Advertisement

“ಚೌಕಿದಾರ್‌’ಗೆ ತಪ್ಪೊಪ್ಪಿಗೆ: ನಿಂತೀತೇ ಹುಸಿ ಹೇಳಿಕೆ ಸರ್ಕಸ್‌?

12:07 AM Apr 24, 2019 | mahesh |

ಚುನಾವಣಾ ಆಯೋಗ ಅನಗತ್ಯವಾಗಿ ದೀರ್ಘ‌ಗೊಳಿಸಿರುವ ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರ ಪ್ರಕ್ರಿಯೆ ನಮ್ಮ ಸಂಸದೀಯ ಚುನಾವಣೆಗಳ ಚರಿತ್ರೆಯಲ್ಲಿ ಖಂಡಿತವಾಗಿಯೂ ಪ್ರತ್ಯೇಕ ಸ್ಥಾನವನ್ನು ದಕ್ಕಿಸಿಕೊಳ್ಳಲಿದೆ. ಇದಕ್ಕೆ ಕಾರಣ, ಅಧಿಕಾರದಲ್ಲಿರುವ ನಾಯಕರ ಮೇಲೆ ಹಾಗೂ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರ ಮೇಲೆ ನಡೆಯುತ್ತಿರುವ ವೈಯಕ್ತಿಕ ಮಟ್ಟದ ವಾಗ್ಧಾಳಿಗಳು. ಚುನಾವಣಾ ಪ್ರಕ್ರಿಯೆಯ ಅವಧಿ ಹೃಸ್ವವಾಗಿದ್ದರೇನೇ ಚೆನ್ನ. ಆಗ ಇಂಥ ವೈಯಕ್ತಿಕ ದ್ವೇಷದ ವಾಗ್ಯುದ್ಧಗಳು ಹಾಗೂ ರಾಜಕೀಯ ವಿರೋಧಿಗಳ ಮಾನ ಕಳೆಯಬೇಕೆಂಬ ತೆಷಮಯ ಹುರುಪು ಹುಮ್ಮಸ್ಸುಗಳ ಪ್ರಮಾಣ ಕೊಂಚ ಕಡಿಮೆಯಾಗಬಹುದು.

Advertisement

ಈ ಬಾರಿಯ ಚುನಾವಣೆಗಾಗಿ ಇನ್ನಷ್ಟು ಕಡೆಗಳಲ್ಲಿ ನಡೆಯಬೇಕಿರುವ ಪ್ರಚಾರ ಈಗಿನಷ್ಟು ತೆಷಮಯ ವಾಗಿರದಿರಲಿ ಎಂಬುದೇ ಎಲ್ಲರ ಆಶಯ. ಹೀಗೆ ಹೇಳಲು ಕಾರಣವಿದೆ. “ಚೌಕಿದಾರ್‌ ಚೋರ್‌ ಹೈ’ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸುಪ್ರೀಂಕೋಟೇì ಹೇಳಿದೆ ಎಂದು ತಮ್ಮ ಚುನಾವಣಾ ಪ್ರಚಾರದ ಸಭೆಗಳಲ್ಲಿ/ಹೇಳಿಕೆಗಳಲ್ಲಿ ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಹೀಗೆ ತಾನು ಹೇಳಬಾರದಿತ್ತು ಎಂದು ಸುಪ್ರೀಂ ಕೋರ್ಟಿನೆದುರು ವಿಷಾದ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಅವರ ಪ್ರಚಾರ ಭಾಷಣಗಳಲ್ಲಿ ಈ ಒಂದು ಆರೋಪ ಬಿಟ್ಟರೆ, ಬೇರೆ ಯಾವ ವಿಷಯವೂ ಇರುವುದಿಲ್ಲ.

ಆದರೂ “ಚೌಕಿದಾರ್‌’ ಎಂಬ ಟೀಕಾಸ್ತ್ರವನ್ನು ತಮ್ಮ ರಾಜಕೀಯ ವಿರೋಧಿಗಳ ಕೈಗೆ ಕೊಟ್ಟವರು ಸ್ವತಃ ನರೇಂದ್ರ ಮೋದಿಯವರೇ. ದೇಶವನ್ನು ಮೋಸಗಾರರಿಂದ ಹಾಗೂ ಭಯೋತ್ಪಾದಕ ದಾಳಿಕೋರರಿಂದ ರಕ್ಷಿಸುವ ಚೌಕಿದಾರ (ಕಾವಲುಗಾರ) ತಾನು ಎಂದು ಅವರೇ ತಮ್ಮನ್ನು ಬಣ್ಣಿಸಿಕೊಂಡಿದ್ದಾರೆ.

