Advertisement

ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

03:31 PM Apr 13, 2019 | Naveen |

ಎನ್‌.ಆರ್‌. ಪುರ: ನರೇಂದ್ರಮೋದಿಯವರು ಪ್ರಧಾನಿಯಾದ ಮೇಲೆ ದೇಶದ ಭದ್ರತೆಗಾಗಿ ಸೈನ್ಯಕ್ಕೆ ಹೆಚ್ಚುವರಿಗಾಗಿ 1 ಲಕ್ಷ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು. ನಾಗರಮಕ್ಕಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ದೇಶದ ಗಡಿಗಳಲ್ಲಿ ಸರಿಯಾಗಿ ರಸ್ತೆಗಳಿರಲಿಲ್ಲ. ಅದನ್ನು ಅಭಿವೃದ್ಧಿ ಪಡಿಸಿದ್ದಾರೆ. ನಮ್ಮ ದೇಶದ ಸೈನಿಕರಿಗೆ ಸ್ವಾವಲಂಬನೆ, ಸ್ವಾಭಿಮಾನ ತುಂಬಿದ್ದಾರೆ. ಪುಲ್ವಾಮಾ ಘಟನೆಯ ನಂತರ ಒಂದು ಹನಿ ಕಣ್ಣೀರಿಗೆ ಒಂದು ಹನಿ ರಕ್ತ ಎಂದು ಮೋದಿ ಘೋಷಣೆ ಮಾಡಿದ್ದರು. ಅವರು ನುಡಿದಂತೆ 48 ಹುತಾತ್ಮ ಸೈನಿಕರ ಪ್ರತಿಕಾರವಾಗಿ 400 ಭಯೋತ್ಪಾಕರನ್ನು ಅವರು ತರಬೇತಿ ಪಡೆದ ಜಾಗದಲ್ಲೇ ನಮ್ಮ ಸೈನಿಕರು ಸೆದೆಬಡಿದಿದ್ದಾರೆ ಎಂದರು. ನಮ್ಮ ದೇಶದ ಸೈನಿಕ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ಮೋದಿ ಎಚ್ಚರಿಕೆಯ ನಂತರ ಕೇವಲ ಎರಡೇ ದಿನದಲ್ಲಿ ನಮ್ಮ ವೀರ ಯೋಧನನ್ನು ಭಾರತಕ್ಕೆ ವಾಪಸ್‌ ಕಳುಹಿಸಿದ್ದಾರೆ. ಅದು ನರೇಂದ್ರಮೋದಿಯವರ ತಾಕತ್ತು ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ಹಲವಾರು ಹಿಂದು ಪರ, ದೇಶ ಭಕ್ತ ಸಂಘಟನೆಗಳು ಒಟ್ಟಾಗಿ ನರೇಂದ್ರಮೋದಿಯವರನ್ನು ಬೆಂಬಲಿಸುತ್ತಿದೆ. ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ನಾನು ಕಳೆದ 5 ವರ್ಷದಿಂದ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ಸಿಆರ್‌ಎಫ್‌ನಲ್ಲಿ ಕಳೆದ 5 ವರ್ಷದಲ್ಲಿ ಗ್ರಾಮೀಣ ರಸ್ತೆ ಸೇರಿದಂತೆ ರಸ್ತೆ ಅಭಿವೃದ್ಧಿಗೆ 568 ಕೋಟಿ ರೂ. ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಶೃಂಗೇರಿ ಪವಿತ್ರ ಕ್ಷೇತ್ರವಾಗಿದ್ದು, ಮುಂದೆ ಪ್ರವಾಸೋದ್ಯಮವಾಗಿ ಬೆಳೆಯಲು
ರೈಲ್ವೆ ಯೋಜನೆಯನ್ನು ಕೇಂದ್ರ ರೇಲ್ವೆ ಸಚಿವರು ಪ್ರಸ್ತಾವನೆ ಮಾಡಿದ್ದಾರೆ.

ವಿದ್ಯುತ್‌ ಇಲ್ಲದ ಫಲಾನುಭವಿಗಳಿಗೆ ವಿದ್ಯುತ್‌ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರವು 10 ರಿಂದ 15 ವಿದ್ಯುತ್‌ ಕಂಬ ಹಾಕಿ ವಿದ್ಯುತ್‌ ನೀಡುವ ಯೋಜನೆ ಜಾರಿಗೆ ತಂದಿದೆ ಎಂದರು.

