Advertisement

ಚೆನ್ನಭೈರಾದೇವಿಗೆ ಪುನರ್‌ ಪಟ್ಟಾಭಿಷೇಕ

11:42 AM Jun 26, 2021 | Team Udayavani |

ಹೊನ್ನಾವರ: ತಾಲೂಕಿನ ಗೇರುಸೊಪ್ಪೆ ಸಾಮ್ರಾಜ್ಯವನ್ನು 50 ವರ್ಷಕ್ಕೂ ಹೆಚ್ಚುಕಾಲ ಆಳಿದ ಚೆನ್ನಭೈರಾದೇವಿಗೆ ವಿದೇಶಿ ಇತಿಹಾಸಕಾರರು ಮಾಡಿದ ಅನ್ಯಾಯ ಸರಿಪಡಿಸಿ ಪುನರ್‌ ಪಟ್ಟಾಭಿಷೇಕ ಮಾಡಿಸಿದ ಕೀರ್ತಿ ಡಾ| ಗಜಾನನ ಶರ್ಮರಿಗೆ ಸಲ್ಲುತ್ತದೆ.

Advertisement

ರಾಣಿ ಚೆನ್ನಭೈರಾದೇವಿ ಹೊನ್ನಾವರ ತಾಲೂಕಿನ ಗೇರುಸೊಪ್ಪೆಯವಳು, ಜಿಲ್ಲೆಯವಳು ಎಂಬುದು ಹೆಮ್ಮೆಯ ಸಂಗತಿ. ಅವಳ ಚರಿತ್ರೆಗೆ ಕಳಂಕ ಬಳಿದ ಇತಿಹಾಸಕಾರರ ದಾಖಲೆಗಳನ್ನು ಅಳಿಸಿ ಅವಳ ಅಕಳಂಕ ಚರಿತ್ರೆ ಸಾರುವ ಈ ಕಾದಂಬರಿಯಿಂದ ಚೆನ್ನಭೈರಾದೇವಿ ಕುರಿತು ದೇಶ ಹೆಮ್ಮೆಪಡಬೇಕು. ಅಂತಹ ಐತಿಹಾಸಿಕ ಕೃತಿ ಕೊಟ್ಟ ಡಾ| ಗಜಾನನ ಶರ್ಮರು ಅಭಿನಂದನಾರ್ಹರು.

ತಮ್ಮ ವಿಚಾರಗಳಿಗೆ ಕಾದಂಬರಿ ರೂಪ ಕೊಡುವಾಗ ಶರ್ಮರು ಈ ರಾಣಿ ಕುರಿತು 62ಕ್ಕೂ ಹೆಚ್ಚು ಕನ್ನಡ, ಇಂಗ್ಲಿಷ್‌ ಕೃತಿಗಳನ್ನು ಅಧ್ಯಯನ ಮಾಡಿದ್ದಾರೆ. ಜೈನ ಮುನಿಗಳನ್ನು ಕಂಡು ಮಾತನಾಡಿದ್ದಾರೆ. ಅವರು ಈ ಸಾಹಸಕ್ಕೆಇಳಿಯುತ್ತಿದ್ದಂತೆ ಚೆನ್ನಭೈರಾದೇವಿಯ ವ್ಯಕ್ತಿತ್ವ ಶರ್ಮರನ್ನು ಪೂರ್ಣ ಆವರಿಸಿದೆ ಎಂಬುದಕ್ಕೆ ಈ ಕೃತಿ ಸಾಕ್ಷಿ.

ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಮೌಲ್ವಿಕ ಕೃತಿಗಳನ್ನು ಕೊಟ್ಟಿರುವ ಶರ್ಮರು ಚಿಕ್ಕಂದಿನಲ್ಲಿಕೇಳಿದ ಚೆನ್ನಭೈರಾದೇವಿ ಹೆಸರಿನ ಹಿಂದೆ ಬೀಳಲು ಕಾರಣ ಅವರು ಚೆನ್ನಭೈರಾದೇವಿ ನಾಡಿಗೆ ಸೇರಿದ ಸಾಗರ ಸೀಮೆಯವರು.

