Advertisement

Janatha Darshan ನಾಡದೊರೆಗೆ ಅಹವಾಲುಗಳ ಮಹಾಪೂರ

11:22 PM Nov 27, 2023 | Team Udayavani |

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ನಡೆಸಿದ “ಜನ ಸ್ಪಂದನ’ದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಮಹಾಪೂರವೇ ಹರಿದುಬಂತು. ಸತತ ಆರು ತಾಸು ಜನರಿಂದ ಅಹವಾಲು ಸ್ವೀಕರಿಸಿದ ಸಿಎಂ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಈ ನಡುವೆ ಸಾರ್ವಜನಿಕರೂ ತರಹೇವಾರಿ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ವಿಶೇಷ. ಜನಸ್ಪಂದನದಲ್ಲೂ ನಿಗಮ-ಮಂಡಳಿ ನೇಮಕ ಕುರಿತಂತೆ ಮನವಿ ಸಲ್ಲಿಕೆಯಾಯಿತಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧವೂ ದೂರು ಸಲ್ಲಿಕೆಯಾಯಿತು.

Advertisement

ವಿಜಯೇಂದ್ರ, ಪ್ರೀತಂಗೌಡ ವಿರುದ್ಧ ದೂರು
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ದೂರು ಸಲ್ಲಿಕೆಗೂ ಮುಖ್ಯಮಂತ್ರಿಗಳ “ಜನಸ್ಪಂದನ’ ವೇದಿಕೆಯಾಯಿತು. ಅಂಧತ್ವ ಹೊಂದಿರುವ ಹಾಸನದ ಮಹೇಂದ್ರ ಅವರು, ಬಿ.ವೈ.ವಿಜಯೇಂದ್ರ ಮತ್ತು ಪ್ರೀತಂ ಗೌಡ ವಿರುದ್ಧ ಕಿರುಕುಳ ಆರೋಪ ಮಾಡಿದರು.

ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಈ ಇಬ್ಬರು ನಾಯಕರು ಕಿರುಕುಳ ನೀಡುತ್ತಿದ್ದಾರೆ. ತನ್ನ ಪತ್ನಿ ಜಯಕಿರಣ ಹಾಸನ ಜಿÇÉೆಯ ಮಕ್ಕಳ ಅಭಿವೃದ್ಧಿ ಅಧಿಕಾರಿಯಾಗಿದ್ದರು. ಆಗ ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯನ್ನು ಪತ್ತೆ ಮಾಡಿ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕಾಗಿ ಆಕೆಗೆ ಕಿರುಕುಳ ನೀಡಿದ್ದಲ್ಲದೆ, ಎರಡು ಎಫ್ಐಆರ್‌ ದಾಖಲಾಗುವಂತೆ ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಹಾಸನ ಜಿಲ್ಲಾಧಿಕಾರಿ, ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಪ್ರಕರಣದ ವಿವರ ನೀಡಿ, ತನಿಖೆ ನಡೆಸುವಂತೆ ಮೂರು ವರ್ಷಗಳ ಹಿಂದೆಯೇ ಕೋರಿದ್ದೇನೆ. ಆದರೆ ಈವರೆಗೆ ತನಿಖೆ ನಡೆಸಿಲ್ಲ. ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಸಬೇಕು ಹಾಗೂ ಕಳಪೆ ಆಹಾರ ಪೂರೈಕೆ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ವಿವರಗಳನ್ನೂ ಕೊಡು ತನಿಖೆ ಮಾಡಿಸುತ್ತೇನೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇನೆ. ಅಂಗನವಾಡಿಗಳಿಗೆ ಗುಣ ಮಟ್ಟದ ಆಹಾರ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಜತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

2028ಕ್ಕೂ ನೀವೇ ಸಿಎಂ ಆಗ್ಲಿ…
2028ಕ್ಕೂ ನೀವೇ ಮುಖ್ಯಮಂತ್ರಿ ಆಗಬೇಕು – ಹೀಗೆಂದು ಗ್ರಾ. ಪಂ. ಉಪಾಧ್ಯಕ್ಷ ನಿಂಗಯ್ಯ ಎಂಬವರು ಹರಸಿದರು. ತಿ ನರಸೀಪುರದ ನಿಂಗಯ್ಯ, ಆಶ್ರಯ ಕಮಿಟಿಯಲ್ಲಿ ಅಳಿಯನನ್ನು ಸದಸ್ಯರನ್ನಾಗಿ ಮಾಡಿ ಎಂದು ಅಳಿಯನ ಪರ ಮನವಿ ಮಾಡಲು ಬಂದಿದ್ದರು. ಈ ವೇಳೆ ಸಿಎಂಗೆ ಹರಸಿದರು.

