Advertisement

ಆಡಳಿತದ ಚುಕ್ಕಾಣಿ ಹಿಡಿದ ಕೈಯಲ್ಲಿ ಲೇಖನಿ; ಅತಿಥಿ ಸಂಪಾದಕರಾದ ಮುಖ್ಯಮಂತ್ರಿ

01:14 AM Apr 12, 2022 | Team Udayavani |

ಸೋಮವಾರ ದಿನವಿಡೀ ನಿಗದಿಯಾಗಿದ್ದ ಒತ್ತಡದ ಕಾರ್ಯವೆಲ್ಲವನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುರುಕಿನಿಂದಲೇ ಮುಗಿಸಿದ್ದು,ಅದೇ ಉತ್ಸಾಹ ಹಾಗೂ ಚುರುಕುತನದಿಂದ ಉದಯವಾಣಿಯ ಮಣಿಪಾಲ ಆವೃತ್ತಿಯ ಅತಿಥಿ ಸಂಪಾದಕ ಜವಾಬ್ದಾರಿಯನ್ನೂ ನಿಭಾಯಿಸಿದರು. ಪತ್ರಿಕೆಯ ಕಚೇರಿಯಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ಸಮಯ ಸಂಪಾದಕೀಯ ವಿಭಾಗದೊಂದಿಗೆ ಕಲೆತು, ಪ್ರಮುಖ ಸುದ್ದಿಗಳ ಬಗ್ಗೆ ಚರ್ಚಿಸಿದರು.

Advertisement

ಮಣಿಪಾಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರದ ತಮ್ಮ ಅತ್ಯಂತ ಒತ್ತಡದ ಕಾರ್ಯಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಉದಯವಾಣಿ ಕಚೇರಿಗೆ ಆಗಮಿಸಿ ಒಂದು ಗಂಟೆಗೂ ಅಧಿಕ ಕಾಲ ಇಲ್ಲಿನ ಸಿಬಂದಿ ವರ್ಗದೊಂದಿಗೆ ಕಳೆದರು.

ರಾತ್ರಿ 8.50ರ ಸುಮಾರಿಗೆ ಮಣಿಪಾಲದಲ್ಲಿರುವ ಉದಯವಾಣಿ ಪ್ರಧಾನ ಕಚೇರಿಗೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. (ಎಂಎಂಎನ್‌ಎಲ್‌) ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ, “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಮಣಿಪಾಲ್‌ ಟೆಕ್ನಾಲಜೀಸ್‌ ಕಾರ್ಯನಿರ್ವಾಹಕ ಅಧ್ಯಕ್ಷ ಗೌತಮ್‌ ಎಸ್‌. ಪೈ, ಎಂಎಂಎನ್‌ಎಲ್‌ ಸಿಇಒ ಮತ್ತು ಎಂಡಿ ವಿನೋದ್‌ ಕುಮಾರ್‌ ಅವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಅನಂತರ ಸಭಾ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಸಂಪಾದಕೀಯ ವಿಭಾಗಕ್ಕೆ ಭೇಟಿ ನೀಡಿದ ಅವರು ಪತ್ರಿಕೆಯ ಸಂಪಾದಕೀಯ ವಿಭಾಗ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರು.


ಅನಂತರ ಉದಯವಾಣಿಯ ಕಚೇರಿಯಲ್ಲಿರುವ ಅತ್ಯಂತ ಹಳೆಯ ಮುದ್ರಣ ಯಂತ್ರವನ್ನು ಅತ್ಯಂತ ಹತ್ತಿರದಿಂದ ಗಮನಿಸಿ, ಉದಯವಾಣಿಯ 50 ವರ್ಷದ ಕಾರ್ಯ ಸಾಧನೆಯನ್ನು ಶ್ಲಾ ಸಿದರು. ಪತ್ರಿಕಾ ಸಿಬಂದಿಯ ಜತೆ ಫೋಟೋ ಸೆಷನ್‌ ನಡೆಸಿಕೊಟ್ಟರು. ಪತ್ರಿಕಾಲಯ ಪ್ರವೇಶಿಸುತ್ತಿದ್ದಂತೆ ಭದ್ರತಾ ಸಿಬಂದಿ ವಿರಾಮದಲ್ಲಿರುವಂತೆ ಸೂಚಿಸಿದರು.  ಅನಂತರ ಸಂಪಾದಕೀಯ ಸಿಬಂದಿ ಜತೆ ಮುಕ್ತವಾಗಿ ಕಳೆದರು.

ಮೊದಲ ಅತಿಥಿ ಸಂಪಾದಕ ಸಿಎಂ, ಉದಯವಾಣಿಗೆ ಭೇಟಿ ನೀಡಿದ 3ನೆಯ ಸಿಎಂ
ಉದಯವಾಣಿ 1970ರ ಜನವರಿ 1ರಂದು ಆರಂಭವಾಗಿದ್ದು 52 ವರ್ಷಗಳು ಸಂದಿವೆ. 1970ರ ದಶಕದಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಜತೆ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಮತ್ತು 1990ರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಉಡುಪಿ ಜಿಲ್ಲೆಯವರಾದ ಡಾ|ಎಂ.ವೀರಪ್ಪ ಮೊಲಿಯವರು ಮಣಿಪಾಲದ ಉದಯವಾಣಿ ಕೇಂದ್ರ ಕಚೇರಿ ಮತ್ತು ಮುದ್ರಣಾಲಯಗಳಿಗೆ ಭೇಟಿ ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿಯವರು “ಉದಯವಾಣಿ’ ಕೇಂದ್ರ ಕಚೇರಿಗೆ ಆಗಮಿಸಿದ ಮೂರನೆಯ ಮುಖ್ಯಮಂತ್ರಿ. ಆದರೆ “ಉದಯವಾಣಿ’ಯ ಅತಿಥಿ ಸಂಪಾದಕರಾಗಿ ಪಾಲ್ಗೊಂಡ ಮೊದಲ ಮುಖ್ಯಮಂತ್ರಿಯಾದರು.

