Advertisement

ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿ

11:31 PM Feb 12, 2020 | Sriram |

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮಘಟ್ಟಗಳ ಬಾಬಾಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಮುಳ್ಳಯ್ಯನಗಿರಿ ಶಿಖರ ಕರ್ನಾಟಕದ ಅತಿದೊಡ್ಡ ಶಿಖರ. ಸಮುದ್ರಮಟ್ಟದಿಂದ 1930 ಮೀ. ಎತ್ತರದಲ್ಲಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಗಳ ಸಾಲುಗಳನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬ. ಹಸಿರಿನ ನಡುವೆ ಮೈ ಮರೆತಷ್ಟು ಹೊಸದಾಗಿ ತೆರೆದುಕೊಳ್ಳುವ ಖುಷಿ, ಆ ಖುಷಿಗೆ ಕುಣಿದ ರೀತಿ… ಎಲ್ಲವೂ ಮನಪಟಲದಲ್ಲಿ ಶಾಶ್ವತ ಸ್ಥಾನ ಪಡೆದಿವೆ.

Advertisement

ಮನಸ್ಸು ಹಗುರಾಗಿಸಬೇಕು.. ದಿನನಿತ್ಯದ ಜಂಜಾಟಗಳಿಂದ ಹೊರಬಂದು ಒಂದಷ್ಟು ಹೊತ್ತು ಎಲ್ಲವನ್ನು ಮರೆತು ಬಿಡಬೇಕು ಎಂದು ಮನಸ್ಸು ಸದಾ ಬಯಸುತ್ತಿರುತ್ತದೆ. ಹೀಗಾದಾಗೆಲ್ಲ ನಮ್ಮ ನೆಚ್ಚಿನ ಆಯ್ಕೆ ಟ್ರಾವೆಲ್‌.

