ಬಾದಾಮಿ: ಬಾದಾಮಿ ಸಸ್ಪೆನ್ಸ್ ಕೊನೇ ದಿನದ ತನಕ ಮುಂದುವರಿದಿದೆ. ಬಿಜೆಪಿಯಿಂದ ಅಧಿಕೃತವಾಗಿ ಬಾದಾಮಿ ಟಿಕೆಟ್ ಘೋಷಣೆ ಆಗಿಲ್ಲ. ಆದಾಗ್ಯೂ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿಯಲು ಸಂಸದ ಬಿ. ಶ್ರೀರಾಮುಲು ಸಿದ್ಧರಾಗಿದ್ದಾರೆ.
ಶ್ರೀರಾಮುಲು ಮೊಳಕಾಲ್ಮೂರು ಜತೆಗೆ ಬಾದಾಮಿಯಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ. ಬಾದಾಮಿಯಲ್ಲಿ ಲಿಂಗಾಯತ ಸಮುದಾಯ ಪ್ರಬಲ ಸಂಖ್ಯೆಯಲ್ಲಿದ್ದು, ಇವು ಬಿಜೆಪಿಯ ಸಾಂಪ್ರದಾಯಿಕ ಮತಗಳು. ನಿರ್ಣಾಯಕ ಪಾತ್ರ ವಹಿಸಲಿರುವ ವಾಲ್ಮೀಕಿ ಮತಗಳ ಮೇಲೆ ಕಣ್ಣಿಟ್ಟು, ಮುಖ್ಯಮಂತ್ರಿಗೆ ಪ್ರಬಲ ಸ್ಪರ್ಧೆಯೊಡ್ಡಲು ಬಿಜೆಪಿಯಿಂದ ಶ್ರೀರಾಮುಲು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಲಿಂಗಾಯತ ಮತ್ತು ವಾಲ್ಮೀಕಿ ಸಮುದಾಯದ ಮತಗಳ ಜತೆಗೆ ಬೇರೆ ಬೇರೆ ಸಮುದಾಯದ ಒಂದಷ್ಟು ಮತ ಪಡೆದು ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರ ಆ ಪಕ್ಷದ್ದಾಗಿದೆ. ಲಿಂಗಾಯತ ಸಮುದಾಯದ ಬಳಿಕ ಅತಿ ಹೆಚ್ಚು ಸಂಖ್ಯೆಯಲ್ಲಿ ಕುರುಬ ಸಮಾಜ ಇಲ್ಲಿದೆ. ಹೀಗಾಗಿ ಕುರುಬ ಸಮಾಜದ ಮತಗಳ ಮೇಲೆ ಕಣ್ಣಿಟ್ಟೇ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ.
ಪ್ರತ್ಯೇಕ ಧರ್ಮ ಮಾನ್ಯತೆ ಶಿಫಾರಸು ಹಿನ್ನೆಲೆಯಲ್ಲಿ ಶೇ.10ರಷ್ಟು ಲಿಂಗಾಯತ ಮತಗಳು ವಿಭಜನೆಯಾಗಲಿದ್ದು, ಕುರುಬ ಸಮಾಜ, ನೇಕಾರ, ಮುಸ್ಲಿಂ ಹಾಗೂ ದಲಿತ ಮತಗಳು ಕಾಂಗ್ರೆಸ್ಗೆ ಬರಲಿವೆ. ಹೀಗಾಗಿ ನಮ್ಮ ಗೆಲುವು ಸುಲಭ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಇಲ್ಲಿ ಲಿಂಗಾಯತ, ಕುರುಬ ಸಮಾಜ ಹೊರತು ಪಡಿಸಿದರೆ 3ನೇ ದೊಡ್ಡ ಸಮಾಜ ವಾಲ್ಮೀಕಿ. ಈ ಸಮಾಜದ ಮತಗಳು ಶ್ರೀರಾಮುಲು ಕಡೆಗೆ ವಾಲುವುದನ್ನು ತಡೆಯಲು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕರೆ ತರುವುದು ಸಿಎಂಗೆ ಅನಿವಾರ್ಯ ಎಂಬ ಚರ್ಚೆ ನಡೆಯುತ್ತಿದೆ. ಸತೀಶ ಜಾರಕಿಹೊಳಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇಂದು ಸಿಎಂ, ರಾಮುಲು ನಾಮಪತ್ರ: ಕಾಂಗ್ರೆಸ್ನಿಂದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 12.30ಕ್ಕೆ ಹಾಗೂ ಬಿಜೆಪಿಯಿಂದ ಬಿ. ಶ್ರೀರಾಮುಲು ಅವರು ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜಗದೀಶ ಶೆಟ್ಟರ್ ಜತೆಗಿರಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.