Advertisement

ಶಿಷ್ಟಾಚಾರ ಪಾಲನೆಯಲ್ಲಿ ನಿಯಮ ಪಾಲಿಸಿ

11:51 AM Aug 07, 2019 | Naveen |

ಚಿಕ್ಕಮಗಳೂರು: ಸರ್ಕಾರದ ಕಾರ್ಯಕ್ರಮ ಗಳಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗದಂತೆ ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್‌ ಸಾಬ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಷ್ಠಾಚಾರ ಪಾಲನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ವತಿಯಿಂದ ನಡೆಯುವ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಮಾರಂಭಗಳಿಗೆ ಹಾಗೂ ರಾಜ್ಯದ ಧನ ಸಹಾಯದಿಂದ ಸ್ಥಾಪಿಸಲ್ಪಟ್ಟ ರಾಜ್ಯ ಮಟ್ಟದ ಸಹಕಾರ ಸಂಘಗಳು ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಘ-ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಶಿಷ್ಠಾಚಾರ ಅನ್ವಯವಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶಿಷ್ಠಾಚಾರ ಸಮಿತಿ ಇದೆ. ಆಹ್ವಾನ ಪತ್ರಿಕೆಗಳನ್ನು ಮುದ್ರಿಸುವ ಮೊದಲು ಈ ಸಮಿತಿಯಿಂದ ಅನುಮತಿ ಪಡೆದು ಮುದ್ರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ನಡೆಯುವ ಸ್ಥಳದ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಬೇಕು. ಕೆಲವೊಂದು ಸಂದರ್ಭದಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಸ್ಥಳೀಯ ಕಾರ್ಯಕ್ರಮವನ್ನು ಸದರಿ ವಿಧಾನಸಭಾ ಕ್ಷೇತ್ರದ ಹೋಬಳಿ ಪ್ರದೇಶವಿರುವ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಆಯೋಜಿಸಿದಾಗ ತಾಲೂಕು ಕೇಂದ್ರ ಸ್ಥಾನ ಇನ್ನೊಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುತ್ತದೆ. ಅಂತಹ ಸಂದರ್ಭದಲ್ಲಿ ಕಾರ್ಯಕ್ರಮ ಯಾವ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಿರುತ್ತದೆಯೋ ಅದೇ ಶಾಸಕರು ಅಧ್ಯಕ್ಷತೆ ವಹಿಸಬೇಕಾಗುತ್ತದೆ. ಕಾರಣಾಂತರಗಳಿಂದ ವಿಧಾನಸಭಾ ಸದಸ್ಯರ ಸ್ಥಾನ ತೆರವಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಿದಾಗ ಜಿಲ್ಲಾ ಸಚಿವರು ಅಧ್ಯಕ್ಷತೆ ವಹಿಸುವುದು. ಸಂಬಂಧಪಟ್ಟ ಜಿಲ್ಲಾ ಸಚಿವರು ಉದ್ಘಾಟಿಸಿದಾಗ ಇಲಾಖಾ ಸಚಿವರು ಅಧ್ಯಕ್ಷತೆ ವಹಿಸುವುದು. ಜಿಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದಾಗ ಇಲಾಖಾ ಸಚಿವರು ಹಾಜರಾಗದೇ ಇರುವ ಸಂದರ್ಭದಲ್ಲಿ ಜಿಲ್ಲಾ ಸಚಿವರೇ ಅಧ್ಯಕ್ಷತೆ ವಹಿಸಬೇಕು ಎಂದು ಹೇಳಿದರು.

ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ತಾಲೂಕು ಮಟ್ಟದಲ್ಲಿ ವಿವಿಧ ಯೋಜನೆ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿಗಳಿಗೆ ಆ ವ್ಯಾಪ್ತಿಗೆ ಒಳಪಡುವ ವಿಧಾನ ಪರಿಷತ್‌ ಸದಸ್ಯರನ್ನು ಸಹ ಅಧ್ಯಕ್ಷರನ್ನಾಗಿ ಪರಿಗಣಿಸಬಹುದಾಗಿದೆ ಎಂದು ಜೂನ್‌-2012ರ ಆದೇಶದಲ್ಲಿ ತಿಳಿಸಲಾಗಿದೆ. ಜಿಪಂಗೆ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ತಾಪಂಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಲ್ಲಾ ಸದಸ್ಯರನ್ನು ಆಹ್ವಾನಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ಸದಸ್ಯರನ್ನು ಆಹ್ವಾನಿಸಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ಸದಸ್ಯರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.

Advertisement

ಸರ್ಕಾರದ ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲಿ ವಿಧಾನ ಪರಿಷತ್‌ ಮತ್ತು ವಿಧಾನಸಭೆ ಸದಸ್ಯರ ಹೆಸರನ್ನು ನಮೂದು ಮಾಡುವ ಸಂದರ್ಭದಲ್ಲಿ ಶಾಸಕರು(ವಿಧಾನ ಪರಿಷತ್‌), ಶಾಸಕರು (ವಿಧಾನಸಭೆ) ಎಂದು ಲೋಕಸಭೆ ಸದಸ್ಯರು ಮತ್ತು ರಾಜ್ಯಸಭೆ ಸದಸ್ಯರ ಹೆಸರನ್ನು ನಮೂದಿಸುವ ಸಂದರ್ಭದಲ್ಲಿ ಸಂಸದರು(ಲೋಕಸಭೆ), ಸಂಸದರು(ರಾಜ್ಯ ಸಭೆ)ಎಂದು ನಮೂದಿಸಬೇಕು. ಶಂಕುಸ್ಥಾಪನೆ, ಉದ್ಘಾಟನೆ ಇತ್ಯಾದಿಗಳಿಗೆ ಸಂಬಂಧಪಟ್ಟ ಶಿಲೆಗಳಲ್ಲಿ ಸಹ ಆಹ್ವಾನ ಪತ್ರಿಕೆಯಲ್ಲಿರುವ ಹೆಸರುಗಳನ್ನು ಅದೇ ಆದ್ಯತೆಯಲ್ಲಿ ನಮೂದಿಸಬೇಕೆಂದು ಹೇಳಿದರು.

ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡುವಾಗಲು ರಾಜ್ಯ ಆದ್ಯತೆ ಪಟ್ಟಿ ಪ್ರಕಾರವೇ ಗಣ್ಯರಿಗೆ ಸಲ್ಲಬೇಕಾದ ಸ್ಥಾನಮಾನಗಳನ್ನು ಆಯಾ ವರಿಷ್ಠರಿಗೆ ತಪ್ಪದೇ ಸಲ್ಲಿಸಬೇಕು. ಕಾರ್ಯಕ್ರಮಗಳಿಗೆ ತಡವಾಗಿ ಬರುವ ಸಂಸತ್‌ ಹಾಗೂ ರಾಜ್ಯ ವಿಧಾನ ಮಂಡಲದ ಸದಸ್ಯರಿಗೆ ಹಾಗೂ ಅನಾನುಕೂಲತೆಗಳನ್ನು ನಿವಾರಿಸುವ ಸಲುವಾಗಿ ಅವರಿಗಾಗಿ ಪ್ರತ್ಯೇಕವಾಗಿರಿಸಿದ ಆಸನಗಳನ್ನು ಸಮಾರಂಭ ಮುಗಿಯುವವರೆಗೂ ಕಾಯ್ದಿರಿಸತಕ್ಕದ್ದು. ಆ ಆಸನಗಳು ಖಾಲಿ ಇದ್ದಾಗಲು ಸಹ ಅವುಗಳನ್ನು ಉಪಯೋಗಿಸಕೊಳ್ಳತಕ್ಕದಲ್ಲ ಎಂದರು.

ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ, ಜಿಪಂ ಉಪ ಕಾರ್ಯದರ್ಶಿ ಎ.ವಿ.ರಾಜಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next