Advertisement

ಕಡೂರಲ್ಲಿ ಏರುತ್ತಲೇ ಇದೆ ಕೊರೊನಾ ಸೋಂಕು

09:18 PM May 18, 2021 | Team Udayavani |

„ಎ.ಜೆ. ಪ್ರಕಾಶಮೂರ್ತಿ ಕಡೂರು

Advertisement

ಕಡೂರು: ಮಹಾನಗರಗಳಿಂದ ಮರಳಿ ಬಂದವರ ಸಂಖ್ಯೆ ಹೆಚ್ಚಾಗಿದ್ದರಿಂದ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೊಟ್ಟೆಪಾಡಿಗಾಗಿ, ಜೀವನ ನಿರ್ವಹಣೆಗಾಗಿ ಅನಿವಾರ್ಯ ಪರಿಸ್ಥಿತಿಯಿಂದ ಬೆಂಗಳೂರು, ಮೈಸೂರು, ಮಂಗಳೂರು, ಕೊಡಗು ಸೇರಿದಂತೆ ಹೊರ ರಾಜ್ಯಗಳಲ್ಲೂ ವಿವಿಧ ಕೆಲಸಗಳಲ್ಲಿ ತೊಡಗಿದ್ದ ತಾಲೂಕಿನ ಬಹುಪಾಲು ಜನರು ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅವರವರ ಸ್ವಗ್ರಾಮಗಳಿಗೆ ವಾಪಸ್‌ ಬಂದಿದ್ದಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು 12 ಸಾವಿರಕ್ಕೂ ಹೆಚ್ಚು ಜನರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಂದು ವಾಸ್ತವ್ಯ ಹೂಡಿದ್ದಾರೆ. ಇತ್ತೀಚೆಗೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವರೆಲ್ಲ ಕೇಂದ್ರಸ್ಥಾನವಾದ ಕಡೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಕೊರೊನಾ ಪರೀಕ್ಷೆಗೆ ಒಳಪಡುತ್ತಿದ್ದಾರೆ. ನಿತ್ಯ 500ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಾಲೂಕು ವೈದ್ಯಾ ಧಿಕಾರಿಗಳೇ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ಕೇವಲ ಎರಡಂಕಿ ಸೋಂಕಿತರಷ್ಟೇ ಪತ್ತೆಯಾಗುತ್ತಿದ್ದರು. ಪಕ್ಕದ ತಾಲೂಕಾದ ಅಜ್ಜಂಪುರ ಹಾಗೂ ಕಡೂರು ತಾಲೂಕಿನ ಗಡಿ ಪ್ರದೇಶವಾದ ಪಂಚನಹಳ್ಳಿ, ಗಿರಿಯಾಪುರ, ಸಖರಾಯಪಟ್ಟಣ ಮುಂತಾದೆಡೆಯ ವ್ಯಕ್ತಿಗಳು ಕೂಡ ಕಡೂರಿನಲ್ಲಿಯೇ ಪರೀಕ್ಷೆಗೆ ಒಳಪಡುತ್ತಿರುವುದರಿಂದ ಸಹಜವಾಗಿ ತಾಲೂಕಿನ ಸೋಂಕಿತರ ಸಂಖ್ಯೆ ಏರಿದೆ.

ಆರೋಗ್ಯ ಇಲಾಖೆಯ ಮಾಹಿತಿಯಂತೆ ಜನವರಿಯಿಂದ ಮೇ 14ರ ವರೆಗೆ ಒಟ್ಟು 2,346 ಸೋಂಕಿತರು ಪತ್ತೆಯಾಗಿದ್ದು ಇದರಲ್ಲಿ 1,155 ಸಕ್ರಿಯ ಪ್ರಕರಣಗಳಾಗಿವೆ. ತಿಂಗಳವಾರು ಗಮನಿಸುವುದಾದರೆ ಜನವರಿಯಲ್ಲಿ ಕೇವಲ 13, ಫೆಬ್ರವರಿಯಲ್ಲಿ 8, ಮಾರ್ಚ್‌ ತಿಂಗಳಲ್ಲಿ 4, ಏಪ್ರಿಲ್‌ ತಿಂಗಳಲ್ಲಿ 721 ಹಾಗೂ ಮೇ ತಿಂಗಳ 14 ನೇ ತಾರೀಖೀಗೆ 1,561 ಪ್ರಕರಣಗಳು ಪತ್ತೆಯಾಗಿವೆ.