ರಾಹುಲ್‌ ಅವರ “ತಪ್ಪೊಪ್ಪಿಗೆ’ ಪ್ರಸಂಗ, ಕರ್ನಾಟಕದಲ್ಲಿನ ಅವರ ಪಕ್ಷದ ನಾಯಕರ ಹಾಗೂ ಅವರ ಜೆಡಿಎಸ್‌ ದೋಸ್ತಿಗಳಲ್ಲಿ ಸ್ತಿಮಿತದ ಅಗತ್ಯತೆಯ ಕುರಿತಂತೆ ಜಾಗೃತಿ ಮೂಡಿಸುವಂಥ ಪರಿಣಾಮ ಬೀರಬಹುದೆಂದೂ ಆಶಿಸಬಹುದಾಗಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರೆಲ್ಲ ಮೋದಿಯವರನ್ನು “ಸುಳ್ಳುಗಾರ’ , “ಸುಳ್ಳಿನ ಚಾಳಿಯ ಮನುಷ್ಯ’ನೆಂದು ಎಗ್ಗಿಲ್ಲದೆ ಜರೆಯುತ್ತಲೇ ಇದ್ದಾರೆ. ಹಾಗೆ ನೋಡಿದರೆ ನಮ್ಮ ರಾಜಕಾರಣಿಗಳಲ್ಲಿ ಹೆಚ್ಚಿನವರು ಸ್ವತಃ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು! ಇವರಲ್ಲಿ ಕೆಲವರು, ನಾಝಿ ಜರ್ಮನಿಯಲ್ಲಿ ಪ್ರಚಾರ ಸಚಿವನಾಗಿದ್ದ ಡಾ| ಪಾಲ್‌ ಜೋಸೆಫ್ ಗೊಬೆಲ್ಸ್‌ನನ್ನೂ ಮೀರಿಸುವಂಥವರು.

ಇದೀಗ ಕರ್ನಾಟಕದಲ್ಲಿ ಎರಡನೆಯ ಹಂತದ ಚುನಾವಣಾ ಪ್ರಚಾರ ಮುಕ್ತಾಯಗೊಂಡಿದ್ದು, ನಮ್ಮ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯ ನಾಯಕರು ಇನ್ನಾದರೂ ತಮ್ಮ ಮಾತು ಹಾಗೂ ಕೃತಿಗಳಲ್ಲಿ ಶಿಷ್ಟಾಚಾರ ಪಾಲಿಸುವುದೆಂದರೆ ಏನೆಂಬು ದನ್ನು ಕಲಿತುಕೊಳ್ಳಬೇಕಾಗಿದೆ.

Advertisement

ಇಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ನೆನಪಾಗುತ್ತಿದೆ. ಅರಸ್‌ ಹಾಗೂ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಪರಸ್ಪರ ವಿರೋಧಿ ಪಕ್ಷಗಳಿಗೆ ಸೇರಿದ್ದವರು (ಕಾಂಗ್ರೆಸ್‌ ಹಾಗೂ ಜನತಾಪಕ್ಷ), ಆದರೂ ಮೊರಾರ್ಜಿಯವರನ್ನು ಸಾರ್ವಜನಿಕವಾಗಿ ಟೀಕಿಸಲು ದೇವರಾಜ ಅರಸರು ಹಿಂದೇಟು ಹಾಕುತ್ತಿದ್ದರು. ಖಾಸಗಿ ಮಾತುಕತೆಯ ವೇಳೆ, ಮೊರಾರ್ಜಿ ದೇಸಾಯಿ ಓರ್ವ ಉತ್ತಮ ಆಡಳಿತಗಾರ ಎಂದು ಅರಸರು ಶ್ಲಾ ಸುತ್ತಿದ್ದರಂತೆ. ಪ್ರಧಾನಿ ಮೋದಿ ಅವರು, ಕನಿಷ್ಠಪಕ್ಷ ಈ ಬಾರಿಯ ಚುನಾವಣೆಯವರೆಗಾದರೂ, ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರ ವಿಷಯದಲ್ಲಿ ಗೌರವದಿಂದಲೇ ನಡೆದುಕೊಂಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಅವರೇ ಈಚಿನ ದಿನಗಳಲ್ಲಿ ಮೋದಿಯವರನ್ನು ಹೊಗಳಿರಲಿಲ್ಲವೆ? ಇದು ಮುಲಾಯಂ ಸಿಂಗ್‌ ಅವರಮಟ್ಟಿಗೆ ಹೇಳುವುದಾದರೆ, ಒಂದು ಉತ್ತಮ ನಡುವಳಿಕೆಯೇ ಹೌದು.

