ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ 75 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕಡೂರು ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಪೈಕಿ ಕಡೂರು ತಾಲೂಕಿನ 38 ಹಾಗೂ ಚಿಕ್ಕಮಗಳೂರು ತಾಲೂಕಿನ 37 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಕಡೂರು ತಾಲೂಕಿನ ಮತಿಘಟ್ಟ ಗ್ರಾಮ ಪಂಚಾಯತ್ನ 1, ಹುಲಿಕೆರೆ ಪಂಚಾಯತ್ನ 3, ವಿ.ಯರದಕೆರೆ ಪಂಚಾಯತ್ನ 3, ಚೀಲನಹಳ್ಳಿ ಪಂಚಾಯತ್ನ 4, ಬಾಣೂರು ಪಂಚಾಯತ್ನ 2, ನಾಗೇನಹಳ್ಳಿ ಪಂಚಾಯತ್ನ 2, ದೇವನೂರು ಪಂಚಾಯತ್ನ 5, ಚಿಕ್ಕದೇವನೂರು ಪಂಚಾಯತ್ನ 2, ಸಿಂಗಟಗೆರೆಯ 3, ಆಣೇಗೆರೆಯ 1, ನಾಗರಾಳುವಿನ 2, ಕುಂಕನಾಡುವಿನ 1, ಎಸ್.ಬಿದರೆಯ 3, ನಿಡಘಟ್ಟದ 1, ಜೋಡಿಹೋಚಿಹಳ್ಳಿಯ 3, ಅಣ್ಣೇಗೆರೆಯ 1, ಜಿಗಣೇಹಳ್ಳಿ ಗ್ರಾಮ ಪಂಚಾಯತ್ನ 1 ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ ಜಿ.ಮಾದಾಪುರ ಹಾಗೂ ಹನುಮಂತಪುರ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮ ಪಂಚಾಯತ್ನ 9, ಲಕ್ಯಾ ಪಂಚಾಯತ್ನ 9, ಲಕ್ಕಮ್ಮನಹಳ್ಳಿ ಪಂಚಾಯತ್ನ 3, ಕರ್ತಿಕೆರೆ ಪಂಚಾಯತ್ನ 5, ತೇಗೂರು ಪಂಚಾಯತ್ನ 2, ಮಳಲೂರು ಪಂಚಾಯತ್ನ 1, ಬೀಕನಹಳ್ಳಿ ಪಂಚಾಯತ್ನ 1, ಈಶ್ವರಹಳ್ಳಿಯ 2, ಕಳಸಾಪುರದ 2, ಹರಿಹರದಹಳ್ಳಿಯ 2, ಬಿದರೆ ಗ್ರಾಮ ಪಂಚಾಯತ್ನ 1 ಗ್ರಾಮಕ್ಕೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಅದರಲ್ಲಿ ಈಶ್ವರಹಳ್ಳಿ ಹಾಗೂ ಮುಗುಳವಳ್ಳಿ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಯಿಂದ ನೀರು ಒದಗಿಸಲಾಗುತ್ತಿದೆ ಎಂದರು.
Related Articles
ಜಿಪಿಎಸ್ ಅಳವಡಿಸಿರುವ ವಾಹನಗಳಲ್ಲಿಯೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಿಗದಿತ ಸಮಯದೊಳಗೆ ನೀರು ಸರಬರಾಜು ಮಾಡಿದ ಬಾಬ್ತು ಬಿಲ್ಗಳನ್ನು ಪಾವತಿಸಲಾಗುತ್ತಿದೆ ಎಂದು ಹೇಳಿದರು.
ಟಾಸ್ಕ್ಪೋರ್ಸ್ನಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕಡೂರು ತಾಲೂಕಿನಲ್ಲಿ 1 ಕೋಟಿ ರೂ.ಗಳ ಅನುದಾನದಲ್ಲಿ 58 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2ನೇ ಹಂತದಲ್ಲಿ 50 ಲಕ್ಷ ರೂ.ಗಳ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿವೆ. ಅದೇ ರೀತಿ ಚಿಕ್ಕಮಗಳೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ 50 ಲಕ್ಷ ರೂ.ಗಳಲ್ಲಿ 36 ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತದಲ್ಲಿ 25 ಲಕ್ಷ ರೂ.ಗಳಲ್ಲಿ ಕಾಮಗಾರಿ ನಡೆಯುತ್ತಿವೆ ಎಂದರು.
ಮುಂದಿನ ದಿನಗಳಲ್ಲಿ ಕಡೂರು ತಾಲೂಕಿನ 60 ಮತ್ತು ತರೀಕೆರೆ ತಾಲೂಕಿನ 6 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ಪಿ.ಡಿ.ಒ.ಗಳು ಹಾಗೂ ಎಇಇಗಳಿಗೆ ಸೂಚನೆ ನೀಡಲಾಗಿದೆ. ತಾವೂ ಸಹ ವಾರದಲ್ಲಿ 3 ದಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ಹೇಳಿದರು.
ಕಡೂರು ತಾಲೂಕಿನಲ್ಲಿ ಹೊಸದಾಗಿ 58 ಬೋರ್ವೆಲ್ ಕೊರೆಸಲಾಗಿದೆ. ಈ ಪೈಕಿ 6 ಬೋರ್ವೆಲ್ನಲ್ಲಿ ನೀರು ಬಂದಿಲ್ಲ. ಚಿಕ್ಕಮಗಳೂರು ತಾಲೂಕಿನಲ್ಲಿ 36 ಬೋರ್ವೆಲ್ ಕೊರೆಸಲಾಗಿದ್ದು, 2ರಲ್ಲಿ ನೀರು ಬಂದಿಲ್ಲ. ನೀರು ಬಂದಿರುವ ಬೋರ್ವೆಲ್ಗಳಲ್ಲಿಯೂ ಕಡಿಮೆ ಪ್ರಮಾಣದಲ್ಲಿ ನೀರು ದೊರೆತಿದೆ. ಅದು ಕೇವಲ 15-20 ದಿನಗಳಿಗೆ ಮಾತ್ರ ಸಾಕಾಗುತ್ತಿದೆ ಎಂದು ವಿವರಿಸಿದರು.
ಕುಡಿಯುವ ನೀರಿನ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಆಗಬೇಕಿದ್ದರೂ ಆದ್ಯತೆಯ ಮೇರೆಗೆ ಶೀಘ್ರದಲ್ಲಿಯೇ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾವುದೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿದ್ದರೂ ಕಾನೂನು ರೀತ್ಯಾ ಅನುಮತಿ ಪಡೆದು ಕೂಡಲೆ ಸರಬರಾಜು ಮಾಡುವಂತೆಯೂ ಗ್ರಾಮ ಪಂಚಾಯತ್ಗಳಿಗೆ ಆದೇಶಿಸಲಾಗಿದೆ ಎಂದರು.