Advertisement

ಗುಡ್ಡದ ಅಂದ ಇಮ್ಮಡಿಸಿದ ಚೆಕ್‌ ಡ್ಯಾಂ

02:36 PM Oct 12, 2019 | Team Udayavani |

ಗಂಗಾವತಿ: ನಗರಕ್ಕೆ ಹೊಂದಿಕೊಂಡಿರುವ ಗುಡ್ಡ, ಬೆಟ್ಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಸಕ್ತಿಯಿಂದ ನಿರ್ಮಿಸಿರುವ ಚೆಕ್‌ ಡ್ಯಾಂಗಳಲ್ಲಿ ಭರಪೂರ ನೀರು ಸಂಗ್ರಹವಾಗಿದೆ.

Advertisement

ಕಲ್ಲು, ಬಂಡೆಗಳಿಂದ ಫಾಲ್ಸ್‌ಗಳ ರೂಪದಲ್ಲಿ ನೀರು ಹರಿಯುತ್ತಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ನಗರದ ಜ್ಯೂನಿಯರ್‌ ಕಾಲೇಜು ಹಿಂದೆ ಇರುವ ಬೆಟ್ಟದಲ್ಲಿ ಅರಣ್ಯ ಇಲಾಖೆ ಅಧಿಕಾರಗಳ ಶ್ರಮದಿಂದ ಇದೀಗ ಸುಂದರ ಪ್ರಕೃತಿಯ ತಾಣವಾಗಿದೆ. ಕಳೆದ ಹಲವು ವರ್ಷಗಳಿಂದ ಮಳೆಯ ಕೊರತೆಯಿಂದ ಗುಡ್ಡದಲ್ಲಿದ್ದ ಸಸ್ಯ ಸಂಕುಲ ನಾಶವಾಗಿತ್ತು. ಕಳೆದ ವರ್ಷದ ಬೇಸಿಗೆಯಲ್ಲಿ ನೀರು ಹರಿದು ಹೋಗುವ ಜಾಗದಲ್ಲಿ ಸರಕಾರದ ಅನುದಾನದಿಂದ 50ಕ್ಕೂ ಹೆಚ್ಚು ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈ ಭಾರಿ ಸುರಿದ ಮಳೆಯಿಂದಾಗಿ ಚೆಕ್‌ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದೆ.

ಕಲ್ಲು ಬಂಡೆ ಮೇಲಿಂದ ನೀರು ಕೆಳಗೆ ಹರಿಯುವ ದೃಶ್ಯ ಜಲಪಾತದಂತೆ ಕಾಣುತ್ತದೆ. ಹಲವು ದಶಕಗಳ ಹಿಂದೆ ನಗರದ ಸುತ್ತಲಿರುವ ಬೆಟ್ಟಗುಡ್ಡಗಳಲ್ಲಿ ಅಪಾರ ಪ್ರಮಾಣದ ಸಸ್ಯಗಳು, ಗಿಡ-ಮರಗಳು ಇದ್ದವು. ನಗರೀಕರಣದ ಪರಿಣಾಮದಂದ ಗಿಡಗಳನ್ನು ಕಡಿದು ಸಾಗಿಸಿದ ಪರಿಣಾಮ ಬೆಟ್ಟ ಬರುಡಾಗಿತ್ತು. 20 ವರ್ಷಗಳ ಹಿಂದೆ ಜ್ಯೂನಿಯರ್‌ ಕಾಲೇಜು ಹಿಂಭಾಗದಲ್ಲಿ ಅರಣ್ಯ ಇಲಾಖೆ ಜನರಿಗೆ ವಿಶ್ರಾಂತಿ ಮತ್ತು ವಾಯು ವಿಹಾರಕ್ಕಾಗಿ 50 ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ ಕುಳಿತುಕೊಳ್ಳಲು ಬೆಂಚ್‌ ಹಾಕಿ ಸುಂದರ ಪಾರ್ಕ್‌ ನಿರ್ಮಿಸಿತ್ತು. ಈ ಪಾರ್ಕ್‌ ಸೂಕ್ತ ನಿರ್ವಾಹಣೆ ಮತ್ತು ನೀರಿನ ಕೊರತೆಯಿಂದ ಹಾಳಾಗಿತ್ತು. ಅಂದಿನಿಂದ ಈ ಜಾಗ ಅಕ್ರಮ ಚಟುವಟಿಕೆ ತಾಣವಾಗಿತ್ತು.

