Advertisement

ಮೋಸ ಹೋದ ಪೆದ್ದಣ್ಣ 

06:25 AM Aug 31, 2017 | |

ಊರಿಗೆ ಭಾರೀ ಶ್ರೀಮಂತನಾಗಿದ್ರೂ ಪೆದ್ದಣ್ಣ ಮಹಾಜಿಪುಣ. ಯಾರಿಗೂ, ಯಾವತ್ತೂ ನಯಾಪೈಸೆಯನ್ನಾಗಲೀ, ಕಾಳು ಧಾನ್ಯವನ್ನಾಗಲೀ ದಾನ ಮಾಡಿದವನೇ ಅಲ್ಲ. ಊರಿನಲ್ಲಿ ಎಲ್ಲರೂ ಆತನನ್ನು “ಮಹಾಜಿಪುಣ’ನೆಂದು ಗೇಲಿ ಮಾಡುತ್ತಿದ್ದರು. ಒಮ್ಮೆ ಆತನ ಮನೆಗೆ ಮಹಾಗುರುಗಳು ಶಿಷ್ಯರ ಸಮೇತ ಆಗಮಿಸಿದರು. ಪೆದ್ದಣ್ಣ ಅವರನ್ನು ಗೌರವದಿಂದ ಸ್ವಾಗತಿಸಿ, ಸತ್ಕರಿಸಿದ.

Advertisement

ಆ ಶಿಷ್ಯರಲ್ಲಿ ಒಬ್ಬ ಪೆದ್ದಣ್ಣನ ಹತ್ತಿರ ಬಂದು, “ನಮ್‌ ಗುರುಗಳು ಕಾಡಿನಲ್ಲಿ ಕಠಿಣ ತಪಸ್ಸು ಮಾಡಿ ಸಿದ್ಧಿ ಪಡೆದಿದ್ದಾರೆ. ಯಾರು ಏನೇ ಕೇಳಿದ್ರೂ ಅವರು ಅದನ್ನು ಈಡೇರಿಸ್ತಾರೆ’ ಎಂದು ಕಿವಿಯಲ್ಲಿ ಉಸುರಿದ. ಮೊದಲೇ ಜಿಪುಣ, ದುರಾಸೆ ಜಾಸ್ತಿ. ಗುರುಗಳನ್ನು ಕೇಳಿಕೊಂಡು ತಾನು ಇನ್ನಷ್ಟು ಧನಿಕನಾಗ್ಬೇಕು ಎಂಬ ಆಸೆ ಹುಟ್ಟಿತು ಅವನಲ್ಲಿ. ಗುರುಗಳ ಹತ್ತಿರ ಹೋಗಿ, “ಮಾನ್ಯರೇ ತಮ್ಮ ತಪಶಕ್ತಿಯಿಂದ ನನ್ನ ಸಂಪತ್ತು ದುಪ್ಪಟ್ಟಾಗುವಂತೆ ಅನುಗ್ರಹಿಸಿ’ ಎಂದು ಮನವಿ ಮಾಡಿಕೊಂಡ. ಆ ಮಾತು ಕೇಳಿ ನಸುನಕ್ಕ ಗುರುಗಳು ಕ್ಷಣ ಹೊತ್ತು ಧ್ಯಾನ ಮಾಡಿ, “ಹಾಗೇನು? ಅದಕ್ಕೇನಂತೆ ಅವಶ್ಯವಾಗಿ ಮಾಡೋಣ. ಅದಕ್ಕಾಗಿ ಒಂದು ವಿಶೇಷ ಪೂಜೆ ಮಾಡಬೇಕು. ನಿನ್ನಲ್ಲಿರುವ ಎಲ್ಲ ಧನ-ಕನಕ-ಸಿರಿ-ಸಂಪತ್ತನ್ನು ಪೂಜೆಗೆ ತಂದಿಡು’ ಎಂದು ಆಜ್ಞಾಪಿಸಿದರು.

ಪೆದ್ದಣ್ಣ ಬಹಳ ಉತ್ಸಾಹದಿಂದ ತನ್ನಲ್ಲಿದ್ದ ನಗ-ನಾಣ್ಯ- ಸಂಪತ್ತನ್ನೆಲ್ಲ ತಂದು ಗುರುಗಳ ಮುಂದಿಟ್ಟ. ಗುರುಗಳು ಪೂಜೆ ಪ್ರಾರಂಭಿಸಿದರು. ಶಿಷ್ಯರು ಮಂತ್ರ ಪಠಿಸುತ್ತಾ ಯಾವುದೋ ಬೂದಿಯನ್ನು ಪೆದ್ದಣ್ಣನ ಮುಖಕ್ಕೆ ಎರಚಿದರು. ಕಣ್ಣು ಕತ್ತಲೆ ಬಂದು ಆತ ಜ್ಞಾನ ತಪ್ಪಿ ಮಲಗಿದ. ಕೆಲ ಸಮಯದ ನಂತರ ಎಚ್ಚರವಾಗಿ ನೋಡಿದಾಗ, ತನ್ನೆಲ್ಲಾ ಸಂಪತ್ತಿನ ಜೊತೆಗೆ ಗುರು-ಶಿಷ್ಯರು ನಾಪತ್ತೆಯಾಗಿರುವುದು ಗೊತ್ತಾಯ್ತು. ಅತಿ ಆಸೆಯಿಂದ ಮೋಸಗಾರರ ಬಲೆಗೆ ಬಿದ್ದು ಪೆದ್ದಣ್ಣ ಸಿರಿ-ಸಂಪತ್ತನ್ನು ಕಳೆದುಕೊಂಡ.

– ಅಮರಯ್ಯ ಪತ್ರಿಮಠ, ಸುರಪುರ

Advertisement

Udayavani is now on Telegram. Click here to join our channel and stay updated with the latest news.

Next