Advertisement

ಆಯುಷ್ಮಾನ್‌ ಆರೋಗ್ಯ ಯೋಜನೆಯಡಿ 1 ಮನೆಗೆ 5 ವರ್ಷಕ್ಕೆ 5 ಲಕ್ಷ ರೂ.ವರೆಗೆ ಸಹಾಯ ಪಡೆಯಬಹುದಾಗಿದೆ. ಹನಿ ನೀರಾವರಿಗೆ ಶೇ. 90ರಷ್ಟು ಸಹಾಯಧನ ನೀಡಿದ್ದೇವೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂ. ರೈತರ ಖಾತೆಗೆ ಹಾಕಲಾಗುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಂದ ಯೋಜನೆಗಳಾದ ಸಂಧ್ಯಾ ಸುರಕ್ಷಾ, ಸೊನ್ನೆ ಬಡ್ಡಿದರದಲ್ಲಿ ರೈತರಿಗೆ ಸಾಲ, ಮಕ್ಕಳಿಗೆ ಉಚಿತ ಸೈಕಲ್‌ ಯೋಜನೆಯಿಂದ ಜನರಿಗೆ ಅನುಕೂಲವಾಗಿತ್ತು. ಕುಮಾರಸ್ವಾಮಿ ಮುಖ್ಯಂತ್ರಿಯಾದ ಮೇಲೆ ರೈತರ ಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಶೃಂಗೇರಿ, ಧರ್ಮಸ್ಥಳದಲ್ಲಿ ಘೋಷಣೆ ಮಾಡಿದ್ದರು. ಈಗ ಎಷ್ಟು ಜನರಿಗೆ ಸಾಲ ಮನ್ನಾ ಆಗಿದೆ ಎಂದು ತಿಳಿಸಬೇಕು ಎಂದರು.

ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಮಾತನಾಡಿ, ಈ ಚುನಾವಣೆಯಲ್ಲಿ ದೇಶದಲ್ಲಿ 272 ಸ್ಥಾನಗಳನ್ನು ಬಿಜೆಪಿ ಗೆಲ್ಲಲೇ ಬೇಕಾಗಿದೆ. 1 ಸ್ಥಾನ ಕಡಿಮೆಯಾದರೂ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿದ್ದರೂ ವಿರೋಧ ಪಕ್ಷವಾಗಿ ಕೂರಬೇಕಾಗಿದೆ. ಅತಿ ಕಡಿಮೆ ಸ್ಥಾನ ಪಡೆದ ಜೆಡಿಎಸ್‌ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

ಶೋಭಾ ಕ್ಷೇತ್ರಕ್ಕೆ ಬರಲಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. 1947 ರಿಂದ 2014 ರವರೆಗೆ ಶ್ರೀಕಂಠಪ್ಪ ಅವರನ್ನು ಬಿಟ್ಟು ಮತ್ತೆ ಯಾವ ಲೋಕಸಭಾ ಸದಸ್ಯರು ಕ್ಷೇತ್ರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದರು ಎಂದು ಕಾಂಗ್ರೆಸ್‌ ಪಕ್ಷ ಉತ್ತರಿಸಬೇಕು ಎಂದು ಸವಾಲೆಸೆದರು. ತಾಪಂ ಅಧ್ಯಕ್ಷೆ ಜಯಶ್ರೀ ಮೋಹನ್‌ ಮಾತನಾಡಿದರು. ಮ್ಯಾಮ್ಕೋಸ್‌ ಉಪಾಧ್ಯಕ್ಷ ವೈ.ಎಸ್‌. ಸುಬ್ರಮಣ್ಯ ಉಪಸ್ಥಿತರಿದ್ದರು. ಸಭೆಗೂ ಮುನ್ನಾ ಶೋಭಾ ಅವರು ನಾಗರಮಕ್ಕಿ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಿಎಸ್‌ಎನ್‌ಎಲ್‌ ಟವರ್‌ನಿಂದ ಸಿಗ್ನಲ್‌ ಸರಿಯಾಗಿ ಸಿಗುತ್ತಿಲ್ಲ ಎಂದು ಕಮಲಾಪುರ ಗ್ರಾಮಸ್ಥರು ಹಾಗೂ ಇತರರು ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಅವರು ಇಡೀ ದೇಶದಾದ್ಯಂತ ಬಿಎಸ್ಸೆನ್ನೆಲ್‌ ಟವರ್‌ ಸಮಸ್ಯೆ ಇದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಎಸ್ಸೆನ್ನೆಲ್‌ ಪುನಶ್ಚೇತನಗೊಳಿಸಲು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಬಿಎಸ್ಸೆನ್ನೆಲ್‌ ಟವರ್‌ಗೆ ಡೀಸೆಲ್‌ ಹಣ ನೀಡಲು ಸಹ ತೊಂದರೆ ಎದುರಿಸುತ್ತಿದೆ. ಮುಂದೆ ನಾನು ಗೆದ್ದ ನಂತರ ಈ ಬಗ್ಗೆ ಗಮನ ನೀಡುತ್ತೇನೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next