ಇತ್ತೀಚೆಗೆ ಪುನಃ ಅರಣ್ಯ ಇಲಾಖೆ ಅಧಿ ಕಾರಿಗಳು ಇಲ್ಲಿರುವ ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅರಣ್ಯ ಬೆಳೆಸಲು ನಿರ್ಧರಿಸಿ ಮಳೆ ನೀರು ಹರಿದುಹೋಗುವ ಜಾಗದಲ್ಲಿ ಚೆಕ್‌ ಡ್ಯಾಂ ನಿರ್ಮಿಸಿದ್ದಾರೆ. ಇಲ್ಲಿ ನೀರು ಸಂಗ್ರಹವಾಗಿದ್ದು ಇಲಾಖೆ ನಾಟಿ ಮಾಡಿದ ಸಸಿಗಳು ಆಳೆತ್ತರ ಬೆಳೆದಿವೆ. ಇತ್ತೀಚೆಗೆ ನಗರದ ಚಾರಣಬಳಗ ಕಾರ್ಯಕರ್ತರು ಇಲ್ಲಿ ಪ್ರವಾಸಕ್ಕೆ ಆಗಮಿಸಿದ ವೇಳೆ ಇನ್ನಷ್ಟು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಗೆ ಕೈಜೋಡಿಸಲು ನಿರ್ಧರಿಸಿದ್ದಾರೆ. ಇಲ್ಲಿಯ ಸಸಿಗಳು ಇನ್ನಷ್ಟು ಬೆಳೆದು ಜನರಿಗೆ ನೆರಳು ಕೊಡುವಂತಾಗಲು ಕೆಲಸ ಮಾಡುವ ಭರವಸೆ ನೀಡಿದ್ದಾರೆ. ತಾಲೂಕಿನ ಆನೆಗೊಂದಿ ಬೆಣಕಲ್‌, ಮಲ್ಲಾಪೂರ, ಜಂಗ್ಲಿ ರಂಗಾಪೂರ, ಸಾಣಾಪೂರ, ಹನುಮನಹಳ್ಳಿ ಭಾಗದಲ್ಲಿರುವ ಏಳು ಗುಡ್ಡದ ಪ್ರದೇಶದಲ್ಲಿ ಅರಣ್ಯ ಇಲಾಖೆ ಇನ್ನಷ್ಟು ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಸಸ್ಯ ಬೆಳೆಯಲು ಮತ್ತು ವನ್ಯಜೀವಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸ್ಥಳಗಳಾಗಿ ಮಾರ್ಪಾಡು ಮಾಡಬೇಕು.

 

Advertisement

ಪ್ರಕೃತಿ ಹೊರತು ಜನರ ಬದುಕು ಅಸಾಧ್ಯ ಎಂದು ಜನತೆಗೆ ಮನವರಿಕೆ ಮಾಡಲು ಬೆಟ್ಟದಲ್ಲಿ ಚೆಕ್‌ ಡ್ಯಾಂ, ಸುಮಾರು 15 ಎಕರೆ ಪ್ರದೇಶದಲ್ಲಿ ಸಸ್ಯಗಳನ್ನು ಬೆಳೆಸಿ ಮಕ್ಕಳ ಆಟಿಕೆಗಳು, ವಾಕಿಂಗ್‌ ಟ್ರ್ಯಾಕ್ನಿ ರ್ಮಿಸಲಾಗುತ್ತಿದೆ. ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಪರಿಸರ ಸ್ನೇಹಿ ಪಾರ್ಕ್‌ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂಲಕ ಅರಣ್ಯದ ಮಹತ್ವ ಜನತೆಗೆ ತಿಳಿಸಲು ಇಲಾಖೆ ಯೋಜನೆ ರೂಪಿಸಿದೆ. ತಾಲೂಕಿನ ಏಳು ಗುಡ್ಡದ ಪ್ರದೇಶದಲ್ಲಿ ವಿವಿಧ ಬಗೆಯ ಸಸಿ ನೆಡಲಾಗಿದ್ದು, ಉತ್ತಮ ಮಳೆಯಿಂದ ಚೆಕ್‌ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದೆ. ಕಾಡು ಪ್ರಾಣಿಗಳಿಗೆ ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರು ಲಭಿಸಲಿದೆ.-ಗೋವಿಂದರಾಜು, ವಲಯ ಅರಣ್ಯ ಅಧಿಕಾರಿ

 

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next