Advertisement

ಛತ್ರ, ಹೋಟೆಲ್‌, ಟಾಕೀಸ್‌ಗಳಲ್ಲಿ ನಿಯಮ ಪಾಲಿಸಿ

07:36 PM Apr 20, 2021 | Team Udayavani |

ಚಾಮರಾಜನಗರ: ವೇಗವಾಗಿ ಹರಡುತ್ತಿರುವ  ಕೋವಿಡ್‌-19 ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿರುವ ಎಲ್ಲ ಕಲ್ಯಾಣ ಮಂಟಪಗಳು, ಹೋಟೆಲ್‌ ಹಾಗೂ ಸಿನಿಮಾ ಮಂದಿರಗಳಲ್ಲಿ ಕೋವಿಡ್‌ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮಗಳನ್ನುಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಹೋಟೆಲ್‌ ಮಾಲಿಕರು, ಕಲ್ಯಾಣ ಮಂಟಪಗಳುಹಾಗೂ ಸಿನಿಮಾ ಮಂದಿರಗಳ ಮಾಲಿಕರೊಂದಿಗೆ ಸೋಮವಾರ ನಡೆದ ಕೋವಿಡ್‌ ನಿಯಂತ್ರಣ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಪ್ರಸ್ತುತ ಜಿಲ್ಲೆಯ ಪರಿಸ್ಥಿತಿ ಇತರೆ ಜಿಲ್ಲೆ, ರಾಜ್ಯಗಳಿಗೆ ಹೊರತಾಗಿಲ್ಲ. ಕೋವಿಡ್‌ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.

ತಹಶೀಲ್ದಾರ್‌ ಪಾಸ್‌: ಕಲ್ಯಾಣಮಂಟಪಗಳಲ್ಲಿ ನಡೆಯುವ ಮದುವೆಗಳಿಗೆ ಒಳಾಂಗಣದಲ್ಲಿ 100 ಮಂದಿ ಹಾಗೂ ಹೊರಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ 200 ಮಂದಿ ಮಾತ್ರ ಸೇರುವಂತೆಆದೇಶ ಹೊರಡಿಸಲಾಗಿದೆ. ಈಗಾಗಲೇ ಬುಕ್‌ ಆಗಿರುವಕಲ್ಯಾಣಮಂಟಪಗಳಿಗೆ ತಹಶೀಲ್ದಾರರ ಅನುಮತಿ ಅಗತ್ಯವಿರುವುದಿಲ್ಲ. ಭಾನುವಾರ (18-04-2021)ದಿಂದ ಬುಕ್‌ ಆಗುವ ಕಲ್ಯಾಣ ಮಂಟಪಗಳಿಗೆ ತಹಶೀಲ್ದಾರರ ಅನುಮತಿ ಕಡ್ಡಾಯಗೊಳಿಸಲಾಗಿದೆ. ತಹಶೀಲ್ದಾರರು ನಿಗದಿಪಡಿಸಿರುವ ಜನಸಂಖ್ಯೆಗೆ ಪಾಸ್‌ ವಿತರಿಸಲಿದ್ದಾರೆ. ಕಲ್ಯಾಣಮಂಟಪಗಳ ಮಾಲಿಕರು ಈ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು.

ಹೋಟೆಲ್‌ ಮಾಲೀಕರು ತಮ್ಮ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಬೇಕು. ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಗ್ರಾಹಕರು ತಿಂಡಿ, ಊಟ ಮಾಡುವ ಸಂದರ್ಭ ಹೊರತುಪಡಿಸಿ ಸಹ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿವಳಿಕೆ ನೀಡಬೇಕು ಎಂದರು.

