM Sep 23, 2020 | sudhir |

ಬಾಗಲಕೋಟೆ: ಜಿಲ್ಲೆಯಲ್ಲಿ ಬಾಲ್ಯವಿವಾಹ ನಿತ್ಯವೂ ನಡೆಯುತ್ತಿವೆ. ಈ ವಿವಾಹಗಳು ಸಂಬಂಧಿಕರಲ್ಲೇ ಹೆಚ್ಚು ನಡೆಯುವುದು ಇನ್ನೊಂದು ಪರಂಪರೆಯೂ ಆಗಿದೆ. ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಸಫಲವಾಗಿಲ್ಲ. ಹೆಣ್ಣು ದೊಡ್ಡವಳಾದರೆ (ಋತುಮತಿ) ಸಾಕು, ಮದುವೆಗೆ ತಯಾರಿ ಮಾಡಲಾಗುತ್ತದೆ. ಕಳೆದ ಏಪ್ರಿಲ್‌ನಿಂದ ಇಂದಿನವರೆಗೆ ಅಧಿಕೃತವಾಗಿ 37 ಮದುವೆಗೆ ತಯಾರಿ ಮಾಡಲಾಗಿತ್ತು. ಈ ಕುರಿತು ಮಕ್ಕಳ ಸಹಾಯವಾಣಿ (1098)ಗೆ ಕರೆ ಕೂಡ ಬಂದಿದ್ದವು. ಅಧಿಕಾರಿಗಳು ಈ ಮದುವೆಗಳನ್ನು ತಡೆದಿದ್ದಾಗಿ ಹೇಳುತ್ತಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಮುಧೋಳ ತಾಲೂಕಿನ ಒಂದು ಹಳ್ಳಿಯಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಂಡಾಗ ಆಗಿನ ಸಿಇಒ ಮಾನಕರ ಸ್ವತಃ ಭೇಟಿ ನೀಡಿ ಮದುವೆ ತಡೆದಿದ್ದರು.

Advertisement

ಬೆಳೆದ ಮಗಳು ಮನೆಯಲ್ಲಿದ್ರೆ: ಈಚಿನ ದಿನಗಳಲ್ಲಿ ಲವ್‌ ಎಂಬುದು ಫ್ಯಾಶನ್‌ ಆಗಿದೆ. ಅದರಲ್ಲೂ ಎಸ್ಸೆಸ್ಸೆಲ್ಸಿ ಓದುವ ಮಕ್ಕಳೇ ಹೆಚ್ಚು ಇಂತಹ ಸೆಳೆತಕ್ಕೆ ಒಳಗಾಗುತ್ತಾರೆ. ಗಂಡು ಮಕ್ಕಳಾದರೆ ಮುಚ್ಚಿ ಹೋಗುತ್ತದೆ. ಬೆಳೆದ ಹೆಣ್ಣು ಮಗಳು ಮನೆಯಲ್ಲಿದ್ದರೆ ಹೇಗೆ ಎಂಬುದು ದೊಡ್ಡವರ ಚಿಂತೆ. ಹೀಗಾಗಿ ಸಂಬಂಧಿಕರಲ್ಲಿ ಉತ್ತಮ ಗಂಡು ಇದ್ದರೆ ಅಥವಾ ಹೊರಗಿನಿಂದ ಅನುಕೂಲಸ್ಥ ಕುಟುಂಬದ ಬೇಡಿಕೆ ಬಂದರೆ ಅಪ್ರಾಪ್ತರಿದ್ದರೂ ಮದುವೆ ಮಾಡಿ ಮುಗಿಸುತ್ತಾರೆ. ಇದಕ್ಕೆ ಗಂಡು-ಹೆಣ್ಣಿನ ಮನೆಯವರು ಒಪ್ಪಿಕೊಂಡೇ ಮಾಡುತ್ತಾರೆ. ಮದುವೆ ಎಂಬುದು ಕಲ್ಯಾಣ ಕಾರ್ಯ. ಇದಕ್ಕೆ ಅಡ್ಡಿಯಾದರೆ ದೇವರು ಮೆಚ್ಚುತ್ತಾನಾ ಎಂಬ ನಂಬಿಕೆಯಲ್ಲಿ ಯಾರೂ ವಿರೋಧ ಕೂಡ ಮಾಡಲ್ಲ. ಹೀಗಾಗಿ ಬಾಲ್ಯ ವಿವಾಹ
ನಡೆಯುತ್ತಲೇ ಇವೆ.