ಕೆಪಿಸಿ ಉದ್ಯೋಗಿಯಾಗಿದ್ದ ಅವರು ವೃತ್ತಿಯೊಂದಿಗೆ ಗೇರುಸೊಪ್ಪಾ ಸೀಮೆಯಪ್ರತಿಮೂಲೆಯನ್ನು, ಪ್ರತಿ ಘಟನೆಯನ್ನು ಕಾಣುತ್ತಬಂದವರು. ಬಾಲ್ಯದುದ್ದಕ್ಕೂ ತಮ್ಮ ಮನಸ್ಸನ್ನು ವ್ಯಾಪಿಸಿದ ರಾಜ್ಯ ಗೇರಸೊಪ್ಪೆ, ರಾಣಿ ಎಂದರೆ ಅದು ಚೆನ್ನಭೈರಾದೇವಿ ಎಂದು ಅವರು ಹೇಳುತ್ತಾರೆ. ಸಾಂಸಾರಿಕ ಜಂಜಡದಲ್ಲಿ ಮುಳುಗಿದ್ದರೂ ರಾಣಿಯ ಬಾಲ್ಯದಲ್ಲಿ ಅಚ್ಚೊತ್ತಿದ್ದ ರಾಣಿಯ ಚಿತ್ರ ಮಸುಕಾಗದೇ ಕುಳಿತಿತ್ತು ಎನ್ನುವ ಶರ್ಮ ಅವರು, ಹಲವು ವಿದೇಶಿ ಪ್ರವಾಸಿಗರ, ಇತಿಹಾಸಕಾರರ ದಾಖಲೆಗಳನ್ನು ಪರಿಶೀಲಿಸಿ ಈರಾಣಿಗೆ ಅಪಚಾರವಾಗಿದೆ ಎಂದು ನಿರ್ಧರಿಸಿ ಕಾದಂಬರಿ ರಚಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಬೆಳ್ಳಿ ತೆರೆಗೆ ಬಂದರೆ ದಾಖಲೆ ಮಾಡಬಹುದಾದ ಕೃತಿ ಇದು.

Advertisement

ಈ ಕೃತಿಯ ಬೆನ್ನುಡಿಯಲ್ಲಿ ಹೆಸರಾಂತ ಲೇಖಕ ಜೋಗಿ ಹೀಗೆ ಬರೆದಿದ್ದಾರೆ. ಸಂಕಷ್ಟದಲ್ಲಿರುವವರಿಗೆ ದೂರದಲ್ಲಿದ್ದು ಕಾಪಾಡುವ ಅವ್ವರಸಿ, ಹತ್ತಿರದಿಂದ ಕಂಡವರಿಗೆ ಸಣ್ಣಮ್ಮ, ಶತ್ರುಗಳ ಪಾಲಿಗೆ ಎದೆನಡುಗಿಸುವ ಚೆನ್ನಭೈರಾದೇವಿ, ಬಂಧುಮಿತ್ರರಿಗೆ ಎಂದೂ ಎಚ್ಚರ ತಪ್ಪದ ನಿರ್ದಾಕ್ಷಿಣ್ಯ ಹೆಣ್ಣು, ಪೋರ್ಚುಗೀಸರ ಪಾಲಿಗೆ ರೈನಾದ ಪಿಮೆಂಟಾ (ಕಾಳು ಮೆಣಸಿನ ರಾಣಿ).

