Advertisement

ಜಾತಿ ಸಾಮರಸ್ಯಕ್ಕೆ ಬಸವಣ್ಣರಿಂದ ಅಡಿಪಾಯ

11:47 AM Jun 06, 2019 | Naveen |

ಚಿತ್ರದುರ್ಗ: ಅಂತರ್ಜಾತಿ ಹಾಗೂ ಅಂತರ್‌ ಧರ್ಮೀಯ ವಿವಾಹಗಳು ಜಾತಿ-ಜಾತಿಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲದೆ ಜಾತಿ ಪದ್ಧತಿ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಮುರುಘಾ ಮಠದ ಬಸವ ಕೇಂದ್ರ, ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಅನುಭವ ಮಂಟಪದಲ್ಲಿ ಬುಧವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಒಗ್ಗೂಡಿಸುವಿಕೆ ಅಂದರೆ ಜಾತಿ ಜಾತಿಗಳನ್ನು ಒಟ್ಟುಗೂಡಿಸುವುದು, ಮಾನವರ ನಡುವೆ ಸಾಮರಸ್ಯ ಬೆಸೆಯುವುದೇ ಅನುಭವ ಮಂಟಪದ ಧ್ಯೇಯ. ಇದನ್ನು 900 ವರ್ಷಗಳ ಹಿಂದೆಯೇ ಬಸವಾದಿ ಶರಣರು ಮಾಡಿದ್ದರು. ಒಗ್ಗೂಡುವಿಕೆಯಿಂದ ಜೀವನ ಆನಂದಮಯವಾಗುತ್ತದೆ. ಅಗಲುವಿಕೆಯಿಂದ ಅಶಾಂತಿ, ಅಸಮಾಧಾನಗಳು ತುಂಬಿರುತ್ತವೆ. 12ನೇ ಶತಮಾನದಲ್ಲೇ ಬಸವಾದಿ ಪ್ರಮಥರು ಸಮಾಜಮುಖೀ ಲೋಕಕಲ್ಯಾಣ ಕಾರ್ಯ ಮಾಡಿದ್ದಾರೆ. ಅಂತಹ ಎಲ್ಲ ಕಾರ್ಯಗಳನ್ನು ಶ್ರೀಮಠ ನಡೆಸಿಕೊಂಡು ಬರುತ್ತಿದೆ ಎಂದರು.

ಜಡ್ಡುಗಟ್ಟಿದ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಅಂತರ್ಜಾತಿ ವಿವಾಹಗಳನ್ನು ನಡೆಸಲಾಯಿತು. ಸಾಮಾಜಿಕ ಸಮಾನತೆಗೆ ಒತ್ತು ನೀಡಲಾಯಿತು. ಅಸ್ಪ್ರಶ್ಯರ ಸ್ಥಾನವನ್ನು ಎತ್ತರಿಸಲು ಬಸವಣ್ಣನವರು ಭಿನ್ನ ಜಾತಿಗೆ ಸೇರಿದ ಮಧುವರಸ ಮತ್ತು ಹರಳಯ್ಯನ ಮಕ್ಕಳಿಗೆ ಮದುವೆ ಮಾಡಿದರು. ಹೀಗೆ ಜಾತಿ ಸಾಮರಸ್ಯಕ್ಕೆ ಅಡಿಗಲ್ಲು ಹಾಕಿದವರು ಬಸವಣ್ಣನವರಾಗಿದ್ದಾರೆ ದೇಶದಲ್ಲಿ ವೃಕ್ಷ ಸಂತಾನ ಹೆಚ್ಚಾಗಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ-ಮರಗಳನ್ನು ತಪ್ಪದೇ ಬೆಳೆಸಬೇಕು. ವಧು-ವರರು ಹಾಗೂ ಅತಿಥಿಗಳಿಂದ ಗಿಡ ನೆಡಿಸುವ ಮೂಲಕ ಪರಿಸರ ದಿನಾಚರಣೆಯನ್ನು ಶ್ರೀಮಠ ಆಚರಿಸಿದೆ ಎಂದರು.

ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಮಾತಾಜಿ ಮಾತನಾಡಿ, ಜನಸಾಮಾನ್ಯರು ಮದುವೆ ಮಾಡುವ ಧಾವಂತದಲ್ಲಿ ಸಾಲದ ಸುಳಿಗೆ ಸಿಕ್ಕಿ ನಲುಗಿ ಹೋಗುತ್ತಾರೆ. ಜೀವನಪೂರ್ತಿ ಬಡ್ಡಿ ಹಣಕ್ಕಾಗಿ ದುಡಿಯುತ್ತಾರೆ. ಆ ಮೂಲಕ ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಾರೆ. ಶಿವಮೂರ್ತಿ ಮುರುಘಾ ಶರಣರು ಕಳೆದ 29 ವರ್ಷಗಳಿಂದ ಸರಳ ವಿವಾಹ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸುವಲ್ಲಿ, ನೂತನ ವಧುವರರ ಸಂಸಾರದಲ್ಲಿ ಸಂಸ್ಕಾರ ಮೂಡಿಸುವಲ್ಲಿ, ಅವರಲ್ಲಿ ಹೊಂದಾಣಿಕೆ ಬೆಳೆಸುವಲ್ಲಿ ಸರಳ ಸಾಮೂಹಿಕ ಮಹೋತ್ಸವ ನಿಜವಾಗಿ ಮಹತ್ವದ್ದು. ಗಂಡ ಹೆಂಡತಿ ಕ್ಷುಲ್ಲಕ ಕಾರಣಗಳಿಗೆ ಜಗಳವಾಡದೆ ತಾಳ್ಮೆಯಿಂದ ನೆಮ್ಮದಿಯ ಮಾದರಿ ಬದುಕನ್ನು ನಡೆಸಿ ಎಂಬ ಕಿವಿಮಾತು ಹೇಳಿದರು.

