Advertisement

ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್‌ ವಾರ್ಡ್‌ ತೆರೆಯಲು ಒತ್ತಾಯ

10:34 PM May 04, 2021 | Team Udayavani |

ಶೃಂಗೇರಿ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದ್ದು ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ ತೆರೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಿಭಾಗವಿಲ್ಲದೆ ರೋಗಿಗಳು ಜಿಲ್ಲಾಸ್ಪತ್ರೆ, ಬೆಂಗಳೂರು, ಮಂಗಳೂರು ಹಾಗೂ ಮಣಿಪಾಲ ಆಸ್ಪತ್ರೆಗೆ ಸೋಂಕಿತರನ್ನು ಸಾಗಿಸಬೇಕಾದ ಪರಿಸ್ಥಿತಿ ಇದೆ. ಕೊಪ್ಪದಲ್ಲಿ ವಾರ್ಡ್‌ ಇದ್ದರೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇಲ್ಲಿ ಕೇವಲ 50 ಹಾಸಿಗೆ ಮಾತ್ರ ಇರುವುದರಿಂದ ಬೇರೆ ಕಡೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ಡಾ| ಮಂಜುನಾಥ್‌ ಮತ್ತು ಡಾ| ದಯಾನಂದ ಇಬ್ಬರು ವೈದ್ಯಾಧಿಕಾರಿಗಳಿದ್ದರೂ ಕೊರೊನಾ ಸೋಂಕಿತ ರೋಗಿಗಳು ಸೇರಿದಂತೆ ಇತರೆ ರೋಗಿಗಳ ತಪಾಸಣೆಗೆ ಮುಂದಾಗಬೇಕಿದೆ. ಪ್ರತಿ ದಿನ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಲಭ್ಯವಿಲ್ಲವಾಗಿದೆ. ಸೋಂಕು ದೃಢಪಟ್ಟಿರುವ ರೋಗಿಗಳಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮ ಮನೆಯ ಕೊಠಡಿಯಲ್ಲಿ ಸೋಂಕಿತರು ಪ್ರತ್ಯೇಕವಾಗಿರದೆ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಬೆರೆಯುತ್ತಿರುವುದರಿಂದ ಮನೆ ಮಂದಿಗೆಲ್ಲಾ ಸೋಂಕು ಹರಡುತ್ತಿದೆ. ಸೋಂಕಿತರ ಆರೋಗ್ಯದಲ್ಲಿ ಏರುಪೇರಾದರೆ ಆಂಬ್ಯುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಅಲ್ಲಿಯೂ ಸಮರ್ಪಕವಾಗಿ ಚಿಕಿತ್ಸೆ ಸಿಗದೆ ಇದ್ದಲ್ಲಿ ಬೆಂಗಳೂರು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದೆ.

ಬಡವರು ಅಂತಹ ಆಸ್ಪತ್ರೆಗೆ ಹೋಗುವುದು ಅಸಾಧ್ಯವೇ ಸರಿ. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದೇ ಇರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗಲಿದೆ. ಗುರುವಾರ 40, ಶುಕ್ರವಾರ 25 ಹಾಗೂ ಶನಿವಾರ 93, ಭಾನುವಾರ 6 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ ಕೆಲವರು ಹೋಂ ಐಸೋಲೇಶನ್‌ನಲ್ಲಿ, ಇನ್ನು ಕೆಲವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next