ಸರಾಸರಿ 10 ಮದುವೆ: ಜಿಲ್ಲೆಯಲ್ಲಿ 15 ನಗರ ಸ್ಥಳೀಯ ಸಂಸ್ಥೆಗಳು, 198 ಗ್ರಾಪಂಗಳು, 602 ಹಳ್ಳಿಗಳು, 1007 ಜನ ಜನವಸತಿಗಳಿವೆ. ಅವುಗಳಲ್ಲಿ ಮದುವೆ ಸೀಜನ್‌ ವೇಳೆ ಸರಿ ಸುಮಾರು 10ಕ್ಕೂ ಹೆಚ್ಚು ಬಾಲ್ಯ ವಿವಾಹ ನಡೆಯುತ್ತವೆ ಎಂಬುದು ಕೆಲವರ ಅಭಿಪ್ರಾಯ. ಹೀಗೆ ಬಾಲ್ಯ ವಿವಾಹ ತಡೆಯಲು ಅಲ್ಲೊಂದು, ಇಲ್ಲೊಂದು ಕರೆ ಬರುತ್ತವೆ. ಅಂತಹ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿ, ಮದುವೆ ನಿಲ್ಲಿಸಿದರೂ ಪೊಲೀಸರು-ಹಿರಿಯರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿ, ಪ್ರಕರಣ ದಾಖಲಾಗುವುದಿಲ್ಲ. ಇದು ಬಾಲ್ಯ ವಿವಾಹ ನಿರಂತರ ಮುಂದುವರಿಯಲು ಪ್ರಮುಖ ಕಾರಣ ಎಂಬುದು ತಜ್ಞರ ಅಭಿಪ್ರಾಯ.

ಮಕ್ಕಳ ಮಾರಾಟ ಜಾಲ: ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲವೂ ಇದೆ ಎಂಬುದಕ್ಕೆ ಕಳೆದ ವರ್ಷದ ಒಂದು ಘಟನೆ ಪುಷ್ಟಿ ಕೊಡುತ್ತದೆ. ಈ ಕುರಿತು ಜಮಖಂಡಿಯ ಮಹಿಳೆಯೊಬ್ಬರ ಮೇಲೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರೇ ದೂರು ನೀಡಿದ್ದರು. ಆ ಮಹಿಳೆ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ ಗ್ರಾಮೀಣ ಭಾಗದ ಪಾಲಕರಿಗೆ ಆಸೆ ತೋರಿಸಿ, ಮುಂಬೈ, ಪುಣೆಯಲ್ಲಿ ಕೆಲಸ ಕೊಡಿಸುವ ಆಮಿಷದೊಂದಿಗೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಬೇರೆಯದ್ದೇ ಜಾಲಕ್ಕೆ ಸಿಲುಕಿಸಲಾಗುತ್ತಿದೆ ಎಂಬ ಆರೋಪವಿದೆ. ಆ ಜಾಲದಲ್ಲಿ ಸಿಲುಕಿದ ಹೆಣ್ಣು ಮಕ್ಕಳು ಮರಳಿ ಊರಿಗೆ ಬರದೇ, ಅಲ್ಲಿಯೇ ನರಕಯಾತನೆ ಅನುಭವಿಸುತ್ತಿರುವ ಘಟನೆ ನಡೆದಿವೆ ಎನ್ನಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಸದೆ ನಡೆಯಿತು ಮದುವೆ
ಬಾಗಲಕೋಟೆ: ಅದು ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ ದೂರದ ಚಿಕ್ಕ ಹಳ್ಳಿ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಆ ಹಳ್ಳಿಯ ಮುಗ್ಧ ಬಾಲಕಿ, ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಕೂಡ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದಕ್ಕೆ ಹೋಗುತ್ತಿದ್ದವು. ಆಕೆ ನಿತ್ಯ ಅಭ್ಯಾಸ ಮಾಡುತ್ತಿದ್ದಳು. ಆದರೆ ಮನೆಯಲ್ಲಿ ಮದುವೆ ನಿಗದಿ ಮಾಡಿದರು. ಆ ಬಾಲೆ ಬಿಕ್ಕಿ ಬಿಕ್ಕಿ ಅತ್ತರೂ ಕೇಳಲಿಲ್ಲ. ಹೆಣ್ಣು ಮಕ್ಕಳು ಮನೆಯಲ್ಲಿ ಬಹಳ ದಿನ ಇರಬಾರದು. ದೊಡ್ಡವಳಾದ ಬಳಿಕ ಮದುವೆ ಮಾಡಿ ಕೊಟ್ರೆ ಒಳ್ಳೆಯದೆಂಬ ಭಾವನೆ ಮನೆಯವರಿಗೆ.