ದಕ್ಷಿಣ, ಕೊಂಕಣ ಹಾಗೂ ಮಲೆನಾಡನ್ನು 54 ವರ್ಷ ಆಳಿದ ಚೆನ್ನಭೈರಾದೇವಿ ಕಥೆಯನ್ನು ವಸ್ತುನಿಷ್ಠವಾಗಿ ಹೇಳಿರುವ ಗಜಾನನ ಶರ್ಮರು ಇದರಲ್ಲಿ ನೂರು ವರ್ಷದ ಶರಾವತಿ ದಂಡೆ ಚರಿತ್ರೆಯನ್ನೂ ವಿವರಿಸಿದ್ದಾರೆ. ಜೈನಧರ್ಮೀಯರ ಸಾಹಸ, ತ್ಯಾಗ ಎಲ್ಲವೂ ಇದೆ. ಪ್ರೇಮ, ಸಾಹಸ,ಸಹೃದಯತೆ, ತ್ಯಾಗಗಳ ಪ್ರತಿರೂಪದಂತಿದ್ದ ರಾಣಿಚೆನ್ನಭೈರಾದೇವಿ ಕಥೆಯಲ್ಲಿ ಇಂದಿನ ಸಾಮಾಜಿಕ ಜೀವನದಲ್ಲಿ ಕಾಣುವ ದೇಶದ್ರೋಹ, ವ್ಯಕ್ತಿದ್ವೇಷ, ಅತಿಕಾಮ, ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಡುವ ಪ್ರವೃತ್ತಿ ಎಲ್ಲದರ ಛಾಯೆಯನ್ನು ಕಾಣಬಹುದು. ಯುದ್ಧ ಕೊನೆಗೂ ದುರಂತದತ್ತ ಕೊಂಡೊಯ್ಯುತ್ತದೆ ಎಂಬುದನ್ನು ವಿವರಿಸಿದ ಶರ್ಮರ ಲೇಖನಿಗೆ ನಮೋ ಎನ್ನಬೇಕು.

ಚೆನ್ನಭೈರಾದೇವಿ ಕುರಿತು ನಾಡು ಅಭಿಮಾನ ಪಡಬೇಕಾಗಿದೆ. ಮುಂದಿನ ಪೀಳಿಗೆಯಲ್ಲಿ ಚೆನ್ನಭೈರಾದೇವಿಯ ಸಾಹಸ, ನಿಷ್ಠೆ,ಪ್ರಾಮಾಣಿಕತೆಗಳು ಮೈಗೂಡಬೇಕಾಗಿದೆ. ಈ ನೆಲದ ಹೆಣ್ಣು ಮಗಳೊಬ್ಬಳು ದೇಶಾಭಿಮಾನ ಮೆರೆದ ಘಟನಾವಳಿಗಳು ಸದಾ ಜನರ ನೆನಪಿನಲ್ಲಿಉಳಿಯಬೇಕು. ಅಂತಹ ಕೆಲಸವೊಂದುಆಗಲೇಬೇಕು ಎನ್ನುತ್ತಾರೆ ಜಿಲ್ಲೆಯ ಹಿರಿಯ ಉದ್ಯಮಿ, ಹೊನ್ನಾವರ ಮೂಲದ ಚಿಂತಕ ಮುರಳೀಧರ ಪ್ರಭು, ಕುಮಟಾ.ಅದಕ್ಕಾಗಿ ರಾಣಿಯ ಕರ್ಮಭೂಮಿ ಗೇರುಸೊಪ್ಪಾ ನಗರಬಸ್ತಿಕೇರಿಯಲ್ಲಿ ಒಂದು ದಿನದ ವಿಚಾರ ಸಂಕಿರಣ ನಡೆಸಬೇಕು. ಇತಿಹಾಸಕಾರರು, ಚಿಂತಕರು ಮತ್ತು ಆಳುವ ಪ್ರಭುಗಳು ಪಾಲ್ಗೊಳ್ಳುವಂತಾಗಬೇಕು. ವಿವಿಧ ಮಾಧ್ಯಮಗಳಲ್ಲಿರಾಣಿಯ ಹಿರಿಮೆ, ಜಾಣ್ಮೆ, ದೇಶಭಕ್ತಿ ಪ್ರಕಟವಾಗಬೇಕು ಎನ್ನುತ್ತಾರೆ. ಇದಕ್ಕೆ ಗಜಾನನ ಶರ್ಮ ಕೂಡ ಸಂತೋಷದಿಂದ ಒಪ್ಪಿದ್ದಾರೆ. ನಿಮ್ಮ ವಿಚಾರಗಳಿದ್ದರೆ ತಿಳಿಸಿ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next