ಸಿನಿಮಾ ಮಂದಿರಗಳಲ್ಲಿ ಪ್ರತಿ ಪ್ರದರ್ಶನ ಮುಗಿದ ನಂತರ ಸ್ಯಾನಿಟೈಸ್‌ ಮಾಡಿಸಬೇಕು. ಸಿನಿಮಾ ವೀಕ್ಷಣೆಗೆ ಬರುವವರಿಗೆ ಮಾಸ್ಕ್ ಧರಿಸುವಂತೆ ತಿಳಿ ಹೇಳಬೇಕು. ನಿಗದಿತ ಆಸನಗಳಲ್ಲಿ ಕೂರುವಂತೆ ಅಗತ್ಯ ವ್ಯವಸ್ಥೆ ಮಾಡಿರಬೇಕು. ಜನಸಾಮಾನ್ಯರಿಗೆ ತೊಂದರೆಯಾಗುವಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಇದನ್ನು ಎಲ್ಲರು ಅರಿತು ತಮ್ಮ ಆರೋಗ್ಯದ ಕುರಿತು ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದರು.

Advertisement

ಸ್ವಯಂ ನಿಯಂತ್ರಣ: ಜಿಲ್ಲೆಯ ಎಲ್ಲ ವರ್ತಕರು, ಲಾರಿ, ಆಟೋ ಮಾಲಿಕರು ಹಾಗೂ ಚಾಲಕರು, ಖಾಸಗಿ ಬಸ್‌ಮಾಲಿಕರು ತಾಲೂಕುಮಟ್ಟದ ಸಂಘಗಳ ಸಭೆ ಕರೆದುಕೋವಿಡ್‌ ಶಿಷ್ಟಾಚಾರ ಆದೇಶ, ಪಾಲನೆ ನಿಯಮಗಳ ಬಗ್ಗೆ ಸೂಚನೆ ನೀಡಬೇಕು. ಹೊರಗೆ ಅನಾವಶ್ಯಕವಾಗಿಓಡಾಡಬಾರದು. ಸ್ವಯಂ ನಿಯಂತ್ರಣಗಳನ್ನು ನಾವೇ ಹಾಕಿಕೊಳ್ಳಬೇಕು. ಕೋವಿಡ್‌ ಲಸಿಕೆ ನಮ್ಮ ಜೀವರûಾ ಕವಚವಾಗಿದ್ದು, 45 ವರ್ಷ ತುಂಬಿದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷರಾದಜಯಸಿಂಹ, ಜಿಲ್ಲೆಯ ವಿವಿಧ ಹೋಟೆಲ್‌, ಸಿನಿಮಾಮಂದಿರಗಳ ಮಾಲಿಕರು ಸಭೆಯಲ್ಲಿ ಹಾಜರಿದ್ದರು.

ಕಚೇರಿಗಳಿಗೆ ಅನಗತ್ಯ ಭೇಟಿ ನೀಡಬೇಡಿ: ಡಾ|ರವಿ :

ಕೋವಿಡ್‌ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಚೇರಿಗಳಿಗೆ ಸಾರ್ವಜನಿಕರು ಅನಗತ್ಯವಾಗಿ ಭೇಟಿ ನೀಡದಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮನವಿ ಮಾಡಿದ್ದಾರೆ. ಕೋವಿಡ್‌ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಗಳನ್ನು ಪಾಲಿಸಬೇಕು. ಹೀಗಾಗಿ ಜಿಲ್ಲೆಯ ಕಚೇರಿಗಳು, ತಾಲೂಕು ಕಚೇರಿಗಳು, ತಾಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಹೆಚ್ಚು ಜನ ಸಂದಣಿಯಾಗುವ ಕಚೇರಿಗಳಿಗೆ ಅಗತ್ಯ ಇರುವವರು ಮಾತ್ರ ಬರಬೇಕು. ಅನವಶ್ಯಕವಾಗಿ ಕಚೇರಿಗಳಿಗೆ ಭೇಟಿ ನೀಡಬಾರದು. ತುರ್ತು ಕೆಲಸಗಳಿಗೆ ಮಾತ್ರ ಕಚೇರಿಗೆ ಬರಬೇಕು. ತುರ್ತು ಕೆಲಸಗಳಿಗೆ ಕಚೇರಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next