Advertisement

ಚೌಡಯ್ಯ ವಿಶ್ವದ ಮೊದಲ ನ್ಯಾಯಾಧೀಶ

11:32 AM Jan 23, 2018 | Team Udayavani |

ಕಲಬುರಗಿ: ಅಂಬಿಗರ ಚೌಡಯ್ಯನವರು ವಿಶ್ವದ ಮೊದಲ ನ್ಯಾಯಾಧೀಶ. ಅವರು 12ನೇ ಶತಮಾನದಲ್ಲಿಯೇ ಕೆಟ್ಟ ಆಲೋಚನೆ ಮಾಡುವವರ ಹಾಗೂ ಸುಳ್ಳು, ಮೋಸ ಮಾಡಿ ಡಾಂಬಿಕತೆ ಮರೆಯುವವರಿಗೆ ಪಾದರಕ್ಷೆ ತೆಗೆದುಕೊಂಡು
ಹೊಡೆಯುವ ಶಿಕ್ಷೆ ನೀಡಬೇಕು ಎಂದು ವಚನಗಳ ಮೂಲಕ ಹೇಳಿದ್ದರು ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಮುದಿರಾಜ ಹೇಳಿದರು.

Advertisement

ನಗರದ ಎನ್‌ಇಕೆಆರ್‌ಟಿಸಿ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಕೋಲಿ ಸಮಾಜ ನೌಕರರ ಸಂಘ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೌಡ್ಯ, ಅಪಚಾರ, ಡಾಂಬಿಕತನ, ದ್ರೋಹ ಮಾಡುವ ಮನಸ್ಸುಗಳನ್ನು ತಮ್ಮ ವಚನಗಳ ಮೂಲಕ ಪರಿವರ್ತಿಸುವ ಮಾಡುವ ನಿಟ್ಟಿನಲ್ಲಿ ಭಕ್ತಿಯ ಗೆರೆ ದಾಟುವ ಲೊಟ್ಟಿ ಮೂಗಳ ಕಂಡರೆ ಎಡಗಾಲು ಪಾದರಕ್ಷೆ ತಗೊಂಡು ಲಟಲಟನೆ ಹೊಡೆದು ಬಿಡಬೇಕು ಎನ್ನುವ ದಿಟ್ಟತನದ ತೀರ್ಪು ನೀಡಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಂಡು ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.

ಸಾರಿಗೆ ನೌಕರರು ಕೂಡ ಅಂಬಿಗರ ಚೌಡಯ್ಯನಂತೆ ನಂಬಿಕೆಯಿಂದ ಪ್ರಯಾಣಿಕರನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ತಂದು ಬಿಡುತ್ತಾರೆ. ಇಂತಹ ಕಾಯಕ ಮಾಡುವ ನೀವು. ಜಾತಿಗಳ ಒಳಗೋಡೆ ದಾಟಿಕೊಂಡು ಎಲ್ಲ ಸಮುದಾಯಗಳೊಂದಿಗೆ ಸಹಬಾಳ್ವೆಯಿಂದ ಜೀವನ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ಮಹಾಂತೇಶ ಪಾಟೀಲ ಮಾತನಾಡಿ, ಕೋಲಿ ಸಮಾಜದ ಬಾಂಧವರು ಇವತ್ತು ಕವಲು ದಾರಿಯಲ್ಲಿದ್ದಾರೆ. ಒಂದೆಡೆ ರಾಜಕೀಯ ಇನ್ನೊಂದೆಡೆ ಸಮಾಜದ ಒಗ್ಗಟ್ಟು ಮತ್ತು ಬೆಳವಣಿಗೆ. ಆದರೆ, ಕೆಲವರು ನಮ್ಮನ್ನು ಸರಿಯಾದ ಸಮಯದಲ್ಲಿ ಬಳಕೆ ಮಾಡಿಕೊಂಡು ನಮಗೆ ಸಿಗಬೇಕಾಗಿರುವ ಹಕ್ಕುಗಳಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇಂತಹ ಒಳ ತಂತ್ರಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಮ್ಮ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ.

ಅದಕ್ಕಾಗಿ ಒಗ್ಗಟ್ಟಿನಿಂದ ಹೆಜ್ಜೆ ಇಡಬೇಕಾದ ಅನಿವಾರ್ಯತೆಯನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಇತೀಚೆಗೆ ಜಿಲ್ಲೆಯಲ್ಲಿ ಕೋಲಿ ಸಮಾಜದ ಬಂಧುಗಳ ಮೇಲೆ ಹಲ್ಲೆ, ಕೊಲೆ ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಅದನ್ನು ತಡೆಯವ ನಿಟ್ಟಿನಲ್ಲಿ ಸರಕಾರ ಹಾಗೂ ಅಧಿಕಾರಿಗಳು ಪ್ರಯತ್ನ ಮಾಡಬೇಕು ಎಂದು
ಹೇಳಿದರು.

Advertisement

ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ಮಾತನಾಡಿ, ಕೋಲಿ ಸಮಾಜದ ಯುವಕರು ಈಗ ತುಂಬಾ  ಚಟುವಟಿಕೆಯಿಂದ ಇದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಬಹಳಷ್ಟು ಜನರಿದ್ದಾರೆ. ಅವರಲ್ಲಿ ಒಗ್ಗಟ್ಟು ಇದೆ ಎಂದು ಹೇಳಿದರು.

ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌ ಸೇಠ್ಠ್… ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ವಿಭಾಗ 2ರ ಅಧಿಕಾರಿ ಎ.ಎಚ್‌. ನಾಗೇಶ, ಕಾಂಗ್ರೆಸ್‌ ಹಿರಿಯ ಮುಖಂಡ ಶಿವಶರಣಪ್ಪ ಕೋಬಾಳ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಶಂಕರ ಕಟ್ಟಿಸಂಗಾವಿ, ವಿಜಯಕುಮಾರ ಹದಗಲ್‌, ವಿವೇಕಾನಂದಗೌಡ ಪಾಟೀಲ, ಸಿದ್ದಪ್ಪ ಪಾಲ್ಕಿ,
ಚಂದ್ರಕಾಂತ ಗದಗಿ ಇದ್ದರು. ಭೀಮಾಶಂಕರ ಹಾಗರಗುಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಆಲೂರು ಸ್ವಾಗತಿಸಿದರು. ಕೆ.ಬಿ.ಅಂಬಿಗೇರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪಾಂಡುರಂಗ
ಅಪಚಂದ ಹಾಗೂ ಇತರರು ಇದ್ದರು. ಇದಕ್ಕೂ ಮುನ್ನ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next