Advertisement

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್‌ ಮಾತನಾಡಿ, ಈ ಕಲ್ಯಾಣ ಮಹೋತ್ಸವದಲ್ಲಿ ಪರಿಸರ ದಿನಾಚರಣೆಯನ್ನೂ ಆಚರಿಸುತ್ತಿರುವುದು ವಿಶೇಷ. ಮಾನವ ಭೂಮಿ ಮೇಲೆ ಜೀವಿಸಿ ಪರಿಸರದಿಂದ ಲಾಭ ಪಡೆದು ಪರಿಸರದಲ್ಲಿ ಅನೇಕ ಮಾಲಿನ್ಯಗಳನ್ನು ಮಾಡುತ್ತಿದ್ದಾನೆ. ಆ ಮಾಲಿನ್ಯ ನಿವಾರಣೆ ಸರ್ಕಾರದ ಕೆಲಸ ಎಂದು ಜನ ಬೊಟ್ಟು ಮಾಡುತ್ತಾರೆ. ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಡಬೇಕು. ಪ್ರತಿ ನಿತ್ಯ, ಪ್ರತಿ ಕ್ಷಣ ನಾವು ಇಂಗಾಲದ ಡೈ ಆಕ್ಸೈಡ್‌ ಬಿಡುತ್ತೇವೆ. ಅದರ ಶುದ್ಧೀಕರಣಕ್ಕಾದರೂ ನಾವೆಲ್ಲರೂ ತಪ್ಪದೇ 10 ಸಸಿಗಳನ್ನಾದರೂ ನೆಟ್ಟು ಮರವಾಗಿ ಬೆಳೆಸಿ ಮಾಡಿದ ಮಾಲಿನ್ಯದ ತಪ್ಪಿಗೆ ಪ್ರಾಯಶ್ಚಿತ್ತ ಪಡೋಣ ಎಂದರು.

ಇದೇ ಸಂದರ್ಭದಲ್ಲಿ ಕೃಪಾಸಾಗರ್‌ ನಿರ್ದೇಶನದ ‘ಸಾರ್ವಜನಿಕರಲ್ಲಿ ವಿನಂತಿ’ ಕನ್ನಡ ಚಲನಚಿತ್ರದ ಪೋಸ್ಟರ್‌ ಅನ್ನು ಡಾ| ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಎಚ್.ಎಂ. ಭರತೇಶ್‌, ಕೆ.ವಿ. ಶಿವಕುಮಾರ್‌, ಸಾಹಿತಿ ಕುಂ.ವೀರಭದ್ರಪ್ಪ ದಂಪತಿ, ಕೆಪಿಟಿಸಿಎಲ್ ಅಧಿಕಾರಿ ಗುರುಮಲ್ಲಯ್ಯ, ಬೈರಮಂಗಲದ ರಾಮೇಗೌಡ, ಪ್ರಕಾಶ್‌ ಕಂಬತ್ತಳ್ಳಿ, ಕೃಷ್ಣಮೂರ್ತಿ, ಕೊಟ್ರೇಶ್‌ ತಳಸ್ಥೆ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್‌ ತಿಪ್ಪೇಸ್ವಾಮಿ, ಎ.ಜೆ. ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ,ಎನ್‌. ತಿಪ್ಪಣ್ಣ ಭಾಗವಹಿಸಿದ್ದರು.

ಪಿಆರ್‌ಒ ಪ್ರದೀಪ್‌ಕುಮಾರ್‌ ಸ್ವಾಗತಿಸಿದರು. ಪ್ರೊ| ಸಿ.ವಿ. ಸಾಲಿಮಠ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.

ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಆರು ಅಂತರ್ಜಾತಿ ವಿವಾಹಗಳೂ ಜರುಗಿವೆ. ಒಟ್ಟು 45 ಜೋಡಿ ವಧು-ವರರು ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಸಾಮಾಜಿಕ ಸಾಮರಸ್ಯ, ಸಮಾನತೆ, ಮಾನವೀಯ ಕಾರ್ಯ ಶ್ರೀಮಠದ ಮುಖ್ಯ ಧ್ಯೇಯ.
ಡಾ| ಶಿವಮೂರ್ತಿ ಮುರುಘಾ ಶರಣರು.

Advertisement

Udayavani is now on Telegram. Click here to join our channel and stay updated with the latest news.

Next