ಮನಸ್ಸು ನಿರ್ಮಲವಾಗಿಸಿ, ನೆಮ್ಮದಿ ಕರುಣಿಸುವ ಏಕೈಕ ಮಾರ್ಗವೇ ಸಂಚಾರ. ಅದಕ್ಕಾಗಿಯೇ ಸ್ನೇಹಿತರ ಬಳಗದಲ್ಲಿ ಮಾತುಕತೆ ನಡೆಸಿ ಹಸಿರು, ಪರ್ವತಗಳ ಸಾಲಿನಲ್ಲಿ ನಡೆಯುವುದೆಂದು ತೀರ್ಮಾನಿಸಿದೆವು. ಇರುವ ಒಂದೆರಡು ದಿನಗಳ ರಜೆಯಲ್ಲಿ ರಾಜ್ಯದೊಳಗಿನ ಚಾರಣ ಪ್ರದೇಶಗಳನ್ನೇ ಆಯ್ದುಕೊಳ್ಳಬೇಕಾದ್ದರಿಂದ ಯೋಚಿಸಿ ಯೋಜಿಸಿದಾಗ ಹೊಳೆದದ್ದು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮಘಟ್ಟಗಳ ಬಾಬಾಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಮುಳ್ಳಯ್ಯನಗಿರಿ ಶಿಖರ ಕರ್ನಾಟಕದ ಅತಿದೊಡ್ಡ ಶಿಖರ. ಸಮುದ್ರಮಟ್ಟದಿಂದ 1930 ಮೀ. ಎತ್ತರದಲ್ಲಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಗಳ ಸಾಲುಗಳನ್ನು ವೀಕ್ಷಿಸುವುದೇ ಕಣ್ಣಿಗೆ ಹಬ್ಬ. ಅದಕ್ಕಾಗಿಯೇ ಏಳು ಮಂದಿ ಸ್ನೇಹಿತರು ಜತೆಗೂಡಿ ಕರ್ನಾಟಕದ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿ ಬೆಟ್ಟ ಹತ್ತಿದೆವು. ಭೂಲೋಕದ ಸ್ವರ್ಗ ಈ ಮುಳ್ಳಯ್ಯನಗಿರಿ ಬೆಟ್ಟ ಎಂದರೂ ತಪ್ಪಾಗದು. ಬೆಟ್ಟ, ಗುಡ್ಡ, ಕಣ್ಣೇ ಕಾಣದಷ್ಟು ಆಳದ ಗುಂಡಿಗಳು, ಕಡಿದಾದ ರಸ್ತೆಯಲ್ಲಿ ಮೇಲೆ ಬೆಟ್ಟ, ಕೆಳಗೆ ಪಾತಾಳದಷ್ಟು ಆಳ ಇದರ ನಡುವಿನ ಸಂಚಾರ, ಗಿರಿಯ ತುದಿ ಕಾಣದಷ್ಟು ಮಂಜಿನ ನಲಿವು, ಮೈ ಜುಮ್ಮೆನಿಸುವ ಚಳಿ, ಗಾಳಿ, ಕಣ್ಮನ ತಣಿಸುವ ಪ್ರವಾಸಿಗರ ನಗು..ಅಬ್ಟಾ ಚಾರಣದ ಅನುಭವವೇ ಕಲ್ಪನಾತೀತ. ಹಸಿರಿನ ನಡುವೆ ಮೈ ಮರೆತಷ್ಟು ಹೊಸದಾಗಿ ತೆರೆದುಕೊಳ್ಳುವ ಖುಷಿ, ಆ ಖುಷಿಗೆ ಕುಣಿದ ರೀತಿ..ಎಲ್ಲವೂ ಮನಃಪಟಲದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಕರ್ನಾಟಕದ ಅತಿ ಎತ್ತರದ ಚಾರಣ ತಾಣವಾದರೂ, ಇಲ್ಲಿ ನಡಿಗೆಗೆ ಅವಕಾಶ ಕಡಿಮೆ. ಬೆಟ್ಟದ ಬುಡದವರೆಗೂ ಕಾರು, ಬೈಕ್‌ ತೆರಳುವುದರಿಂದ ಆಯಾಸವೇನೂ ಆಗದು. ರಸ್ತೆ ಕಿರಿದಾಗಿರುವುದರಿಂದ ದೊಡ್ಡ ವಾಹನಗಳನ್ನು ಕೊಂಡೊಯ್ಯದಿರುವುದೇ ಉತ್ತಮ. ಬೆಟ್ಟದ ತಳಭಾಗದಲ್ಲಿ ವಾಹನ ಪಾರ್ಕಿಂಗ್‌ ಜಾಗವಿದೆ. ಅನಂತರ ಸುಮಾರು 20 ನಿಮಿಷ ಕಾಲ ಮೆಟ್ಟಿಲು ಹತ್ತಬೇಕಾಗುತ್ತದೆ. ಮೆಟ್ಟಿಲು ಹತ್ತಿ ಬೆಟ್ಟದ ಮೇಲ್ಭಾಗದಲ್ಲಿ ನಿಂತರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಇಣುಕಿದಷ್ಟು ಭಯ ಹುಟ್ಟಿಸುವ ಪ್ರಪಾತ, ಕಣ್ಣು ಹಾಯಿಸಿದಷ್ಟು ಸುತ್ತಲೂ ಮಂಜಿನ ನಡುವೆ ಕದ್ದು ನೋಡುವ ಹಸಿರಿನ ನರ್ತನ ಅದ್ಭುತ ಅನುಭವ. ಬೆಟ್ಟದ ತುದಿಯಲ್ಲಿ ಮುಳ್ಳಪ್ಪನ ಸಣ್ಣದಾದ ದೇವಸ್ಥಾನವಿದೆ. ಮುಳ್ಳಪ್ಪನ ಸನ್ನಿಧಿಗೆ ಭಕ್ತಿಪ್ರಧಾನವಾದ ಸುತ್ತು ಹಾಕಿ ಕೆಳಗಿಳಿದರೆ ಮನಸ್ಸಿಗೆ ಮುದ. ಒಟ್ಟಿನಲ್ಲಿ ಜಂಜಾಟಗಳನ್ನು ಮರೆಸಿ, ಜೀವನಕ್ಕೆ ಹೊಸ ಅನುಭವ ಕರುಣಿಸುವ ಸ್ಥಳ ಇದಾಗಿದೆ.

Advertisement

ಸಿದ್ಧತೆ ಹೇಗಿರಬೇಕು?
ಇತರ ಚಾರಣ ಸ್ಥಳಗಳಿಗೆ ತೆರಳಿದಷ್ಟು ಅಗತ್ಯದ ಸಿದ್ಧತೆಗಳು ಬೇಕಿಲ್ಲದಿದ್ದರೂ, ಕೈಯಲ್ಲೊಂದು ನೀರಿನ ಬಾಟಲ್‌, ತಿನ್ನಲು ಒಂದಿಷ್ಟು ಬೇಕರಿ ತಿಂಡಿಗಳನ್ನು ಕೊಂಡೊಯ್ದರೆ ಉತ್ತಮ. ತೀರಾ ಚಳಿ ಇರುವುದರಿಂದ ಜಾಕೆಟ್‌, ಕ್ಯಾಪ್‌, ಗ್ಲೌಸ್‌ಗಳು ಅಗತ್ಯ. ಬೆಳಗ್ಗೆ ಸುಮಾರು 7ರಿಂದ 8.30ರ ನಡುವೆ ಬೆಟ್ಟ ಹತ್ತಿದರೆ ಮಂಜಿನಿಂದ ಕೂಡಿದ ಸುಂದರ ವಾತಾವರಣವನ್ನು ಸವಿಯಲು ಸಾಧ್ಯವಾಗುತ್ತದೆ. ಬಳಿಕ ಮಂಜು ಮಸುಕಾಗಿ ಬಿಸಿಲು ಆವರಿಸುತ್ತದೆ.