ಅತಿಥಿ ಸಂಪಾದಕರಾದ ಮುಖ್ಯಮಂತ್ರಿ
ಮುಖ್ಯಮಂತ್ರಿಯೊಬ್ಬರು ಪತ್ರಿಕೆಯ ಅತಿಥಿ ಸಂಪಾದಕರಾದಾಗ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿಯವರು ಒಂದು ಗಂಟೆಗೂ ಅಧಿಕ ಕಾಲ ಬಿಡುವು ಮಾಡಿಕೊಂಡು ಉದಯವಾಣಿ ಕಚೇರಿಗೆ ಬಂದು ಅತಿಥಿ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಪಾದಕೀಯವನ್ನು ಸಿದ್ಧಪಡಿಸಿ, ತಮ್ಮ ಬಜೆಟ್‌ನಲ್ಲಿ ಘೋಷಿಸಿರುವ ಪ್ರಮುಖ ಅಂಶಗಳನ್ನು ಅದರಲ್ಲಿ ಸೇರಿಸಿ, ವಿಶೇಷವಾಗಿ ರೈತರ ಕಲ್ಯಾಣಕ್ಕೆ ಸರಕಾರ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ಬೆಳಕು ಚೆಲ್ಲಿದರು.

Advertisement

ಅತಿಥಿ ಸಂಪಾದಕರಾಗಿ ಮುಖ್ಯಮಂತ್ರಿಯವರು ದಿನದ ಪ್ರಮುಖ ವಿಷಯಗಳ ಬಗ್ಗೆ ಕೆಲಹೊತ್ತು ಚರ್ಚೆ ನಡೆಸಿದರು. ಮಂಗಳವಾರ ಪ್ರಕಟವಾಗಲಿರುವ ಸುದ್ದಿಗಳ ಬಗ್ಗೆ ಮಾಹಿತಿ ಪಡೆದರು.

ಪ್ರತಿಕೆಯ ಸಂಪಾದಕೀಯ ವಿಭಾಗದಲ್ಲಿ ವರದಿಗಾರರು, ಉಪ ಸಂಪಾದಕರು, ಪುಟ ವಿನ್ಯಾಸಕಾರರು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಮಾಹಿತಿಯನ್ನು ಪಡೆದರು. ದಿನದ ಸುದ್ದಿ ಪಟ್ಟಿಯನ್ನು ಗಮನಿಸಿ, ಯಾವ ಸುದ್ದಿಗೆ ಯಾವ ರೀತಿಯ ಪ್ರಾಮುಖ್ಯ ನೀಡಲಾಗುತ್ತದೆ ಎಂಬಿತ್ಯಾದಿ ಹಲವು ವಿಷಯಗಳ ಬಗ್ಗೆ ಕೆಲಹೊತ್ತು ಚರ್ಚೆ ನಡೆಸಿದರು. ಉದಯವಾಣಿಯ ಮೂಲಕ ನವ ಕರ್ನಾಟಕದ ಉದಯವಾಗಲಿ ಎಂಬ ಆಶಯದೊಂದಿಗೆ ರೈತರು ಹಾಗೂ ಗ್ರಾಮಗಳ ಏಳ್ಗೆಯನ್ನೇ ಪ್ರಮುಖವಾಗಿಟ್ಟುಕೊಂಡು ಅತಿಥಿ ಸಂಪಾದಕರ ನೆಲೆಯಲ್ಲಿ ಕೆಲವು ಸಲಹೆಗಳನ್ನು ನೀಡಿದರು.

ನನಗಿಂತ ಚಿತ್ರವೇಚೆನ್ನಾಗಿದೆ!
ಉಪ ಸಂಪಾದಕ ಅನಿಲ್‌ ಕೈರಂಗಳ  ರಚಿಸಿದ ಮಿನಿ ಕ್ಯಾರಿಕೇಚರನ್ನು ಎಂಎಂಎನ್‌ಎಲ್‌ ಎಂಡಿ ವಿನೋದ್‌ ಕುಮಾರ್‌ ಅವರು ಮುಖ್ಯಮಂತ್ರಿಗೆ ನೀಡಿ ಗೌರವಿಸಿದಾಗ, “ನನಗಿಂತ ಚಿತ್ರವೇ ಚೆನ್ನಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಮುದ್ರಣ ಯಂತ್ರ ನೋಡಿ ಖುಷಿಪಟ್ಟರು
ಅತಿಥಿ ಸಂಪಾದಕರಾಗಿ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದಯವಾಣಿ ಕಚೇರಿಯ ಒಳಗಿದ್ದ ಅತ್ಯಂತ ಹಳೆಯ ಮತ್ತು ಉದಯವಾಣಿಯ ಆರಂಭದ ದಿನಗಳಲ್ಲಿ ಪತ್ರಿಕೆಯ ಮುದ್ರಣಕ್ಕಾಗಿ ಬಳಸುತ್ತಿದ್ದ ಮುದ್ರಣ ಯಂತ್ರವನ್ನು ಕಂಡು ಅತ್ಯಂತ ಖುಷಿಪಟ್ಟರು. ಮಾತ್ರವಲ್ಲದೇ ಮುದ್ರಣ ಯಂತ್ರವನ್ನು  ಮುಟ್ಟಿ, ಅದರೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಂಡರು.


Advertisement

Udayavani is now on Telegram. Click here to join our channel and stay updated with the latest news.

Next