ವಿರೋಧ ಪಕ್ಷದ ನಾಯಕರ ಹೆಸರಿಗೆ ಮಸಿಬಳಿಯುವ ಕುಸಂಸ್ಕೃತಿ ಇಂದು ಮೇರೆ ಮೀರಿದೆ. ಈ ಕುಸಂಸ್ಕೃತಿಯನ್ನು ಹುಟ್ಟು ಹಾಕಿದವರು ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿಯವರೇ. 1967ರಿಂದ 1971ರ ಅವಧಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಾನಬಲ ಕ್ಷೀಣಿಸಿದ್ದ ದಿನಗಳಲ್ಲಿ (ವಿಶೇಷವಾಗಿ ಕಾಂಗ್ರೆಸ್‌ ಇಬ್ಭಾಗವಾದ ಬಳಿಕದ ದಿನಗಳಲ್ಲಿ) ಇಂದಿರಾ ಅವರು ವಿರೋಧ ಪಕ್ಷಗಳ ಸದಸ್ಯರ ರಾಷ್ಟ್ರೀಯತೆಯನ್ನು ಪ್ರಶ್ನಿಸಿ ಟೀಕೆಗಳ ಮಳೆಗರೆದಿದ್ದರು. ವಿಪಕ್ಷೀಯ ಸದಸ್ಯರು ಅಮೆರಿಕದ ಸಿಐಎ ಏಜೆಂಟರೆಂದು ಬಣ್ಣಿಸಿದರು. ಕಾರಣ, ಆ ದಿನಗಳಲ್ಲಿ ದೇಶದಲ್ಲಿ ಏನಾದರೂ ಪ್ರಮಾದ ಸಂಭವಿಸಿದ್ದರೆ ಅದಕ್ಕೆ ಅಮೆರಿಕವೇ ಕಾರಣ ಎಂದು ಆ ರಾಷ್ಟ್ರದ ಮೇಲೆ ಗೂಬೆ ಕೂರಿಸುವುದು ನಮ್ಮ ಸರಕಾರಕ್ಕೆ ಸುಲಭದ ಮಾತಾಗಿತ್ತು. ಆ ದಿನಗಳಲ್ಲಿ ನಾವು ಸೋವಿಯತ್‌ ಒಕ್ಕೂಟವನ್ನು ಅತಿಯಾಗಿ ಅವಲಂಬಿಸಿದ್ದೆವು. ಇಲ್ಲೊಂದು ಪ್ರಸಂಗವನ್ನು ನೆನಪಿಸಿಕೊಳ್ಳಬೇಕು. ವಿನೋದ ಪ್ರವೃತ್ತಿ ಹಾಗೂ ದೇಹದ ತೂಕ ಈ ಎರಡರಿಂದಲೂ ಸುಪರಿಚಿತರಾಗಿದ್ದ ಸ್ವತಂತ್ರ ಪಾರ್ಟಿಯ ಸದಸ್ಯ ಪಿಲೂ ಮೋದಿಯವರು ಒಂದು ದಿನವಂತೂ “ನಾನೊಬ್ಬ ಸಿಐಎ ಏಜೆಂಟ್‌’ ಎಂಬ ಫ‌ಲಕವನ್ನು ಧರಿಸಿಯೇ ಲೋಕಸಭೆಯನ್ನು ಪ್ರವೇಶಿಸಿದ್ದರು. ಅಂದಿನ ಲೋಕಸಭಾ ಸದಸ್ಯರು ಸ್ಥೂಲದೇಹಿಗಳದೇ ಒಂದು “ಸಂಘ’ವನ್ನು “ಭೀಮ್ಸ್‌ ಕ್ಲಬ್‌’ ಎಂಬ ಹೆಸರಿನಲ್ಲಿ ರೂಪಿಸಿಕೊಂಡಿದ್ದರು! ಲೋಕಸಭೆಯಲ್ಲಿ ವಿಪಕ್ಷನಾಯಕರಾಗಿ ಹೆಸರು ಮಾಡಿದ್ದ ಸಂಸ್ಥಾ ಕಾಂಗ್ರೆಸ್‌ನ ಡಾ| ರಾಂ ಸುಭಗ್‌ ಸಿಂಗ್‌ ಅವರೂ ಈ ಕ್ಲಬ್ಬಿನ ಒಬ್ಬ ಸದಸ್ಯರಾಗಿದ್ದರು.