Advertisement

ಪುತ್ರನ ಹೆಸರಿನ ಟ್ರಸ್ಟ್‌ಗೆ ನಿವೇಶನ ಮಂಜೂರು
ಮುಖ್ಯಮಂತ್ರಿ ತಮ್ಮ ಪುತ್ರನ ಹೆಸರಿನಲ್ಲಿರುವ ಟ್ರಸ್ಟೊಂದಕ್ಕೆ ಸ್ಥಳದಲ್ಲೇ ನಿವೇಶನ ಮಂಜೂರು ಮಾಡಿದರು. ಇದಕ್ಕೆ ಜನಸ್ಪಂದನ ಕಾರ್ಯಕ್ರಮ ಸಾಕ್ಷಿಯಾಯಿತು.ಗದಗ ನಗರದಲ್ಲಿರುವ “ರಾಕೇಶ್‌ ಸಿದ್ದರಾಮಯ್ಯ ಟ್ರಸ್ಟ್‌’ಗೆ ಅಗತ್ಯವಿರುವ 22 ಗುಂಟೆ ನಿವೇಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದರು. ಈ ಸಂಬಂಧ ಟ್ರಸ್ಟ್‌ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಅಹವಾಲು ಸಲ್ಲಿಸಿದರು. ಅದರಂತೆ ಗದಗ ನಗರದಲ್ಲಿ 22 ಗುಂಟೆ ಜಮೀನು ಕೋರಲಾಗಿತ್ತು. ಆದರೆ ಸಚಿವ ಎಚ್‌.ಕೆ. ಪಾಟೀಲ್‌ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಕಿತ್ತೂರು ಚೆನ್ನಮ್ಮ ಸಮುದಾಯ ಭವನಕ್ಕೆ ಉದ್ದೇಶಿತ ಆ ಜಮೀನು ಹಸ್ತಾಂತರಿಸುವಂತೆ ಸೂಚಿಸಿದ್ದಾರೆ ಎಂದು ಗಮನ ಸೆಳೆದರು. ತತ್‌ಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಸ್ಥಳದಲ್ಲೇ ಗದಗ ಜಿಲ್ಲಾಧಿಕಾರಿಗೆ ಕರೆ ಮಾಡಿ ಆ 22 ಗುಂಟೆ ನಿವೇಶನ ರಾಕೇಶ್‌ ಸಿದ್ದರಾಮಯ್ಯ ಟ್ರಸ್ಟ್ ಗೇ ನೀಡಬೇಕು ಎಂದು ತಾಕೀತು ಮಾಡಿದರು.

ಮಗುವನ್ನು ಎತ್ತಿಕೊಂಡು ಶಿಕ್ಷಕನ ಕಣ್ಣೀರು
ಹಾಸನ ಜಿಲ್ಲೆ ಅರಸೀಕೆರೆಯ ಕನಕಪುರ ಮೂಲದ ಪ್ರೌಢಶಾಲಾ ಶಿಕ್ಷಕರೊಬ್ಬರು ತಮ್ಮ ಮಗುವಿಗೆ ಕಿಡ್ನಿ ಸಮಸ್ಯೆಯಿದೆ, ಹೀಗಾಗಿ ತಮ್ಮನ್ನು ಕನಕಪುರಕ್ಕೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಭಾವುಕರಾದ ಶಿಕ್ಷಕ, ಸಿಎಂ ಎದುರು ಮಗುವನ್ನು ಎತ್ತಿಕೊಂಡು ಕಣ್ಣೀರು ಹಾಕುತ್ತಾ ಕೈಮುಗಿದು ಬೇಡಿಕೊಂಡರು. ಅದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕರೆದು ಕೂಡಲೇ ವರ್ಗಾವಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜನಸ್ಪಂದನದಲ್ಲೂ ನಿಗಮ-ಮಂಡಳಿ ಸದ್ದು!
ಜನಸ್ಪಂದನದಲ್ಲಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಷಯವೂ ಪ್ರಸ್ತಾವವಾಯಿತು. ನಿಗಮವೊಂದರ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗೆ ರವೀಂದ್ರ ಎಂಬವರು ಬೇಡಿಕೆ ಸಲ್ಲಿಸಿದರು.
ನಾನು ಅಧ್ಯಕ್ಷನಾಗುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಶಿಫಾರಸು ಮಾಡಿದ್ದಾರೆ. ನಾನು ಹಿಂದುಳಿದ ವರ್ಗಕ್ಕೆ ಸೇರಿದವನು. ಆ ಕೋಟಾದಡಿ ನನಗೆ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ರವೀಂದ್ರ ಮನವಿ ಮಾಡಿದರು. ಅದಕ್ಕೆ ಮುಖ್ಯಮಂತ್ರಿ, “ಆಯ್ತು ನೋಡೋಣ’ ಎಂದಷ್ಟೇ ಹೇಳಿ ಸುಮ್ಮನಾದರು.

