Advertisement

ಕ್ರೀಡಾಂಗಣ ನಿರ್ಮಾಣ ನಿರೀಕ್ಷೆ ಹುಸಿ

01:12 PM Apr 10, 2022 | Team Udayavani |

ಚನ್ನಪಟ್ಟಣ: ತಾಲೂಕಿನ ಬಹುವರ್ಷಗಳ ಬೇಡಿಕೆ ಯಾಗಿರುವ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಬಡಿದಿರುವ ಗ್ರಹಣ ಬಿಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ತಾಲೂಕು, ಜಿಲ್ಲಾ ಮಟ್ಟದ ಪ್ರತಿ ಕ್ರೀಡಾಕೂಟಕ್ಕೂ ಬಾಲಕರ ಕಾಲೇಜು ಮೈದಾನವೇ ಖಾಯಂ ಕ್ರೀಡಾಂಗಣವಾಗಿದ್ದು, ಅತ್ತ ಕ್ರೀಡಾಪಟುಗಳ ಅಭ್ಯಾಸಕ್ಕೆ ಸಮಸ್ಯೆ ಎದುರಾಗಿದೆ.

Advertisement

ಪಟ್ಟಣದ ತಟ್ಟೆಕರೆ ಬಳಿಯ 14 ಎಕರೆ ಜಮೀನನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಈ ಹಿಂದೆ ಕಂದಾಯ ಇಲಾಖೆ ಮಂಜೂರು ಮಾಡಿತ್ತಾದರೂ, ಆ ಜಾಗದ ವಿವಾದ ಇದುವರೆಗೂ ಬಗೆಹರಿಯದ ಕಾರಣ ಕ್ರೀಡಾಂಗಣ ನಿರ್ಮಾಣದ ಕನಸು ಕಂಡಿದ್ದ ಸಾವಿರಾರು ಕ್ರೀಡಾಪಟುಗಳ ನಿರೀಕ್ಷೆ ಹುಸಿಯಾಗಿದೆ.

ಪಟ್ಟಣದ ತಟ್ಟೆಕರೆ ಬಳಿಯ 78, 79 ಹಾಗೂ 100 ಸರ್ವೆ ನಂಬರಿನ ಒಟ್ಟು 14 ಎಕರೆ ಜಮೀನನ್ನು ಈ ಹಿಂದೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್‌ ಅವರ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿಗಳು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಿದ್ದರು. ಈ ಹಿಂದೆ ಅದೇ ಸ್ಥಳವನ್ನು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತಾದರೂ, ಆ ಎಲ್ಲಾ ಆದೇಶವನ್ನು ರದ್ದುಗೊಳಿಸಿ ಮಂಜೂರು ಮಾಡಲಾಗಿತ್ತು.

ಮುಗಿಯದ ಸಮಸ್ಯೆ: ಸರ್ವೆ ನಂ. 78ರ 10 ಎಕರೆ ಜಮೀನನ್ನು ಕೆಂಗಲ್‌ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ, ಸರ್ವೆ ನಂ. 79ರ 1.18 ಎಕರೆ ಜಮೀನನ್ನು ಅಗ್ನಿ ಶಾಮಕ ಇಲಾಖೆಗೆ, ಸರ್ವೆ ನಂ. 100ರ 10 ಗುಂಟೆ ಜಮೀನನ್ನು ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಕ್ರೀಡಾಂಗಣ ನಿರ್ಮಾಣದ ಉದ್ದೇಶಕ್ಕಾಗಿ ಈ ಎಲ್ಲರಿಗೂ ಮಂಜೂರಾಗಿದ್ದ ಆದೇಶವನ್ನು ರದ್ದು ಪಡಿಸಿತ್ತಾದರೂ, 5 ಎಕರೆ ಜಮೀನು ತಮಗೆ ಸೇರಬೇಕೆಂದು ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲ ಯದ ಮೊರೆಹೋಗಿದ್ದರು. ಹಾಗೆಯೇ 10 ಗುಂಟೆ ಜಾಗ ಕ್ಕೂ ಖಾಸಗಿ ಸಂಸ್ಥೆ ನ್ಯಾಯಾ ಲಯ ಮೊರೆಹೋಗಿದೆ. ಉಳಿಕೆ 9 ಎಕರೆ ಜಮೀನಿನಲ್ಲಿಯೂ ತಮಗೆ ಜಾಗ ಸೇರಬೇಕೆಂದು ಕೆಲವರು ಒತ್ತುವರಿ ಮಾಡಿ ಕೊಂಡಿದ್ದು, ಒತ್ತುವರಿ ತೆರವಾಗದಿರುವುದರಿಂದ ಕ್ರೀಡಾಂಗಣ ನಿರ್ಮಾಣ ಬಿಕ್ಕಟ್ಟು ಬಗೆಹರಿಯುತ್ತಿಲ್ಲ.