ದಿವಂಗತ ಪಿಲೂ ಮೋದಿ ಅವರ ಹೆಸರನ್ನು ಬೇಕೆಂದೇ ಉಲ್ಲೇಖೀಸಿದ್ದೇನೆ. ಇದಕ್ಕೆ ಕಾರಣವಿದೆ. ರಾಹುಲ್‌ ಗಾಂಧಿ ಅವರು ಪ್ರಧಾನಿಯ ಬಗ್ಗೆ ಮಾತನಾಡುತ್ತ “ಯಾಕೆ ಎಲ್ಲ ಕಳ್ಳರ ಹೆಸರಲ್ಲೂ ಮೋದಿ ಎಂಬ ಉಪನಾಮವಿದೆ?’ ಎಂಬ ಕಿಡಿಗೇಡಿ ಪ್ರಶ್ನೆ ಎತ್ತಿದ್ದಾರಷ್ಟೆ? ಈ ಮೂಲಕ ಅವರು ಪ್ರಧಾನಿ ಮೋದಿ ಒಬ್ಬ ಕಳ್ಳ ಎಂದ ಹಾಗಾಗಿದೆ. ಸಾರ್ವಜನಿಕ ಹಣವನ್ನು ಲೂಟಿ ಗೈದಿರುವ ಲಲಿತ್‌ ಮೋದಿ, ನೀರವ್‌ ಮೋದಿ ಮುಂತಾದವರ ಹೆಸರುಗಳನ್ನು ರಾಹುಲ್‌ ತಮ್ಮಿà ಹೇಳಿಕೆಯಲ್ಲಿ ಉದುರಿಸಿದ್ದಾರೆ. ರಾಹುಲ್‌ ಗಾಂಧಿಗೆ ನೆನಪಿದ್ದಿದ್ದರೆ ತಮ್ಮ ಅಜ್ಜ ಫಿರೋಜ್‌ ಗಾಂಧಿ ಓರ್ವ ಫಾರ್ಸಿಯಾಗಿದ್ದರೆಂಬುದು; ಆ ಸಣ್ಣ ಸಮುದಾಯದಲ್ಲೂ ಅನೇಕ ಮೋದಿಗಳಿದ್ದಾರೆಂಬುದು ಹೊಳೆದಿರುತ್ತಿತ್ತೇನೋ. ಪಿಲೂ ಮೋದಿಯವರ ಉಲ್ಲೇಖ ಬಂತಲ್ಲವೇ, ಇನ್ನು ಅವರ ತಂದೆ ಸರ್‌ ಹೋಮಿ ಮೋದಿ ಎಂಬ ವರ್ಚಸ್ವೀ ವ್ಯಕ್ತಿಯ ಕಡೆನೋಡಿ – ಇವರು ವೈಸರಾಯ್‌ ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದವರು; ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದವರು; ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದವರು. ಸರ್‌ ಹೋಮಿ ಮೋದಿ ಅವರ ಇನ್ನೊಬ್ಬ ಪುತ್ರ ರೂಸಿ ಮೋದಿ ವಿನೋದ ಪ್ರವೃತ್ತಿ ಹಾಗೂ ಭೋಜನ ಪ್ರಿಯತೆಯಿಂದ ಹೆಸರು ಮಾಡಿದ್ದವರು; ಟಾಟಾ ಸ್ಟೀಲ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದವರು. ಪಾರ್ಸಿ ಸಮುದಾಯದಲ್ಲಿ ಹೆಸರು ಮಾಡಿರುವ ಇನ್ನೋರ್ವ “ಮೋದಿ’ಯೆಂದರೆ ಪ್ರಖ್ಯಾತ ಟೆಸ್ಟ್‌ ಕ್ರಿಕೆಟರ್‌ ರೂಸಿ ಮೋದಿ. ಇನ್ನು ನಮ್ಮ ಹೆಚ್ಚಿನ ರಾಜ್ಯಗಳಲ್ಲಿ ಕೂಡ ಮೋದಿ ಉಪನಾಮದ ವ್ಯಕ್ತಿಗಳು ಕಾಣಸಿಗುತ್ತಾರೆ. ಇವರಲ್ಲೊಬ್ಬರು, ಬಿಹಾರ ಮೂಲದ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ. ನಮ್ಮ ಕರ್ನಾಟಕದಲ್ಲೂ ಒಬ್ಬ ಮರೆಯಲಾಗದ ಮೋದಿ ಆಗಿ ಹೋಗಿದ್ದಾರೆ. ಅವರೇ, ನೇತ್ರ ಚಿಕಿತ್ಸಾ ಶಿಬಿರಗಳಿಂದ ಖ್ಯಾತರಾಗಿರುವ ಡಾ| ಎಂ.ಸಿ. ಮೋದಿ. ಪ್ರಧಾನಿ ಮೋದಿಯವರನ್ನು ಕಳಂಕಿತ ಮೋದಿಗಳೊಂದಿಗೆ ಹೋಲಿಸುವ ಮೂಲಕ ರಾಹುಲ್‌ ಗಾಂಧಿ ಅವರು ದೇಶದ ಎಲ್ಲ ಮೋದಿಗಳ ಹೆಸರಿಗೆ ಮಸಿ ಬಳಿದ ಹಾಗಾಗಿದೆ.