Advertisement

ಜೂನ್‌ 24ರಂದು ಮಧ್ಯರಾತ್ರಿ ಮದುವೆ ನಿಗದಿಯೂ ಆಯಿತು. ಆದರೆ ಮಾನವೀಯತೆ ತೋರಿದ ಗ್ರಾಮದ ಕೆಲವರು ಇಲಾಖೆಗೆ ಮಾಹಿತಿ ನೀಡಿದರು. ಅಂದು ರಾತ್ರಿ ನಡೆಯಬೇಕಿದ್ದ ಮದುವೆ ಮನೆಗೆ ಅಧಿಕಾರಿಗಳು ಭೇಟಿ ನೀಡಿದರು. ಮದುವೆ ರದ್ದಾಯಿತು. ಆ ಬಾಲೆಯ ಮುಖದಲ್ಲಿ ಖುಷಿ ಮನೆ ಮಾಡಿತ್ತು. ಮುಚ್ಚಳಿಕೆ ಪತ್ರ ಬರೆದುಕೊಂಡು ಅಧಿಕಾರಿಗಳು ಮರಳಿದರು. ಆದರೆ, ಮುಂದೆ 2ನೇ ದಿನಕ್ಕೆ ಆ ಮದುವೆ ನಡೆದೇ ಹೋಯಿತು. ಇತ್ತ ಅಧಿಕಾರಿಗಳು ಅದರ ಫಾಲೋಅಪ್‌ ಕೂಡ ಮಾಡಲಿಲ್ಲ. ಆ ಬಾಲಕಿ ಈಗ ಗೃಹಿಣಿ. ತುಂಬು ಮನೆಯ ಚಿಕ್ಕ ಸೊಸೆ.

ಹೌದು. ಬಾಗಲಕೋಟೆ ತಾಲೂಕಿನ ಸಂಗಮ ಕ್ರಾಸ್‌ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ಸತ್ಯ ಘಟನೆ ಇದು. ಅದೇ ಹಳ್ಳಿಗೆ ಸಮೀಪದ ಮತ್ತೂಂದು ಹಳ್ಳಿಯ ಸಂಬಂಧಿಕರ ಹುಡುಗನಿಗೆ ಮದುವೆ ಮಾಡಿಕೊಡಲಾಗಿದೆ. ಆ ಬಾಲಕಿಗೆ 18 ತುಂಬದಿದ್ದರೂ ಗಂಡನ ಮನೆಯ ಚಿಕ್ಕ ಸೊಸೆಯಾಗಿ ಜೀವನ ಆರಂಭಿಸಿದ್ದಾಳೆ. ಒಂದು ವೇಳೆ ಬಾಲ್ಯ ವಿವಾಹ ನಡೆಯದೇ ಇದ್ದಿದ್ದರೆ ಆಕೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಭವಿಷ್ಯ ರೂಪಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಳು.ಬಾಲ್ಯ ವಿವಾಹ ಪಿಡುಗಿಗೆ ಶಿಕ್ಷಣದ ಭವಿಷ್ಯ ಮಂಕಾಗಿ ಇದೀಗ ಕುಟುಂಬದ ಭವಿಷ್ಯದಲ್ಲಿ ಒಬ್ಬಳಾಗಿದ್ದಾಳೆ.

ಬಾಲ್ಯ ವಿವಾಹ, ಸಮಾಜಕ್ಕೆ ಅಂಟಿದ ದೊಡ್ಡ ಪಿಡುಗು. ಬಾಲ್ಯ ವಿವಾಹ ನಡೆದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಯಾರೂ ಅದನ್ನು ತಡೆಯಲ್ಲ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳೂ ದಾಖಲಾಗಲ್ಲ. ಎಲ್ಲವೂ ದೊಡ್ಡವರೆನಿಸಿಕೊಂಡ ಪ್ರಭಾವಿಗಳ ಮಧ್ಯಸ್ಥಿಕೆಯಲ್ಲಿ ರಾಜಿಯಾಗುತ್ತವೆ. ಇದು ಬಾಲ್ಯ ವಿವಾಹ ನಡೆಯಲು ಕಾರಣವಾಗುತ್ತಿದೆ. ಅಧಿಕಾರಿಗಳಿಗೆ ಎಷ್ಟೇ ನಿಖರ ಮಾಹಿತಿ ಕೊಟ್ಟರೂ ಗಂಭೀರ ಕಾರ್ಯ ಮಾಡುತ್ತಿಲ್ಲ.
– ಡಾ| ತೇಜಶ್ವಿ‌ನಿ ಹಿರೇಮಠ, ಸದಸ್ಯರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ.

– ಶ್ರೀ ಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next