Advertisement

ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಅತ್ಯಗತ್ಯ: ಪುಷ್ಪಾ

11:35 AM Jun 23, 2019 | Naveen |

ಚಿಕ್ಕಮಗಳೂರು: ಯೋಗಾಭ್ಯಾಸ, ಪ್ರಾಣಾಯಾಮಗಳಿಗೆ ಯಾವುದೇ ಜಾತಿ, ಮತ ಭೇದವಿಲ್ಲ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅತ್ಯಗತ್ಯ ಎಂದು ಎಸ್‌ಪಿವೈಎಸ್‌ಎಸ್‌ ಜಿಲ್ಲಾ ಸಂಚಾಲಕಿ ಪುಷ್ಪಾ ಮೋಹನ್‌ ಹೇಳಿದರು.

Advertisement

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಎಸ್‌ಪಿವೈಎಸ್‌ಎಸ್‌ ಯೋಗ ಸಂಸ್ಥೆ ನಗರ ಹೊರವಲಯದ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು.

ಯೋಗ ಮನುಷ್ಯನ ಆರೋಗ್ಯವಂತ ಜೀವನಕ್ಕೆ ಅತೀ ಹೆಚ್ಚು ಅನುಕೂಲಕರವಾಗಿದೆ.ನಿತ್ಯ ಜೀವನದ ಜಂಜಾಟದಲ್ಲಿ ಇಂದಿನ ಕಲಬೆರಕೆ ಆಹಾರ ಸೇವನೆಯಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಿದ್ದೇವೆ. ಯೋಗ ಶಿಬಿರಗಳಲ್ಲಿ ನೀರು-ಆಹಾರ ಸೇವಿಸುವ ವಿಧಾನ, ಮನಶಾಂತಿ, ಲವಲವಿಕೆಯ ಕಾರ್ಯಚಟುವಟಿಕೆಗೆ ಸಹಕಾರಿಯಾಗುವ ವಿವಿಧ ಆಸನಗಳನ್ನು ಕಲಿಯಬಹುದಾಗಿದೆ ಎಂದರು.

ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಯೋಗ ಕಲಿಸುವಂತಹ ಭಾಗ್ಯ ಇಂದು ನಮಗೆ ದೊರೆತಿರುವುದು ಸುಯೋಗ. ಸಮಾಜದಲ್ಲಿ ಎಲ್ಲರಂತೆ ವಿಕಲಚೇತನರು ಕೂಡ ಉತ್ತಮ ಜೀವನ ನಡೆಸಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಯೋಗ ದಿನಾಚರಣೆಯಲ್ಲಿ ಮಾತ್ರ ಯೋಗಭ್ಯಾಸ ಮಾಡಿದರೆ ಪ್ರಯೋಜನವಿಲ್ಲ. ಪ್ರತಿ ಮನೆಯಲ್ಲೂ ಪ್ರತಿದಿನ ಯೋಗಾಭ್ಯಾಸ ಮಾಡಬೇಕೆಂಬುದು ಎಸ್‌ಪಿವೈಎಸ್‌ಎಸ್‌ ಸಮಿತಿ ಧ್ಯೇಯೋದ್ದೇಶ. ಕಳೆದ 15 ವರ್ಷಗಳಿಂದ ಸಮಿತಿಯಿಂದ ಸಹಸ್ರಾರು ಉಚಿತ ಯೋಗ ಶಿಬಿರಗಳು ನಡೆದಿದ್ದು, ಹತ್ತಾರು ಸಾವಿರ ಜನರಿಗೆ ಯೋಗದ ಮಹತ್ವ ತಿಳಿಸಲಾಗಿದೆ. ನಿತ್ಯ ಯೋಗದ ಮೂಲಕ ಸಮಾಜದ ಪ್ರತಿಯೊಬ್ಬರೂ ಆರೋಗ್ಯವಂತ ಜೀವನ ನಡೆಸಬೇಕೆಂದರು.

Advertisement

ಎಂಇಎಸ್‌ ಪ್ರಾಯೋಗಿಕ ಪ್ರೌಢಶಾಲೆ: ನಗರ ಹೊರವಲಯದ ಎಂಇಎಸ್‌ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಚಾಲಕ ಗೌತಮ್‌ಪ್ರಭು ಯೋಗ ತರಬೇತಿ ನೀಡಿದರು.

ಆಜಾದ್‌ ಪಾರ್ಕ್‌ ಶಾಲೆ: ನಗರದ ಆಜಾದ್‌ ಪಾರ್ಕ್‌ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾಣಾಯಾಮ, ಸೂರ್ಯ ನಮಸ್ಕಾರ ಮತ್ತು ಯೋಗಾಸನಗಳನ್ನು ಮಾಡುವ ಮೂಲಕ ವಿಶ್ವಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.

ಇದೇ ವೇಳೆ ಯೋಗದಿನದ ಅಂಗವಾಗಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಆಯೋಜಿಸಿದ್ದ ಯೋಗ ಕಲಿಕಾ ಶಿಬಿರ ಮತ್ತು ಯೋಗ ಸಪ್ತಾಹದಲ್ಲಿ ಪಾಲ್ಗೊಂಡು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಭಾರತ ಸೇವಾದಳದ ತಾಲೂಕು ಸಂಘಟಕ ಎಸ್‌.ಇ.ಲೋಕೇಶ್ವರಾಚಾರ್‌ ಮಾತನಾಡಿ, ಒಂದು ವಾರದ ಕಾಲ ಶಿಬಿರದಲ್ಲಿ ಕಲಿತ ಯೋಗ ಮತ್ತು ಪ್ರಾಣಾಯಾಮವನ್ನು ವಿದ್ಯಾರ್ಥಿಗಳು ತಪ್ಪದೇ ಜೀವನದುದ್ದಕ್ಕೂ ಮಾಡಬೇಕು ಎಂದು ಸಲಹೆ ಮಾಡಿದರು.

ಮುಖ್ಯ ಶಿಕ್ಷಕಿ ಬಿ.ಆರ್‌.ಗೀತಾ, ಶಿಕ್ಷಕರಾದ ಸಾವಿತ್ರಿ, ನಾಗವೇಣಿ, ಜಯಂತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next