Advertisement

ನಿರಾಶ್ರಿತರ ಕೇಂದ್ರಗಳಿಗೆ ನೆರವಿನ ಮಹಾಪೂರ

01:46 PM Aug 19, 2019 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಮನೆ ಕಳೆದುಕೊಂಡು ಜನರು ಅತಂತ್ರರಾಗಿ ನಿರಾಶ್ರಿತರ ಕೇಂದ್ರಗಳಲ್ಲಿ ನೆಲೆಸಿರುವವರಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ.

Advertisement

ನಿರಾಶ್ರಿತರಿಗೆ ದಾನಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ನೀಡುವ ಅಗತ್ಯ ವಸ್ತುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸ್ವೀಕೃತಿ ಕೇಂದ್ರ ತೆರೆಯಲಾಗಿದೆ. ಸ್ವೀಕೃತಿ ಕೇಂದ್ರ ಐವರು ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಕೇಂದ್ರವು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಳೆಯ ಆರ್ಭಟಕ್ಕೆ ಎಲ್ಲವನ್ನು ಕಳೆದುಕೊಂಡ ಜನರಿಗೆ ರಾಜ್ಯದ ಮೈಸೂರು, ಉಡುಪಿ, ಬೆಂಗಳೂರು ನಗರ ಹಾಗೂ ಜಿಲ್ಲೆಯ ನಾನಾ ಕಡೆಗಳಿಂದ ಸಹಾಯಹಸ್ತ ನೀಡಲಾಗುತ್ತಿದ್ದು, ನಿರಾಶ್ರಿತರಿಗೆ ತಲುಪಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ.

ಇದುವರೆಗೂ 15 ಟನ್‌ ಅಕ್ಕಿ ಸ್ವೀಕರಿಸಲಾಗಿದೆ. ಅದರಲ್ಲಿ 31.5 ಟನ್‌ ಅಕ್ಕಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸಲಾಗಿದೆ. ಉಳಿದ ಅಕ್ಕಿಯನ್ನು ಅಗತ್ಯ ಬಿದ್ದ ಕಡೆಗಳಿಗೆ ನೀಡಲಾಗುತ್ತಿದೆ. 150 ಬಾಕ್ಸ್‌ ಬಿಸ್ಕೆಟ್ಸ್‌, 12 ಪಿಂಡಿ ಬೆಡ್‌ಶೀಟ್, 560 ಲೀಟರ್‌ ಕುಡಿಯುವ ನೀರಿನ ಬಾಟಲ್, ಹಾಲಿನ ಪುಡಿ, ಸಕ್ಕರೆ, ಗೋದಿಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳು ಹರಿದು ಬರುತ್ತಿದ್ದು, ನಿರಾಶ್ರಿತರ ಕೇಂದ್ರಗಳಿಗೆ ನೀಡಲಾಗುತ್ತಿದೆ. ಇದುವರೆಗೂ ಸುಮಾರು 5 ಲಾರಿ ಲೋಡ್‌ಗಿಂತಲು ಹೆಚ್ಚು ಅಗತ್ಯ ವಸ್ತುಗಳನ್ನು ನಿರಾಶ್ರಿತರ ಕೇಂದ್ರಗಳಿಗೆ ನೀಡಲಾಗಿದೆ.

ಜಿಲ್ಲೆಯ ನೆರೆ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ನೀಡುವ ಪ್ರಕ್ರಿಯೆ ಜಿಲ್ಲೆಯ ಎಂ.ಎನ್‌.ಗಂಗೇಗೌಡ ಅವರು ಬಿಸ್ಕೇಟ್, ಮಂಡಕ್ಕಿ ಪೇಸ್ಟ್‌ ನೀಡುವ ಮೂಲಕ ಆರಂಭಗೊಂಡು ಇದುವರೆಗೂ ಅನೇಕ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ. ಅಜ್ಜಂಪುರದ ಜೂನಿಯರ್‌ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ವರ್ತಕರ ಸಂಘಗಳು, ಬೇಲೇನಹಳ್ಳಿ ಗ್ರಾಮಸ್ಥರು ಸೇರಿದಂತೆ ಅನೇಕರು ನೆರವು ನೀಡಿದ್ದಾರೆ.

Advertisement

ನೆರವು ಸ್ವೀಕೃತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಭಾಸ್ಕರ್‌ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದು, ಅವರೊಂದಿಗೆ ಸಂತೋಷ್‌, ದತ್ತಾತ್ರಿ, ಚೇತನ್‌, ಹಾಲೇಶ್‌ ಹಗಲು ರಾತ್ರಿ ದಾನಿಗಳು ನೀಡಿದ ನೆರವನ್ನು ಸ್ವೀಕರಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ದಾನಿ ನೀಡಿದ ನೆರವಿಗೆ ಸ್ವೀಕೃತಿ ಪತ್ರ ನೀಡಿ ಪಡೆದುಕೊಳ್ಳಲಾಗುತ್ತಿದೆ.

ಇದು ಜಿಲ್ಲಾಡಳಿತದಿಂದ ನಡೆಯುತ್ತಿದ್ದರೆ ಇನ್ನೂ ಅನೇಕರು ಗ್ರಾಮದ ಮುಖ್ಯಸ್ಥರು ಸಂಘ, ಸಂಸ್ಥೆಗಳು ದಾನಿಗಳು ನೇರವಾಗಿ ನೆರೆ ಪೀಡಿತ, ಗುಡ್ಡ ಕುಸಿತದಿಂದ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮಳೆಯಿಂದ ಎಲ್ಲವನ್ನು ಕಳೆದುಕೊಂಡ ಮಲೆನಾಡಿನ ಜನತೆಗೆ ಭರಪೂರ ನೆರವಿನ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನೋಡಲ್ ಅಧಿಕಾರಿ ಭಾಸ್ಕರ್‌, ಜಿಲ್ಲೆ ಹಾಗೂ ನೆರೆಯ ಜಿಲ್ಲೆಯಿಂದ ಅಪಾರ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ನೆರವು ಬರುತ್ತಿದೆ. ಅದನ್ನು ಸ್ವೀಕರಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳಿಸಿಕೊಡಲಾಗುತ್ತಿದೆ. ಆ.14ರ ಮಧ್ಯರಾತ್ರಿ ಉಡುಪಿಯಿಂದ ಒಂದು ಲಾರಿ ಅಗತ್ಯ ವಸ್ತುಗಳನ್ನು ಕಳಿಸಿಕೊಡಲಾಗಿತ್ತು. ಮಧ್ಯರಾತ್ರಿಯೇ ಅದನ್ನು ಸ್ವೀಕರಿಸಿದ್ದೇವೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next