ಫೋಟೋ ಕ್ಲಿಕ್ಕಿಸಲು
ಸುಂದರ ತಾಣ
ಮುಳ್ಳಯ್ಯನಗಿರಿಗೆ ತೆರಳುವಾಗ ಕೆಮರಾ ಕೈಯಲ್ಲಿದ್ದರೆ ಉತ್ತಮ. ಸುತ್ತಲೂ ದಟ್ಟ ಮಂಜು ಆವರಿಸಿರುವುದರಿಂದ ಮೊಬೈಲ್‌ನಲ್ಲಿ ಫೋಟೋ ಅಷ್ಟೇನು ಚೆನ್ನಾಗಿ ಬಾರದು. ಮುಳ್ಳಯನಗಿರಿಗೆ ತೆರಳಲು ಡಿಸೆಂಬರ್‌, ಜನವರಿ, ಫೆಬ್ರವರಿ ಮಧ್ಯಭಾಗದವರೆಗೆ ಅತ್ಯುತ್ತಮ ಸಮಯ. ಅನಂತರ ಬಿಸಿಲು ಹೆಚ್ಚಾದರೆ, ಮಂಜಿನ ವಾತಾವರಣ ಸಿಗುವ ಸಾಧ್ಯತೆ ಕಡಿಮೆ. ಬೆಟ್ಟಗುಡ್ಡದ ನಡುವೆಯೇ ಸಾಗಬೇಕಾಗಿರುವುದರಿಂದ ಮಳೆಗಾಲದಲ್ಲಿ ಹೋಗದಿರುವುದೇ ಉತ್ತಮ.

ರೂಟ್‌ ಮ್ಯಾಪ್‌
-ಮಂಗಳೂರಿನಿಂದ 172 ಕಿ.ಮೀ. ದೂರ. ಚಿಕ್ಕಮಗಳೂರಿಗೆ ಮಂಗಳೂರಿನಿಂದ ತೆರಳಲು ಎರಡು ಮಾರ್ಗಗಳಿವೆ. ಕಾರಿನಲ್ಲಿ ತೆರಳುವಾಗ ಚಾರ್ಮಾಡಿಘಾಟಿ ಮುಖಾಂತರ ಹೋದರೆ ಉತ್ತಮ. ಮಂಗಳೂರು-
ಉಜಿರೆ-ಚಾರ್ಮಾಡಿ ಘಾಟಿ-ಕೊಟ್ಟಿಗೆಹಾರ-ಚಿಕ್ಕ
ಮಗಳೂರು-ಮುಳ್ಳಯ್ಯನಗಿರಿಗೆ ತೆರಳಿದರೆ ಬೇಗ ತಲುಪುವುದರಿಂದ ಸಮಯ ಉಳಿತಾಯವಾಗುತ್ತದೆ.
-ಮಂಗಳೂರು -ಉಡುಪಿ- ಆಗುಂಬೆ ಘಾಟಿ-
ಶೃಂಗೇರಿ -ಬಾಳೆಹೊನ್ನೂರು- ಆಲ್ದೂರು-ಚಿಕ್ಕಮಗಳೂರು- ಮುಳ್ಳಯ್ಯನಗಿರಿ ಹೋಗುವುದಕ್ಕೆ ಸಾಧ್ಯವಾದರೂ ಇದು ಮಂಗಳೂರಿನಿಂದ ತೆರಳುವವರಿಗೆ ಹೆಚ್ಚು ದೂರದ ಹಾದಿ.
-ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ 18 ಕಿ.ಮೀ. ದೂರ. ಕಿರಿದಾದ ರಸ್ತೆಯಲ್ಲಿ ಪ್ರಕೃತಿ ಸೊಬಗನ್ನು ವೀಕ್ಷಿಸುತ್ತಾ ಸಾಗಬಹುದು.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next