ರಾಹುಲ್‌ ಗಾಂಧಿ ಭೇಟಿ ಮಾಡಿಸಿ ಸರ್‌!
ನನಗೆ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿಸಿ ಎಂದು ರಾಹುಲ್‌ ಅಭಿಮಾನಿಯೊಬ್ಬರು ಮುಖ್ಯಮಂತ್ರಿಗೆ ಮನವಿ ಮಾಡಿ ಗಮನ ಸೆಳೆದರು. ಸರದಿಯಲ್ಲಿ ಬಂದ ಬೆಳಗಾವಿ ಜಿಲ್ಲೆಯ ಅಥಣಿಯ ಅಶೋಕ ತಳವಾರ ಅವರು, “ನಮ್ಮೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪ್ರತಿಮೆ ಮಾಡಿದ್ದೇನೆ. ಅದನ್ನು ತೋರಿಸಲು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿಸಿ’ ಎಂದು ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಹೌದಾ, ಆಯ್ತು ಹೇಳ್ತೀನಿ ಹೋಗು’ ಎಂದರು.

ಕನ್ನಡಪರ ಹೋರಾಟಕ್ಕೆ ಮೆಚ್ಚುಗೆ
ಎಂಇಎಸ್‌ನವರು ಕನ್ನಡ ಧ್ವಜವನ್ನು ಸುಟ್ಟು ಹಾಕುತ್ತಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿಗೆ ಬೆಳಗಾವಿ ಕನ್ನಡಪರ ಸಂಘಟನೆ ಹೋರಾಟಗಾರರು ದೂರು ನೀಡಿದರು.ಎಂಇಎಸ್‌ನ ಈ ಧೋರಣೆ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ, ಅವರ (ಎಂಇಎಸ್‌) ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಮನ ಸೆಳೆದರು. ಕನ್ನಡಪರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಹಣಿಗೂ ನನ್ನಲ್ಲಿಗೆ ಬರಬೇಕಾ?
ವಿಜಯನಗರ ಜಿಲ್ಲೆಯ ಗ್ರಾಮ ವೊಂದರಲ್ಲಿ ರೈತರಿಗೆ ಪಹಣಿ ನೀಡದಿರುವ ಬಗ್ಗೆ ರೈತರೊಬ್ಬರು ಸಿಎಂಗೆ ದೂರು ನೀಡಿದರು. ಅದರಿಂದ ಸಿಟ್ಟಾದ ಸಿದ್ದರಾಮಯ್ಯ, ಪಹಣಿ ಸಮಸ್ಯೆ ಯನ್ನು ಬಗೆಹರಿಸಲೂ ನಿಮ್ಮಿಂದ ಆಗುವುದಿಲ್ಲವೇ? ಅದನ್ನೂ ಜನತಾದರ್ಶನದಲ್ಲಿಯೇ ಬಗೆಹರಿಸಬೇಕಾ’ ಎಂದು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಜಯನಗರ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅಂಧ ದಂಪತಿಗೆ ಉದ್ಯೋಗ
ಜನಸ್ಪಂದನದಲ್ಲಿ ಅಂಧ ದಂಪತಿಗೆ ಉದ್ಯೋಗದ ಭರವಸೆ ದೊರೆಯಿತು. ಜನತಾ ದರ್ಶನದಲ್ಲಿ ಅಂಧ ದಂಪತಿ ರವಿ ಮತ್ತು ಸವಿತಾ ತಮಗೆ ಯಾವುದಾದರೂ ಇಲಾಖೆಯಲ್ಲಿ ಉದ್ಯೋಗ ಕೊಡಿಸು ವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿ ಸಿದ ಸಿಎಂ, ಸ್ಮಾರ್ಟ್‌ ಸಿಟಿ ಯೋಜನೆ ಅಥವಾ ಬೇರೆಲ್ಲಾದರೂ ಕೆಲಸ ಕೊಡಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next