ರಾಹುಲ್‌ ಗಾಂಧಿ ಅವರು ತಮ್ಮ ಮುತ್ತಜ್ಜ ಜವಾಹರಲಾಲ್‌ ನೆಹರೂ ಅವರಿಂದ ಪಾಠ ಕಲಿಯಬೇಕು. ನೆಹರೂ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದರೆಂಬುದನ್ನು ಕೇಳಿ ತಿಳಿದುಕೊಳ್ಳಬೇಕು. ನೆಹರೂ ಅವರಿಗೆ ಸಿ. ರಾಜಗೋಪಾಲಾಚಾರಿಯವರ ಸ್ವತಂತ್ರ ಪಾರ್ಟಿಯನ್ನು ಕಂಡರಾಗುತ್ತಿರಲಿಲ್ಲ. ಆ ಪಕ್ಷ ಬಲಪಂಥೀಯ, ಪ್ರಗತಿ ವಿರೋಧಿ ಎಂಬುದು ನೆಹರೂ ಅವರ ಅಭಿಪ್ರಾಯವಾಗಿತ್ತು. ಆದರೆ ರಾಜಾಜಿಯವರನ್ನು ನೆಹರೂ ತುಂಬ ಗೌರವದಿಂದ ಕಾಣುತ್ತಿದ್ದರು. “”ಅವರು (ರಾಜಗೋಪಾಲಾಚಾರಿ) ಹಳೇ ಒಡಂಬಡಿಕೆಯನ್ನು ಪ್ರೀತಿಸುವವರು; ನಾನೋ ಹೊಸ ಒಡಂಬಡಿಕೆಯನ್ನು ಮೆಚ್ಚುವವನು” ಎನ್ನುತ್ತಿದ್ದರು!

ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳೆರಡೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ನಮ್ಮದು ವಿಶಾಲ ದೇಶ. ವೈವಿಧ್ಯತೆ ಇಲ್ಲಿನ ಲಕ್ಷಣ. ಯಾರೋ ಎಲ್ಲೋ ಯಾರ ಬಗೆಗೋ ವಿನೋದಕ್ಕಾಗಿ ಹೇಳಿದ ಮಾತು ಇಲ್ಲೆಲ್ಲೋ ಇರುವ ಇನ್ನೋರ್ವ ವ್ಯಕ್ತಿಗೆ ನೋವುಂಟು ಮಾಡಬಹುದು. ಕಳೆದ ವರ್ಷ ಜುಲೈಯಲ್ಲಿ ಪ್ರಧಾನಮಂತ್ರಿಗಳು, ಕಾಂಗ್ರೆಸ್‌ ಪಕ್ಷ ಮುಸ್ಲಿಮರ ಪಕ್ಷ ಎಂದು ಹೇಳಿದ್ದಾಗಿ ವರದಿಯಾಗಿತ್ತು. ಅವರು ಯಾವುದೋ ಒಂದು ವರ್ಗದ ಪ್ರಧಾನಿಯಲ್ಲ; ಭಾರತದ ಎಲ್ಲರ ಪ್ರಧಾನಿ. ಅವರ ಮತದಾರ ಕ್ಷೇತ್ರ ಎಲ್ಲ ಪಂಥ, ಪಂಗಡದವರನ್ನು ಒಳಗೊಂಡಿದೆ. ಮೋದಿ ಅವರು ಈ ಹೇಳಿಕೆ ನೀಡಿದ್ದುದು, ಮಾಜಿ ಪ್ರಧಾನಿ ಮನ ಮೋಹನ್‌ ಸಿಂಗ್‌ ಅವರ ಒಂದು ಹೇಳಿಕೆಗೆ ಸಂಬಂಧಿಸಿ ಎಂಬುದು ಗಮನಾರ್ಹ. “ರಾಷ್ಟ್ರೀಯ ಸಂಪನ್ಮೂಲಗಳ ಮೇಲೆ ಎಲ್ಲರಿಗಿಂತಲೂ ಮೊದಲ ಹಕ್ಕು ಇರುವುದು ಮುಸ್ಲಿಮರಿಗೆ’ ಎಂದಿದ್ದರು ಮನಮೋಹನ್‌ ಸಿಂಗ್‌. ಇಂಥ ವಿವಾದಾತ್ಮಕ ಹೇಳಿಕೆ ನೀಡಿದ್ದು ಅವರ ತಪ್ಪೂ ಹೌದು.

ರಾಷ್ಟ್ರದ ಅತ್ಯುನ್ನತ ನ್ಯಾಯಾಲಯದೆದುರು ರಾಹುಲ್‌ ಮಾಡಿರುವ ಕ್ಷಮಾಯಾಚನೆಯಿಂದಾಗಿ ಇದೀಗ ಅವರ ಮಾತಿನ ಮೇಲಿನ ವಿಶ್ವಸನೀಯತೆಗೆ ಕುಂದುಂಟಾಗಿದೆ. ಪ್ರಧಾನಿ ಸುಳ್ಳುಗಾರ ಎಂದು ಆಪಾದಿಸುತ್ತ ಓಡಾಡುತ್ತಿರುವ ಕಾಂಗ್ರೆಸಿಗರಿಗೆ ಈಗ ರಾಹುಲ್‌ ಗಾಂಧಿಯ ಶೈಕ್ಷಣಿಕ ಅರ್ಹತಾ ಪತ್ರಗಳ ಬಗೆಗೂ ಸಂಶಯದ ಮೋಡಗಳೆದ್ದಿವೆ ಎಂಬ ವಾಸ್ತವ ಅರಿವಾಗಿರಬಹುದು. ವಿದೇಶೀ ವಿ.ವಿ.ಯಿಂದ ತಾನು ಎಂ.ಫಿಲ್‌. ಪದವಿ ಗಳಿಸಿದ್ದೇನೆಂಬ ರಾಹುಲ್‌ ಅವರ ಹೇಳಿಕೆಯನ್ನು ಈಗ ಅಡ್ವೊಕೇಟ್‌ ಒಬ್ಬರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಮೊದಲಿಗೆ ಈ ವಿಷಯವನ್ನು ಎತ್ತಿದವರು ಡಾ| ಸುಬ್ರಹ್ಮಣ್ಯ ಸ್ವಾಮಿ. ನೆನಪಿಸಿಕೊಳ್ಳಬೇಕಾದ ಇನ್ನೊಂದು ಅಂಶವೆಂದರೆ ರಾಹುಲ್‌ ಅವರ ತಂದೆ ರಾಜೀವ್‌ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿಯವರ ವಿದ್ಯಾರ್ಹತೆ ಕುರಿತಂತೆಯೂ ಪ್ರಶ್ನೆ ಎದ್ದಿತ್ತು. ಬ್ರಿಟಿಷ್‌ ವಿ.ವಿ.ಯೊಂದರಲ್ಲಿ ಓದುತ್ತಿದ್ದಾಗ ನಮ್ಮ ಪ್ರಥಮ ಭೇಟಿ ನಡೆಯಿತೆಂದು ರಾಜೀವ್‌ – ಸೋನಿಯಾ ದಂಪತಿ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next