Advertisement

ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಜನವರಿಯಿಂದ ಮಾರ್ಚ್‌ವರೆಗೆ ಕೇವಲ ಎರಡಂಕಿಯಲ್ಲಿದ್ದ ಸೋಂಕಿತರ ಪಟ್ಟಿ ಏಪ್ರಿಲ್‌ ತಿಂಗಳಲ್ಲಿ ಮೂರಂಕಿಗೆ ಜಿಗಿದಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಹಾನಗರಗಳಿಂದ ಮರಳಿ ಬಂದವರೇ ಪರೀಕ್ಷೆಗೆ ಒಳಪಡುತ್ತಿರುವುದರಿಂದ ತಾಲೂಕಿನ ಸೋಂಕಿತರ ಪಟ್ಟಿ ಆನೆಯ ಬಾಲದಂತೆ ಬೆಳೆಯುತ್ತಿದೆ.

ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಇದನ್ನೆಲ್ಲ ಗಮನಿಸಿ ಪರೀಕ್ಷೆ, ಪರೀಕ್ಷೆಯ ನಂತರ ಹೋಂ ಐಸೋಲೇಷನ್‌ ಮತ್ತು ಹೆಚ್ಚಿನ ಚಿಕಿತ್ಸೆಗೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಬಹಳ ಮುಖ್ಯವಾಗಿ ತಾಲೂಕು ವೈದ್ಯಾ ಧಿಕಾರಿ ಡಾ| ಎಸ್‌.ಸಿ. ರವಿಕುಮಾರರ ನೇತೃತ್ವದಲ್ಲಿ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋಂಕಿತರು ಪತ್ತೆಯಾದರೆ ಅವರ ಅಕ್ಕಪಕ್ಕದ ಮನೆಗಳು ಸೇರಿದಂತೆ ಸಂಪೂರ್ಣ ಬೀದಿಯ ಜನರು ಅಥವಾ ಗ್ರಾಮದ ಜನರನ್ನೇ ಪರೀಕ್ಷೆಗೆ ಒಳಪಡಿಸುತ್ತಿರುವುದು ಅತ್ಯಂತ ಸಮಾಧಾನಕರವಾದ ಬೆಳವಣಿಗೆಯಾಗಿದೆ.

ಇದರಿಂದ ಸೋಂಕಿತರ ಚಿಕಿತ್ಸೆಯು ಸುಲಭವಾಗುತ್ತಿದೆ. ರೋಗದ ಹರಡುವಿಕೆಯ ತೀವ್ರತೆಯನ್ನು ಕಟ್ಟಿ ಹಾಕಲಾಗುತ್ತಿದೆ. ಶಾಸಕ ಬೆಳ್ಳಿಪ್ರಕಾಶ್‌ ಅವರ ಪ್ರಯತ್ನದ ಫಲವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ 50 ಹಾಸಿಗೆಯ ಕೋವಿಡ್‌ ಸೆಂಟರ್‌ ಆರಂಭವಾಗಿದ್ದು ಅದು ಕೂಡ ಭರ್ತಿಯಾಗಿದೆ. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಎಸ್‌.ವಿ.ದೀಪಕ್‌ ನೇತೃತ್ವದಲ್ಲಿ ತಜ್ಞ ವೈದ್ಯರಾದ ಡಾ| ಎಚ್‌.ಎಸ್‌. ಮೋಹನ್‌, ಡಾ| ಗುರುಮೂರ್ತಿ, ಡಾ| ಶಿವಪ್ರಸಾದ್‌ ಸೇರಿದಂತೆ ದಾದಿಯರು ಹಾಗೂ ಡಿ- ದರ್ಜೆ ನೌಕರರು ಹಗಲಿರುಳು ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕೋವಿಡ್‌ ಮೊದಲ ಅಲೆಗಿಂತ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ತಾಲೂಕಿನಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಏಪ್ರಿಲ್‌ ತಿಂಗಳಲ್ಲಿ 10 ರೋಗಿಗಳು ಸಾವನ್ನಪ್ಪಿದರೆ ಮೇ ತಿಂಗಳ 13ರ ವೇಳೆಗೆ 35 ರೋಗಿಗಳು ಸಾವನ್ನಪ್ಪಿರುವುದು ರೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಅದರ ಜೊತೆಗೆ ಜನಸಾಮಾನ್ಯರ ಉದಾಸೀನತೆಯನ್ನು ತೋರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next