ಹಲವು ಯೋಜನೆ: ಜಮೀನು ತನ್ನ ವಶಕ್ಕೆ ಬರುವ ಮುಂಚೆಯೇ, ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದ್ದ ಕ್ರೀಡಾ ಇಲಾಖೆ, ಉದ್ದೇಶಿತ ಜಾಗದಲ್ಲಿ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ರೂಪಿಸಲು ಯೋಜಿಸಿತ್ತು. 400 ಮೀಟರ್‌ ಉದ್ದದ ಸಿಂಥೆಟಿಕ್‌ ಟ್ರ್ಯಾಕ್‌, ಕಬಡ್ಡಿ, ಷೆಟಲ್‌ ಕಾಕ್‌, ಖೋಖೋ, ಅಥ್ಲೆಟಿಕ್ಸ್‌ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಇಲಾಖೆ ಆಸಕ್ತಿ ತೋರಿತ್ತು. ಇದರ ಜತೆಗೆ ಹೊರಾಂಗಣದಲ್ಲಿ ಫ‌ುಟ್ಬಾಲ್‌ ಹಾಗೂ ಹಾಕಿ ಆಟಕ್ಕೆ ಅಂಕಣ ಮಾಡಲು ಮುಂದಾಗಿತ್ತು. ಆದರೆ ಆರಂಭದಲ್ಲಿ ತೋರಿದ ಶೂರತ್ವ ನಂತರದ ದಿನಗಳಲ್ಲಿ ಮರೆಯಾದ್ದರಿಂದ ಇಡೀ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿನ ತೊಡಕು ನಿವಾರಣೆ ಮಾಡಲು ಸಾಕಷ್ಟು ಪ್ರಯತ್ನ ಪಟ್ಟರೂ ಇದುವರೆಗೂ ಅದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜಮೀನು ಸಿಕ್ಕಿತೆಂಬ ಖುಷಿಯಲ್ಲಿ ತಯಾರಿ ನಡೆಸಿದ್ದ ಕ್ರೀಡಾ ಇಲಾಖೆ ಏನೂ ಮಾಡಲಾಗದೆ ಸುಮ್ಮನಾಗಿದೆ.

Advertisement

ಕ್ರೀಡಾಂಗಣ ನಿರ್ಮಾಣ ಕನಸು ಹೊತ್ತು ಕಾಯುತ್ತಿ ರುವ ತಾಲೂಕಿನ ನೂರಾರು ಮಂದಿ ಕ್ರೀಡಾಪಟುಗಳ ಬವಣೆ ತಪ್ಪಿಸಲು ಈಗಲಾದರೂ ಸಾಧ್ಯವಾಯಿತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮೂಲ ಉದ್ದೇಶವೇ ತಣ್ಣಗಾದದ್ದು ಕ್ರೀಡಾಪಟುಗಳ ನಿರಾಸೆಗೆ ಕಾರಣವಾಗಿದೆ.

ಈ ಬಗ್ಗೆ ಸಂಬಂಧಿಸಿದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕ್ರೀಡಾ ಇಲಾಖೆ ಗಮನಹರಿಸಿ, ಸಮಸ್ಯೆಗಳನ್ನು ಸರಿಪಡಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಬೇಕಿದೆ.

ನೆರವೇರದ ಉದ್ದೇಶ : ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅವರು ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ವಿವಾದಗಳನ್ನು ಶೀಘ್ರವಾಗಿ ಬಗೆಹರಿಸಿ ಕ್ರೀಡಾಂಗಣ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರಿಗೆ ಆದೇಶಿಸಿದ್ದರಾದರೂ, ನಂತರದ ದಿನಗಳಲ್ಲಿ ಈ ಬಗ್ಗೆ ಪ್ರಸ್ತಾಪವಾಗದಿರುವುದು ಸಮಸ್ಯೆ ಜಟಿಲವಾಗಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಕಂದಾಯ ಇಲಾಖೆಯ ಉನ್ನತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಜಾಗವನ್ನು ಮಂಜೂರು ಮಾಡಿದ್ದರೂ, ಇದುವರೆಗೂ ಉದ್ದೇಶ ನೆರವೇರುತ್ತಿಲ್ಲ.

ಜನಪ್ರತಿನಿಧಿ ಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕ್ರೀಡಾಂಗಣಕ್ಕೆ ನಿಗದಿಪಡಿಸಿರುವ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಇದುವರೆಗೂ ಆಗಿಲ್ಲ. ಮಾಜಿ ಮುಖ್ಯಮಂತ್ರಿಗಳು, ಕ್ಷೇತ್ರದ ಶಾಸಕರಾಗಿರುವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಪ್ರಭಾವಿ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌, ಮುಖಂಡ ಪುಟ್ಟಣ್ಣ, ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ನಿಜಕ್ಕೂ ಕ್ರೀಡಾಕ್ಷೇತ್ರದ ಬಗ್ಗೆ ಆಸಕ್ತಿಯಿದ್ದರೆ ಕೂಡಲೇ ಒತ್ತುವರಿಗಳನ್ನು ತೆರವುಗೊಳಿಸಿ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಬೇಕು. ಖಾಸಗಿ ವ್ಯಕ್ತಿ ತಮ್ಮದೆನ್ನುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು. -ಪಿ.ಜೆ.ಗೋವಿಂದರಾಜು, ಅಥ್ಲೆಟಿಕ್ಸ್‌ ಕ್ರೀಡಾಪಟು.

ಕ್ರೀಡಾಂಗಣ ನಿರ್ಮಾಣಕ್ಕಾಗಿ ಸದ್ಯ9 ಎಕರೆ ಇಲಾಖೆ ಸುಪರ್ದಿಗೆ ಬಂದಿದ್ದು, ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವು ಗೊಳಿಸಿ ಕೊಡುವಂತೆ ಉಪವಿಭಾಗಾ ಕಾರಿಗಳು, ತಹಶೀಲ್ದಾ ರರಿಗೆ ಮನವಿ ಸಲ್ಲಿಸಿದ್ದೇವೆ. ಒತ್ತುವರಿ ತೆರವಾದರೆ ಶೀಘ್ರ ಹಿಂದಿನ ಯೋಜನೆಯಂತೆ ಕ್ರೀಡಾಂಗಣ ನಿರ್ಮಾಣ ಮಾಡಲು ಇಲಾಖೆ ಮುಂದಾಗಲಿದೆ. -ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ.

 

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next